Thursday, June 12, 2025
Thursday, June 12, 2025

ಯುರೋಪ್ ಎಂಬ ಮಾಯಾ ದ್ವೀಪಗಳ ಸಮೂಹ

ಇಂಗ್ಲೆಂಡ್ ಅಭಿವೃದ್ಧಿ ಆರಂಭವಾದದ್ದು ಎಲಿಜಬೆತ್ ರಾಣಿಯ ಆಳ್ವಿಕೆಯ‌ ಕಾಲದಲ್ಲಿ, ಅಂದರೆ ಹದಿನಾರು ಮತ್ತು ಹದಿನೇಳನೆಯ ಶತಮಾನದಲ್ಲಿ. ಸಾಹಿತ್ಯ, ರಂಗಭೂಮಿ, ಸಂಗೀತಗಳ ವೈಭವದ ಕಾಲವದು. ವಿಲಿಯಂ ಶೇಕ್ಸ್‌ಪಿಯರ್ ಇತರ ನಾಟಕಕಾರರು ಈ ಅವಧಿಯನ್ನು ‘ನೆಸ್ಟ್ ಆಫ್ ಸಿಂಗಿಂಗ್ ಬರ್ಡ್ಸ್’ಎಂದು ವರ್ಣಿಸಿದ್ದಾರೆ. ಆಗ ನಿರ್ಮಿಸಿದ ಕ್ಯಾಥೆಡ್ರಲ್‌ಗಳು ಅಂದರೆ ಬ್ರಹದಾಕಾರದ ಚರ್ಚುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.

- ಪ್ರೊ. ಸಿದ್ದು ಯಾಪಲಪರವಿ

ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹಾಗೂ ಖಂಡ ಇವು ನಮ್ಮ ಭೌಗೋಳಿಕ ಅಸ್ಮಿತೆಯನ್ನು ಹೇಳುವ ವಿಳಾಸಗಳು. ಏಷ್ಯಾ ಖಂಡದ, ಭಾರತ ದೇಶದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ, ತಾಲ್ಲೂಕಿನ, ಊರುಗಳ ವಿವಿಧ ಗುಣಧರ್ಮ ಹೊಂದಿದ ನೂರಾರು ಜನ ಒಟ್ಟಿಗೆ ಯುರೋಪ್ ನೋಡಲಿ ಎಂಬ ಕನಸು ಕಾಣುವುದುಂಟೆ?

ಮನುಷ್ಯ ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂದು ನಿರೂಪಿಸಿದವರೇ ಎಸ್.ಎಂ. ಸುರೇಶ್. ಚಿತ್ರದುರ್ಗ ಹತ್ತಿರ ಸೊಲ್ಲಾಪುರ ಮೂಲದ ಸುರೇಶ್ ಈಗ ವೃತ್ತಿ ಕಾರಣದಿಂದ ಬೆಂಗಳೂರು ನಿವಾಸಿ. ಇತಿಹಾಸ ಪ್ರಾಧ್ಯಾಪಕ ವೃತ್ತಿಯನ್ನು ಕೈ ಬಿಟ್ಟು, ಪ್ರವೃತ್ತಿಯಾಗಿದ್ದ ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡ, ‘ಟಿಸಿಎಸ್ ಡ್ರೀಮ್ ಹಾಲಿಡೇಸ್’ ಎಂಬ ಆತಿಥ್ಯ ಉದ್ಯಮಿ. ವಚನ ಸಾಹಿತ್ಯದ ಅಧ್ಯಯನಕ್ಕೆ ಪ್ರೇರಣೆ ತರಳಬಾಳು ಮಠ ಹಾಗೂ ಸಾಣೇಹಳ್ಳಿ ಶ್ರೀಗಳು. ಎಲ್ಲರ ಪ್ರವಾಸೋದ್ಯಮಿಗಳ ಉದ್ದೇಶ ಈ ಪ್ರವಾಸಗಳಿಂದ ವ್ಯಾಪಾರ ಮತ್ತು ಲಾಭವಾಗಿರುತ್ತದೆ. ಆದರೆ ಸುರೇಶ್ ಈ ಉದ್ಯಮವನ್ನು ಲಾಭದಿಂದ ಭಿನ್ನವಾಗಿ ಆಲೋಚನೆ ಮಾಡಿರುವುದು ತುಂಬಾ ವಿಶೇಷ. ವಿದೇಶ ಪ್ರವಾಸ ಕೇವಲ ಮೋಜು ಮಸ್ತಿಯಿಂದ ಕೂಡಿರದೆ ಐತಿಹಾಸಿಕ ಪ್ರಜ್ಞೆಯ, ಚಿಂತನ-ಮಂಥನದ ಶಿವಾನುಭವ ಪ್ರವಾಸವಾಗಿರಲಿ, ಅದು ಗುರುಗಳಾದ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಎಂಬ ಉದ್ದೇಶದಿಂದ, ಐವತ್ತು ಜನರ ಎರಡು ತಂಡಗಳನ್ನು ಒಂದೆಡೆ ಸೇರಿಸಿದ್ದರು.

