ಮಂಗಳೂರು–ಬೆಂಗಳೂರು ರೈಲು ಸಂಚಾರ ಪುನರಾರಂಭ
ರೈಲ್ವೇ ಸಿಬ್ಬಂದಿ ಯೆಡಕುಮಾರಿ–ಶಿರಬಾಗಿಲು ನಡುವಿನ ಹಳಿ ಮೇಲಿದ್ದ ಮಣ್ಣು, ಬಂಡೆಗಳು ಮತ್ತು ಇತರೆ ಅವಶೇಷಗಳನ್ನು ತೆರವುಗೊಳಿಸಿ, ಸುರಕ್ಷತಾ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ರೈಲು ಸಂಚಾರಕ್ಕೆ ಅನುಮತಿ ನೀಡಿದರು.
ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಮಂಗಳೂರು– ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಿದೆ. ರೈಲ್ವೇ ಸಿಬ್ಬಂದಿ ಯೆಡಕುಮಾರಿ– ಶಿರಿಬಾಗಿಲು ನಡುವಿನ ಹಳಿ ಮೇಲಿದ್ದ ಮಣ್ಣು, ಬಂಡೆಗಳು ಮತ್ತು ಇತರೆ ಅವಶೇಷಗಳನ್ನು ತೆರವುಗೊಳಿಸಿ, ಸುರಕ್ಷತಾ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ರೈಲು ಸಂಚಾರಕ್ಕೆ ಅನುಮತಿ ನೀಡಿದರು.
ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳ ಮಾಹಿತಿ ಪ್ರಕಾರ, ಹಳಿ ಪುನಃ ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಿದ ನಂತರ ಸೋಮವಾರ ರಾತ್ರಿ ರೈಲುಗಳ ಸಂಚಾರ ಪುನರಾರಂಭಿಸಲಾಯಿತು. ಆದರೆ, ಮುಂಜಾಗ್ರತಾ ಕ್ರಮವಾಗಿ ಭೂಕುಸಿತ ಸಂಭವಿಸಿದ್ದ ಘಟ್ಟ ಪ್ರದೇಶದಲ್ಲಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಗಂಟೆಗೆ 10 ಕಿಮೀ.ಗೆ ಮಿತಿಗೊಳಿಸಲಾಗಿದೆ. ಸಾಮಾನ್ಯ ವೇಗದಲ್ಲಿ ಸಂಚಾರವನ್ನು ಹಂತ ಹಂತವಾಗಿ ಪುನಃ ಆರಂಭಿಸಲಾಗುವುದು.
ಭೂಕುಸಿತದ ಪರಿಣಾಮವಾಗಿ ಕಳೆದ ಎರಡು ದಿನಗಳಲ್ಲಿ ಹಲವು ರೈಲುಗಳನ್ನು ರದ್ದುಪಡಿಸಲಾಗಿತ್ತು ಹಾಗೂ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ರೈಲು ಸಂಚಾರ ಪುನರಾರಂಭವಾದರೂ, ಕೆಲವು ರೈಲುಗಳು ವಿಳಂಬವಾಗಿ ಸಂಚರಿಸುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ತಮ್ಮ ರೈಲಿನ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವಂತೆ ರೈಲ್ವೇ ಇಲಾಖೆ ಮನವಿ ಮಾಡಿದೆ.