Thursday, June 12, 2025
Thursday, June 12, 2025

ರಾಜಸ್ಥಾನದಲ್ಲಿದೆ ಕರ್ಣಿ ಮಾತಾ ದೇವಸ್ಥಾನ; ಇಲ್ಲಿ ಇಲಿಗಳು ದೇವರ ಅವತಾರ...

ರಾಜಸ್ಥಾನದ ಪ್ರಸಿದ್ಧ ಕರ್ಣಿ ಮಾತಾ ದೇವಾಲಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಲ್ಲಿ ಇಲಿಗಳನ್ನು ದೇವಿಯ ವಂಶಸ್ಥರು ಎಂದು ಪರಿಗಣಿಸಿ, ನಿತ್ಯ ಪೂಜಿಸಲಾಗುತ್ತಿದ್ದು, ದೇವಿಗೆ ಪ್ರಸಾದವನ್ನು ಅರ್ಪಿಸುವ ಮೊದಲು, ಇಲಿಗಳಿಗೆ ಪ್ರಸಾದವನ್ನು ಸಮರ್ಪಿಸಲಾಗುತ್ತದೆ. ಅಲ್ಲದೆ ಇದೇ ಪ್ರಸಾದವನ್ನು ಭಕ್ತರಿಗೂ ವಿತರಿಸಲಾಗುತ್ತದೆ.

ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಭೇಟಿ ನೀಡಿದ್ದರು. ಇಡೀ ದೇಶವನ್ನೇ ಬೆರಗುಗೊಳಿಸುವ ಅಲ್ಲಿನ ಕರ್ಣಿ ಮಾತಾ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಹೌದು, ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ದೇಶ್ನೋಕ್ ಗ್ರಾಮದಲ್ಲಿರುವ ಈ ದೇವಾಲಯವು ಅಲ್ಲಿರುವ ಸಾವಿರಾರು ಇಲಿಗಳಿಂದಲೇ ಹೆಸರು ಮಾಡಿದೆ. ವಿಶೇಷವೆಂದರೆ ಇಲ್ಲಿ ಇಲ್ಲಿಗಳಿಗೆ ನೀಡಿರುವ ಪ್ರಸಾದವನ್ನು, ಇಲಿಗಳು ಮುಟ್ಟಿದ ನೀರನ್ನೇ ಭಕ್ತರಿಗೂ ನೀಡುತ್ತಾರೆ. ಆದರೆ ಈವರೆಗೂ ಇದರಿಂದ ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ, ಬದಲಾಗಿ ಅನಾರೋಗ್ಯದಿಂದ ಮುಕ್ತಿಹೊಂದಿದ್ದಾರೆ.

india-s-temple-18902-1460513174

ಕರ್ಣಿ ಮಾತಾ ಯಾರು?

ಕರ್ಣಿ ಮಾತೆಯನ್ನು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲಾಗಿದ್ದು, 1595ರ ಚೈತ್ರ ಶುಕ್ಲ ನವಮಿಯಾದ ಗುರುವಾರದಂದು ಆಕೆಯ ಜನನವಾಯಿತೆಂದು ಸ್ಥಳೀಯ ಭಕ್ತರು ಹೇಳುತ್ತಾರೆ. 14ನೇ ಶತಮಾನದಲ್ಲಿ ಈ ಸ್ಥಳದಲ್ಲಿ ತಮ್ಮ ಜೀವನವನ್ನು ಕಳೆದ ಜನಪ್ರಿಯ ಮಹಿಳಾ ಸಂತರಾದ ಕರ್ಣಿ ಮಾತಾ ವಿಶೇಷವಾದ ದೈವಿಕ ಶಕ್ತಿ ಮತ್ತು ಪವಾಡಗಳ ಮೂಲಕ ಮನೆ ಮಾತಾಗಿದ್ದರು. ಅಲ್ಲದೆ ಹಲವು ವರ್ಷಗಳ ಕಾಲ ತಪಸ್ಸು ಮಾಡಿ, ಸಮಾಜ ಸೇವೆಯಲ್ಲೇ ಜೀವನವನ್ನು ಕಳೆದವರು.

ಸ್ಥಳೀಯರ ನಂಬಿಕೆಯಂತೆ, ಕರ್ಣಿ ಮಾತೆಯ ವಂಶಸ್ಥರು ಮಾತ್ರ ಮರಣದ ನಂತರ ಇಲಿಗಳ ರೂಪವನ್ನು ಪಡೆದು ದೇವಾಲಯದಲ್ಲಿ ತಾಯಿಯೊಂದಿಗೆ ವಾಸಿಸುತ್ತಾರೆ. ಅವರ ಮರಣದ ನಂತರ, ಭಕ್ತರು ಅವರ ವಿಗ್ರಹವನ್ನು ಸ್ಥಾಪಿಸಿ ಅಲ್ಲಿ ದೇವಾಲಯವನ್ನು ನಿರ್ಮಿಸಿದರು. ಇಂದು ದೇಶಾದ್ಯಂತ ಜನರು ದೇವಿಯ ದರ್ಶನ ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಾರೆ.

