ಏಳುಗಂಟೆಯ ನಡುರಾತ್ರಿಯಲ್ಲಿ ಡಾರ್ಜಿಲಿಂಗ್ ಸುತ್ತಾಟ
ಬೆಂಗಳೂರಿಗರಿಗೆ ರಾತ್ರಿ 1 ಗಂಟೆಯಾದರೂ ತೀರಾ ತಡವಾದಂತೆ ಅನ್ನಿಸುವುದಿಲ್ಲ. ನಮಗಲ್ಲಿ ಇದು ಬಹಳ ವಿಚಿತ್ರವೆನ್ನಿಸಿತು. ಜನರೆಲ್ಲ ಅಂಗಡಿ, ಓಡಾಟ, ಕೆಲಸಗಳನೆಲ್ಲ ಮುಗಿಸಿ, ಮನೆ ಸೇರಿ, ಬಾಗಿಲು ಹಾಕಿದ್ದರು. ನಮಗೋ, ಅಷ್ಟು ದೂರ ಹೋಗಿ, ನಿದ್ದೆಗೆ ಜಾರಲು ಇಷ್ಟವೇ ಇರಲಿಲ್ಲ. ನಮ್ಮ ಕಾಟೇಜ್ ಮಾಲೀಕನಲ್ಲಿ ಕೇಳಿದಾಗ, ಡಾರ್ಜಿಲಿಂಗ್ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಿ, ನಿಮಗೆ ಭಯವಾಗೋದಿಲ್ಲ. ಜನರಿದ್ದರೂ, ಇರದಿದ್ದರೂ, ನಮ್ಮವರಿಂದ ನಿಮಗೇನೂ ಹಾನಿಯಾಗೋದಿಲ್ಲ ಅನ್ನುವ ಅಭಯಹಸ್ತ ನೀಡಿದರು.
- ಕೃತಿಕಾರಾಣಿ ಟಿ. ಎಸ್., ಯಲ್ಲಾಪುರ.
ಯಾವುದೇ ಜಾಗದಲ್ಲಾದರೂ ನಿಮಗೆ ವಿಭಿನ್ನ ಅನುಭವ ಸಿಗಬೇಕು ಅಂತಾದರೆ, ಹೊತ್ತಲ್ಲದ ಹೊತ್ತಲ್ಲಿ ಅಲ್ಲಿಗೆ ಹೋಗಬೇಕು. ಸಾಮಾನ್ಯವಾಗಿ ಎಲ್ಲರೂ ಮಾಡದೇ ಇರೋದನ್ನು ಮಾಡಬೇಕು. ಅದನ್ನೇ ಅಲ್ಲವೇ ಹೊಸ ಅನುಭವ ಅನ್ನೋದು! ಇದು ನನ್ನ ಅನುಭವದ ಮಾತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಾನು ಮತ್ತು ನನ್ನ ಅಕ್ಕ (ಸದ್ಯಕ್ಕೆ ಹಾಗೇ ಎಂದುಕೊಳ್ಳೋಣ, ನಿಜವಾಗಿಯೂ ಅವರು ನನ್ನ ಬಾಸ್!) ಇಂಥದ್ದೊಂದು ಅಭೂತಪೂರ್ವ ಅನುಭವ ಪಡೆಯುವುದಕ್ಕಾಗಿ ಭಾರತದ ಪೂರ್ವ ದಿಕ್ಕಿನ ಕಡೆಗೆ ಸಾಗಿದ್ದೆವು.
