Wednesday, February 4, 2026
Wednesday, February 4, 2026

ಕರಾವಳಿ ಪ್ರವಾಸೋದ್ಯಮ: ಕಾರ್ಯಗತಗೊಳಿಸುವಿಕೆಗೆ ಆದ್ಯತೆ ಬೇಕು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ನೀತಿ ದಾಖಲೆಗಷ್ಟೇ ಸೀಮಿತವಾದರೆ ಪ್ರಯೋಜನವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಸಣ್ಣ ಉದ್ಯಮಿಗಳು, ಸಾರಿಗೆ ವಲಯ, ಹೋಮ್‌ಸ್ಟೇ ಮಾಲೀಕರು ಮತ್ತು ಪ್ರವಾಸಿ ಮಾರ್ಗದರ್ಶಕರು — ಇವರ ಅಭಿಪ್ರಾಯಗಳು ನೀತಿಯ ಹೃದಯವಾಗಬೇಕು.

-ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)

ಇತ್ತೀಚೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಲವು ಸಚಿವರು, ವಿಧಾನಸಭೆಯ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳ ಉಪಸ್ಥಿತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಸಭೆ ನಡೆಯಿತು. ಇಂಥ ಉನ್ನತ ಮಟ್ಟದ ಸಭೆಗಳು ನಿರೀಕ್ಷೆ ಮೂಡಿಸುತ್ತವೆ. ಆದರೆ ಪ್ರಶ್ನೆ ಒಂದೇ — ಈ ಚರ್ಚೆಗಳು ನೆಲಮಟ್ಟದ ಬದಲಾವಣೆಗೆ ಎಷ್ಟು ಬೇಗ ತಲುಪುತ್ತವೆ?

ಸಭೆಯಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (PPP), ಜಂಟಿ ಉದ್ಯಮಗಳು, ಬಹುಕೋಟಿ ಯೋಜನೆಗಳು, ವಾಸ್ತವ್ಯ ಸೌಲಭ್ಯಗಳ ವಿಸ್ತರಣೆ ಮೊದಲಾದ ವಿಚಾರಗಳು ಚರ್ಚೆಯಾದವು. ಆದರೆ ಪ್ರವಾಸೋದ್ಯಮ ಎಂದರೆ ಕೇವಲ ಹೊಟೇಲ್ ಕಟ್ಟಡಗಳು ಮತ್ತು ಸಾಹಸ ಕ್ರೀಡೆಗಳಲ್ಲ. ಪ್ರವಾಸಿಗನ ಅನುಭವ ನಿರ್ಧಾರವಾಗುವುದು ಶೌಚಾಲಯ, ತ್ಯಾಜ್ಯ ನಿರ್ವಹಣೆ, ಪಾರ್ಕಿಂಗ್, ಸಂಪರ್ಕ ರಸ್ತೆ, ಮಾಹಿತಿ ಕೇಂದ್ರ, ಸುರಕ್ಷತೆ ಮತ್ತು ಸ್ವಚ್ಛತೆಯಂಥ ಮೂಲಭೂತ ಸೌಲಭ್ಯಗಳಿಂದ.

ರಾಜ್ಯ ಸರಕಾರ ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುತ್ತಿರುವ ನಡುವೆಯೂ, ಕರಾವಳಿಯ ಉದ್ಯಮಿಗಳು ತಮ್ಮದೇ ಸಾಮರ್ಥ್ಯದಿಂದ ಕಳೆದ ದಶಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹ. ಹಿಂದೆ ಮಾಲ್ಗುಡಿ ಡೇಸ್ ಮುಂತಾದ ಚಿತ್ರೀಕರಣಗಳಿಂದ ಜನಪ್ರಿಯತೆ ಪಡೆದ ತಾಣಗಳಂತೆ, ಇತ್ತೀಚೆಗೆ ಯುವ ಚಿತ್ರ ನಿರ್ಮಾಪಕರ ಕಾಂತಾರ ಚಿತ್ರದಂಥ ಕೊಡುಗೆಗಳು ದಕ್ಷಿಣ ಕನ್ನಡದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತಂದಿವೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ನೀತಿ ದಾಖಲೆಗಷ್ಟೇ ಸೀಮಿತವಾದರೆ ಪ್ರಯೋಜನವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಸಣ್ಣ ಉದ್ಯಮಿಗಳು, ಸಾರಿಗೆ ವಲಯ, ಹೋಮ್‌ಸ್ಟೇ ಮಾಲೀಕರು ಮತ್ತು ಪ್ರವಾಸಿ ಮಾರ್ಗದರ್ಶಕರು — ಇವರ ಅಭಿಪ್ರಾಯಗಳು ನೀತಿಯ ಹೃದಯವಾಗಬೇಕು.

ಕರಾವಳಿ ಪ್ರದೇಶದ ನೈಸರ್ಗಿಕ ಸೌಂದರ್ಯ, ದೈವ–ದೇವಾಲಯಗಳ ಪರಂಪರೆ, ಆಯುರ್ವೇದ–ಯೋಗ ಕೇಂದ್ರಗಳ ಸಾಧ್ಯತೆ, ದ್ವೀಪ ಸಮೂಹಗಳು ಹಾಗೂ ಸಮುದ್ರ ಆಧಾರಿತ ಸಾಹಸ ಕ್ರೀಡೆಗಳು — ಇವೆಲ್ಲವೂ ಅಪಾರ ಅವಕಾಶಗಳಾಗಿವೆ. ಆದರೆ ಈ ಅಭಿವೃದ್ಧಿ ಪರಿಸರ ಸ್ನೇಹಿಯಾಗಿರಬೇಕು ಎಂಬುದು ಸ್ಥಳೀಯರ ನ್ಯಾಯಸಮ್ಮತ ಬೇಡಿಕೆ. ಪರಿಸರ ಹಾನಿ ಉಂಟುಮಾಡುವ ಪ್ರವಾಸೋದ್ಯಮ ದೀರ್ಘಾವಧಿಯಲ್ಲಿ ಸ್ವತಃ ಈ ಕ್ಷೇತ್ರವನ್ನೇ ನಾಶಗೊಳಿಸುತ್ತದೆ ಎಂಬ ಸತ್ಯವನ್ನು ರಾಜ್ಯದ ಪ್ರವಾಸೋದ್ಯಮ ನೀತಿಯ ಮೂಲ ತತ್ವವಾಗಿಸಬೇಕು.