Karni-Mata-Temple-Udaipur-History-Timings-How-to-Reach

ಇಲ್ಲಿವೆ ಸಾವಿರಾರು ಇಲಿಗಳು

ಈ ದೇವಾಲಯವು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾಗಿದ್ದು, ಇಲ್ಲಿ ಸಾವಿರಾರು ಇಲಿಗಳು ವಾಸಿಸುತ್ತವೆ. ಅಲ್ಲದೆ ಖುದ್ದು ಭಕ್ತರೂ ಅವುಗಳಿಗೆ ಪ್ರಸಾದವನ್ನು ತಿನ್ನಿಸುತ್ತಾರೆ ಮತ್ತು ಪೂಜಿಸುತ್ತಾರೆ. ಈ ಇಲಿಗಳು ಕರ್ಣಿ ಮಾತೆಯ ಮಲಪುತ್ರರು ಮತ್ತು ಅವರ ವಂಶಸ್ಥರ ಪುನರ್ಜನ್ಮಗಳೆಂದು ನಂಬಲಾಗಿದೆ. ಅವರನ್ನು ಇಲ್ಲಿ "ಕಾಬಾ" ಎಂದೂ ಕರೆಯುತ್ತಾರೆ. ಇಲ್ಲಿ ಇಲಿಯಿಂದ ಭಕ್ತರಿಗಾಗಲೀ, ಭಕ್ತರಿಂದ ಇಲಿಗಳಿಗಾಗಲೀ ಯಾವುದೇ ತೊಂದರೆ ಉಂಟಾಗುವುದಿಲ್ಲ. ಗಮನಿಸಬೇಕಿರುವ ಅಂಶವೆಂದರೆ ದೇವಾಲಯದಲ್ಲಿ ಬಿಳಿ ಇಲಿ ಕಾಣಿಸಿಕೊಂಡರೆ, ಅದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ದೇವಿಯು ಅವರಿಗೆ ವಿಶೇಷ ಆಶೀರ್ವಾದ ನೀಡುತ್ತಾಳೆ ಎಂದು ಹೇಳಲಾಗುತ್ತದೆ.

l3md99cs_karni-mata-mandir-rajasthan_625x300_22_May_25

ಕರ್ಣಿ ಮಾತಾ ದೇವಾಲಯದ ಇತಿಹಾಸವೇನು?

ಕರ್ಣಿ ಮಾತಾ ದೇವಾಲಯದ ಇತಿಹಾಸದ ಬಗ್ಗೆ ನಿಖರವಾದ ಪುರಾವೆಗಳಿಲ್ಲ, ದೇವಾಲಯದ ಬಗ್ಗೆ ಅನೇಕ ಕಥೆಗಳನ್ನು ಹೇಳಲಾಗುತ್ತದೆಯಾದರೂ ಅವುಗಳಲ್ಲಿ ಯಾವುದು ಸತ್ಯವೆಂಬ ಮಾಹಿತಿಯೂ ಇಲ್ಲ. ಆದರೆ ಸ್ಥಳೀಯರು ಹೇಳುವಂತೆ, ಇದನ್ನು ರಾಜಾ ಜೈ ಸಿಂಗ್ ನಿರ್ಮಿಸಿದ್ದಾರೆಯಾದರೂ, ದೇವಾಲಯಕ್ಕೆ ಹೊಸ ರೂಪವನ್ನು ಕೊಟ್ಟವರು ಕೀರ್ತಿ ಮಹಾರಾಜ ಗಂಗಾ ಸಿಂಗ್. ಅವರು 15 ರಿಂದ 20 ನೇ ಶತಮಾನದ ಸುಮಾರಿಗೆ ರಜಪೂತ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದು, ದೇವಾಲಯದಲ್ಲಿ ಅಮೃತಶಿಲೆಯ ಕೆತ್ತನೆಗಳು, ಬೆಳ್ಳಿಯ ಬಾಗಿಲುಗಳನ್ನು ಕಾಣಬಹುದು.

ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ

ಚೈತ್ರ ಮತ್ತು ಶರದಿಯಾ ನವರಾತ್ರಿಯ ಸಮಯದಲ್ಲಿ ವರ್ಷಕ್ಕೆ ಎರಡು ಬಾರಿ ಇಲ್ಲಿಗೆ ಭಕ್ತ ಸಮೂಹವೇ ಬಂದು ಸೇರುತ್ತದೆ. ಭಕ್ತರು ಉಳಿದುಕೊಳ್ಳಲು ದೇವಾಲಯದ ಬಳಿ ಅನೇಕ ಧರ್ಮಶಾಲೆಗಳಿದ್ದು, ಅದರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.

823868-karni-mata-significance-in-rajasthan

ಕರ್ಣಿ ಮಾತಾ ದೇವಸ್ಥಾನವನ್ನು ತಲುಪುವುದು ಹೇಗೆ?

ಬಿಕಾನೇರ್ ನಿಂದ ದೇವಸ್ಥಾನವನ್ನು ತಲುಪಲು ಬಸ್ಸುಗಳು, ಜೀಪುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಬಿಕಾನೇರ್-ಜೋಧಪುರ ರೈಲು ಮಾರ್ಗದಲ್ಲಿರುವ ದೇಶ್ನೋಕ್ ರೈಲು ನಿಲ್ದಾಣವು ದೇವಾಲಯದ ಬಳಿ ಇದ್ದು, ಇಲ್ಲಿಂದ ಟ್ಯಾಕ್ಸಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