ಕರ್ನಾಟಕ ರಾಜ್ಯ ಹೊಟೇಲುಗಳ ಸಂಘ (ರಿ) ಬೆಂಗಳೂರು ಸಂಘಕ್ಕೆ ಗೌರವಾಧ್ಯಕ್ಷರಾಗಿ ಎಂ. ರಾಜೇಂದ್ರ ಅವರು ಆಯ್ಕೆಯಾಗಿದ್ದಾರೆ. ಈವರೆಗೆ ಎಂ. ರಾಜೇಂದ್ರ ಅವರು 8 ವರ್ಷ ಮೈಸೂರು ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷರಾಗಿ ಮತ್ತು 4 ವರ್ಷ ಕರ್ನಾಟಕ ರಾಜ್ಯ ಹೊಟೇಲ್‌ಗಳ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಲವಾರು ಇಲಾಖೆಗಳಲ್ಲಿ ಸೃಷ್ಟಿಯಾಗುತ್ತಿದ್ದ ತೊಡಕುಗಳನ್ನು ನಿವಾರಿಸಲು ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯ ಹೊಟೇಲುಗಳ ಸಂಘಕ್ಕೆ 75 ವರ್ಷ ತುಂಬಿದ ಸಮಯದಲ್ಲಿ 30 ಜಿಲ್ಲೆಗಳ ಪ್ರವಾಸ ಮಾಡಿ ಎಲ್ಲಾ ಜಿಲ್ಲಾ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಹುರಿದುಂಬಿಸಿದ್ದರು. ಸಂಘದ ಇತಿಹಾಸದಲ್ಲೇ ಮೈಲಿಗಲ್ಲಾಗುವಂತೆ ಅತಿಥ್ಯರತ್ನ ಮತ್ತು ಹುಬ್ಬಳ್ಳಿಯಲ್ಲಿ ನಡೆದ 16ನೆಯ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರೆಸಿ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದರು. ಗೌರವಾಧ್ಯಕ್ಷರಾಗಿ ಎಂ. ರಾಜೇಂದ್ರ ಅವರು ಪುನಃ ಆಯ್ಕೆಯಾಗಿದ್ದಕ್ಕೆ ದಕ್ಷಿಣ ಭಾರತ ಹೊಟೇಲ್‌ಗಳ ಸಂಘದ ಅಧ್ಯಕ್ಷ ಕೆ. ವ್ಯಾಮರಾಜು, ಕರ್ನಾಟಕ ರಾಜ್ಯ ಹೊಟೇಲ್‌ಗಳ ಸಂಘದ ಅಧ್ಯಕ್ಷ ಬಿ.ಕೆ. ಶೆಟ್ಟಿ, ಉಪಾಧ್ಯಕ್ಷ ರವಿಶಾಸ್ತ್ರಿ, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ. ಕೆ, ಗೌರವಾಧ್ಯಕ್ಷ ಟಿ. ಚಂದ್ರಶೇಖರ್‌ ಹೆಬ್ಬಾರ್‌, ಮೈಸೂರು ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಹಾಗೂ ಸಂಘದ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.