ಶಿಲ್ಪಕಲೆಗಳ ಮಾಸ್ಟರ್ ಪೀಸ್ ಬೃಹದೀಶ್ವರ ದೇವಾಲಯ
“ಬಹುಶಃ ಆ ಶಿವನಿಗೇ ಅಲ್ಲಿಗೆ ಬಂದು ನೆಲೆಸಲು ಇಷ್ಟವಾಗಲಿಲ್ಲವೇನೊ! ಹೀಗಿದ್ದರೂ ಜನರು ಆ ದೇವಾಲಯವನ್ನೇ ಪೂಜಿಸತೊಡಗುತ್ತಾರೆ. ಶಕ್ತಿ ಇಲ್ಲದ ಲಿಂಗವನ್ನು ಪೂಜಿಸುವ ಕುರಿತು ವಿವಾದಗಳು ಏಳುತ್ತವೆ. ಈಗ ಆ ಲಿಂಗವನ್ನು ಆಗಮ ಪದ್ಧತಿಯ ಪ್ರಕಾರ ಪೂಜಿಸುವುದೋ ಇಲ್ಲ ತಮಿಳು ನೆಲದ ಪದ್ಧತಿಯ ಪ್ರಕಾರ ಪೂಜಿಸುವುದೋ ಎನ್ನುವ ವಿವಾದ ಭುಗಿಲೇಳುತ್ತದೆ”
- ಗೀರ್ವಾಣಿ.
ನಮ್ಮ ಐತಿಹಾಸಿಕ ದೇವಾಲಯಗಳಿಗೆ ಭೇಟಿ ಕೊಟ್ಟಾಗ ನಾವದರ ಅದ್ಭುತ ಶಿಲ್ಪಕಲೆಗೆ, ಅದರ ಗಾತ್ರಕ್ಕೆ, ಅದನ್ನು ಕಟ್ಟಿ ನಿಲ್ಲಿಸಿದ ಪೂರ್ವಜರ ಜ್ಞಾನಕ್ಕೆ ಅಚ್ಚರಿ ಪಡುತ್ತೇವೆ. ಗುಡಿಯಲ್ಲಿ ದೇವರಿದ್ದರೆ ಅದಕ್ಕೆ ಅಡ್ಡಬಿದ್ದು, ದೇವಾಲಯದ ಪ್ರಾಂಗಣದ ಸುತ್ತ ಓಡಾಡಿ ಬಂದು ಬಿಡುತ್ತೇವೆ. ಆದರೆ ಸಾವಿರಾರು ವರ್ಷಗಳಿಂದ ನಿಂತ ಅಂಥ ದೇವಾಲಯಗಳ ಹಿಂದೆ ಎಂತೆಂಥ ಕಥೆಗಳಿವೆ ಗೊತ್ತೆ?
ನಮ್ಮ ಯಾವುದೇ ಪುರಾತನ ದೇವಸ್ಥಾನಗಳನ್ನು ತೆಗೆದುಕೊಳ್ಳಿ; ಅದರ ಹಿಂದೆ ಭಾವನೆಗಳ ಮಹಾಪೂರವೇ ಇದೆ. ಎಲ್ಲದರ ಹಿಂದೆಯೂ ತ್ಯಾಗದ ಕತೆಯಿದೆ, ಅದ್ಯಾರದೋ ನಿಟ್ಟುಸಿರುಗಳಿವೆ, ಇನ್ಯಾರದೋ ಹತಾಶೆಗಳಿವೆ, ಮತ್ತಾರದೋ ಬಲಿದಾನಗಳಿವೆ.ತಂಜಾವೂರಿನ ಬೃಹದೀಶ್ವರ ದೇವಸ್ಥಾನ ಕೂಡ ಇದರಿಂದ ಹೊರತಲ್ಲ. ಸುಮ್ಮನೆ ಇತಿಹಾಸ ಪುಸ್ತಕದಲ್ಲೋ, ಇಲ್ಲ ಗೂಗಲ್ಲಿನಲ್ಲೋ, ಸೋಷಿಯಲ್ ಮೀಡಿಯಾಗಳಲ್ಲೋ ಬಂದ ಒಂದೆರಡು ವಿಶೇಷ ಮಾಹಿತಿಯಷ್ಟೇ ಅಲ್ಲ ಬೃಹದೀಶ್ವರ ದೇವಾಲಯಕ್ಕಿರುವುದು.ಸಾಮಾನ್ಯವಾಗಿ ಬೃಹದೀಶ್ವರ ದೇವಾಲಯದ ವಿಶೇಷತೆಯ ಬಗ್ಗೆ ಹೇಳುವಾಗ ಎಲ್ಲರೂ ಹೇಳುವುದು ಗೋಪುರದ ಮೇಲೆ ಇಡಲಾದ 86 ಟನ್ ಭಾರದ ಕಲ್ಲಿನ ಬಗ್ಗೆ. ಅದನ್ನು 6 ಕಿ.ಮಿ ದೂರದಿಂದ ರ್ಯಾಂಪ್ ಕಟ್ಟಿ ತಂದು ಅಷ್ಟೆತ್ತರಕ್ಕೆ ಇಡಲಾಯಿತಂತೆ ಎನ್ನುವುದು ಕಾಮನ್ ಆಗಿ ಎಲ್ಲರೂ ಹೇಳುವ ಕತೆ.ಆದರೆ ಬೃಹದೀಶ್ವರ ದೇವಾಲಯಕ್ಕೆ ಇದಕ್ಕೂ ಭಿನ್ನವಾದ ಕತೆಯೊಂದಿದೆ ಗೊತ್ತೆ?

