Thursday, June 12, 2025
Thursday, June 12, 2025

ರಾಜಾಸೀಟ್ ಎಂಬ ತಂಗಾಳಿ!

“ವಷ೯ಗಳು ಉರುಳಿದಂತೆ ರಾಜಾಸೀಟ್ ಗೆ ಬರುವ ಸಂದರ್ಶಕರಿಗೆ ವಯಸ್ಸಾಗುತ್ತದೆಯೇ ಹೊರತು ರಾಜಾಸೀಟ್ ಮಾತ್ರ ದಿನಕಳೆದಂತೆಲ್ಲಾ ಸೌಂದಯ೯ ರಾಶಿಯನ್ನು ಇಮ್ಮಡಿಗೊಳಿಸಿಕೊಂಡು ತಂಗಾಳಿಗೆ ಮೈ ತೆರೆದುಕೊಳ್ಳುತ್ತಲೇ ಇದೆ. ಕೊಡಗಿಗೆ ಬಂದಾಗ, ಮಿಸ್ ಮಾಡಿಕೊಳ್ಳದೇ ರಾಜಾಸೀಟ್ ನಲ್ಲಿ ಹೆಜ್ಜೆ ಹಾಕಲು ಮರೆಯಬೇಡಿ”

ಮನಕ್ಕೆ ಆಹ್ಲಾದ ನೀಡುವಂತೆ ಬೀಸಿ ಬರುವ ತಂಗಾಳಿ.. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಂಗೊಳಿಸುವ ಹಸಿರು ರಾಶಿ. ಸುತ್ತಲಲ್ಲಿ ಹೂವಿನ ಮಕರಂದ ಹೀರುತ್ತಿರುವ ದುಂಬಿಗಳು. ಸುವಾಸನೆ ಬೀರುತ್ತಿರುವ ಪುಷ್ಪರಾಣಿಯರು. ಇಂಥದ್ದೊಂದು ದೖಶ್ಯವನ್ನು ನೀವು ಊಹಿಸಿಕೊಳ್ಳುವಿರಾದರೆ ನೀವು ರಾಜಾಸೀಟ್ ನಲ್ಲಿ ಇದ್ದೀರೆಂದೇ ಅರ್ಥ!

ಮಡಿಕೇರಿಯ ಹೆಸರಾಂತ ಪುಷ್ಪೋದ್ಯಾನ ರಾಜಾಸೀಟ್ ಕಟ್ಟಿಕೊಡುವ ಸೌಂದರ್ಯ ವರ್ಣಿಸಲಸಾಧ್ಯ. ರಾಜಾಸೀಟ್ ಎಂಬ ಪ್ರಕೖತ್ತಿಯ ಸೌಂದರ್ಯ ಸಿರಿಯನ್ನು ಎಷ್ಟು ನೋಡಿದರೂ ಸಾಲದು. ಪ್ರತೀ ಬಾರಿ ಭೇಟಿ ನೀಡಿದಾಗಲೂ ಈ ರಾಜಾಸೀಟ್ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಲೇ ಇರುತ್ತದೆ..ಸೌಂದರ್ಯವತಿಗೆ ಸವಾಲೆಸೆಯವಂತೆ ರಾಜಾಸೀಟ್ ನ ಪುಷ್ಪರಾಣಿಯರ ಅಂದವೂ ನೂರ್ಮಡಿಯಾಗುತ್ತಿರುತ್ತದೆ. ಮಡಿಕೇರಿಯಲ್ಲಿ ರಾಜಾಸೀಟ್ ರೋಡ್ ಎಂದರೆ ಬೆಂಗಳೂರಿನ ಕಮರ್ಶಿಯಲ್ ಸ್ಟೀಟ್ ಇದ್ದಂತೆ, ದಿನದ ಎಲ್ಲಾ ಹೊತ್ತು ವಾಹನದಟ್ಟಣೆ, ಜನಜಂಗುಳಿ, ವಾರಾಂತ್ಯದಲ್ಲಂತೂ ಕಾಲಿಡಲೂ ಸ್ಥಳ ಇಲ್ಲದಂತೆ ರಾಜಾಸೀಟ್ ರೋಡ್ ಭರ್ತಿಯಾಗಿರುತ್ತದೆ. ರಾಜಾಸೀಟ್ ರಸ್ತೆಯಲ್ಲಿ ಜನ ಇಲ್ಲ ಎಂದಾದಲ್ಲಿ ಮಡಿಕೇರಿಯಲ್ಲಿ ಪ್ರವಾಸಿಗರೇ ಇಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು.

