ತುಮಕೂರಿನಲ್ಲೂ ಉಂಟು ಅದ್ಭುತ ಪ್ರವಾಸಿ ತಾಣಗಳು!
ಕಲ್ಪತರು ನಾಡು ತುಮಕೂರಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ನೂರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ.
ಕಲ್ಪತರು ನಾಡು ತುಮಕೂರಿನಲ್ಲೂ ಹಲವು ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ ತುಮಕೂರು ಜಿಲ್ಲೆಯು ಸರಿ ಸುಮಾರು 70 ಕಿ.ಮೀ ದೂರದಲ್ಲಿದೆ. ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ತುಮಕೂರಿಗೆ ಒಂದು ದಿನ ಪಿಕ್ನಿಕ್ ಹೋಗಿ ಬರಬಹುದು. ಇಲ್ಲಿ ಪ್ರಾಚೀನ ಕೋಟೆ, ಪುರಾತನ ದೇವಾಲಯ, ದಟ್ಟವಾದ ಅರಣ್ಯ ಮತ್ತು ಥ್ರಿಲ್ಲಿಂಗ್ ಅನುಭವ ಕೊಡುವ ಚಾರಣದ ಜಾಗಗಳಿವೆ. ಪ್ರವಾಸಿಗರು ಕರ್ನಾಟಕದ ಅನೇಕ ಭಾಗಗಳಿಂದ ತುಮಕೂರಿನ ಆಸುಪಾಸಿನ ಅದ್ಭುತ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನೀವು ಒಂದು ದಿನದ ಪ್ರವಾಸ ಕೈಗೊಂಡರೆ ಈ ಜಾಗಗಳಿಗೆ ತಪ್ಪದೇ ಭೇಟಿ ನೀಡಿ.
ಶಿವಗಂಗೆ
ಸಮುದ್ರಮಟ್ಟದಿಂದ 1,368 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಈ ತಾಣವು ತುಮಕೂರಿನ ಸಮೀಪದಲ್ಲಿದೆ. ಮಹಾ ಶಿವ ನೆಲೆಸಿರುವ ಈ ಬೆಟ್ಟವನ್ನು ‘ದಕ್ಷಿಣ ಕಾಶಿ’ ಎಂದು ಕರೆಯಲಾಗುತ್ತದೆ. ಗಂಗಾಧರೇಶ್ವರ ದೇವಸ್ಥಾನ, ಒಳಕಲ ತೀರ್ಥ, ನಂದಿ ಪ್ರತಿಮೆ, ಪಾತಾಳ ಗಂಗೆ ಇಲ್ಲಿವೆ. ಇನ್ನು ಶಿವಗಂಗೆ ಬೆಟ್ಟವು ಟ್ರೆಕ್ಕಿಂಗ್ಗೆ ಹೇಳಿ ಮಾಡಿಸಿದ ಜಾಗ. ಅದರಲ್ಲೂ ಪ್ರತಿ ವರ್ಷ ಮಹಾಶಿವರಾತ್ರಿಯಲ್ಲಿ ರಾತ್ರಿಯ ಸಮಯದಲ್ಲಿ ಚಾರಣ ಹೋಗುವ ಅವಕಾಶವಿದೆ. ಅದೊಂದು ರೀತಿಯ ಬೆರಗಿನ ಅನುಭವವನ್ನು ನೀಡುತ್ತದೆ.

ದೇವರಾಯನ ದುರ್ಗಕೋಟೆ
ಕೋಟೆ ಕೊತ್ತಲಗಳ ಬಗ್ಗೆ ಆಸಕ್ತಿ ಇರುವ ಪ್ರವಾಸಿಗರು ದೇವರಾಯನ ದುರ್ಗ ಕೋಟೆಗೆ ಭೇಟಿ ನೀಡಬಹುದು. ಇದು ಎತ್ತರದಲ್ಲಿದ್ದು, ಬಹಳ ಸುಂದರವಾದ ವಾತಾವರಣವನ್ನು ಹೊಂದಿದೆ. 17 ನೇ ಶತಮಾನದಲ್ಲಿ ಮೈಸೂರು ಒಡೆಯರು ಈ ಭದ್ರವಾದ ಕೋಟೆಯನ್ನು ನಿರ್ಮಿಸಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಈ ಕೋಟೆ ಅವಶೇಷದ ಸ್ಥಿತಿಯಲ್ಲಿ ಇದೆಯಾದರೂ, ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಈ ಕೋಟೆ ಇರುವ ಜಾಗಕ್ಕೆ ಭೇಟಿ ನೀಡುತ್ತಾರೆ.

ನಾಮದ ಚಿಲುಮೆ
ತುಮಕೂರಿನ ಪ್ರವಾಸದಲ್ಲಿ ಪ್ರವಾಶಿಗರು ಮಿಸ್ ಮಾಡಿಕೊಳ್ಳಬಾರದ ತಾಣಗಳಲ್ಲಿ ನಾದದ ಚಿಲುಮೆ ತಾಣವೂ ಒಂದು. ಇದೊಂದು ನೈಸರ್ಗಿಕ ಚಿಲುಮೆಯಾಗಿದ್ದು, ಬೃಹತ್ತಾದ ರಂಧ್ರದಿಂದ ನೀರು ಚಿಮ್ಮುತ್ತದೆ. ಈ ಜಾಗವು ರಾಮಾಯಣದ ಜೊತೆ ಸಂಬಂಧವನ್ನು ಹೊಂದಿದೆ. ರಾಮ ತನ್ನ ಹಣೆಗೆ ಸಿಂಧೂರವನ್ನು ಧರಿಸಲು ನೀರಿನ ಅವಶ್ಯಕತೆ ಇರುತ್ತದೆ. ಆಗ ತನ್ನ ಬಾಣದಿಂದ ಬಂಡೆಗೆ ಹೊಡೆದಾಗ ಚಿಲುಮೆಯಾಗಿ ಹೊರಹೊಮ್ಮಿತ್ತು ಎನ್ನಲಾಗಿದೆ. ಆ ಚಿಲುಮೆಯೇ ನಾಮದ ಚಿಲುಮೆ ಎನ್ನುತ್ತದೆ ಸ್ಥಳ ಪುರಾಣ.

ಯೋಗ ನರಸಿಂಹಸ್ವಾಮಿ ದೇವಾಲಯ
ಈ ದೇವಾಲಯವು ತುಮಕೂರಿನ ಸಮೀಪದ ದೇವರಾಯನದುರ್ಗದಲ್ಲಿದ್ದು ಎರಡನೇ ಜನಪ್ರಿಯ ದೇವಸ್ಥಾನವಾಗಿದೆ. ಇದು ಭೋಗ ನರಸಿಂಹದಿಂದ ಸ್ವಲ್ಪ ಎತ್ತರದ ಬೆಟ್ಟದ ಮೇಲೆ ನೆಲೆಸಿದೆ. ಯೋಗ ನರಸಿಂಹ ಸ್ವಾಮಿ ದೇವಾಲಯವು ಪುರಾತನವಾದ ಆಲಯವಾಗಿದ್ದು, ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಣ್ಮನ ಸೆಳೆಯುವ ಸ್ತಂಭಗಳು, ವಿಶೇಷ ಕೆತ್ತನೆಗಳು ಆಲಯದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಆಲಯಕ್ಕೆ ದಾವಸ್ ಪೇಟೆಯಿಂದ ಸುಲಭವಾಗಿ ತಲುಪಬಹುದು.
