• ಶ್ರೀನಿವಾಸಮೂರ್ತಿ

ಕೆ. ಗುಡಿ (ಕ್ಯಾತೆದೇವರ ಗುಡಿ) ವೈಲ್ಡರ್ನೆಸ್ ಕ್ಯಾಂಪ್‌ನ ಹೊಸ್ತಿಲು ತುಳಿದ ಕ್ಷಣದಲ್ಲೇ ಒಂದು ವಿಷಯ ಪಕ್ಕಾ ಅರ್ಥವಾಗುತ್ತದೆ. ಇದು ಬರೀ ರೆಸಾರ್ಟ್ ಅಲ್ಲ, ಇದು ಮೌನದ ಪಾಠಶಾಲೆ. ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ಒಂದಕ್ಕೊಂದು ಕೈಕುಲುಕುವ ಬಿಳಿಗಿರಿ ರಂಗನ ಬೆಟ್ಟದ ಹೃದಯಭಾಗದಲ್ಲಿರೋ ಈ ಕ್ಯಾಂಪ್ ನಮಗೆ ಒಂದು ಅಪರೂಪದ ಅನುಭವ ನೀಡುತ್ತೆ. ನಾನು ಪ್ರಮುಖವಾಗಿ ಹೇಳಲೇಬೇಕಾದ ವಿಷಯ ಅಂದರೆ, ಇಲ್ಲಿನ 'ಆಫ್-ಗ್ರಿಡ್' ಲೈಫ್. ಹೌದು, ಇಲ್ಲಿ ನಮ್ಮ ಇಂದಿನ ಡಿಜಿಟಲ್ ಪ್ರಪಂಚದ ಕಿರಿಕಿರಿಗಳಿಲ್ಲ! ಈ ಕಾಡಿನ ಮಧ್ಯೆ ಕರೆಂಟ್ ಇರೋದಿಲ್ಲ ಅನ್ನೋದೇ ಇಲ್ಲಿನ ಅತಿ ದೊಡ್ಡ ವಿಶೇಷ.

ಮಧುಮಲೈ ಕಾಡಿನಲ್ಲಿ ಹುಲಿ ಸಫಾರಿಯ ಕಥೆ

ಸಂಜೆ ಮತ್ತು ಬೆಳಗ್ಗೆ ಕೆಲವೇ ಗಂಟೆಗಳ ಕಾಲ ಜನರೇಟರ್ ಅಥವಾ ಸೋಲಾರ್ ಪವರ್ ಬಿಟ್ಟರೆ, ಮಿಕ್ಕ ಸಮಯದಲ್ಲಿ ನೀವು ಪೂರ್ತಿಯಾಗಿ ಸೂರ್ಯನ ಬೆಳಕಿಗೆ ತಕ್ಕಂತೆ ಬದುಕಬೇಕು. ಮೊಬೈಲ್ ಸ್ಕ್ರೀನ್ ನೋಡುವ ಬದಲು ಲ್ಯಾಂಟರ್ನ್ ಬೆಳಕಲ್ಲೋ ಅಥವಾ ನಕ್ಷತ್ರಗಳ ಅಡಿಯಲ್ಲೋ ಕಾಲ ಕಳೆಯುವುದು ಎಂಥ ಅದ್ಭುತ ಅನುಭವ ಗೊತ್ತಾ? ನಮ್ಮ ಜಂಜಾಟದ ಬದುಕಿನಿಂದ ಪೂರ್ತಿಯಾಗಿ ಕಳಚಿಕೊಳ್ಳಲು ಇದಕ್ಕಿಂತ ಒಳ್ಳೆ ಜಾಗ ಬೇರೊಂದಿಲ್ಲ.

