ಬೆಂಗಳೂರು ಟು ಮೈಸೂರು ರೋಡ್ ಟ್ರಿಪ್.. ಯಾವೆಲ್ಲಾ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡ್ಬೋದು ಗೊತ್ತಾ?
ಬೆಂಗಳೂರಿನಿಂದ ಮೈಸೂರಿನವರೆಗೂ ವಾರಾಂತ್ಯಗಳಲ್ಲಿ ಹೋಗಬಹುದಾದ ಒಳ್ಳೆಯ ಸ್ಥಳಗಳು ಯಾವುವು ? ಧಾರ್ಮಿಕ ಕ್ಷೇತ್ರಗಳು, ಬೆಟ್ಟ ಗುಡ್ಡಗಳು, ಪ್ರವಾಸಿ ತಾಣಗಳನ್ನು ಸುತ್ತಿ ಬರಬೇಕೆಂದುಕೊಂಡಿದ್ದರೆ ಇಲ್ಲಿಗೆ ಕೆಲವು ಗೈಡ್ ಲೈನ್ಸ್..
ವಾರಾಂತ್ಯದಂದು ಮನೆಯಲ್ಲೇ ಕುಳಿತು ಬೇಜಾರಾಗಿಬಿಟ್ಟಿದ್ದೀರಾ? ಬೆಂಗಳೂರು ನಗರ ಜೀವನದಿಂದ ದೂರಕ್ಕೆ ರೋಡ್ ಟ್ರಿಪ್ ಹೋಗುವ ಮನಸ್ಸಾಗಿದ್ಯಾ ? ಆದರೆ ಎಲ್ಲಿಗೆ ಹೋಗೋದು, ಯಾವ್ಯಾವ ಪ್ರವಾಸಿ ತಾಣಗಳನ್ನು ಸುತ್ತೋದು ಅಂತೆಲ್ಲಾ ಯೋಚಿಸ್ತಾ ಇದ್ದರೆ ನಿಮಗೆ ಈ ಬರಹ ಸಹಾಯವಾಗ್ಬೋದು..ಹೌದು..ಒಂದೆರಡು ದಿನದಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಭೇಟಿ ಮಾಡಿ, ಮತ್ತೆ ಬೆಚ್ಚನೆ ನಿಮ್ಮ ಗೂಡನ್ನೇ ಸೇರಿಕೊಳ್ಳಬಹುದು.
ಬೆಂಗಳೂರಿನಿಂದ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿದರೆ ಮೈಸೂರಿನವರೆಗೂ ಮಾರ್ಗಮಧ್ಯೆ ಭೇಟಿ ನೀಡುವುದಕ್ಕೆ ಸಾಕಷ್ಟು ಸ್ಥಳಗಳಿವೆ. ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಹೀಗೆ ಪ್ರತೀ ಜಿಲ್ಲೆಯಲ್ಲೂ ಪ್ರವಾಸಿಗರು ನೋಡಲೇಬೇಕಾದ ಅನೇಕ ಸ್ಥಳಗಳಿದ್ದು, ಒಂದು ದಿನ ಸಾಲೋದಿಲ್ಲ ಅನ್ನಿಸದೇ ಇರದು.
ಬಿಡದಿ:
ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕು ಬೆಂಗಳೂರಿಗರಿಗೆ ತುಂಬಾ ದೂರದ ಸ್ಥಳವೆನ್ನಿಸದು. ಬಿಸಿ ಬಿಸಿಯಾದ ʻತಟ್ಟೆ ಇಡ್ಲಿʼಗೆ ಹೆಸರು ಮಾಡಿರುವ ಬಿಡದಿಯಲ್ಲಿ ವಂಡರ್ ಲಾ, ಜಾಲಿವುಡ್ ನಂತಹ ಪ್ರವಾಸಿ ಸ್ಥಳಗಳಿವೆ. ಆದರೆ ಜಾಲಿವುಡ್ ಇಲ್ಲವೇ ವಂಡರ್ ಲಾ ಗೆ ಹೋಗುವುದಾದರೆ ಪ್ರವಾಸಕ್ಕೆ ಮತ್ತೊಂದು ದಿನವನ್ನು ಸೇರಿಸಿಕೊಳ್ಳುವುದು ಒಳ್ಳೆಯದು.