ಇದು ಈ ಪ್ರವಾಸದ ಮೂಲ ಪರಿಕಲ್ಪನೆ.

*

ಯುರೋಪ್ ಖಂಡದ ಸುಮಾರು ಹನ್ನೊಂದು ರಾಷ್ಟ್ರಗಳನ್ನು ಇಪ್ಪತ್ತು ದಿನಗಳಲ್ಲಿ ನೋಡುವ ಐಟಿನರಿ ಇದಾಗಿತ್ತು. ಇಂಗ್ಲೆಂಡ್, ಫ್ರ್ಯಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ ಹಾಗೂ ವ್ಯಾಟಿಕನ್ ಸಿಟಿ ಎಂಬ ಕೆಲವು ಪ್ರದೇಶಗಳನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ದಾರಿಯುದ್ದಕ್ಕೂ ನಮ್ಮನ್ನು ಸ್ವಾಗತಿಸುವ ಸಣ್ಣ, ಅತಿ ಸಣ್ಣ ದೇಶಗಳೂ ಇವೆ. ನಮ್ಮ ದೇಶದ ಊರುಗಳ ಗಾತ್ರದ ದೇಶಗಳನ್ನು ನೀವು ಕೇವಲ ಯುರೋಪಿನಲ್ಲಿ ಮಾತ್ರ ನೋಡಲು ಸಾಧ್ಯ. ಹೆಸರಿಗೆ ಮಾತ್ರ ಇವು ಸಣ್ಣ ರಾಷ್ಟ್ರಗಳು, ಆದರೆ ಸಾಧನೆ ಮತ್ತು ಐತಿಹಾಸಿಕ ಪ್ರಜ್ಞೆಗೆ ನಮ್ಮ ದೇಶವನ್ನು ಹೋಲಿಸಲಾಗದು.

ನಮ್ಮ ರಾಜ ಮಹಾರಾಜರುಗಳ ಸಾಧನೆಗಳನ್ನು ಇತಿಹಾಸದಲ್ಲಿ ಓದುತ್ತೇವೆ. ಆದರೆ ಬೃಹತ್ ಗಾತ್ರದ ಸ್ಮಾರಕಗಳೆಂದರೆ ಕೆಲವೇ ಕೆಲವು ದೇವಾಲಯಗಳು. ಆದರೆ ಯುರೋಪಿನಲ್ಲಿ ನಿರ್ಮಿಸಿದ ಸ್ಮಾರಕಗಳ ತಾಜಾತನ ಇಲ್ಲಿ ಕಾಣಲಾಗದು. ಹೀಗೆ ಐತಿಹಾಸಿಕ ವಾಸ್ತವಿಕ ಸಂಗತಿಗಳನ್ನು ಹೇಳಿದ ಕೂಡಲೇ ಸೋ ಕಾಲ್ಡ್ ದೇಶ ಭಕ್ತರು, ದೇಶ ದ್ರೋಹಿ ಪಟ್ಟ ಕಟ್ಟಿ ಮುಗಿಬೀಳುತ್ತಾರೆ. ಆದರೆ ಅಲ್ಲಿನ ಭವ್ಯಾತಿಭವ್ಯ, ಅತ್ಯದ್ಭುತ ಚರ್ಚುಗಳು, ಸೇತುವೆಗಳು, ಅರಮನೆಗಳು, ಹಡಗುಗಳು ನಮ್ಮಲ್ಲಿ ‘ವ್ಹಾ’ಅನುಭೂತಿ ಮೂಡಿಸುತ್ತವೆ. ಈ ‘ವ್ಹಾ’ಫ್ಯಾಕ್ಟರ್ ಸುಮ್ಮನೆ ಒಡ ಮೂಡುವುದಿಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಸಾಹಿತ್ಯ ಮತ್ತು ಮನೋವಿಜ್ಞಾನದ ವಿದ್ಯಾರ್ಥಿಯಾದ ನಾನು ತುಂಬಾ ಆಸ್ಥೆಯಿಂದ ಈ ಅನುಭವದ ಅನುಭೂತಿಯನ್ನು ವರ್ಣಿಸಲಾಗದೆ ಒದ್ದಾಡುತ್ತೇನೆ.