ಹಿತವಾದ ಹವಾಮಾನ

ಸಮುದ್ರ ಮಟ್ಟದಿಂದ ಸುಮಾರು 1,800 ರಿಂದ 6,000 ಅಡಿ ಎತ್ತರದಲ್ಲಿರುವ ಈ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹವಾಮಾನ ವರ್ಷಪೂರ್ತಿ ಸಕತ್ ಆಗಿರುತ್ತದೆ. ನಾನು ತಂಗಿದ್ದ 'ಲಾಗ್ ಹಟ್' (ಮರದ ಮನೆ) ಬಗ್ಗೆ ಹೇಳಲೇಬೇಕು. ಎತ್ತರದ ಕಂಬಗಳ ಮೇಲೆ ನಿಂತಿರೋ ಈ ಮರದ ಮನೆಗಳಲ್ಲಿ ಇದ್ದರೆ, ನಾವು ಮರದ ಮೇಲೆಯೇ ಗೂಡು ಕಟ್ಟಿಕೊಂಡು ವಾಸ ಮಾಡ್ತಿದ್ದೇವೇನೋ ಅನ್ನೋ ಫೀಲ್ ಸಿಗುತ್ತದೆ. ಬಾಲ್ಕನಿಯಲ್ಲಿ ಕೂತು ಗಾಳಿಯ ಸದ್ದು ಅಥವಾ ಎಲ್ಲೋ ದೂರದಲ್ಲಿ ಕೂಗುವ ಕಾಡು ಪ್ರಾಣಿಗಳ ಸದ್ದನ್ನ ಕೇಳೋದೇ ಒಂದು ಖುಷಿ. ಇನ್ನು ನಿಮಗೆ ಮಣ್ಣಿನ ವಾಸನೆ ಹತ್ತಿರ ಇರಬೇಕು ಅನ್ಸಿದ್ರೆ 'ಟೆಂಟ್ ಕಾಟೇಜ್'ಗಳಿವೆ. ಸ್ವಲ್ಪ ಲಕ್ಸುರಿ ಬೇಕು ಅನ್ನೋರಿಗೆ ಮಹಾರಾಜ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳೂ ಇವೆ. ಇಲ್ಲಿ ಕಾಫಿ ಮೇಕರ್, ಲಗೇಜ್ ಅಸಿಸ್ಟೆನ್ಸ್ ಎಲ್ಲಾ ಸೌಲಭ್ಯಗಳಿದ್ದರೂ ಕಾಡಿನ ನೈಸರ್ಗಿಕ ಸೊಗಡಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ.

New Project (12)

ಇಲ್ಲಿನ ದಿನಚರಿ ಶುರುವಾಗೋದೇ ಕಾಡಿನ ಕರೆಗೆ ಓಗೊಟ್ಟು. ಬೆಳಗ್ಗೆ 6 ಗಂಟೆಗೆ ಕಾಫಿ ಅಥವಾ ಚಹಾ ಕುಡಿದು, ರೆಡಿಯಾಗಿ ಮೂರು ಗಂಟೆಗಳ ಜೀಪ್ ಸಫಾರಿಗೆ ಹೊರಡಬೇಕು. ಅಲ್ಲಿನ ನ್ಯಾಚುರಲಿಸ್ಟ್‌ಗಳು ಕಾಡಿನ ಭಾಷೆಯನ್ನೇ ಮಾತಾಡ್ತಾರೆ ಅನ್ನೋವಷ್ಟು ನುರಿತವರು. ನಾವು ಸಫಾರಿಯಲ್ಲಿ ದೈತ್ಯ ಕಾಡುಕೋಣಗಳು, ಮಲಬಾರ್ ಜೈಂಟ್ ಸ್ಕ್ವಿರಲ್ ಮತ್ತು ದಾರಿಯಲ್ಲೇ ಅಡ್ಡ ಬಂದ ಕರಡಿಯನ್ನು ನೋಡಿದ್ವಿ. ಪಕ್ಷಿ ಪ್ರೇಮಿಗಳಿಗಂತೂ ಇದು ಸ್ವರ್ಗ. ಸುಮಾರು 250ಕ್ಕೂ ಹೆಚ್ಚು ತಳಿಯ ಪಕ್ಷಿಗಳಿವೆ. ನೀವು ಜೀಪ್ ಸಫಾರಿ ಬೇಡ ಅಂದ್ರೆ ಬೆಳಗ್ಗೆ ಗೈಡ್ ಜತೆ ಕಾಡಿನಲ್ಲಿ ನಡಿಗೆಗೆ ಹೋಗಬಹುದು. ಗಿಡಮೂಲಿಕೆ ಮತ್ತು ಮರಗಿಡಗಳ ಬಗ್ಗೆ ತಿಳ್ಕೊಳ್ಳೋಕೆ ಇದು ಬೆಸ್ಟ್ ಐಡಿಯಾ.