ಕತೆಯಲ್ಲ ಇದು.ಸತ್ಯ ಎಂದೇ ಹೇಳಬೇಕು. ಏಕೆಂದರೆ ಇದು ಶಿಲಾಶಾಸನಗಳಲ್ಲೇ ಉಲ್ಲೇಖಿತವಾದ ವಿಷಯ. ಬೃಹದೀಶ್ವರ ದೇವಾಲಯದ ಸುತ್ತ ಅತ್ಯಂತ ಸವಿವರವಾಗಿ ಶಾಸನಗಳನ್ನು ಕೆತ್ತಲಾಗಿದೆ. ಅದರಲ್ಲಿ ದೇವಾಲಯದ ಕುರಿತಾಗಿ ಎಲ್ಲ ಮಾಹಿತಿಯೂ ಇದೆ. ಬಹುಶಃ ಇಷ್ಟು ಸವಿವರವಾಗಿ ಮಾಹಿತಿ ಕೊಟ್ಟ ಇನ್ನೊಂದು ದೇವಸ್ಥಾನ ಇರಲಾರದು.ಹೀಗಾಗಿ ದೇವಸ್ಥಾನದ ಕುರಿತು ಲಭ್ಯವಿರುವ. ವಿಚಾರಗಳನ್ನು ಅಷ್ಟು ಸುಲಭಕ್ಕೆ ಅಲ್ಲಗಳೆಯಲಾಗದು.ವಿಷಯ ಏನಪ್ಪ ಎಂದರೆ ಬೃಹದೀಶ್ವರ ದೇವಾಲಯಕ್ಕೆ ಭೇಟಿ ಕೊಡುವುದರಿಂದ ನಮ್ಮ ಗ್ರಹಚಾರ ಕೆಡುತ್ತದೆ, ನಮಗೆ ಕೆಡುಕಾಗುತ್ತದೆ ಎಂಬುದು!
ಆ ದೇವಸ್ಥಾನದ ಅದ್ಭುತ ಸೌಂದರ್ಯ ನೋಡಿದ ಯಾರಿಗೂ ಇಂಥ ಯೋಚನೆ ಬರಲು ಸಾಧ್ಯವೇ ಇಲ್ಲ. ಬರಲೂಬಾರದು. ಆದರೆ ಜನಮಾನಸದಲ್ಲಿ ಇಂಥದೊಂದು ನಂಬಿಕೆ ಶತಮಾನಗಳಿಂದ ಇದೆ ಎನ್ನುವುದನ್ನು ಕೇಳಿದಾಗ ಅಚ್ಚರಿಯಾಯ್ತು.
