ಪ್ರವಾಸೋದ್ಯಮದಲ್ಲಿ ಡಿಜಿಟಲ್ ಆವಿಷ್ಕಾರವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಫೋರಂ (ಕೆಟಿಎಫ್‌), ಭಾರತ ಸರಕಾರ ಪ್ರವಾಸೋದ್ಯಮ ಸಚಿವಾಲಯದ ಸಹಯೋಗದೊಂದಿಗೆ “ಪ್ರವಾಸೋದ್ಯಮ ವೃತ್ತಿಪರರಿಗಾಗಿ ಎಐ” ಎಂಬ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಏರ್ಪಡಿಸಲಾಗಿದ್ದು, ತಮ್ಮ ವ್ಯವಹಾರ ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸಲು ಆಸಕ್ತಿ ಹೊಂದಿರುವ ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು ಮತ್ತು ಆತಿಥ್ಯ ಕ್ಷೇತ್ರದ ವೃತ್ತಿಪರರು ಭಾಗಿಯಾಗಿದ್ದರು. ಸುಮಾರು 40-50 ಪ್ರತಿನಿಧಿಗಳು ಭಾಗಿಯಾಗಿ ಇದರ ಉಪಯೋಗ ಪಡೆದುಕೊಂಡರು.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ: ಎಚ್‌.ಕೆ. ಪಾಟೀಲ್‌

ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೆಇಎಫ್‌ ಅಧ್ಯಕ್ಷ ಪ್ಯಾಟ್ರಿಕ್‌, “ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯ ಬೆಳೆಯುತ್ತಿರುವ ಅಗತ್ಯವನ್ನು ಪೂರೈಸಲು ಈ ಕಾರ್ಯಾಗಾರವನ್ನು ವಿನ್ಯಾಸಗೊಳಿಸಲಾಗಿದೆ. ಎಐ ವೇಗವಾಗಿ ಗ್ರಾಹಕರ ನಿರೀಕ್ಷೆಗಳನ್ನು ಮತ್ತು ವ್ಯವಹಾರ ಮಾದರಿಗಳನ್ನು ಮರುರೂಪಿಸುತ್ತಿರುವ ಈ ಕಾಲದಲ್ಲಿ, ವೃತ್ತಿಪರರಿಗೆ ಪ್ರಾಯೋಗಿಕ ಉಪಕರಣಗಳು ಮತ್ತು ಒಳನೋಟಗಳನ್ನು ಒದಗಿಸುವುದು ಇದರ ಮುಖ್ಯ ಗುರಿ” ಎಂದು ಹೇಳಿದರು.