New Project (70)

ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಹುಕೋಟಿ ಹೂಡಿಕೆಗಳ ಬಗ್ಗೆ ಹೆಚ್ಚು ಚರ್ಚೆಯಾದರೂ, ಸ್ಥಳೀಯ ಸಣ್ಣ ಸೇವಾ ವಲಯಕ್ಕೆ — ಟ್ಯಾಕ್ಸಿ, ಬಸ್, ಬೋಟ್ ಸೇವೆಗಳು, ಸಣ್ಣ ಹೊಟೇಲ್‌ಗಳು ಮತ್ತು ಕುಟುಂಬ ಆಧಾರಿತ ಉದ್ಯಮಗಳಿಗೆ — ಯಾವ ರೀತಿಯ ನೇರ ಪ್ರೋತ್ಸಾಹ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರವಾಸೋದ್ಯಮ ಯಶಸ್ವಿಯಾಗಬೇಕಾದರೆ ಅದರ ಲಾಭ ದೊಡ್ಡ ಹೂಡಿಕೆದಾರರಲ್ಲೇ ಸೀಮಿತವಾಗದೆ, ಸ್ಥಳೀಯ ಆರ್ಥಿಕತೆಯಲ್ಲಿ ಹರಿಯಬೇಕು.

ಇನ್ನೊಂದು ಮಹತ್ವದ ಅಂಶ ದಕ್ಷಿಣ ಭಾರತದ ಅಂತರರಾಜ್ಯ ಸಾರಿಗೆ ಸಂಪರ್ಕ ನೀತಿ ಬದಲಾಗಬೇಕು. ಕರಾವಳಿ ಪ್ರವಾಸೋದ್ಯಮ ಬೆಳೆಯಬೇಕಾದರೆ ಪಕ್ಕದ ರಾಜ್ಯಗಳೊಂದಿಗೆ ಸಾರಿಗೆ ಮತ್ತು ಪ್ರವಾಸೋದ್ಯಮ ಸಹಕಾರಕ್ಕಾಗಿ ದ್ವಿಪಕ್ಷೀಯ (Bilateral) ಒಪ್ಪಂದಗಳು ಅಗತ್ಯ. ರಸ್ತೆ, ರೈಲು ಮತ್ತು ವಾಯು ಸಂಪರ್ಕ ಸುಗಮವಾಗದೆ ಪ್ರವಾಸಿಗರ ಹರಿವು ಹೆಚ್ಚಾಗುವುದಿಲ್ಲ.

ದೇಶವು ಸ್ವಾತಂತ್ರ್ಯದ ನೂರನೇ ವರ್ಷದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ, ಸ್ವಾವಲಂಬಿ ಭಾರತದ ಮಾತು ಕೇವಲ ಘೋಷಣೆಯಾಗಿ ಉಳಿಯಬಾರದು. ಗ್ರಾಮೀಣ ಮತ್ತು ಕರಾವಳಿ ಆರ್ಥಿಕತೆಯನ್ನು ಬಲಪಡಿಸುವಂಥ ಪ್ರವಾಸೋದ್ಯಮ ಮಾದರಿಯೇ ನಿಜವಾದ ಅಭಿವೃದ್ಧಿಯ ದಾರಿ. ಉದ್ಯೋಗ ಸೃಷ್ಟಿ, ಸ್ಥಳೀಯ ಉದ್ಯಮಗಳ ಬಲವರ್ಧನೆ ಮತ್ತು ಪರಿಸರ ಸಂರಕ್ಷಣೆಯ ಸಮತೋಲನ — ಈ ಮೂರೂ ಸೇರಿದಾಗಲೇ ಸ್ಥಿರ ಪ್ರವಾಸೋದ್ಯಮ ಸಾಧ್ಯ.

ಆದುದರಿಂದ, ಕರಾವಳಿ ಪ್ರವಾಸೋದ್ಯಮದ ಕುರಿತ ಸಭೆಗಳು ಮತ್ತು ಘೋಷಣೆಗಳು ಕಾಗದದ ಮೇಲಷ್ಟೇ ಉಳಿಯದೆ, ಸಮಯಬದ್ಧ ಕಾರ್ಯಯೋಜನೆ, ಸ್ಪಷ್ಟ ಹೊಣೆಗಾರಿಕೆ ಮತ್ತು ನೆಲಮಟ್ಟದ ಅನುಷ್ಠಾನಕ್ಕೆ ತಕ್ಷಣ ಪರಿವರ್ತನೆಯಾಗಬೇಕು. ಇಲ್ಲವಾದರೆ, ಅವಕಾಶಗಳ ಸಾಗರದ ನಡುವೆ ನಿಂತು ಅವಕಾಶವನ್ನೇ ಕಳೆದುಕೊಳ್ಳುವ ಅಪಾಯ ನಮ್ಮ ಮುಂದೆ ನಿಂತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?