ರಾಮನಗರ:
ರೇಷ್ಮೆಯ ನಗರಿ, ಬೆಟ್ಟಗಳ ಊರು ಎಂಬೆಲ್ಲಾ ಹಿರಿಮೆಗೆ ಪಾತ್ರವಾದ ರಾಮನಗರ ಜಿಲ್ಲೆಯಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಚಾರಣ ಇಷ್ಟಪಡುವವರಿಗಾಗಿ ಸಾವನದುರ್ಗ, ರಾಮದೇವರ ಬೆಟ್ಟ ಸೇರಿದಂತೆ ಅನೇಕ ಬೆಟ್ಟ ಗುಡ್ಡಗಳು, ಮಕ್ಕಳಿಗೆ ಖುಷಿ ನೀಡುವ ಜಾನಪದ ಲೋಕ, ಚುಂಚಿ ಫಾಲ್ಸ್, ಮಂಚನಬೆಲೆ ಡ್ಯಾಮ್, ಕಣ್ವ ಅಣೆಕಟ್ಟು ಹೀಗೆ ಒಂದಿಡೀ ದಿನ ಕಳೆಯುವುದಾದರೂ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ.
ಚೆನ್ನಪಟ್ಟಣ:
ನವನೀತ ಕೃಷ್ಣ ದೇವಾಲಯ ಅಥವಾ ಅಂಬೆಗಾಲು ಕೃಷ್ಣ ದೇವಾಲಯವಿರುವುದು ಚೆನ್ನಪಟ್ಟಣದಲ್ಲಿ. ದೇಶದಲ್ಲಿ ಅಂಬೆಗಾಲು ಬಾಲ ಗೋಪಾಲಸ್ವಾಮಿಯನ್ನು ಕಾಣಸಿಗಲು ಇಲ್ಲಿಗೆ ಭೇಟಿ ಕೊಡಲೇಬೇಕು. ಇನ್ನು ಇಲ್ಲಿಯೇ ತಯಾರಾಗುವ ಚೆನ್ನಪಟ್ಟಣ ಗೊಂಬೆಗಳು ದೇಶ ವಿದೇಶಗಳಲ್ಲೂ ಭಾರಿ ಬೇಡಿಕೆಯಿದ್ದು, ಇಲ್ಲಿ ಭೇಟಿಕೊಟ್ಟರೆ ವಿಶೇಷವಾದ ಆಟಿಕೆಗಳು, ಗೃಹಾಲಂಕಾರಿ ವಸ್ತುಗಳನ್ನು ಕೊಳ್ಳಲು ಮರೆಯದಿರಿ. ಇದಲ್ಲದೆ ನದಿ ನರಸಿಂಹಸ್ವಾಮಿದೇವಾಲಯ, ಕೆಂಗಲ್ ಆಂಜನೇಯಸ್ವಾಮಿ ದೇವಾಲಯವೂ ಚೆನ್ನಪಟ್ಟಣದಲ್ಲಿದ್ದು ಇಲ್ಲಿಗೂ ಒಮ್ಮೆ ಹೋಗಿ ಬನ್ನಿ.

ಮದ್ದೂರು:
ಮದ್ದೂರು ಅಂದತಕ್ಷಣ ನೆನಪಾಗುವುದು ರುಚಿಕರವಾದ ಮದ್ದೂರು ವಡೆ. ಬೆಂಗಳೂರಿನಿಂದ 85 ಕಿಲೋ ಮೀಟರ್ ದೂರದಲ್ಲಿರುವ ಮದ್ದೂರು ಅನೇಕ ಪ್ರವಾಸಿ ತಾಣಗಳ ಬೀಡು. ವೈದ್ಯನಾಥೇಶ್ವರ ದೇವಾಲಯ, ಉಗ್ರನರಸಿಂಹಸ್ವಾಮಿ ದೇವಾಲಯ, ವರದರಾಜಸ್ವಾಮಿ ದೇವಾಲಯ, ಕೊಕ್ಕರೆಬೆಳ್ಳೂರು ಇಲ್ಲಿಗೆ ಭೇಟಿ ಕೊಟ್ಟಾಗ ನೋಡಲೇ ಬೇಕಾದ ಪ್ರವಾಸಿ ಸ್ಥಳಗಳು.