ರುಚಿಯಾದ ಊಟ

ಇನ್ನು ಊಟದ ವಿಷಯಕ್ಕೆ ಬಂದ್ರೆ, ಇಲ್ಲಿನ 'ಗೋಲ್ ಘರ್' ಅಂದ್ರೆ ಸುತ್ತಲೂ ಗೋಡೆಗಳಿಲ್ಲದ ವೃತ್ತಾಕಾರದ ಊಟದ ಹಾಲ್ ತುಂಬಾ ಫೇಮಸ್. ಇಲ್ಲಿ ಸಿಗೋ ಬಫೆ ಊಟದ ರುಚಿ ಮರೆಯೋಕೆ ಆಗಲ್ಲ. ಮಲೆನಾಡಿನ ಶೈಲಿಯ ಬಿಸಿಬಿಸಿ ಅಡುಗೆ ಈ ತಂಪು ಗಾಳಿಯಲ್ಲಿ ಅಮೃತದಂತೆ ಇರುತ್ತೆ. ಸಂಜೆ ವೇಳೆ ಎಲ್ಲಾ ಪ್ರವಾಸಿಗರು ಕ್ಯಾಂಪ್ ಫೈರ್ (ಬೇಸಗೆ ಮತ್ತು ಮಳೆಗಾಲ ಬಿಟ್ಟು) ಸುತ್ತ ಕೂತು ತಾವು ಕಾಡಿನಲ್ಲಿ ಕಂಡ ಪ್ರಾಣಿಗಳ ಬಗ್ಗೆ ಹರಟೆ ಹೊಡೆಯೋದು ಒಂದು ಮಜಾ. ಇಲ್ಲಿ ಕಾಡಿನ ಮರ್ಯಾದೆ ಕಾಪಾಡೋಕೆ ಮದ್ಯಪಾನವನ್ನ ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ, ಇದು ನನಗಂತೂ ತುಂಬಾ ಇಷ್ಟ ಆಯ್ತು.

ಬೆಂಗಳೂರಿನಿಂದ ಸುಮಾರು 193 ಕಿ.ಮೀ ಮತ್ತು ಮೈಸೂರಿನಿಂದ 86 ಕಿ.ಮೀ ದೂರದಲ್ಲಿರೋ ಈ ಜಾಗಕ್ಕೆ ಬರೋ ದಾರಿ ತುಂಬಾ ಸುಂದರವಾಗಿದೆ. ಅಲ್ಲಿನ ಮ್ಯಾನೇಜರ್ ಮಂಜುನಾಥ್ ಅವರು ಮತ್ತು ಇಡೀ ಸ್ಟಾಫ್ ತುಂಬಾನೇ ಫ್ರೆಂಡ್ಲಿ ಆಗಿದ್ದಾರೆ. ಆದರೆ ಕಾಡಿನ ನಿಯಮಗಳ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್. ಧೂಮಪಾನ, ಪ್ಲಾಸ್ಟಿಕ್ ಬಳಕೆ ಮತ್ತು ಸಾಕುಪ್ರಾಣಿಗಳಿಗೆ ಇಲ್ಲಿ ಅವಕಾಶವಿಲ್ಲ. ನೀವು ಒಂಟಿಯಾಗಿ ಬರಲಿ ಅಥವಾ ಫ್ಯಾಮಿಲಿ ಜೊತೆ ಬರಲಿ, ಪ್ರಕೃತಿಯನ್ನು ಅದರ ಅಸಲಿ ರೂಪದಲ್ಲಿ ನೋಡಬೇಕು ಅಂದ್ರೆ ಕೆ. ಗುಡಿಗೆ ಒಂದು ಬಾರಿ ಭೇಟಿ ಕೊಡಲೇಬೇಕು. ಇದು ಬರೀ ಪ್ರವಾಸವಲ್ಲ, ನಮ್ಮ ಒಳಗಿನ ಮೌನವನ್ನು ನಾವು ಕಂಡುಕೊಳ್ಳುವ ಒಂದು ಜರ್ನಿಯಾಗಿತ್ತು.

ಲೇಖಕರು: ಹವ್ಯಾಸಿ ಫೊಟೋಗ್ರಫರ್‌