london

ನಾವು ಮೊದಲು ತಲುಪಿದ ಪ್ರದೇಶವೇ ಲಂಡನ್. ನಮಗೂ ಈ ಇಂಗ್ಲೆಂಡ್‌ಗೂ ಬಿಡದ ನಂಟು. ಅತಿ ಹೆಚ್ಚು ಕಾಲ ನಮ್ಮನ್ನು ಆಳಿ, ಹಿಂಸೆ ಕೊಟ್ಟು, ಸಂಪತ್ತನ್ನು ಕೊಳ್ಳೆ ಹೊಡೆದ ದೂರ್ತರಿವರು. ಇಂಗ್ಲಿಷ್ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮಲ್ಲಿ ಬೇರೂರಿಸಿದ್ದಾರೆ. ನಾವು ಈ ದೇಶಗಳನ್ನು ಭೌಗೋಳಿಕವಾಗಿ ವಿವರಿಸುವಾಗ ಪೂರ್ವ ಮತ್ತು ಪಶ್ಚಿಮ ಎನ್ನುತ್ತ, ಸಂಕ್ಷಿಪ್ತವಾಗಿ ಪಾಶ್ಚಿಮಾತ್ಯರು ಎನ್ನಲು ಕಾರಣ ಇವರು ಭೌಗೋಳಿಕವಾಗಿ ನಮ್ಮ ಎದುರಿಗಿದ್ದಾರೆ. ನಾವು ಪೂರ್ವ ಅವರು ಪಶ್ಚಿಮ, ಇದು ಕೇವಲ ಭೌಗೋಳಿಕವಾಗಿ ಅಲ್ಲ, ಸಾಂಸ್ಕೃತಿಕವಾಗಿಯೂ ತೀರಾ ವಿರುದ್ಧ. ‌ಆಚಾರ, ವಿಚಾರ, ನಡೆ, ನುಡಿ ಹೀಗೆ ಎಲ್ಲದರಲ್ಲೂ ಮೇಲು (ಸುಪೀರಿಯರ್) ಮತ್ತು ಮುಂದುವರೆದವರು.

ಲಂಡನ್ ಬ್ರಿಜ್, ಟಾವರ್ ಬ್ರಿಜ್, ಲಂಡನ್ ಐ, ಬಕಿಂಗ್ಹ್ಯಾಮ್ ಪ್ಯಾಲೇಸ್‌ಗಳನ್ನು ಒಂದೇ ದಿನ ಸುತ್ತಾಡಿದಾಗ ಎಲ್ಲರಲ್ಲೂ ಮೂಡಿದ ಬೆರಗನ್ನು ಆಳವಾಗಿ ಗಮನಿಸಿ ಸಡಗರಿಸಿದೆ.

