Thursday, June 12, 2025
Thursday, June 12, 2025

ನೋಡಬನ್ನಿ ಚುಂಚನಕಟ್ಟೆ ಜಲಪಾತದ ಸೌಂದರ್ಯ..!

ಮೈಸೂರಿನ ಕೃಷ್ಣರಾಜನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿರುವ ಚುಂಚನಕಟ್ಟೆ ಜಲಪಾತ ಪ್ರವಾಸಿಗರ ನೆಚ್ಚಿನ ತಾಣ. ಶ್ರೀ ರಾಮನು ಸೀತಾಮಾತೆ ಹಾಗೂ ತಮ್ಮ ಲಕ್ಷ್ಮಣನ ಸಮೇತನಾಗಿ ಕಾಣಸಿಗುವ ಕೋದಂಡರಾಮ ದೇಗುಲವೂ ಜಲಪಾತದಿಂದ ಕೂಗಳತೆ ದೂರದಲ್ಲಿದ್ದು, ಧಾರ್ಮಿಕ ಪ್ರವಾಸಿತಾಣವಾಗಿದೆ -ಮೊಹಮ್ಮದ್ ಅಜರುದ್ದೀನ್

ಚುಂಚನಕಟ್ಟೆ ಜಲಪಾತವು ಕಾವೇರಿ ನದಿಯಿಂದ ರೂಪುಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿದೆ. ಅಷ್ಟೊಂದು ಹೆಸರುವಾಸಿಯಾಗಿಲ್ಲದಿದ್ದರೂ ತನ್ನದೆ ಆದ ಸುಂದರ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯ ಕದಿಯುತ್ತದೆ ಈ ಜಲಪಾತ ತಾಣ. ಮಳೆಗಾಲದ ಸಮಯದಲ್ಲಂತೂ ಮೈದುಂಬಿ ಹರೆಯುವ ಜಲಪಾತದ ನೋಟ ಅಂದವೋ ಅಂದ ವರ್ಣಿಸಲಾಗದಷ್ಟು ಚೆಂದವೋ ಚೆಂದ.

ಚುಂಚನಕಟ್ಟೆಯ ಸ್ಥಳ ಪುರಾಣದ ಬಗ್ಗೆ ನೀವು ತಿಳಿಯಲೇಬೇಕು:

ಚುಂಚನಕಟ್ಟೆ ಒಂದು ಪವಿತ್ರ ಸ್ಥಳವಾಗಿದ್ದು ತ್ರೇತಾಯುಗದಲ್ಲಿ ಶ್ರೀ ರಾಮನು ಸೀತಾಮಾತೆ ಹಾಗೂ ತಮ್ಮ ಲಕ್ಷ್ಮಣನ ಸಮೇತನಾಗಿ ಈ ಸ್ಥಳದಲ್ಲಿ ತಂಗಿದ್ದನೆಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ. ಮೂಲವಾಗಿ, ಚುಂಚಾ ಹಾಗೂ ಚುಂಚಿ ಎಂಬ ಹೆಸರಿನ ಬುಡಕಟ್ಟು ದಂಪತಿಗಳು ಹಿಂದೆ ರಾಮನು ಇಲ್ಲಿಗೆ ಬಂದಾಗ ಆದರಾತಿಥ್ಯಗಳನ್ನು ಮಾಡಿದ್ದರು. ಅದರಂತೆ ಈ ಸ್ಥಳಕ್ಕೆ ಚುಂಚನಕಟ್ಟೆ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.