rajaseat

ಸಾವಿರಾರು ಹೂಕುಂಡಗಳಲ್ಲಿ ನೂರಾರು ತಳಿಯ ಪುಷ್ಪಗಳನ್ನು ರಾಜಾಸೀಟ್ ನಲ್ಲಿ ಬೆಳೆಸಲಾಗಿದೆ. ಆಯಾ ಋತುಮಾನಕ್ಕೆ ತಕ್ಕಂತೆ ಈ ಪುಷ್ಪರಾಣಿಯರು ಅರಳಿ ನೋಡುಗರಿಗೆ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸುತ್ತವೆ. ಕಳೆದ ಮೂರು ವಷ೯ಗಳ ಹಿಂದೆ ಸಂದರ್ಶಕರ ದರ್ಶನಕ್ಕಾಗಿ ರಾಜಾಸೀಟ್ ವಿಸ್ತರಿಸಿ ಗ್ರೇಟರ್ ರಾಜಾಸೀಟ್ ರೂಪಿಸಲಾಗಿದ್ದು, ರಾಜಾಸೀಟ್ ನಲ್ಲಿ ಪ್ರಪಾತದಂಚಿಗೆ ಹೆಜ್ಜೆ ಹಾಕುತ್ತಾ ಹೋದಲ್ಲಿ ಬೀಸಿ ಬರುವ ತಂಗಾಳಿ ನಡುವೇ ಸಂದರ್ಶಕ ಕೂಡ ಪ್ರಕೖತಿಯಲ್ಲಿ ಲೀನವಾಗಿ ಸಾಗುತ್ತಿರುವಂಥ ಅನುಭವ ಆಗುತ್ತದೆ.

ರಾಜಾಸೀಟ್ ವಿಶೇಷವೆಂದರೆ ದಿನ ಯಾವುದೇ ಸಮಯದಲ್ಲಿಯೂ ಇಲ್ಲಿಗೆ ತೆರಳಿ, ಸದಾ ಒಂದಿಲ್ಲೊಂದು ಚಂದದ ಅನುಭವವನ್ನು ಇದು ನೀಡುತ್ತದೆ. ಬೆಳಗ್ಗಿನ ಹೊತ್ತಿನಲ್ಲಿ ರಾಜಾಸೀಟ್ ಮೇಲೆ ಆವರಿಸಿರುವ ಇಬ್ಬನಿ, ರಾಜಾಸೀಟ್ ಮುಂಬದಿಯ ಹಸುರಿನ ಮೇಲೆ ಮುಚ್ಚಿರುವ ಮಂಜಿನ ರಾಶಿ, ಸಂಜೆಯ ಹೊತ್ತಿಗೆ ಅಪೂವ೯ ಅನುಭವ ನೀಡುವ .. ದೂರದ ಗಿರಿಯಲ್ಲಿ ವಿದಾಯ ಹೇಳುವಂತೆ ಮುಳುಗುವ ಸೂರ್ಯಸ್ತಮಾನದ ಅವಿಸ್ಮರಣೀಯ ನೋಟ.. ಎಲ್ಲವೂ ಚಂದಕ್ಕಿಂತ ಚಂದ.!