ರಾಣಿಯರ ದೇಶ ಇಂಗ್ಲೆಂಡ್- ರೆನಸಾನ್ಸ್ ಎಂದರೆ ಪುನರುತ್ಥಾನ ಮತ್ತು ಅಭಿವೃದ್ಧಿ. ಇಂಗ್ಲೆಂಡ್ ಅಭಿವೃದ್ಧಿ ಆರಂಭವಾದದ್ದು ಎಲಿಜಬೆತ್ ರಾಣಿಯ ಆಳ್ವಿಕೆಯ‌ ಕಾಲದಲ್ಲಿ, ಅಂದರೆ ಹದಿನಾರು ಮತ್ತು ಹದಿನೇಳನೆಯ ಶತಮಾನದಲ್ಲಿ. ಸಾಹಿತ್ಯ, ರಂಗಭೂಮಿ, ಸಂಗೀತಗಳ ವೈಭವದ ಕಾಲವದು. ವಿಲಿಯಂ ಶೇಕ್ಸ್‌ಪಿಯರ್ ಇತರ ನಾಟಕಕಾರರು ಈ ಅವಧಿಯನ್ನು ‘ನೆಸ್ಟ್ ಆಫ್ ಸಿಂಗಿಂಗ್ ಬರ್ಡ್ಸ್’ಎಂದು ವರ್ಣಿಸಿದ್ದಾರೆ. ಆಗ ನಿರ್ಮಿಸಿದ ಕ್ಯಾಥೆಡ್ರಲ್‌ಗಳು ಅಂದರೆ ಬ್ರಹದಾಕಾರದ ಚರ್ಚುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ‌ಅವು ಈಗಲೂ ಕಾಲ ಕಾಲಕ್ಕೆ ರೂಪಾಂತರಗೊಂಡರೂ ಅದೇ ತಾಜಾತನ ಕಾಪಾಡಿಕೊಂಡಿವೆ. ಪ್ರತಿ ಕಟ್ಟಡಗಳನ್ನು ತಲೆ ಎತ್ತಿಯೇ ನೋಡಬೇಕು. ಅಷ್ಟೊಂದು ಎತ್ತರ, ಬಾನೆತ್ತರ, ಅದೂ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿವೆ. ಈಗಿನ ಹಾಗೆ ತಂತ್ರಜ್ಞಾನದ ಲಭ್ಯತೆ ಇಲ್ಲದ ಹೊತ್ತಲಿ, ಹೇಗೆ? ಎತ್ತ? ಎಂಬ ಐತಿಹಾಸಿಕ ವಿವರಣೆಯನ್ನು ಮನಸು ಕೇಳ ಬಯಸದೆ ಬರೀ ಬೆರಗನ್ನು ಅನುಭವಿಸುತ್ತದೆ.

ಇವುಗಳಲ್ಲಿ ಗಂಭೀರವಾಗಿ, ಆಳವಾಗಿ ನೋಡಿ ಮನದಲ್ಲಿ ಮೊದಲು ದಾಖಲಿಸಿಕೊಂಡು, ನಂತರ ನಮ್ಮ ಕ್ಯಾಮರಾ ತೆಗೆಯಬೇಕು. ನೋಡಿದ ಕೂಡಲೇ ಕ್ಯಾಮರಾ ಹಿಡಿದು ಕ್ಲಿಕ್ಕಿಸಲಾರಂಭಿಸಿದರೆ ರಸಾನುಭವ ಮಾಯವಾಗುತ್ತದೆ. ಆಗ ದೊಡ್ಡ ಹಡಗು ಲಂಡನ್ ನಗರದ ಜೀವನದಿ ‘ಥೇಮ್ಸ್’ದಾಟುವಾಗ ಲಂಡನ್ ಬ್ರಿಜ್ ತೆರೆದುಕೊಳ್ಳುವಂತೆ ಬಳಸಿದ ಟೆಕ್ನಾಲಜಿ ಕೇಳಿದಾಗ ಬೆರಗು ಮೂಡುವುದು ಅದ್ಭುತ. ಥೇಮ್ಸ್ ನದಿ ತೀರದ ಟಾವರ್ ಬ್ರಿಜ್ ಲಂಡನ್ ನಗರದ ಪ್ರಮುಖ ಆಕರ್ಷಣೆ. ಈಗ ಈ ನಗರದಲ್ಲಿ ಇಂತಹ ಮೂವತ್ತಕ್ಕೂ ಹೆಚ್ಚು ಬ್ರಿಜ್‌ಗಳನ್ನು ಆಧುನಿಕರು ನಿರ್ಮಿಸಿದ್ದಾರೆ. ಆದರೆ ನೂರಾರು ವರ್ಷಗಳ ಹಿಂದೆ ಹೇಗೆ?! ಆಗ ನಿರ್ಮಿಸಿದ ಚರ್ಚುಗಳು ಈಗ ಪಾರ್ಲಿಮೆಂಟ್ ಆಗಿ ರೂಪಾಂತರಗೊಂಡಿವೆ.

