- ಯಶಸ್ವಿ ದೇವಾಡಿಗ ಶಿರಸಿ

ಬೇಸಗೆ ರಜೆ ಬಂತು ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎನ್ನುವ ಚಿಂತೆ ಅನೇಕ ಪಾಲಕರದ್ದು. ಕೆಲವರು ಮಕ್ಕಳನ್ನು ಕರೆದುಕೊಂಡು ಕೆಲವು ಹೊಸ ಪ್ರವಾಸಿ ಸ್ಥಳಗಳಿಗೆ ಹೋಗಿ ಬರಲು ಇಷ್ಟಪಡುತ್ತಾರೆ. ಅದರಲ್ಲಿ ವಿಜಯಪುರವೂ ಒಂದು. ರಾಜ್ಯದ ಸುಂದರ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರ ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: ಬೇಸಗೆ ರಜೆಯಲ್ಲಿ ಎಲ್ಲೆಲ್ಲಿ ಮಜ ಮಾಡ್ಬೋದು?

ವಿಜಯಪುರ 200 ವರ್ಷಗಳ ಕಾಲ ಆದಿಲ್ ಶಾಹಿಗಳ ಆಳ್ವಿಕೆಯಲ್ಲಿತ್ತು.‌ ಇಲ್ಲಿನ ಸ್ಥಳಗಳು ಕೇವಲ ನೋಡಲು ಮನರಂಜನೆ ಮಾತ್ರವಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಪೂರಕವಾಗಿವೆ. ವಿಜಯಪುರಕ್ಕೆ ಒಂದು ಪ್ರವಾಸ ಇತಿಹಾಸವನ್ನು ತಿಳಿದುಕೊಳ್ಳಲು ಒಂದು ಅವಕಾಶ ಅಂದರೆ ತಪ್ಪಾಗದು.

Untitled design - 2026-05-13T185148.921

ಬಯಲು ದಾರಿಯಲ್ಲಿ ಹಚ್ಚ ಹಸುರಿನ ಹುಲ್ಲು ಹಾಸಿನ ಮೇಲೆ ಕಲ್ಲುಗಳಲ್ಲಿ ಕೆತ್ತಿ, ಶಿಲ್ಪಕಲೆಯ ದೇಗುಲವೆಂಬಂತೆ ವಿಜಯಪುರ ನಗರದ ಹೊರವಲಯದಲ್ಲಿರುವ ಇಬ್ರಾಹಿಂ ರೋಜಾವನ್ನು ನಿರ್ಮಿಸಲಾಗಿದೆ. ಈ ಅದ್ಭುತ ಸೌಂದರ್ಯವನ್ನು 2ನೆಯ ಇಬ್ರಾಹಿಂ ತನ್ನ ಪಟ್ಟಧರಿಸಿ, ತಾಯಿ, ಮಕ್ಕಳು, ಕುಟುಂಬ ಮತ್ತು ತನ್ನ ನೆನಪಿಗಾಗಿ ಹಾಗೂ ಬದುಕಿನ ಶ್ರೇಷ್ಠತೆಯನ್ನು ಸಾರಲು, ಕುಟುಂಬದ ಮೌಲ್ಯವನ್ನು ಶಾಶ್ವತಗೊಳಿಸಲು ನಿರ್ಮಿಸಿದ ಎಂಬ ಉಲ್ಲೇಖಗಳಿವೆ.

ಸ್ಮಾರಕದ ನಾಲ್ಕು ಬದಿಗಳಲ್ಲಿ ಕಲಾತ್ಮಕವಾದ ಕಿರಿದಾದ ಬಾಗಿಲುಗಳನ್ನು ನಿರ್ಮಿಸಲಾಗಿದೆ. ಬಾಗಿಲಿನ ಇಕ್ಕೆಲಗಳಲ್ಲಿ ಸುರಂಗ ಮಾರ್ಗದ ದ್ವಾರಗಳನ್ನು ನಿರ್ಮಿಸಲಾಗಿದೆ. ಆಗ್ರಾದಲ್ಲಿರುವ ತಾಜ್ ಮಹಲ್‌ ಸ್ಮಾರಕಕ್ಕೆ ಈ ಇಬ್ರಾಹಿಂ ರೋಜಾ ಸ್ಪೂರ್ತಿಯಾಗಿತ್ತು ಎನ್ನಲಾಗಿದೆ. ಈ ಜಾಗದಲ್ಲಿ ಕೇವಲ ಸ್ಮಾರಕ ಮಾತ್ರವಲ್ಲ; ಸಾಕಷ್ಟು ಸಂಖ್ಯೆಯಲ್ಲಿ ಗಿಳಿ ಮತ್ತು ಪಾರಿವಾಳಗಳೂ ಕಾಣಲು ಸಿಗುತ್ತವೆ.

Untitled design - 2026-05-13T185154.617

ಕುಶಲ ಶಿಲ್ಪದ ಮಿನಾರುಗಳಿಂದ ಆವೃತವಾದ ಈ ಕಟ್ಟಡಗಳ ಶಿಲ್ಪ ಸೌಂದರ್ಯ ವರ್ಣನಾತೀತವಾಗಿದೆ. ಶಿಲ್ಪಕಲೆಯ ಸಾರ ಸರ್ವಸ್ವವನ್ನು ಹೇರಿಕೊಂಡ ಈ ಕಟ್ಟಡ ತನ್ನ ಅನುಪಮ ವಿನ್ಯಾಸ ಮತ್ತು ಸೌಂದರ್ಯದಿಂದ ನೋಡುಗರ ಮನ ಸೆಳೆಯುತ್ತಿದೆ.

ಈ ಅದ್ಭುತ ಸ್ಮಾರಕದ ಜತೆಗೆ ವಿಜಯಪುರದಲ್ಲಿ ಜುಮ್ಮಾ ಮಸೀದಿ, ಬಾರಾ ಕಮಾನ್, ಅಸರ್ ಮಹಲ್, ಗಗನ್ ಮಹಲ್, ಸಂಗೀತ್ ಮಹಲ್, ಉಪ್ಪಲಿ ಬುರ್ಜ್‌, ಚಾಂದ್ ಭಾವಡಿ, ಜೋಡ ಗುಮ್ಮಟ, ಮೆಹತರ ಮಹಲ್, ಸಾತ್ ಮಂಜಿಲ್, ಜಲ ಮಂಜಿಲ್, ಬೇಸಗೆ ಅರಮನೆ, ವಿಜಯಪುರ ಕೋಟೆ ಸೇರಿದಂತೆ ಸಾಕಷ್ಟು ಐತಿಹಾಸಿಕ ಸ್ಥಳಗಳಿದ್ದು, ಉತ್ತಮ ಸಮಯಾವಕಾಶ ಮಾಡಿಕೊಂಡು ಭೇಟಿ ಕೊಡಬಹುದು.

ದಾರಿ ಹೇಗೆ?

ಬೆಂಗಳೂರಿನಿಂದ ವಿಜಯಪುರಕ್ಕೆ ರೈಲು, ಬಸ್ ವ್ಯವಸ್ಥೆಗಳಿವೆ. ವಿಜಾಪುರದಿಂದ ಆಟೋ, ಕುದುರೆಗಾಡಿಗಳ ಮೂಲಕ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಬೆಳಗಾವಿ ಹತ್ತಿರದ ದೇಶೀಯ ವಿಮಾನ ನಿಲ್ದಾಣ.