ಇಬ್ಬರಿಗೂ ನಮ್ಮ ಮನಸ್ಥಿತಿಗಳು ಒಂದೇ, ನಮ್ಮಿಷ್ಟಗಳು ಒಂದೇ ಎಂದೆಲ್ಲ ಅನ್ನಿಸಿ, ನಮ್ಮಿಬ್ಬರ ಸ್ನೇಹಕ್ಕೆ ಖುಷಿಯ ಕ್ಷಣಗಳು ಚಂದದ ನೆನಪುಗಳು ಇದ್ದರೆ ಚೆಂದ ಅನ್ನಿಸಿ ಈ ಟ್ರಿಪ್ಪಿಗೆ ಹೊರಟೆವು. ಮೂಲತಃ ನಮ್ಮ ಪ್ಲಾನು ಕೊಲ್ಕತಾ! ಆದರೆ ಅದೇ ಸಂದರ್ಭದಲ್ಲಿ ಅಲ್ಲಿ ಗಲಾಟೆ ಶುರುವಾಗಿ, ಪರಿಸ್ಥಿತಿ ಬಿಗಡಾಯಿಸಿತ್ತು. ಎರಡು ತಿಂಗಳ ಹಿಂದೆಯೇ ಬುಕ್ ಮಾಡಿದ್ದ ಫ್ಲೈಟನ್ನು ಕ್ಯಾನ್ಸಲ್ ಮಾಡಬೇಕಾಯಿತು. ಅದಾದಮೇಲೆ, ಕೊನೇ ಕ್ಷಣದಲ್ಲಿ, ಅಲ್ಲಿಂದ ಸ್ವಲ್ಪ ಮೇಲೆ… ಅಂದರೆ, ಡಾರ್ಜಿಲಿಂಗ್ ಮತ್ತು ಸಿಕ್ಕಿಂ ನಮ್ಮ ಗುರಿಯಾಯಿತು. ಹೇಳಹೊರಟರೆ ಎರಡೂ ಸ್ಥಳವೂ ಒಂದೊಂದು ಅಧ್ಯಾಯ. ಇಬ್ಬರು ಹುಡುಗಿಯರು, ಒಬ್ಬಳು ಈಗತಾನೇ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದವಳು, ಇನ್ನೊಬ್ಬಳು ಮೊದಲ ಬಾರಿ ಹೀಗೆ ಟ್ರಿಪ್ಗೆ ಹೊರಟವಳು. ಈ ಜೋಡಿಯ ಬಗ್ಗೆ ಫ್ರೆಂಡ್ಸು- ಫ್ಯಾಮಿಲಿಗೆ ಸಿಕ್ಕಾಪಟ್ಟೆ ಭಯ. ನಮಗೋ ಹುಂಬ ಧೈರ್ಯ!

ಹೊಸತು ಹಳೆತು ಪ್ರವಾಸ
ನನಗೆ ಟ್ರಿಪ್ ಹೊಸದಲ್ಲ, ಆದರೆ ವಿಮಾನ ಹೊಸತು. ಅವರಿಗೆ ವಿಮಾನ ಹೊಸತಲ್ಲ ಆದ್ರೆ ಟ್ರಿಪ್ ಹೊಸತು. ಡಾರ್ಜಿಲಿಂಗ್-ಸಿಕ್ಕಿಂ ಚಳಿಯ ಪ್ರದೇಶವಾಗಿದ್ದರಿಂದ ಸ್ವೆಟರು, ಜಾಕೆಟ್ಟುಗಳನ್ನ ತುಂಬಿಸಿ ನಮ್ಮ ಲಗೇಜು ಭಾರವಾಗಿತ್ತು. ಸಿಕ್ಕಾಪಟ್ಟೆ ಉತ್ಸಾಹದಲ್ಲಿ ನಮ್ಮ ಸವಾರಿ ಹೊರಟಿತು. ಎತ್ತರವೆಂದರೆ ಭಯ ಪಡೋ ನನಗೆ ವಿಮಾನವನ್ನ ಏರೋಕೂ ಭಯ, ಆದರೂ ಹೊಸ ಅನುಭವದ ಆಸೆಯಲ್ಲಿ ಹೊರಟಿದ್ದೆ. ಸೆಪ್ಟೆಂಬರ್ ಎಂದರೆ, ಇನ್ನೂ ಮಳೆಗಾಲ ಮುಕ್ತಾಯವಾಗಿರದ, ತೀರಾ ಚಳಿ-ಹಿಮ ಶುರುವಾಗದ, ಶಾಲಾ-ಕಾಲೇಜುಗಳು ಭರದಿಂದ ಸಾಗುತ್ತಿದ್ದ ಕಾಲ, ಪ್ರವಾಸೀ ತಾಣಗಳಲ್ಲಿ ಜನ ಕಡಿಮೆ. ಅದಕ್ಕಾಗಿಯೇ ನಾವೀ ಸ್ಥಳ-ಕಾಲವನ್ನು ಆರಿಸಿಕೊಂಡಿದ್ದೆವು.