ರಾಜಾಸೀಟ್ ಗೆ ಭೇಟಿ ನೀಡುವವರಿಗೆ ಸಾಹಸ ಕ್ರೀಡೆಗಳು ಕೂಡ ನಿಗಧಿತ ಶುಲ್ಕಕ್ಕೆ ನಿಲುಕುತ್ತದೆ. ಹಸಿರ ಸಿರಿ ಮೇಲಿನಿಂದ ಸಾಗುವ ಜಿಪ್ ಲೈನ್ ನಂಥ ಈ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಉತ್ತಮ ಅವಕಾಶವಿದೆ. ರಾಜಾಸೀಟ್ ಪಕ್ಕದಲ್ಲಿಯೇ ಇರುವ ಕೊಡಗಿನ ಹೆಸರಾಂತ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಕೂಡ ಸಂದರ್ಶನಯೋಗ್ಯ. ದೇಶದಾದ್ಯಂತಲಿನಿಂದ ಈ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ವರ ಬೇಡಿ ಅದು ಈಡೇರಿದೊಡನೆ ಹರಕೆ ತೀರಿಸಲು ಇಲ್ಲಿಗೆ ಮರಳಿ ಬರುವುದಿದೆ.

ಅಂದಂತೆ, ರಾಜಾಸೀಟ್ ನಲ್ಲಿ ಹೆಜ್ಜೆ ಹಾಕುತ್ತಿದ್ದಂತೆಯೇ ಮರೆಯಬಾರದ ಸಂಗತಿ ಏನೆಂದರೆ .. ನೀವು ಹೆಜ್ಜೆ ಹಾಕುತ್ತಿರುವ ನೆಲ ಒಂದು ಕಾಲದಲ್ಲಿ ಶವಗಳನ್ನು ಹೂಳುವ ಮಣ್ಣಾಗಿತ್ತು! ಹೌದು, ಈಗಿನ ರಾಜಾಸೀಟ್ ಅನಾದಿ ಕಾಲದಲ್ಲಿ ಬ್ರಿಟಿಷರ ಸ್ಮಶಾನವಾಗಿತ್ತು. ಕೊಡಗಿನಲ್ಲಿದ್ದ ನೂರಾರು ಬ್ರಿಟಿಷರು ಚಿರನಿದ್ದೆಗೆ ಜಾರಲು ಇದೇ ಸ್ಥಳವನ್ನು ಸ್ಮಶಾನವಾಗಿ ಅಂದು ಆಯ್ಕೆ ಮಾಡಿಕೊಂಡಿದ್ದರಂತೆ. ಅಂದಿನ ಕಾಲದಲ್ಲಿ ಸ್ಮಶಾನವಾಗಿ ಯಾರೋರ್ವರೂ ಸುಳಿಯದಿದ್ದ ಸ್ಥಳ, ಈಗ ಎಲ್ಲರೂ ಭೇಟಿ ನೀಡಲು ಮುಂದಾಗುವ ಪ್ರವಾಸೀ ತಾಣವಾಗಿರುವುದು ವಿಶೇಷ.

ಕೊಡಗನ್ನು ಆಳಿದ ಕೊನೆಯ ದೊರೆ ಚಿಕ್ಕ ವೀರರಾಜೇಂದ್ರ ಅವರನ್ನು 1834ರ ಏಪ್ರಿಲ್ 24ರಂದು ಪದಚ್ಯುತಗೊಳಿಸಿ ಬ್ರಿಟಿಷರು ಕೊಡಗನ್ನು ಪ್ರತ್ಯೇಕ ಪ್ರಾಂತ್ಯವಾಗಿ ಪರಿಗಣಿಸಿ, ಫ್ರೇಸರ್ ಎಂಬುವವರನ್ನು ಮೊದಲ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದರು. ಅಲ್ಲಿಂದ ಸ್ವಾತಂತ್ರ್ಯ ಬರುವವರೆಗೂ ಕೊಡಗಿನಲ್ಲಿ ಬ್ರಿಟಿಷರ ನೇರ ಆಡಳಿತ ಮುಂದುವರೆಯಿತು. ಈ 113 ವರ್ಷಗಳಷ್ಟು ಸುದೀರ್ಘ ಕಾಲದ ಬ್ರಿಟಿಷರ ಆಳ್ವಿಕೆಯು ಕೊಡಗನ್ನು ಸಂಪೂರ್ಣವಾಗಿ ಬದಲಾಯಿಸಿತು. ಹಾಗೆಯೇ, ಇಲ್ಲಿದ್ದ ರಾಜಾಸೀಟ್‌ ಪ್ರದೇಶವನ್ನು ಅವರು ಸ್ಮಶಾನವಾಗಿ ಮಾಡಿದರು.

