ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಲಕ್ಷದೀಪೋತ್ಸವವು ನವೆಂಬರ್‌ 15ರಿಂದ ಪ್ರಾರಂಭವಾಗಿದ್ದು, ಐದು ದಿನಗಳ ಕಾಲ ನಡೆದ ಈ ಭವ್ಯ ಆಚರಣೆ ಇಂದು ಕೊನೆಗೊಳ್ಳಲಿದೆ. ಉತ್ಸವದ ಹಿನ್ನೆಲೆ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದ್ದು, ಧರ್ಮಸ್ಥಳ ಬೆಳಕಿನ ಹೊಳಪಿನಲ್ಲಿ ಕಂಗೊಳಿಸುತ್ತಿದೆ.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಉತ್ಸವದ ಅವಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಜತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜನೆಯಾಗಿದ್ದವು. ನವೆಂಬರ್‌ 15ರಂದು ಹೊಸಕಟ್ಟೆ ಉತ್ಸವ, ನವೆಂಬರ್‌ 16ರಂದು ಕೆರೆಕಟ್ಟೆ ಉತ್ಸವ, ನವೆಂಬರ್‌ 17ರಂದು ಲಲಿತೋದ್ಯಾನ ಉತ್ಸವ, ನವೆಂಬರ್‌ 18ರಂದು ಕಂಚಿಮಾರುಕಟ್ಟೆ ಉತ್ಸವ, ನವೆಂಬರ್‌ 19ರಂದು ನಡೆದ ಗೌರಿಮಾರುಕಟ್ಟೆ ಉತ್ಸವ ನೋಡುಗರ ಕಣ್ಮನ ಸೆಳೆದವು.

Dharmasthala


ನವೆಂಬರ್ 20 ರಂದು ಬೆಳಿಗ್ಗೆ ಲಕ್ಷದೀಪೋತ್ಸವದ ಸಮಾರೋಪ ವಿಧಿವಿಧಾನಗಳು ನಡೆದ ನಂತರ ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಜರುಗಲಿದೆ.

ಸುಮಾರು ಒಂಬತ್ತು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ಧರ್ಮಸ್ಥಳದ ಪ್ರಸಿದ್ಧ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ಈ ಬಾರಿ ನವೆಂಬರ್ 18 ಮತ್ತು 19ರಂದು ಜರುಗಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಮ್ಮೇಳನವನ್ನು ಉದ್ಘಾಟಿಸಿದರು, ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಎ. ಸೂರ್ಯಪ್ರಕಾಶ್ ಪಂಡಿತ್ ಮತ್ತು ಅಂಕಣಕಾರ ತನ್ವೀರ್ ಅಹ್ಮದುಲ್ಲಾ ಅವರು ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು.