ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ (ಮಾರ್ಚ್11, 2026) ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್, ಎರಡು ಎಕ್ಸ್‌ಪ್ರೆಸ್ ರೈಲುಗಳು ಮತ್ತು ಒಂದು ಪ್ಯಾಸೆಂಜರ್ ರೈಲಿಗೆ ಹಾಗೂ ಕೇರಳದ ಎರ್ನಾಕುಲಂನಿಂದ ಮತ್ತೊಂದು ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್:

ಪೋತನೂರು-ಧನಬಾದ್ ಅಮೃತ್ ಭಾರತ್ ಎಕ್ಸ್‌ಪ್ರೆಸ್: ಇದು ಕೊಯಮತ್ತೂರಿನ ಕೈಗಾರಿಕಾ ಕೇಂದ್ರವನ್ನು ಜಾರ್ಖಂಡ್‌ನ ಕಲ್ಲಿದ್ದಲು ವಲಯದೊಂದಿಗೆ ಸಂಪರ್ಕಿಸುವ ಸಾಪ್ತಾಹಿಕ ಸೇವೆಯಾಗಿದೆ. ಪೋತನೂರು- ಕೊಯಮತ್ತೂರು- ಸೇಲಂ-ರೇಣಿಗುಂಟಾ -ವಿಜಯವಾಡ- ಝಾರ್ಸುಗುಡ-ರಾಂಚಿ - ಧನಬಾದ್ ಮಾರ್ಗವಾಗಿ ಸಂಚಾರ ಮಾಡಲಿದೆ. ಇದು ಕೈಗೆಟಕುವ ದರದ ಸ್ಲೀಪರ್ ಮತ್ತು ಜನರಲ್ ಕ್ಲಾಸ್ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಡೈನಾಮಿಕ್ ದರ ಏರಿಕೆ ಇರುವುದಿಲ್ಲ. ದಕ್ಷಿಣ ಮತ್ತು ಪೂರ್ವ ಭಾರತದ ನಡುವೆ ಪ್ರಯಾಣಿಸುವ ವಲಸೆ ಕಾರ್ಮಿಕರು ಮತ್ತು ದೂರದ ಪ್ರಯಾಣಿಕರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಮತ್ತು ಇಂಡಿಗೋ ವಿಶೇಷ ವಿಮಾನಗಳು

ನಾಗರ್‌ಕೋವಿಲ್-ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್: ತಮಿಳುನಾಡಿನ ದಕ್ಷಿಣ ಕರಾವಳಿಯಿಂದ ತೆಲಂಗಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಮೊದಲ ಅಮೃತ್ ಭಾರತ್ ರೈಲು ಇದಾಗಿದೆ. ಇದು ಕನ್ಯಾಕುಮಾರಿಯಿಂದ ಹೈದರಾಬಾದ್‌ನ ಹೊರವಲಯದ ಜಿಲ್ಲೆಗಳವರೆಗೆ ಸೇವೆ ಸಲ್ಲಿಸುತ್ತದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಕುಟುಂಬಗಳನ್ನು ಇದು ಸಂಪರ್ಕಿಸುತ್ತದೆ.

ಎಕ್ಸ್‌ಪ್ರೆಸ್ ರೈಲುಗಳು:

ರಾಮೇಶ್ವರಂ-ಮಂಗಳೂರು ಎಕ್ಸ್‌ಪ್ರೆಸ್ ಮತ್ತು ತಿರುನಲ್ವೇಲಿ-ಮಂಗಳೂರು ಎಕ್ಸ್‌ಪ್ರೆಸ್: ಈ ಎರಡೂ ರೈಲುಗಳು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಂದ ಕೊಯಿಮುತ್ತೂರು ಮೂಲಕ ಕರ್ನಾಟಕದ ಮಂಗಳೂರಿಗೆ ನೇರ ಸಂಪರ್ಕವನ್ನು ಒದಗಿಸುತ್ತವೆ.

ಪ್ಯಾಸೆಂಜರ್ ರೈಲುಗಳು:

ಮೈಲಾಡುತುರೈ-ತಿರುವರೂರು-ಕಾರೈಕುಡಿ ಪ್ಯಾಸೆಂಜರ್: ಇದು ಮೈಲಾಡುತುರೈ, ತಿರುವರೂರು, ತಂಜಾವೂರು, ಪುದುಕ್ಕೊಟ್ಟೈ ಮತ್ತು ಶಿವಗಂಗಾ ಜಿಲ್ಲೆಗಳಿಗೆ ಪ್ರಯೋಜನಕಾರಿಯಾಗಿದೆ.

ಪಾಲಕ್ಕಾಡ್-ಪೊಳ್ಳಾಚಿ ಪ್ಯಾಸೆಂಜರ್: ಇದು ಕೇರಳ ಮತ್ತು ತಮಿಳುನಾಡು ನಡುವಿನ ದೈನಂದಿನ ಪ್ರಯಾಣಿಕರ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುತ್ತದೆ.

ಮಾನವ ವನ್ಯಜೀವಿಗಳ ಸಂಘರ್ಷವನ್ನು ಹತ್ತಿಕ್ಕಲು ಸರಕಾರದ ಹೊಸ ಅಸ್ತ್ರ

ಕೇರಳದಲ್ಲಿ ಮೂಲಸೌಕರ್ಯ ಯೋಜನೆಗಳು:

ಅಮೃತ್ ನಿಲ್ದಾಣಗಳ ಪುನರಾಭಿವೃದ್ಧಿ: ಶೋರನೂರು, ಕುಟ್ಟಿಪ್ಪುರಂ ಮತ್ತು ಚಂಗನಾಶ್ಶೇರಿ ನಿಲ್ದಾಣಗಳನ್ನು ಆಧುನೀಕರಿಸಲಾಗಿದೆ. ಉತ್ತಮ ಪ್ಲಾಟ್‌ಫಾರ್ಮ್‌ಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಉಚಿತ ವೈ-ಫೈ ಮತ್ತು ಸ್ಥಳೀಯ ಕಲೆಯ ಪ್ರೇರಣೆ ಹೊಂದಿದ ಮುಂಭಾಗದ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಇದರ ವೆಚ್ಚ52 ಕೋಟಿ ರೂ.

ಶೋರನೂರು-ನಿಲಂಬೂರು ಲೈನ್ ವಿದ್ಯುದ್ದೀಕರಣ: 65ಕಿಮೀ ಉದ್ದದ ಈ ಕಾರಿಡಾರ್ ಅನ್ನು90 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಿಸಲಾಗಿದೆ. ಇದು ಡೀಸೆಲ್ ಬಳಕೆಯನ್ನು ತಪ್ಪಿಸಿ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ವೇಗದ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.