thames river

ವೆಸ್ಟ್ ಮಿನಿಸ್ಟರ್ ಪ್ರದೇಶ- ಥೇಮ್ಸ್ ನದಿಯ ಸುತ್ತಮುತ್ತಲಿನ ಪ್ರದೇಶವನ್ನು ಲಂಡನ್ ನಗರದ ಅತ್ಯಂತ ಬೆಲೆ ಬಾಳುವ ಪ್ರದೇಶ ಎಂದು ಪರಿಗಣಿಸುತ್ತಾರೆ. ನೀವು ಎಷ್ಟೇ ಶ್ರೀಮಂತರಿದ್ದರೂ ಈ ಪ್ರದೇಶಗಳನ್ನು ಖರೀದಿಸಲಾಗದು, ಕೇವಲ ಲೀಸ್ ಮೇಲೆ ಪಡೆಯಬಹುದು. ಬಹುಪಾಲು ಕಟ್ಟಡಗಳು ಸರ್ಕಾರದ ಆಸ್ತಿಗಳು. ‌ಇಲ್ಲಿನ ರಾಜ-ರಾಣಿಯರು ಒಂದೇ ಒಂದು ಪ್ಯಾಲೇಸ್ ಇಟ್ಟುಕೊಂಡಿದ್ದಾರೆ. ಮಿಕ್ಕದ್ದೆಲ್ಲ ಸರ್ಕಾರದ ಆಸ್ತಿ. ಇಡೀ ವೆಸ್ಟ್ ಮಿನಿಸ್ಟರ್ ಪ್ರದೇಶ ಸುತ್ತಾಡುವಾಗ ಲಂಡನ್ ವೈಭವ ಗೋಚರವಾಗುತ್ತದೆ. ಥೇಮ್ಸ್ ನದಿಯಲ್ಲಿ ಓಡಾಡುವ ಸಿಟಿ ಟೂರ್ ಬೋಟುಗಳು ವೆಸ್ಟ್ ಮಿನಿಸ್ಟರ್ ಪರಿಚಯ ಮಾಡಿ ಕೊಡುತ್ತವೆ. ‌ಲಂಡನ್ ಉತ್ತರ ಮತ್ತು ದಕ್ಷಿಣ ಪ್ರದೇಶವನ್ನು ಜೋಡಿಸಲೆಂದೇ ಈ ಸೇತುವೆಗಳನ್ನು ನಿರ್ಮಿಸಲಾಗಿದೆ. ಮುಂಚೆ ಜನರು ಸಂಪರ್ಕಕ್ಕಾಗಿ ಹಡಗುಗಳನ್ನು ಬಳಸುತ್ತಿದ್ದರು. ಈಗ ವಾಹನ ಸೌಕರ್ಯಗಳನ್ನು ಬಳಸಲು ಈ ಸೇತುವೆಗಳು ಸಂಪರ್ಕದ ಜೊತೆಗೆ ಸೌಂದರ್ಯವನ್ನು ಸಾರುತ್ತವೆ.

ಲಂಡನ್ ಯಾತ್ರೆ ಮುಗಿಸಿ ಮುಂದಿನ ಊರಿಗೆ ಹೋಗೋಣ.

ಲ್ಯಾಂಬೆತ್ ಬಸವ ಮೂರ್ತಿ- ಥೇಮ್ಸ್ ನದಿ ತೀರದ ಮೇಲೆ ಸ್ಥಾಪಿಸಲ್ಪಟ್ಟ ಐತಿಹಾಸಿಕ ಪ್ರತಿಮೆ ಬಸವಣ್ಣನವರ ವಿಗ್ರಹದ ಎದುರು ಸರಳ ಸಮಾರಂಭ ನಡೆಯಿತು. ಲ್ಯಾಂಬೆತ್ ಬರೋದ ಮೇಯರ್ ಆಗಿದ್ದ, ನಮ್ಮ ರಾಜ್ಯದ ಕಲ್ಯಾಣ ಕರ್ನಾಟಕ ಕಮಲಾಪೂರ ಮೂಲದ ಡಾ.ನೀರಜ್ ಪಾಟೀಲ ಅವರ ಸಾಹಸ ಖಂಡಿತವಾಗಿ ಅಭಿನಂದನೀಯ. ಬ್ರಿಟಿಷ್ ಸರ್ಕಾರ ಯಾವುದೇ ನಿರ್ಣಯಗಳನ್ನು ತಕ್ಷಣ ತೆಗೆದುಕೊಳ್ಳುವುದಿಲ್ಲ. ಆದರೆ ಡಾ. ನೀರಜ್ ಪಾಟೀಲ ಹಾಗೂ ನಮ್ಮ ದೇಶದ ಅನೇಕ ಗಣ್ಯ ಮಾನ್ಯರು ಸೇರಿಕೊಂಡು ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತನ್ನು ಆರಂಭ ಮಾಡಿದ್ದಾರೆ ಎಂಬುದನ್ನು ವಚನಗಳ ಆಧಾರದ ಮೇಲೆ ಮನವರಿಕೆ ಮಾಡಿದಾಗ, ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಮೂರ್ತಿಯನ್ನು ನಮ್ಮ ಪ್ರಧಾನಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಲಿಂಗಾಯತ ಧರ್ಮದ ಗೊಂದಲದಲ್ಲಿ ನಾವು ಕ್ಷುಲ್ಲಕವಾಗಿ ಒದ್ದಾಡುತ್ತಲಿದ್ದೇವೆ. ಆದರೆ ಬ್ರಿಟಿಷ್ ಸರ್ಕಾರ ಈಗ ತಾವೇ ಪ್ರಜಾಪ್ರಭುತ್ವದ ರೂವಾರಿಗಳಲ್ಲ, ತಮಗಿಂತ ಮೊದಲು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಆರಂಭವಾಯಿತು, ಅನುಭವ ಮಂಟಪವೇ ಮೊದಲ ಸಂಸತ್ತು ಎಂಬುದನ್ನು ಒಪ್ಪಿಕೊಂಡಿರುವುದಕ್ಕೆ ಇಡೀ ದೇಶ, ರಾಜ್ಯ ಮತ್ತು ನಾವು ಗರ್ವ, ಅಭಿಮಾನ ಪಡಬೇಕು ಆದರೆ..ಕೆಲವು ಅಸಂಬದ್ಧ ವಿಚಾರ ಮತ್ತು ವಾದ ವಿವಾದಗಳಲ್ಲಿ ಕಳೆದು ಕಲಬೆರಕೆಯಾಗಿದ್ದೇವೆ.

