• ಮೇಘನಾ ಕೆ.ಬಿ

ಬೇಸಗೆ ರಜೆ ಶುರುವಾಗುತ್ತಲೇ ಉಡುಪಿಗೆ ಹೋಗಿದ್ದೆವು. ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಮೊದಲು ಇದ್ದದ್ದೇ ಉಡುಪಿಯ ಶ್ರೀ ಕೃಷ್ಣ ಮಠ. ಉರಿ ಬಿಸಿಲಿದ್ದರೂ ಉಡುಪಿಯಲ್ಲಿನ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ ಏನೂ ಇರಲಿಲ್ಲ. ನಾವು ಕೃಷ್ಣ ಮಠಕ್ಕೆ ಹೋದಾಗ, ಶಾಲಾ ಪ್ರವಾಸಗಳು ಕೂಡ ಇದ್ದುದರಿಂದ ಮಕ್ಕಳು ಹಾಗೂ ಶಿಕ್ಷಕರ ಸಂಖ್ಯೆ ಹೆಚ್ಚೇ ಇತ್ತು. ಕ್ಯೂನಲ್ಲಿ ಹೋಗುವುದು ಕಷ್ಟವೆಂದು ಭಾವಿಸಿ, ವಿಶೇಷ ದರ್ಶನದ ಟಿಕೆಟ್ ಪಡೆದೆವು. 20 ನಿಮಿಷಗಳಲ್ಲಿ ಶ್ರೀ ಕೃಷ್ಣನ ದರ್ಶನವಾಯಿತು.

ಇದನ್ನೂ ಓದಿ: ಮುನ್ನಾರ್ ಎಂಬ ಮಾಯಾಲೋಕ

ಕೊಳಲು ಹಿಡಿದು ನಿಂತಿರುವ ಕೃಷ್ಣನ ಮೂರ್ತಿ, ಅವನ ಹಿಂದಿನ ಗೋವನ್ನು ನೋಡುತ್ತಾ ನಿಂತೆವು. ಆ ದೀಪಗಳ ಬೆಳಕಿನಲ್ಲಿ ಕೃಷ್ಣನನ್ನು ಎಷ್ಟು ಕಣ್ತುಂಬಿಕೊಂಡರೂ ಸಾಲದು - ಅವನೊಂದು ವೈಭವ.

Untitled design - 2026-06-05T213650.687

ನೇರ ದರ್ಶನಕ್ಕೆ ಬಂದವರಿಗೆಲ್ಲ ಕೃಷ್ಣನೆದುರು ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಅವಕಾಶವಿತ್ತು. ಅವನ ದರ್ಶನದ ನೇರ ಪ್ರಸಾರ ದೇವಸ್ಥಾನದ ಒಳ-ಹೊರಗೂ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಶಾಲಾ ಮಕ್ಕಳಂತೂ ಪದೇ ಪದೇ ಕನಕನ ಕಿಂಡಿಯಿಂದ ದರ್ಶನ ಪಡೆಯಲು ಯತ್ನಿಸುತ್ತಿದ್ದರು.

ದರ್ಶನದ ನಂತರ ನಾವು ಪ್ರಸಾದ ಸವಿಯಲು ಅವಕಾಶ ಸಿಕ್ಕಿತ್ತು. ದೇವಸ್ಥಾನದ ಆವರಣಗಳಲ್ಲಿ ಫೊಟೋ ತೆಗೆಯಲು ನಿಷೇಧ ಇರುವುದರಿಂದ ಟಿವಿಯಲ್ಲಿನ ಪ್ರಸಾರವನ್ನೇ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡೆ.

ಕೃಷ್ಣನ ದರ್ಶನದ ನಂತರ ಸಂಜೆಗೆ ನಮ್ಮ ಪಯಣ 'ಮರವಂತೆ' ಬೀಚ್ ಕಡೆ ಸಾಗಿತು. ನಾವು ವೀಕ್ ಡೇ ಅಲ್ಲಿಗೆ ಹೋಗಿದ್ದೆವು. ಹಾಗಾಗಿ ಬೀಚ್‌ನಲ್ಲಿ ಜನ ಜಂಗುಳಿ ಇರಲಿಲ್ಲ. ಫ್ಯಾಮಿಲಿ ಜತೆಗೆ ಟೈಮ್ ಸ್ಪೆಂಡ್ ಮಾಡಲು ಬೀಚ್‌ಸೈಡ್ ತುಂಬಾನೇ ಪ್ರಶಸ್ತ ಸ್ಥಳ. ಸಂಜೆ ಅಲ್ಲಿಗೆ ಹೋದರೆ ಬಿಸಿಲಿನ ತಾಪ ಕಡಿಮೆ ಇದ್ದು, ಮಕ್ಕಳ ಜತೆ ಆಟವಾಡಲು, ಸೂರ್ಯಾಸ್ತದ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶವಿರುತ್ತದೆ. ಕಡಲ ಅಲೆಗಳ ಭೋರ್ಗರೆತದ ಸದ್ದು ಹಿತ ಅನಿಸುತ್ತದೆ.

