ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ
ಇಲ್ಲಿರುವ ಎಲ್ಲ ದೇವಾಲಯಗಳು ತಗ್ಗಿನಲ್ಲಿದ್ದು, ಸುತ್ತಲೂ ಮರಳೇ ಮರಳು. ಶಾಪದ ಫಲವಾಗಿ ಪಕ್ಕದಲ್ಲೇ ಹರಿಯುತ್ತಿದ್ದ ಕಾವೇರಿ ತೀರವೂ ಮರಳಿನಿಂದ ಆವೃತವಾಗಿದೆ. ನದಿ ತೀರ ಅಕ್ಷರಶಃ ಸಮುದ್ರ ತೀರದಂತೆ ಭಾಸವಾಗುತ್ತದೆ. ಇಲ್ಲಿ ಕಾವೇರಿ ನದಿಯು ಸಾಕಷ್ಟು ಅಗಲವಾಗಿ ಮೈತುಂಬಿಕೊಂಡು ಹರಿಯುತ್ತಿದೆ. ಹೀಗೆ ವಿಶಾಲ ವ್ಯಾಪಿಯಾಗಿ ಹರಿಯುವ ಕಾವೇರಿಯ ಮಡಿಲಿನಲ್ಲಿ ಒಂದು ದೋಣಿ ಪ್ರವಾಸ ಹೀಗಿರುತ್ತದೆ.
- ಸಿ.ಎ.ವಿಲಾಸ ನಾ ಹುದ್ದಾರ
ಶ್ರೀರಂಗಪಟ್ಟಣದಲ್ಲಿ ಇದ್ದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿ ಶ್ರೀರಂಗರಾಯರ ಮರಣದ ನಂತರ ನಡೆದ ವಿದ್ಯಮಾನಗಳಲ್ಲಿ ಅವರ ಧರ್ಮಪತ್ನಿ ಅಲಮೇಲಮ್ಮನವರು ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ ಹೋಗಲಿ ಎಂದು ಶಾಪ ಹಾಕಿದ್ದರು ಎನ್ನಲಾಗಿದೆ. ಹೀಗೆ ಅಲಮೇಲಮ್ಮನವರ ಶಾಪದ ಫಲವಾಗಿಯೇ ಏನೊ ತಲಕಾಡು ಸಂಪೂರ್ಣ ಮರಳಿನಿಂದ ಆವೃತವಾಗಿದೆ. ಇಲ್ಲಿ ಇದ್ದ ಎಲ್ಲ ದೇವಸ್ಥಾನಗಳೂ ಮರಳಿನಲ್ಲಿ ಅಡಗಿ ಹೋಗಿವೆ. ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಯತ್ನದಿಂದ ಎಲ್ಲ ದೇವಾಲಯಗಳು ಮೊದಲಿನ ಸ್ಥಿತಿಗೆ ಬಂದಿವೆ. ಆದರೂ, ಇಲ್ಲಿರುವ ಎಲ್ಲ ದೇವಾಲಯಗಳು ತಗ್ಗಿನಲ್ಲಿದ್ದು, ಸುತ್ತಲೂ ಮರಳೇ ಮರಳು.