ಚೋಳರ ಮಹಾದೊರೆ ರಾಜರಾಜ ಚೋಳ ಕಟ್ಟಿಸಿದ ಬೃಹದೀಶ್ವರ ದೇವಾಲಯ ಶಿಲ್ಪಕಲೆಯ ಮಾಸ್ಟರ್ ಪೀಸ್ ಗಳಲ್ಲಿ ಒಂದು. ಆ ದೇವಾಲಯಕ್ಕೆ ಹೋದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡತೊಡಗುತ್ತೇವೆ. ವಾವ್! ಅಮೇಜಿಂಗ್, ವಂಡರ್ ಫುಲ್ ಈ ತರದ ಶಬ್ದಗಳೇ ನಮ್ಮ ಬಾಯಿಂದ ಬರತೊಡಗುತ್ತದೆ. ಜೊತೆಗೆ ಮನಸ್ಸು ಸಂಪೂರ್ಣ ರಾಜಮಹಾರಾಜರ ವೈಭವದ ಕಾಲಕ್ಕೆ ಹೊರಟು ಹೋಗಿ ನಾವು ಯಾವುದೋ ಸಾಮ್ರಾಜ್ಯದೊಳಕ್ಕೆ ಪ್ರವೇಶಿಸಿದ್ದೇವೆನೊ ಅನ್ನಿಸುವಂತೆ ಮಾಡುತ್ತದೆ.
ಹೀಗಿರುವಾಗ ಯಾಕಿಂಥ ಅಪಶಕುನದ ಮಾತುಗಳು? ಬೃಹದೀಶ್ವರನಿಗೆ ಯಾಕಿಂಥ ಅಪವಾದ? ಯಾಕಿಂಥ ಅಪಸ್ವರ? ಇಂಥ ಅಪಸ್ವರ ಕೇಳಿ ಬರಲು ಎರಡು ಕಾರಣಗಳಿವೆ. ಮೊದಲನೆಯದಾಗಿ ರಾಜರಾಜ ಚೋಳ ತಾನೇ ಕಟ್ಟಿಸಿದ ದೇವಾಲಯದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಎನ್ನುವುದು. ಎರಡನೆಯದಾಗಿ ದೇವಾಲಯದ ಒಳಗೆ ಸ್ಥಾಪಿಸಲಾದ ಲಿಂಗದಪ್ರಾಣಪ್ರತಿಷ್ಠೆ ಕ್ರಮಬದ್ಧವಾಗಿ ಆಗಲಿಲ್ಲ ಎಂಬುದು. ನೆನಪಿರಲಿ ಇದೆಲ್ಲ ನಿನ್ನೆ ಮೊನ್ನೆ ನಡೆದಿದ್ದಲ್ಲ. ಸಾವಿರ ವರ್ಷಗಳ ಹಿಂದಿನ ಘಟನೆ. ಏನಾಯಿತು ಹಾಗಾದರೆ? ಬಹಳ ಮಹತ್ವಾಕಾಂಕ್ಷೆ, ದೂರದೃಷ್ಟಿ, ಮಹದಾಸೆ, ಭಕ್ತಿ ಶ್ರದ್ಧೆಗಳೊಂದಿಗೆ ರಾಜರಾಜಚೋಳ ಬೃಹದೀಶ್ವರ ದೇವಾಲಯವನ್ನು ಕಟ್ಟಿಸುತ್ತಾನೆ. ಒಂದೆರಡಲ್ಲ 18 ವರ್ಷಗಳು ಹಿಡಿಯುತ್ತವೆ ಕಟ್ಟಿ ಮುಗಿಸಲು. ಹಿಂದಿನ ಕಾಲದಲ್ಲಿ ದೇವಸ್ಥಾನಗಳನ್ನು ಕೇವಲ ಧಾರ್ಮಿಕ ಕಾರಣಗಳಿಗೆ ಮಾತ್ರ ಕಟ್ಟುತ್ತಿರಲಿಲ್ಲ. ಅದೊಂದು ರೆವಿನ್ಯೂ ಮಾಡೆಲ್ ಕೂಡ ಆಗಿತ್ತು. ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತಿತ್ತು. ಜೊತೆಗೆ ಮುಂದಿನ ಹತ್ತಾರುತಲೆಮಾರಿಗೆ ಕಟ್ಟಿಸಿದವರ ಗುರುತನ್ನೂ ಉಳಿಸುತ್ತಿತ್ತು. ಹೀಗೆ ಮಹತ್ವಾಕಾಂಕ್ಷೆಯೊಂದಿಗೆ ಕಟ್ಟಲಾದ ದೇವಾಲಯದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗುತ್ತದೆ. ಬೃಹದೀಶ್ವರ ಸುಮ್ಮನೆ ಬಂದ ಹೆಸರಲ್ಲ. ಅಲ್ಲಿನ ಲಿಂಗವೂ ಬೃಹತ್ತಾಗೇ ಇದೆ. ೧೬ ಅಡಿ ಎತ್ತರದ ಈ ಲಿಂಗ ಭಾರತದಲ್ಲೇ ಅತಿ ದೊಡ್ಡ ಶಿವಲಿಂಗ. ಇದನ್ನು ಆಗಿನ ಕಾಲದಲ್ಲೆ ಗುಜರಾತಿನ ಸೌರಾಷ್ಟ್ರದಿಂದ ತರಿಸಲಾಗುತ್ತದೆ. ಎಲ್ಲಿನ ಗುಜರಾತ್, ಎಲ್ಲಿನ ತಮಿಳುನಾಡು!