ಲಾಂಗ್ ವೀಕೆಂಡ್ ಅಥವಾ ಬೇಸಗೆ ರಜೆಗಳಲ್ಲಿ ಉಡುಪಿಗೆ ಹೋಗುವುದಾದರೆ, ಅಲ್ಲೇ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮುಂಚೆಯೇ ಮಾಡಿಕೊಳ್ಳುವುದು ಉತ್ತಮ. ನಾವು ಮುಂಚಿತವಾಗಿಯೇ ಪ್ರವಾಸದ ಪ್ಲಾನ್ ಮಾಡಿಕೊಂಡಿದ್ದರ ಫಲವಾಗಿ ಅಂದುಕೊಂಡಂತೆ ನಮ್ಮ ಪಟ್ಟಿಯಲ್ಲಿನ ಎಲ್ಲಾ ಸ್ಥಳಗಳನ್ನು ನೋಡಿಕೊಂಡು ಬರಲು ಸಾಧ್ಯವಾಯಿತು. ಪ್ಯಾರಡೈಸ್ ಲಗೂನ್, ಪ್ಯಾರಡೈಸ್ ಬೀಚ್ ರೆಸಾರ್ಟ್, ಯುವ ಮೆರಿಡಿಯನ್ ರೆಸಾರ್ಟ್ಸ್ ಫ್ಯಾಮಿಲಿ ಸ್ಟೇಗೆ ತುಂಬಾನೇ ಸೂಕ್ತ ಅನಿಸಿತು.

Untitled design - 2026-06-05T213643.919

ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ಬೋಟ್‌ನಲ್ಲಿ ಹೋಗುವ ಇಚ್ಛೆ ಇದ್ದವರಿಗೆ ಪ್ಯಾರಡೈಸ್ ಬೀಚ್ ರೆಸಾರ್ಟ್ ಆಯ್ಕೆ ಸೂಕ್ತ. ಬೀಚ್ ಹತ್ತಿರವೇ ಇರುವ ಕಾರಣ, ಸ್ಪೀಡ್ ಬೋಟ್‌ಗಳ ಮೂಲಕ ದ್ವೀಪದತ್ತ ಸಾಗಿ ಅಲ್ಲೇ ಸುಮಾರು 1 ಗಂಟೆ ಕಾಲ ಕಳೆಯುವ ಅವಕಾಶ ಸಿಗುತ್ತದೆ. ನಾವು ಹೊರಟಿದ್ದು ಸಂಜೆ ಐದೂವರೆಯ ಹೊತ್ತಿಗೆ. 20 ನಿಮಿಷಗಳಲ್ಲಿ ದ್ವೀಪ ತಲುಪಿದೆವು. ರಮಣೀಯ ಸೂರ್ಯಾಸ್ತವನ್ನು ತನ್ಮಯತೆಯಿಂದ ಕಣ್ತುಂಬಿಕೊಂಡೆವು. ಮಕ್ಕಳು ಆಟವಾಡಲು ಹಾಗೂ ಕಪಲ್ಸ್ ಫ್ಯಾಮಿಲಿ ಫೊಟೋಶೂಟ್ ಮಾಡಲೂ ಇದು ತುಂಬಾ ಪ್ರಶಸ್ತ ಸ್ಥಳ.

ನಾವು ಉಳಿದುಕೊಂಡ ಯುವ ಮೆರಿಡಿಯನ್ಗೆ ಹತ್ತಿರದಲ್ಲಿ ಇರುವ ಸ್ಥಳಗಳಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನ, ಚಂಡಿಕಾ ಪರಮೇಶ್ವರಿ (ಕುಂಭಾಸಿ) ಹಾಗೂ ಶ್ರೀ ಮಹಾಲಕ್ಷ್ಮಿ (ಉಚ್ಚಿಲ) ದೇವಸ್ಥಾನಗಳಿಗೆ ಭೇಟಿ ನೀಡಿದೆವು. ಚಂಡಿಕಾ ಹಾಗೂ ಮಹಾಲಕ್ಷ್ಮಿ ದೇವಸ್ಥಾನಗಳ ವಿನ್ಯಾಸ ಬಹಳ ರಮಣೀಯವಾಗಿದೆ. ಉಡುಪಿಯ ಬಹುತೇಕ ದೇವಸ್ಥಾನಗಳಲ್ಲಿ ಪ್ರಸಾದದ ವ್ಯವಸ್ಥೆ ಇರುತ್ತದೆ.

ಖುಷಿ ನೀಡಿತ್ತು ಕಯಾಕಿಂಗ್

ನಮಗೆ 'ಮ್ಯಾಂಗ್ರೋವ್ವ್ಸ್ ಕಯಾಕಿಂಗ್ & ಬೋಟಿಂಗ್' ನವರ ಕಾಂಟಾಕ್ಟ್ ಮೊದಲೆ ಇದ್ದುದರಿಂದ ನಾವು ನೇರವಾಗಿ ಅಲ್ಲಿಗೆ ಹೋದೆವು. ಇದು ಸಾಮಾನ್ಯ ಕಯಾಕಿಂಗ್ ಅಲ್ಲ. ಸಾಲಿಗ್ರಾಮದ ಹತ್ತಿರ ಮ್ಯಾಂಗ್ರೋವ್ಸ್ ಕಾಡಿನ ಒಳಗೆ ಕಯಾಕಿಂಗ್ ಮಾಡಿಕೊಂಡು ಹೋಗುವ ಅನುಭವವೇ ಬೇರೆ. ಸಂಜೆ 5.30-6 ಗಂಟೆಯ ಸಮಯದಲ್ಲಿ ಹೋಗಿದುದರಿಂದ ಪ್ರಶಾಂತವಾದ ವಾತಾವರಣವಿತ್ತು. ಫ್ಯಾಮಿಲಿ ಸಮೇತ ನಾಲ್ಕೈದು ಜನ ಹೋಗುವುದಾದರೆ ಬೋಟಿಂಗ್ ವ್ಯವಸ್ಥೆಯೂ ಇದೆ.

ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಿ. ಡಸ್ಟ್ ಬಿನ್‌ಗಳನ್ನು ಬಳಸಿ. ಮಕ್ಕಳಿಗೂ ಕಲಿಸಿ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಉತ್ತಮ ಉಡುಗುರೆ ಪ್ಲಾಸ್ಟಿಕ್ ರಹಿತ ವಾತಾವರಣ ಆಗಿರಬೇಕು.