ಬೆಂಗಳೂರಲ್ಲಿ ವಿಮಾನ ಹತ್ತಿದ್ದು, ನನಗಾದ ಭಯ ಇದೆಲ್ಲವೂ ಒಂದು ಕತೆ, ಆದರೆ ಅದನ್ನ ಮರೆಸುವಂತೆ ಮಾಡಿದ್ದು ಸಿಲಿಗುರಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವಾಗ ಕಿಟಕಿಯಲ್ಲಿ ಕಂಡ ದೃಶ್ಯ. ಅದನ್ನು ಶಬ್ದಗಳಲ್ಲಿ ಕಟ್ಟಿಕೊಡುವುದಕ್ಕೆ ನಾನು ಬಡವಳು. ತಿಳಿ ಹಸಿರು ಬಣ್ಣದ ಗದ್ದೆ, ಅದರ ನಡುವೆ ಮನಸ್ಸಿಗೆ ಬಂದಂತೆ ನೂರಾರು ಮೈಲಿ ದೂರದಿಂದ ಮಳೆ ನೀರಿನ ಜತೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಅವಸರದಲ್ಲಿ ಹರಿಯುತ್ತಿದ್ದ ಕಂದು ಬಣ್ಣದ “ತೀಸ್ತಾ” ನದಿ! ಅದು ಕಣ್ಣಿಗೆ ತಂಪೂ, ಮನಸಿಗೆ ಭಯಾನಕವೂ ಆದ ಮಿಶ್ರ ಭಾವನೆಯನ್ನ ಉಕ್ಕಿಸುತ್ತಿದ್ದ ದೃಶ್ಯ!

ಡಾರ್ಜಿಲಿಂಗ್ಗೆ ಪ್ರಯಾಣ
ಸಿಲಿಗುರಿಯಲ್ಲಿಳಿದು, ನಾವು ಒಂದು ಟ್ಯಾಕ್ಸಿ ಮಾಡಿಕೊಂಡು 5 ಗಂಟೆ ಪ್ರಯಾಣದ ಡಾರ್ಜಿಲಿಂಗ್ ಕಡೆಗೆ ಹೊರಟೆವು. ಬೆಟ್ಟಗಳನ್ನು ಏರುತ್ತ ಏರುತ್ತ, ಕೊರೆವ ಚಳಿಗೆ ನಿಧಾನವಾಗಿ ಮೈಯೊಡ್ಡುತ್ತಾ, ಸುತ್ತೆಲ್ಲ ರಮಣೀಯ ದೃಶ್ಯವನ್ನು ಮನಸ್ಸಲ್ಲಿ, ಮೊಬೈಲಲ್ಲಿ ತುಂಬಿಸಿಕೊಳ್ಳುತ್ತಾ ಹೊರಟವರಿಗೆ ಇತ್ತ ಲೋಕದ ಪರಿವೆಯೇ ಇರಲಿಲ್ಲ. ಮಂಜು ಮುಸುಕಿದ ಟೀ ತೋಟದ ಹಚ್ಚ ಹಸಿರ ಬೆಟ್ಟಗಳು, ಚಿಕ್ಕ ಚಿಕ್ಕ ಪೆಟ್ಟಿಗೆಯಂಥ ಬಣ್ಣ ಬಣ್ಣದ ಮನೆಗಳು, ತಲೆ ಎತ್ತಿದಷ್ಟೂ ಅಗಾಧ ಪ್ರದೇಶದಲ್ಲಿ ಎತ್ತರದಲ್ಲಿ ಕಾಣುವ ಪರ್ವತಗಳು, ಮೋಡಗಳ ನಡುವೆ ತೂರಿಕೊಂಡು ನಮ್ಮನ್ನು ಭೇಟಿಯಾಗಲು ಕಾತರಿಸುತ್ತಿದ್ದ ಬಿಸಿಲು, ಅಲ್ಲಲ್ಲಿ ಘಂ ಎನ್ನುವ ಚಹಾ ಅಂಗಡಿಗಳು… ಪರ್ವತ ಏರಿದಂತೆ, ನಮ್ಮ ಪಕ್ಕದಲ್ಲೇ ನಮ್ಮೊಂದಿಗೇ ಸಾಗುವ ಡಾರ್ಜಿಲಿಂಗ್ನ ಫೇಮಸ್ ಟಾಯ್ ಟ್ರೇನ್! ಇದನ್ನೆಲ್ಲ ಆಸ್ವಾದಿಸುತ್ತ ಸಾಗಿದ ನಮಗೆ ನಾವು ಬುಕ್ ಮಾಡಿಕೊಂಡಿದ್ದ ಕಾಟೇಜ್ ತಲುಪಲು 5 ಗಂಟೆ ಹಿಡಿಯಿತು ಅನ್ನುವ ವಿಚಾರ ಹೊಳೆದೇ ಇರಲಿಲ್ಲ. ಡಾರ್ಜಿಲಿಂಗ್ನಲ್ಲಿ ಆಥೆಂಟಿಕ್ ಚಹಾದೊಂದಿಗೆ ಸಿಕ್ಕ ಸ್ವಾಗತ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಸಂಜೆಗೇ ದಿನ ಮುಕ್ತಾಯ
ಅದಾಗಲೇ ಕತ್ತಲೆ ಕವಿದಿತ್ತು, ಗಂಟೆ 6.30 ಇರಬಹುದು, ಡಾರ್ಜಿಲಿಂಗ್ ನಿದ್ದೆಗೆ ಜಾರುವ ಸಂಪೂರ್ಣ ತಯಾರಿಯಲ್ಲಿತ್ತು… ಇದು ನಮಗೆ ಸ್ವಲ್ಪ ಹೊಸತು. ಬೆಂಗಳೂರಿಗರಿಗೆ ರಾತ್ರಿ 1 ಗಂಟೆಯಾದರೂ ತೀರಾ ತಡವಾದಂತೆ ಅನ್ನಿಸುವುದಿಲ್ಲ. ನಮಗಲ್ಲಿ ಇದು ಬಹಳ ವಿಚಿತ್ರವೆನ್ನಿಸಿತು. ಜನರೆಲ್ಲ ಅಂಗಡಿ, ಓಡಾಟ, ಕೆಲಸಗಳನೆಲ್ಲ ಮುಗಿಸಿ, ಮನೆ ಸೇರಿ, ಬಾಗಿಲು ಹಾಕಿದ್ದರು. ನಮಗೋ, ಅಷ್ಟು ದೂರ ಹೋಗಿ, ನಿದ್ದೆಗೆ ಜಾರಲು ಇಷ್ಟವೇ ಇರಲಿಲ್ಲ. ನಮ್ಮ ಕಾಟೇಜ್ ಮಾಲೀಕನಲ್ಲಿ ಕೇಳಿದಾಗ, ಡಾರ್ಜಿಲಿಂಗ್ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಿ, ನಿಮಗೆ ಭಯವಾಗೋದಿಲ್ಲ. ಜನರಿದ್ದರೂ, ಇರದಿದ್ದರೂ, ನಮ್ಮವರಿಂದ ನಿಮಗೇನೂ ಹಾನಿಯಾಗೋದಿಲ್ಲ ಅನ್ನುವ ಅಭಯಹಸ್ತ ನೀಡಿದರು. ಮಲಗಿದ್ದ ಊರಲ್ಲಿ ನಮ್ಮ ಜೋಡಿ ಹೊಸ ಅನುಭವಕ್ಕಾಗಿ ಹೊರಟಿತು. ಅದರ ಜತೆಗೆ ಹೊಟ್ಟೆಗೇನಾದರೂ ಹಾಕಬೇಕಿತ್ತು. ನಿದ್ದೆಹೋದವರ ಊರಲ್ಲಿ ಪೆದ್ದರ ಹಾಗೆ ಊಟ ಹುಡುಕಿಕೊಂಡು ಹೊರಟೆವು, ಸಣ್ಣಗೆ ಮಳೆ ಜಿನುಗುತ್ತಿತ್ತು.