ಲಂಡನ್ ಐ ಎಂಬ ಇಂಗ್ಲೆಂಡ್ ಕಣ್ಣು

ನಮ್ಮೂರಿನ ಜಾತ್ರೆಯಲ್ಲಿ ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಅದು ಮೇಲೆ ಹೋದ ಕೂಡಲೇ ಹೋ ಎಂದು ಚೀರಾಡಿದ್ದ ನೆನಪು. ಆದರೆ ಜಾಯಿಂಟ್ ವ್ಹೀಲ್ ಮೂಲ ಇರುವುದು ಲಂಡನ್‌ನಲ್ಲಿ ಎಂಬುದು ಗೊತ್ತಿರಲಿಲ್ಲ. ಮೊದಲ ಬಾರಿ ಲಂಡನ್ ಐ ನೋಡಿದಾಗ ಅದೇ ಭಾವ ಮೂಡಿತ್ತು. ಆದರೆ ಈ ಲಂಡನ್ ಐ ಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಇಂಗ್ಲೆಂಡ್ ದೇಶ ಹೊಸ ಶತಮಾನವನ್ನು ವಿಭಿನ್ನವಾಗಿ ಸ್ವಾಗತಿಸಲು ನಿರ್ಧಾರ ಮಾಡಿದರು. ಇಡೀ ಲಂಡನ್ ವೀಕ್ಷಣೆ ಮಾಡಲು ಈ ರೀತಿಯ ವ್ಹೀಲ್ ತಯಾರಿಸಲು ಒಂದು ತಂತ್ರಜ್ಞಾನದ ಪಡೆ ನಿರ್ಣಯ ಮಾಡಿ, ನಾಲ್ಕು ನೂರಾ ನಲವತ್ಮೂರು ಅಡಿ ಎತ್ತರದ ಈ ವ್ಹೀಲ್ ನಿರ್ಮಾಣಕ್ಕೆ ನೂರಾರು ಕೋಟಿ ವಿನಿಯೋಗಿಸಲು ಯೋಜನೆ ರೂಪಿಸಿದರು. ಈ ಟೆಂಡರ್‌ನಲ್ಲಿ ಭಾಗವಹಿಸಿದ ಡೇವಿಡ್ ಮಾರ್ಕ್ಸ್ ಹಾಗೂ ಜೂಲಿಯಾ ಬಾರ್‌ಫೀಲ್ಡ್ ದಂಪತಿಗಳು ಬ್ರಿಟಿಷ್ ಏರ್ವೇಸ್ ನೆರವಿನಿಂದ ಇದನ್ನು ಲೋಕಾರ್ಪಣೆಗೊಳಿಸಿದರು. ಇದರ ತಾಂತ್ರಿಕತೆ ಕೇಳಬೇಕೋ, ಸೌಂದರ್ಯ ಸವಿಯಬೇಕೋ ಎಂಬ ತಾಕಲಾಟ. 1700 ಟನ್ ಕಬ್ಬಿಣ, 3000 ಟನ್ ಕಾಂಕ್ರೀಟ್ ಬಳಸಿ, ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿ ನಿರ್ಮಿಸಲಾಗಿದೆ. ಒಂದು ಏರ್‌ಕಂಡೀಶನ್ ಚೇಂಬರ್‌ನಲ್ಲಿ ಇಪ್ಪತ್ತೈದು ಜನ ಆರಾಮವಾಗಿ ನಿಂತುಕೊಳ್ಳಬಹುದು. ಅಷ್ಟೊಂದು ಎತ್ತರ ತೇಲಿ ಹೋದರೂ ಆತಂಕವಾಗುವುದಿಲ್ಲ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ವಿಜ್ಞಾನ ಹೇಳುತ್ತದೆ ಆದರೆ ನಮಗೆ ಸುತ್ತಿದ ಅನುಭವ ಆಗುವುದಿಲ್ಲ, ನಾವು ತಿರು ತಿರುಗಿ ಬೀಳುವುದಿಲ್ಲ ಎಂಬ ಪ್ರಶ್ನೆ ನನ್ನಂತಹ ‘ನಾನ್‌ಸೈನ್ಸ್’ದಡ್ಡ ಹುಡುಗರಿಗೆ ಕಾಡುವುದು ಸಹಜ. ಆದರೆ ಲಂಡನ್ ಐ ಸುತ್ತುವಾಗ ಭೂಮಿ ಸುತ್ತುತ್ತದೆ ಆದರೆ ಗೊತ್ತಾಗುವುದಿಲ್ಲ ಸಾಬೀತಾಗುತ್ತದೆ. ಅದನ್ನು ಸಾಬೀತು ಮಾಡಲೆಂದೆ ಐ ನಿರ್ಮಾಣ ಮಾಡಿದ್ದಾರೆ ಎಂಬ ಭಾವನೆ ಮೂಡಿತು. ಮನುಷ್ಯನ ಕಲ್ಪನೆಯ ಜೊತೆಗೆ ವಿಜ್ಞಾನಿಗಳು ಮನಸು ಮಾಡಿದರೆ ಮಾತ್ರ ಇಂತಹ ಅದ್ಭುತಗಳು ಸಾಕಾರಗೊಳ್ಳುತ್ತವೆ.‌

london eye

ನಾವು ನೂರಾರು ಜನ ಲಂಡನ್ ಐ ಸುತ್ತಿ ಪಾರ್ಲಿಮೆಂಟ್ ಕಟ್ಟಡ ಮತ್ತು ಇತರ ಪ್ರದೇಶಗಳನ್ನು ನೋಡಿದಾಗ ಮತ್ತದೇ ವ್ಹಾ ಭಾವ ಉಕ್ಕಿ ಹರಿಯಿತು.