ಮಂಡ್ಯ:
ಮಂಡ್ಯ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಶ್ರೀರಂಗಪಟ್ಟವೂ ಒಂದು. ಇಲ್ಲಿರುವ ರಂಗನತಿಟ್ಟು ಪಕ್ಷಿ ಧಾಮ, ರಂಗನಾಥಸ್ವಾಮಿ ದೇವಾಲಯ, ಸ್ವಲ್ಪ ದೂರದಲ್ಲೇ ಇರುವ ಶಿವನಸಮುದ್ರ ಜಲಪಾತ ವೀಕ್ಷಣೆಗೂ ಹೋಗಬಹುದು. ಜತೆಗೆ, ದರಿಯಾ ದೌಲತ್ ಬಾಗ್, ಟಿಪ್ಪು ಸುಲ್ತಾನ್ ಗುಂಬಜ್ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ನಿಮಿಷಾಂಭ ದೇವಸ್ಥಾನ, ಶ್ರೀರಂಗಪಟ್ಟಣ ಕೋಟೆಯನ್ನೂ ಇಲ್ಲಿ ನೋಡಬಹುದು.
ಮಂಡ್ಯದಲ್ಲಿ ದೇವಾಲಯಗಳಿಗೆ ಭೇಟಿ ನೀಡಬೇಕೆಂದಿದ್ದರೆ ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಾಲಯ, ಚೆಲುವನಾರಾಯಣ ಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಸ್ಥಾನಗಳಿವೆ. ಶ್ರೀಕ್ಷೇತ್ರ ಆದಿಚುಂಚನಗಿರಿ, ಇದರೊಂದಿಗೆ ತಲಕಾಡು, ಸೋಮನಾಥಪುರ ದೇವಾಲಯಗಳನ್ನೂ ಸುತ್ತಿ ನೋಡಬಹುದು.

ಮೈಸೂರು:
ಮೈಸೂರಿಗೆ ಬಂದವರು ಮೈಸೂರಿನ ಅಂಬಾವಿಲಾಸ ಅರಮನೆಯನ್ನು ನೋಡಲೇ ಬೇಕು. ಬೆಟ್ಟದ ತುದಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ, ಬೃಂದಾವನ ಗಾರ್ಡನ್ , ಕುಕ್ಕರಹಳ್ಳಿ ಸರೋವರ, ಸ್ಯಾಂಡ್ ಆರ್ಟ್ ಮ್ಯೂಸಿಯಂ, ಜಗನ್ಮೋಹನ್ ಪ್ಯಾಲೇಸ್, ಲಲಿತಮಹಲ್ ಪ್ಯಾಲೇಸ್ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಇನ್ನು ಮಕ್ಕಳ ನೆಚ್ಚಿನ ತಾಣಗಳಾದ ಮೈಸೂರು ಮೃಗಾಲಯ, ರೈಲ್ವೇ ಮ್ಯೂಸಿಯಂ ಹಾಗೂ ಪಯಣ ಎಂಬ ಕಾರ್ ಮ್ಯೂಸಿಯಂಗಳಿಗೆ ಭೇಟಿ ನೀಡದಿದ್ದರೆ ಮೈಸೂರು ಪ್ರವಾಸ ಖುಷಿ ಕೊಡದು. ಬರೀ ಮೈಸೂರು ಸುತ್ತಾಟಕ್ಕೆ ಮಾತ್ರ ಒಂದು ದಿನವನ್ನು ಮೀಸಲಿಟ್ಟರೂ ಸಾಲುವುದಿಲ್ಲ ಎಂಬುದಂತೂ ನಿಜ.
ಸ್ನೇಹಿತರು, ಕುಟುಂಬದರವ ಜೊತೆಗೆ ಇಲ್ಲವೇ ಒಬ್ಬಂಟಿಯಾಗಿ ಸುತ್ತಾಡೋಕೆ ಯೋಚಿಸ್ತಾ ಇದ್ದೀರಾ ಎಂಬುದರ ಮೇಲೆ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ವಾರಾಂತ್ಯದ ರೋಡ್ ಟ್ರಿಪ್ ಯೋಚನೆ ಮಾಡುವ ವೇಳೆ ಯಾವ ಸೀಸನ್ಗೆ ಯಾವ ಪ್ರದೇಶಕ್ಕೆ ಭೇಟಿ ಮಾಡುವುದು ಉತ್ತಮ ಎಂಬುದರ ಬಗ್ಗೆಯೂ ಬರುವ ಮುನ್ನವೇ ತಿಳಿದುಕೊಂಡರೆ ಸಮಯದ ಸದುಪಯೋಗವು ಸಾಧ್ಯ, ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣಗಳ ಭೇಟಿಯೂ ಸುಲಭ ಸಾಧ್ಯ.