ಇದನ್ನೂ ಓದಿ: ಫಾಗ್ ಮಧ್ಯೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಶಾಪದ ಫಲವಾಗಿ ಪಕ್ಕದಲ್ಲೇ ಹರಿಯುತ್ತಿದ್ದ ಕಾವೇರಿ ತೀರವೂ ಮರಳಿನಿಂದ ಆವೃತವಾಗಿದೆ. ನದಿ ತೀರ ಅಕ್ಷರಶಃ ಸಮುದ್ರ ತೀರದಂತೆ ಭಾಸವಾಗುತ್ತದೆ. ಇಲ್ಲಿ ಕಾವೇರಿ ನದಿಯು ಸಾಕಷ್ಟು ಅಗಲವಾಗಿ ಮೈತುಂಬಿಕೊಂಡು ಹರಿಯುತ್ತಿದೆ. ಹೀಗೆ ವಿಶಾಲ ವ್ಯಾಪಿಯಾಗಿ ಹರಿಯುವ ಕಾವೇರಿಯ ಸಾನಿಧ್ಯ ನಮಗಲ್ಲಿ ಆಹ್ಲಾದಕರ ಅನುಭವ ನೀಡಿತ್ತು. ಹಾಗಾಗಿ ಅಲ್ಲಿದ್ದ ತೆಪ್ಪದಲ್ಲಿ ಕಾವೇರಿಯ ಮಡಿಲಿನಲ್ಲಿ ಒಂದು ಪಯಣ ಕೈಗೊಳ್ಳಬೇಕು ಅನಿಸಿತು. ಪ್ರಯಾಣವನ್ನೂ ಆರಂಬಿಸಿದೆವು.

ಅದು ಸುಮಾರು 20 ನಿಮಿಷಗಳ ಸುಂದರ ವಿಹಾರ ಎನ್ನಬಹುದು. 10 ನಿಮಿಷ ಮ್ಯಾಂಗ್ರೋವ್ ಕಾಡಿನಲ್ಲೇ ಪಯಣಿಸಿದೆವು. ಆಗ ನಮಗಾದ ಖುಷಿ ವ್ಯಕ್ತಪಡಿಸಲು ಶಬ್ದಗಳು ಸಾಲವು. ಅಲ್ಲಿ ಹಸಿರು ತುಂಬಿದ ಗಗನಚುಂಬಿ ಮರಗಳು ಗಾಳಿಗೆ ಓಲಾಡುತ್ತ ನಮ್ಮನ್ನು ಸ್ವಾಗತಿಸುತ್ತಿರುವಂತೆ ಭಾಸವಾಗುತ್ತದೆ. ತೆಪ್ಪವು ಅವುಗಳ ಮದ್ಯೆ ತೇಲಾಡುತ್ತ ಸಾಗುತ್ತಿದ್ದಾಗ ನಿಸರ್ಗವು ಮರಗಳ ಮುಖಾಂತರ ನಮ್ಮೊಡನೆ ಸಂಭಾಷಣೆ ಮಾಡಲು ಹವಣಿಸುತ್ತಿದೆಯೋ ಎನೋ ಎಂಬ ಭಾವನೆ ಮೂಡಿ ಬರುತ್ತದೆ. ಅಲ್ಲಿನ ವಾತಾವರಣವು ತಂಪಾಗಿ ಪ್ರಶಾಂತವಾಗಿ ನಮ್ಮನ್ನು ಸತ್ಕರಿಸುತ್ತದೆ.
ಮ್ಯಾಂಗ್ರೋ ಮರಗಳು, ಕಾವೇರಿ ನೀರು, ಪ್ರಶಾಂತ ಮತ್ತು ತಂಪು ವಾತಾವರಣ ಇವುಗಳ ಮಧ್ಯೆ ತೆಪ್ಪದಲ್ಲಿ ಕುಳಿತು ಸಾಗುವಾಗ, ʻದೋಣಿ ಸಾಗಲಿ ಮುಂದೆ ಹೋಗಲಿʼ ಎಂದು ಹಾಡಿನ ಗುಂಗು ಅಲ್ಲಿ ಕಂಡಿತ ನಿಮ್ಮನ್ನು ಆವರಿಸುತ್ತದೆ. ಈ ಪ್ರಯಾಣ ಎಂದಿಗೂ ಮರೆಯದ ಅನುಭವ ನಿಮಗಲ್ಲಿ ನೀಡುತ್ತದೆ. ನಿತ್ಯ ಜೀವನದ ಎಲ್ಲ ತಲೆನೋವುಗಳನ್ನು ಮರೆತು ನೀವು ಅಲ್ಲಿನ ಪ್ರಕೃತಿಯಲ್ಲಿ ಒಂದಾಗುತ್ತೀರಿ.