ಸ್ಕಾಟ್ಲೆಂಡ್ ಎಂಬ ಇನ್ನೊಂದು ಪ್ರದೇಶ

ಸ್ಕಾಟ್ಲೆಂಡ್ ಎಂಬುದೊಂದು ದೇಶ ಆದರೆ ಇದು ಇಂಗ್ಲೆಂಡ್ ಆಡಳಿತದಲ್ಲಿ ಇದ್ದ ಕಾರಣದಿಂದ ಸ್ವತಂತ್ರ ದೇಶವಲ್ಲ. ಯುನೈಟೆಡ್ ಕಿಂಗ್ಡಮ್‌ನ ಒಂದು ಭಾಗ. ಈ ಯುರೋಪ್ ಪ್ರವಾಸದಲ್ಲಿ ಬಸ್ಸಿನಲ್ಲಿ ಸರಿಸುಮಾರು ಕನಿಷ್ಠ ಆರು ತಾಸುಗಳ ಪಯಣ ಮಾಡಲು ಗಟ್ಟಿ ಇರಬೇಕು. ಅಯ್ಯೋ ಇದೇನಿದು ದೇಶ ನೋಡೋಣ ಎಂದು ಹೇಳಿ ಬರೀ ಬಸ್ಸಿನಲ್ಲಿ ತಿರುಗಾಡಿಸುತ್ತಾರೆ ಎಂದು ಖಂಡಿತವಾಗಿ ಗೊಣಗಬಾರದು. ಬಸ್ಸಿನಲ್ಲಿ ಪಯಣ ಮತ್ತು ಪ್ರತಿದಿನ ಕನಿಷ್ಠ ಹತ್ತು ಸಾವಿರ ಹೆಜ್ಜೆ ಓಡಾಡುವ ಮನಸಿದ್ದರೆ ಮಾತ್ರ ಯುರೋಪ್ ಪಯಣದ ಕನಸು ಕಾಣಬೇಕು. ಇಲ್ಲದಿದ್ದರೆ ತುಂಬಾ ನಿರಾಸೆಯಾಗಿ ‘ವ್ಹಾ’ ಭಾವನೆ ಮಂಕಾಗುತ್ತದೆ.‌ ಒಂಬತ್ತು ತಾಸುಗಳ ಪಯಣದಲ್ಲಿ ಮಾರ್ಗ ಮಧ್ಯದಲ್ಲಿ ಮ್ಯಾಂಚೆಸ್ಟರ್‌ ನಗರದಲ್ಲಿ ಊಟ ಮಾಡಿ, ಮಾರ್ಗದುದ್ದಕ್ಕೂ ಕಾಡು, ಕಣಿವೆ ನೋಡುತ್ತ, ಐಷಾರಾಮಿ ಬಸ್ಸಿನಲ್ಲಿ ಅಳವಡಿಸಿದ ಮೈಕಿನಲ್ಲಿ ಹಾಡುತ್ತ, ನಲಿಯುತ್ತ ಸಾಗಬೇಕು. ಇಲ್ಲದಿದ್ದರೆ ಟೂರ್ ಆಯೋಜನೆ ಮಾಡಿದವರ ಶಪಿಸಬೇಕಾಗುತ್ತದೆ. ನಮ್ಮದು ಶಿವಾನುಭವ ಯಾತ್ರೆಯಾಗಿದ್ದರಿಂದ ವಚನ ಗಾಯನ, ಅನುಭಾವದ ಮಾತುಕತೆ ಸಾಗಿತ್ತು, ಆದರೂ ಹಲವರು ಈ ಸುದೀರ್ಘ ಬಸ್ ಪಯಣವನ್ನು ಊಹೆ ಮಾಡಿರಲಿಲ್ಲ. ಯುರೋಪ್ ಪಯಣದಲ್ಲಿ ಇದು ಅನಿವಾರ್ಯ ಎಂಬುದನ್ನು ಅರಗಿಸಿಕೊಳ್ಳಲು ಒಂದೆರಡು ದಿನಗಳು ಬೇಕಾದವು.

ಕಡೀ ಮಾತು- ಊಟ ನೋಟ ಎಲ್ಲಾ ಚಲೋ ಆದರೆ ನೀರು ಬಳಸದೇ ಟಿಶ್ಶು ಪೇಪರ್ ಬಳಸೋದು ಕಷ್ಟ ಎಂದು ಎಲ್ಲರಿಗೂ ಅನಿಸಿದರೂ ಯಾರೂ ಬಾಯಿ ಬಿಡೋದಿಲ್ಲ. ಕೈ ಕಾಲು, ಮುಖ ಹಾಗೂ ಅದನ್ನು ತೊಳೆದುಕೊಳ್ಳಲು ನೀರೇ ಬೇಕು ಎಂದು ಹಟ ಮಾಡದೇ ಮೌನವಾಗಿ ಟಿಶ್ಶು ಬಳಸಿ ಸ್ವಚ್ಛ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಂಡು ವಿಮಾನ ಏರಿ ಹಾರಬೇಕು ಅಷ್ಟೇ!

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!