rajaseat 1

ಸ್ವಾತಂತ್ರ್ಯ ನಂತರ ಬ್ರಿಟಿಷರು ಕೊಡಗಿನಿಂದ ಕಾಲ್ಕಿತ್ತ ಬಳಿಕ ಸ್ಮಶಾನವಿದ್ದ ಜಾಗವನ್ನು ಈಗ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯಿರುವ ಖಾಲಿ ಜಾಗಕ್ಕೆ ಸ್ಥಳಾಂತರಿಸಿ, ಈ ಸ್ಥಳದಲ್ಲಿ ತೋಟಗಾರಿಕಾ ಇಲಾಖೆಯಿಂದ ಪುಷ್ಪೋದ್ಯಾನವನ್ನು ರೂಪಿಸಲಾಯಿತು. ಬ್ರಿಟಿಷರ್ ಸ್ಮಶಾನ ಸ್ಥಳಾಂತರಿಸುವ ಸಂದರ್ಭ ಆಗಲೂ ಕೊಡಗಿನಲ್ಲಿ ವಾಸವಿದ್ದ ಕೆಲವು ಆಂಗ್ಲೋ ಇಂಡಿಯನ್ನರಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಆದರೆ, ಆಗ ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದ ರಾಜಕೀಯ ಮುತ್ಸದಿ ಎಂ.ಸಿ. ನಾಣಯ್ಯ ಅವರು ಛಲ ತೊಟ್ಟು ಪುಷ್ಪೋದ್ಯಾನವನ್ನು ಇಲ್ಲಿಯೇ ರೂಪಿಸಲು ಮುಂದಾದರು. ಸ್ಮಶಾನ ಸ್ಥಳಾಂತರಿಸಲಾಗುತ್ತದೆ ಎಂದು ನಾಣಯ್ಯ ಅಂದಿನ ಬ್ರಿಟಿಷ್ ಹೈಕಮಿಷನರ್ ಗೆ ಪತ್ರವನ್ನೂ ಬರೆದು ಮಾಹಿತಿ ನೀಡಿದ್ದರು.

ಹಿಂದಿನ ಕಾಲದಲ್ಲಿ ಕೊಡಗಿನ ರಾಜರು ನಿಸರ್ಗ ಸೌಂದರ್ಯ ಸವಿಯಲು ಇಲ್ಲಿಗೆ ಬರುತ್ತಿದ್ದರು. ರಾಣಿಯರೂ ಜತೆಗಿರುತ್ತಿದ್ದರು. ರಾಜಾರಾಣಿಯರು ಕುಳಿತು ಪ್ರಕೖತ್ತಿಯ ವಿಹಂಗಮ ನೋಟ ಆಸ್ವಾದಿಸಲು ಇಲ್ಲಿ ಮಂಟಪವನ್ನೂ ನಿರ್ಮಿಸಲಾಗಿತ್ತು. ಅಂತೆಯೇ ಅಂದಿನ ರಾಜರಿಗೆ ಸಿಟ್ಟು ಹೆಚ್ಚಾಗಿಯೇ ಇದ್ದ ಕಾರಣ ತಮ್ಮ ಸಂಸ್ಥಾನದಲ್ಲಿ ಯಾರಾದರೂ ತಪ್ಪೆಸಗಿದ್ದರೆ ಅಂಥವರನ್ನು ಈ ಮಂಟಪದ ಬಳಿಯಿಂದ ಆನೆಯ ಸೊಂಡಿಲನಲ್ಲಿ ಎತ್ತಿ ಮುಂಬದಿಯ ಪ್ರಪಾತಕ್ಕೆ ಎಸೆಯಲಾಗುತ್ತಿತ್ತು. ಹೀಗೆ ಎಸೆಯಲ್ಪಟ್ಟವರ ತಲೆ ಬೀಳುತ್ತಿದ್ದ ಜಾಗಕ್ಕೆ ತಲೆ ಮನೆ ಎಂದು ಹೆಸರಿತ್ತು. ಅದೀಗ ಪುಟ್ಟ ಊರಾಗಿ ತಾಳತ್ತಮನೆ ಎಂದು ಕರೆಯಲ್ಪಟ್ಟಿದೆ. ರಾಜರು ನಿಂತು ನಿಸರ್ಗ ನೋಡುತ್ತಿದ್ದ ಸ್ಥಳಕ್ಕೇ ರಾಜಾಸೀಟ್ ಎಂಬ ಹೆಸರು ಬಂತು.