ಹತ್ತಿಕೊಂಡೇ ಹೋಗಬೇಕು
ಅಲ್ಲಿ, ಎಲ್ಲಿಂದ ಎಲ್ಲಿಗೆ ಓಡಾಡುವುದಾದರೂ ನಡೆದುಕೊಂಡೇ… ಅಲ್ಲಲ್ಲ ‘ಹತ್ತಿಕೊಂಡು’ ಹೋಗಬೇಕು. ಹಾಗೇ ಒಂದು ಇಪ್ಪತ್ತು ನಿಮಿಷ ಪರ್ವತದ ಮೇಲ್ಮುಖವಾಗಿ ಸಾಗಿ, ಮತ್ತೆ ಕಂಡ ರಸ್ತೆಯನ್ನು ಹಿಡಿದು ಅದರ ಪಕ್ಕವೇ ನಡೆಯಲು ಶುರು ಮಾಡಿದೆವು. ಸುಮಾರು ಕಟ್ಟಡಗಳಿದ್ದವು. ಆದರೆ ಎಲ್ಲವೂ ಬಂದ್! ಗಂಟೆ ನೋಡಿದರೆ ಸಂಜೆ 7.00!! ಗೊತ್ತಿಲ್ಲದ ಊರಲ್ಲಿ, ಹೊತ್ತಲ್ಲದ ಹೊತ್ತಲ್ಲಿ, ಹೊಟ್ಟೆಗೆ ಹಿಟ್ಟಿಲ್ಲದೇ, ಹಸಿದೇ ಮಲಗಬೇಕೇನೋ ಎಂದುಕೊಂಡು ಸಾಗುತ್ತಿರುವಾಗ, ಚಿಕ್ಕ ಕೆಫೆಯೊಂದು ಸಿಕ್ಕಿತು. ಕೊರೆಯುವ ಚಳಿಯಲ್ಲಿ ತೂಕ್ಪಾ ತಿನ್ನುವ ಮಜವನ್ನು ನಾನು ಹೇಳಿದರೆ ಕಡಿಮೆ, ಅದನ್ನು ಅನುಭವಿಸಿಯೇ ತೀರಬೇಕು. ಹೊಟ್ಟೆ ತುಂಬಿಸಿ, ಹಟ್ಟಿ ಸೇರಿ, ಹೊದ್ದು ಮಲಗಿದವರಿಗೆ, ಕಿಟಕಿಯ ಕರ್ಟನ್ ಪಕ್ಕದಿಂದ ಸೂರ್ಯ ಕಣ್ಣು ಹೊಡೆಯುವ ಸಮಯಕ್ಕೆ ಎಚ್ಚರವಾಯಿತು.