ಬೃಹದೀಶ್ವರನ ಲಿಂಗ ಮಾಡಲು 250 ಟನ್ ಭಾರದ ಕಲ್ಲನ್ನೇ ತರಲಾಗುತ್ತದೆ. ಕ್ರೇನು, ಲಾರಿ, ರಸ್ತೆ, ರೈಲ್ವೆಗಳಿಲ್ಲದ ಕಾಲದಲ್ಲಿ ವಿಂದ್ಯಾಚಲವನ್ನು ದಾಟಿಸಿಕೊಂಡು ತಂದಿದ್ದಾದರೂ ಹೇಗೆ? ಗೊತ್ತಿಲ್ಲ.

ಹೇಗೆ ತಂದರು? ಎಷ್ಟು ದಿನವಾಯಿತು? ಎಷ್ಟು ಜನ ಸೇರಿ ತಂದರು ಎಲ್ಲ ಕೇಳಬೇಡಿ. ಸಾವಿರ ವರ್ಷಗಳ ಹಿಂದಿನ ನಿಖರ ಮಾಹಿತಿ ಸಿಗುವುದಿಲ್ಲ. ಒಟ್ಟಿನಲ್ಲಿ ಬೃಹದೀಶ್ವರ ಲಿಂಗ ಮಾತ್ರ ಗುಜರಾತಿನಿಂದ ತಂದಿದ್ದು ಎಂಬುದಷ್ಟೇ ಗೊತ್ತು. ಯಾವ್ಯಾವುದೋ ಕಲ್ಲಿನಿಂದ ಲಿಂಗ ಮಾಡಲು ಬರುವುದಿಲ್ಲ. ಹೀಗಾಗಿ ವಿಶೇಷ ಕಲ್ಲನ್ನೇ ಆರಿಸಲಾಗುತ್ತದೆ. ಅದೇ ಪ್ರಕಾರ ಬೃಹದೀಶ್ವರನ ಸ್ಥಾಪನೆ ಮಾಡುವ ದಿನ ಬರುತ್ತದೆ. ಆದರೆ ಅದ್ಯಾರ ಶಾಪವೊ ಏನೊ ಅಂದುಕೊಂಡಂತೆ ಲಿಂಗದ ಪ್ರಾಣ ಪ್ರತಿಷ್ಠೆ ಆಗುವುದೇ ಇಲ್ಲ. ಮಾಡಲು ಹೊರಟ ಕಾರ್ಯ ಅದೇಕೊ ಪೂರ್ಣವಾಗುವುದೇ ಇಲ್ಲ. ಲಿಂಗದಲ್ಲಿ ಸರಿಯಾದ ಶಕ್ತಿ ತುಂಬಲು ಪುರೋಹಿತ ವರ್ಗ ಸೋಲುತ್ತದೆ. ಲಿಂಗವನ್ನು ಪವಿತ್ರಗೊಳಿಸಲು ಸಾಧ್ಯವಾಗುವುದೇ ಇಲ್ಲ. ಅಲ್ಲಿಂದಲೇ ಶುರುವಾಗುತ್ತದೆ ಅಸಮಾಧಾನ. ರಾಜರಾಜ ಚೋಳನಿಗೆ ಇದು ಬಹುದೊಡ್ಡ ನಿರಾಸೆ. ರಾಜನಿಗಷ್ಟೇ ಅಲ್ಲ ಆ ದೇವಾಲಯಕ್ಕಾಗಿ ದುಡಿದ ಸಾವಿರಾರು ಮಂದಿಗೆ ಇದು ಅತಿ ದೊಡ್ಡ ಶಾಕ್. ಆ ದೇವಾಲಯಕ್ಕಾಗಿ ಕೂಡಿಸಲಾದ ಸಂಪತ್ತು,ಮಾಡಲಾದ ಖರ್ಚು ಎಲ್ಲವೂ ವ್ಯರ್ಥವಾಗುತ್ತದೆ. ದೇವಾಲಯ ಅಕ್ಷರಶಃ ನಿಷ್ಪ್ರಯೋಜಕ ಎನಿಸಿಕೊಳ್ಳುತ್ತದೆ.ನಮ್ಮಿಚ್ಛೆ ಒಂದಾದರೆ ದೈವೇಚ್ಛೆಯೇ ಬೇರೆ ಎನ್ನಲು ಇದಕ್ಕಿಂತ ಉತ್ತಮ ಉದಾರಣೆ ಇಲ್ಲ ಅಲ್ಲವೆ?