ಇಂದಿಗೂ ರಾಜಾಸೀಟ್ ಮಂಟಪದ ಮುಂದಿನಿಂದ ನೋಡಿದರೆ, ಹೆಬ್ಬಾವಿನಂತೆ ಸಾಗಿರುವ ಮಂಗಳೂರು ಹೆದ್ದಾರಿಯಲ್ಲಿ ಘಟ್ಟದ ರಸ್ತೆ ಹತ್ತಿಳಿಯುವ ತವಕದಲ್ಲಿರುವ ವಾಹನಗಳು ಕಾಣುತ್ತದೆ. ರಾಜಾಸೀಟ್ ನ ಅಲ್ಲಲ್ಲಿ ಇರುವ ಕಲ್ಲು ಬೆಂಚಿನಲ್ಲಿ ಪವಡಿಸಿ ಹರಟೆ ಹೊಡೆಯವ ಸಂಸಾರಿಗರು, ಅತ್ತಿಂದಿತ್ತ ಓಡಾಡುತ್ತಾ ಲವಲವಿಕೆಯ ಬುಗ್ಗೆಯಾಗುವ ಚಿಣ್ಣರು, ಲವ್ ಲವಿಕೆಗಾಗಿಯೇ ರಾಜಾಸೀಟ್ ಗೆ ಬರುವ ಲವ್ವರ್ ಗಳು.. ಕಳೆದು ಹೋದ ದಿನಗಳ ಧ್ಯಾನದಲ್ಲಿ ತೊಡಗಿರುವವರಂತೆ ನಿಟ್ಟುಸಿರು ಬಿಟ್ಟು ಹೆಜ್ಜೆ ಹಾಕುವ ಹಿರಿಜೀವಗಳು, ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವ ಧಾವಂತದಲ್ಲಿರುವ ಫೋಟೋ ಪ್ರಿಯರು.. ಹೀಗೆ ರಾಜಾಸೀಟ್ ನಲ್ಲಿ ಹೆಜ್ಜೆ ಹಾಕಿದರೆ ಹತ್ತು ಹಲವು ಮುಖಗಳೊಂದಿಗೆ ಜೀವನದ ನಾನಾ ಭಾವಗಳೂ ಕಾಣಲು ಸಿಗುತ್ತದೆ.

ವರ್ಷಗಳು ಉರುಳಿದಂತೆ ರಾಜಾಸೀಟ್ ಗೆ ಬರುವ ಸಂದರ್ಶಕರಿಗೆ ವಯಸ್ಸಾಗುತ್ತದೆಯೇ ವಿನಾ ರಾಜಾಸೀಟ್ ಮಾತ್ರ ದಿನಕಳೆದಂತೆಲ್ಲಾ ಸೌಂದರ್ಯ ರಾಶಿಯನ್ನು ಇಮ್ಮಡಿಗೊಳಿಸಿಕೊಂಡು ತಂಗಾಳಿಗೆ ಮೈತೆರೆದುಕೊಳ್ಳುತ್ತಲೇ ಇದೆ. ಕೊಡಗಿಗೆ ಬಂದಾಗ,ಮಿಸ್ ಮಾಡಿಕೊಳ್ಳದೇ ರಾಜಾಸೀಟ್ ನಲ್ಲಿ ಹೆಜ್ಜೆ ಹಾಕಲು ಮರೆಯಬೇಡಿ!

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..