4.40ಕ್ಕೇ ಸೂರ್ಯದಯ
ಬೆಳಕು ಹರಿದದ್ದು ನೋಡಿ, 8.30 ಆಗಿರಬೇಕು ಎಂಬ ಊಹೆಯಿಂದ ಸಮಯ ನೋಡಿದರೆ ಶಾಕ್! ಇನ್ನೂ 4.45! ಇನ್ನೂ ನಿದ್ದೆ ಬರುವ ಯಾವ ಲಕ್ಷಣವೂ ಕಾಣಲಿಲ್ಲ, ಬಿಸಿಬಿಸಿ ನೀರು ಹೊಯ್ದುಕೊಂಡು, ತಯಾರಾಗಿ ಮಹಾಕಾಲ್ ಮಂದಿರಕ್ಕೆ ಲಗ್ಗೆಯಿಟ್ಟೆವು. ಕೈಲಾಸಕ್ಕೆ ಹತ್ತಿರದಲ್ಲಿದ್ದರೂ, ಮಹಾಕಾಲನ ಸನ್ನಿಧಾನದಲ್ಲಿ ಭಕ್ತಿಯೇನೂ ಮೂಡಲಿಲ್ಲ. ನಮ್ಮ ತಪ್ಪೋ, ಅಲ್ಲಿ ಕಂಡ ಒಂದಷ್ಟು ಸಂಗತಿಗಳು ಭಕ್ತಿಗೆ ಆಸ್ಪದ ನೀಡದಿದ್ದದ್ದು ತಪ್ಪೋ, ಅಸಲಿಗೆ ಇದೂ ಒಂದು ತಪ್ಪೋ ಎನ್ನುವುದನ್ನೂ ಯೋಚಿಸದೇ, ಕೈ ಮುಗಿದು, ಕೆಳಗಿಳಿಯ-ಹತ್ತಿದೆವು. ನೂರುಗಟ್ಟಲೇ ಫೋಟೋ ಕ್ಲಿಕ್ಕಿಸಿ, ಶಾಪಿಂಗ್ ಹೆಸರಲ್ಲಿ ಸಾವಿರಗಟ್ಟಲೇ ಹಣ ವ್ಯಯಿಸಿ… ಮತ್ತೆ ಕಾಟೇಜಿಗೆ ಬಂದು ಸೇರಿದೆವು. ಮತ್ತೆ ಮಧ್ಯಾಹ್ನ ಹೊರಟು, ಯಾವುದೋ ಟೀ ತೋಟದ, ಯಾರದೋ ಮನೆಯಲ್ಲಿ, ಮ್ಯಾಗಿ ಸವಿಯುತ್ತ, ಗಂಟೆಗಟ್ಟಲೇ ಹರಟುತ್ತ ಆ ದಿನವನ್ನು ಕಳೆದಿದ್ದು ಮಾತ್ರ ನಾವು ಇಂದಿಗೂ ನೆನೆನೆನೆದು ಖುಷಿ ಪಡುವ ನೆನಪು.
ಇಲ್ಲಿಗೆ ನಮ್ಮ ಪ್ರವಾಸ ಮುಗಿಯಿತೆಂದಲ್ಲ. ಇದು ಬರೀ ಒಂದು ದಿನದ ಮೆಲುಕು, ಹೀಗೇಯೇ ಇನ್ನೂ 5 ದಿನ ನಮ್ಮ ಜೀವನದ ಉತ್ಕೃಷ್ಟ ದಿನಗಳನ್ನು ಕಳೆದು ಬಂದಿದ್ದೇವೆ. ಮಾರಲ್ ಆಫ್ ದ ಸ್ಟೋರಿ ಏನಂದ್ರೆ ಅಷ್ಟೇನೂ ಜನ ಇರದ ಸಮಯದಲ್ಲಿ ಒಂದು ಪ್ರದೇಶವನ್ನು ಪೂರ್ತಿಯಾಗಿ ಅನುಭವಿಸೋದಕ್ಕೆ ಟ್ರಿಪ್ ಪ್ಲಾನ್ ಮಾಡುವುದು ಒಳ್ಳೆಯ ಉಪಾಯ. ಅದರಲ್ಲಿಯೂ ಆಫ್-ಸೀಸನ್ ಇನ್ನೂ ಉತ್ತಮ.