Screenshot-2024-10-09-125042

ಶ್ರೀರಾಮನಿಗೆ ಮುಡಿಪಾದ ಕೋದಂಡ ರಾಮನ ದೇವಾಲಯವನ್ನು ಈ ತಾಣದಲ್ಲಿ ಕಾಣಬಹುದಾಗಿದೆ. ಇದರೆ ವಿಶೇಷತೆಯೆಂದರೆ ದೇವಾಲಯದ ಗರ್ಭಗೃಹದಲ್ಲಿ ನಿಂತಾಗ ಹೊರಗಡೆ ರಭಸವಾಗಿ ಹರಿಯುವ ಕಾವೇರಿ ನದಿಯ ಶಬ್ದವು ಕಿಂಚಿತ್ತು ಕೇಳಿಸುವುದಿಲ್ಲ. ಆದರೆ, ಗರ್ಭಗೃಹದ ಆಚೆ ಬರುತ್ತಿದ್ದಂತೆ ನದಿಯ ಶಬ್ದವು ನಿರಾಯಾಸವಾಗಿ ಕೇಳಲ್ಪಡುತ್ತದೆ. ಈ ವಿಚಿತ್ರಕ್ಕೂ ಕೂಡ ಒಂದು ರೋಚಕವಾದ ಸ್ಥಳ ಪುರಾಣವಿದೆ. ಅದೇನೆಂದರೆ... ಹಿಂದೆ, ರಾಮನು ವನವಾಸದ ಸಂದರ್ಭದಲ್ಲಿದ್ದಾಗ ಸೀತೆಯ ನಿರಂತರವಾದ ಮಾತುಗಳಿಂದ ಬೇಸರಿಸಿಕೊಂಡು, ಹೆಣ್ಣುಮಕ್ಕಳ ನಾಲಿಗೆಯು ನಿಯಂತ್ರಣದಲ್ಲಿರಬೇಕೆಂದು ಶಪಿಸಿದ್ದನಂತೆ. ಅಲ್ಲದೆ ಕಾವೇರಿಯನ್ನು ಒಂದು ಹೆಣ್ಣಾಗಿ ಭಾವಿಸುವುದರಿಂದ ರಾಮನ ದೇವಾಲಯದ ಗರ್ಭ ಗೃಹದಲ್ಲಿದ್ದಾಗ ಹರಿಯುವ ನದಿಯ ಶಬ್ದವು ಕೇಳುವುದಿಲ್ಲವಂತೆ!

ಮತ್ತೊಂದು ಸ್ಥಳ ಪುರಾಣದ ಪ್ರಕಾರ, ಸೀತಾ ಮಾತೆಯು ಸ್ನಾನ ಮಾಡಬೇಕೆಂದು ಕೇಳಿದಾಗ ರಾಮನು ಸೋದರನಾದ ಲಕ್ಷ್ಮಣನಿಗೆ ಬಾಣ ಬಿಡಲು ಹೇಳುತ್ತಾನೆ. ಅದರಂತೆ ಲಕ್ಷ್ಮಣನು ಬಂಡೆಗೆ ಬಾಣ ಬಿಟ್ಟಾಗ ನೀರು ಮೂರು ಭಾಗಗಳಲ್ಲಿ ಒಂದು ಅರಿಷಿಣದ ಜೊತೆ, ಒಂದು ಎಣ್ಣೆಯ ಜೊತೆ ಹಾಗು ಮತ್ತೊಂದು ಶಿಕಾಕಾಯಿಯ ಜೊತೆ ಭೋರ್ಗರೆೆಯುತ್ತದೆ. ಇಂದಿಗೂ ಜಲಪಾತವು ತುಂಬಿ ಹರಿಯುತ್ತಿದ್ದಾಗ, ಮೂರು ಕವಲುಗಳಲ್ಲಿ ಬೀಳುವುದನ್ನು ಕಾಣಬಹುದು. ಹಲವು ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಕೋದಂಡರಾಮನ ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳಿದ್ದು, ವಿಶೇಷವಾಗಿ ಸೀತೆಯು ಎಂದಿನಂತೆ ರಾಮನ ಎಡಭಾಗದಲ್ಲಿರಲಾರದೆ ಬಲಭಾಗದಲ್ಲಿರುವುದನ್ನು ಕಾಣಬಹುದು. 

Kodandarama-Temple-at-Chunchunkatte

ಚುಂಚನಕಟ್ಟೆಗೆ ಹೋಗುವುದು ಹೇಗೆ?

ಚುಂಚನಕಟ್ಟೆಯು ಮೈಸೂರಿನ ಕೃಷ್ಣರಾಜನಗರ ತಾಲೂಕಿನಲ್ಲಿದ್ದು ಜಲಪಾತ ತಾಣವು ಮೈಸೂರು ಪಟ್ಟಣದಿಂದ 57 ಕಿ.ಮೀ, ಕೆ.ಆರ್ ನಗರ ಪಟ್ಟಣದಿಂದ ಸುಮಾರು 16 ಕಿ.ಮೀ ದೂರದಲ್ಲಿ ನೆಲೆಸಿದೆ. ಮೈಸೂರು ಹಾಗೂ ಚುಂಚನಕಟ್ಟೆಗಳ ಮಧ್ಯೆ ಸಂಚರಿಸಲು ಸಾಕಷ್ಟು ಬಸ್ಸುಗಳು ಲಭ್ಯವಿದೆ. ಮೈಸೂರು - ಹಾಸನ ಹೆದ್ದಾರಿಯಲ್ಲಿ ಕೆ.ಆರ್ ನಗರ ಪಟ್ಟಣದಲ್ಲಿ ಎಡಗಡೆಗೆ ತಿರುವು ತೆಗೆದುಕೊಳ್ಳುವ ಮೂಲಕ ಈ ಜಲಪಾತಕ್ಕೆ ತೆರಳಬಹುದಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