ಬಹುಶಃ ಆ ಶಿವನಿಗೇ ಅಲ್ಲಿಗೆ ಬಂದು ನೆಲೆಸಲು ಇಷ್ಟವಾಗಲಿಲ್ಲವೇನೊ! ಹೀಗಿದ್ದರೂ ಜನರು ಆ ದೇವಾಲಯವನ್ನೇ ಪೂಜಿಸತೊಡಗುತ್ತಾರೆ. ಶಕ್ತಿ ಇಲ್ಲದ ಲಿಂಗವನ್ನು ಪೂಜಿಸುವ ಕುರಿತು ವಿವಾದಗಳು ಏಳುತ್ತವೆ. ಈಗ ಆ ಲಿಂಗವನ್ನು ಆಗಮ ಪದ್ಧತಿಯ ಪ್ರಕಾರ ಪೂಜಿಸುವುದೋ ಇಲ್ಲ ತಮಿಳು ನೆಲದ ಪದ್ಧತಿಯ ಪ್ರಕಾರ ಪೂಜಿಸುವುದೋ ಎನ್ನುವ ವಿವಾದ ಭುಗಿಲೇಳುತ್ತದೆ. ರಾಜರಾಜ ಚೋಳನು ಆಗಮಪದ್ಧತಿಯನ್ನು ಬೆಂಬಲಿಸುತ್ತಾನೆ. ಆದರೆ ಆತನ ಪ್ರಭಾವಿ ದಂಡನಾಯಕ ಸಿದ್ಧ ಮಾತ್ರ ತಮಿಳು ನೆಲದ ಪ್ರಕಾರವೇ ಪೂಜೆಯಾಗಬೇಕು ಎಂದು ಪಟ್ಟು ಹಿಡಿದು ಕೂರುತ್ತಾನೆ.
ಇದು ಯಾವ ಹಂತ ತಲುಪುತ್ತದೆ ಎಂದರೆ ಚೋಳರ ಸಾಮ್ರಾಜ್ಯ ಪತನಕ್ಕೂ ಕಾರಣವಾಗಿ ಬಿಡುತ್ತದೆ!ಹೇಗೆ ಕೇಳಿದ್ರಾ? ಅಲ್ಲಿಯವರೆಗೆ ಚೋಳ ಸಾಮ್ರಾಜ್ಯದ ಮಿಲುಟರಿ ದಂಡನಾಯಕನಾಗಿದ್ದ ಸಿದ್ದ ರಾಜರಾಜ ಚೋಳನ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಿ ಬಿಡುತ್ತಾನೆ. ಇದರಿಂದ ಸಾಮ್ರಾಜ್ಯದ ಜನ ಕಕ್ಕಾಬಿಕ್ಕಿಯಾಗುತ್ತಾರೆ. ಅವರಲ್ಲೇ ಎರಡು ಗುಂಪುಗಳಾಗಿ ಬಿಡುತ್ತದೆ. ಹೊರಗಿನ ಶತ್ರುಗಳು ಇದೇ ಸಮಯವನ್ನು ಉಪಯೋಗಿಸಿ ಒಳ ಸೇರಿಕೊಳ್ಳುತ್ತಾರೆ. ಹಂತಹಂತವಾಗಿ ಚೋಳರ ವಿರುದ್ಧ ಪಿತೂರಿ ನಡೆಯತೊಡಗುತ್ತದೆ. ಸಾಮ್ರಾಜ್ಯ ಒಳಗಿಂದೊಳಗೇ ದುರ್ಬಲವಾಗತೊಡಗುತ್ತದೆ. ಇದೆಲ್ಲದರಿಂದ ಮನನೊಂದ ರಾಜರಾಜ ಚೋಳ ತಾನೇ ಕಟ್ಟಿಸಿದ ಮಹಾನ್ ದೇವಾಲಯದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾನೆ.

ಹೀಗಾಗಿ ಬೃಹದೀಶ್ವರ ದೇವಾಲಯಕ್ಕೆ ಹೋದರೆ ನಮ್ಮ ಲಕ್ ಕೈ ಕೊಡುತ್ತದೆ ಎನ್ನುವ ನಂಬಿಕೆ ಬೆಳೆದು ಬಂತು. ಮುಂದೆ ರಾಜರಾಜಚೋಳನ ಮಗ ರಾಜೇಂದ್ರ ಚೋಳ ಅಪ್ಪನ ಉದ್ದೇಶ ಈಡೇರಿಸಲು ಗಂಗೈಕೊಂಡದಲ್ಲಿ ಬೃಹದೀಶ್ವರದಂಥದೇ ದೇವಾಲಯ ಕಟ್ಟಿಸುತ್ತಾನೆ. ಆದರೆ ಅದು ಬೃಹದೀಶ್ವರದಷ್ಟು ಅದ್ಭುತವಾಗಿ ಮೂಡಿ ಬರುವುದಿಲ್ಲ. ಆದರೆ ಲಿಂಗ ಸ್ಥಾಪನೆ ಸರಿಯಾಗಿ ಆಗುತ್ತದೆ.ಬೃಹದೀಶ್ವರ ದೇವಾಲಯ ನೋಡಲು ಮಾತ್ರ ಅತ್ಯದ್ಭುತ. ಆದರೆ ಒಳಗೆ ಶಕ್ತಿಯಿಲ್ಲ. ಗಂಗೈಕೊಂಡ ನೋಡಲು ಬೃಹದೀಶ್ವರದಷ್ಟು ದೊಡ್ಡದಾಗಿ ಇಲ್ಲದಿದ್ದರೂ ಒಳಗೆ ಶಕ್ತಿ ಇದೆ ಎನ್ನಲಾಗುತ್ತದೆ.
ಪ್ರವಾಸಿಗರಾಗಿ ಹೋದವರಿಗೆ ಎರಡೂ ದೇವಾಲಯಗಳೂ ಅಬ್ಬಬ್ಬಾ ಅನಿಸುತ್ತವೆ. ಸಾವಿರ ವರ್ಷಗಳ ಹಿಂದೆ ನಡೆದ ಸಂಘರ್ಷಗಳು ನಮಗೆ ಗೊತ್ತಿಲ್ಲದೆ ಇರುವುದರಿಂದ ನಮಗೇನೂ ಅನ್ನಿಸುವುದಿಲ್ಲ. ನೂರಾರು ವರ್ಷಗಳಿಂದ ನಿರಂತರ ಪೂಜೆ ನಡೆಯುತ್ತ ಬಂದಿರುವುದರಿಂದ ಇವೆರಡೂ ದೇಗುಲಗಳಲ್ಲೂ ಶಕ್ತಿ ಸಂಚಯವಾಗಿರುತ್ತದೆ. ದೇವರು ಎಲ್ಲ ಕಡೆ ಇದ್ದಾನಂತೆ. ನಮ್ಮಿಂದ ಅಂತೂ ಇಷ್ಟು ಅದ್ಭುತ ವಾಸ್ತುಶಿಲ್ಪ ನಿರ್ಮಿಸಲು ಸಾಧ್ಯವೇ ಇಲ್ಲ. ಹಿಂದಿನವರು ಕಟ್ಟಿ ನಮಗಾಗಿ ಬಿಟ್ಟು ಹೋಗಿದ್ದಾರೆ. ಅದನ್ನು ಗೌರವಿಸಲೇಬೇಕು.
ಹೀಗಾಗಿ ಮನಸಿಟ್ಟು ದೇವಾಲಯಕ್ಕೆ ಹೋಗಿ ಬನ್ನಿ. ಒಳಿತು ಕೆಡುಕು ಎಲ್ಲವೂ ನಮ್ಮ ನಂಬಿಕೆಗಳಲ್ಲೇ ಇದೆ. ಯಾವ ದೇವಾಲಯವೂ ನಮಗೆ ಕೆಡುಕುಂಟು ಮಾಡುವುದಿಲ್ಲ. ಅಲ್ಲಿಗೆ ಹೋಗಿ ಬರುವುದರಿಂದ ಅಂದುಕೊಂಡಷ್ಟು ಫಲ ಸಿಗದೆ ಹೋಗಬಹುದು ಅಷ್ಟೇ ಹೊರತು ಕೆಡುಕಂತೂ ಖಂಡಿತಾ ಆಗದು.