Thursday, June 12, 2025
Thursday, June 12, 2025

ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ಒಂದಿನ!

ಕಾಡಲ್ಲಿ ಸ್ವಲ್ಪ ಸಮಯ ಕಳೆಯಬೇಕು, ನಗರದ ಜೀವನ ಹೆವಿ ಬೋರ್ ಆಗಿದೆ, ಒಂದು ಸಣ್ಣ ಟ್ರಿಪ್ ಹಾಕ್ಕೊಂಡ್ ಬರಬೇಕು. ನಗರಕ್ಕೆ ಹತ್ತಿರವೇ ಇರುವ ಯಾವುದಾದರೂ ರೆಸಾರ್ಟ್ ಗೆ ಹೋಗಿ ಸಮಯ ಕಳೆಯಬೇಕು ಅಂತ ಆಗಾಗ ಅನಿಸುತ್ತಿದ್ದರೆ ಇದನ್ನು ಖಂಡಿತ ಓದಿ.

ಬೆಂಗಳೂರು ಮೈಸೂರು ಸುತ್ತಮುತ್ತ ಎಷ್ಟೊಂದೆಲ್ಲ ಕಾಡುಗಳಿವೆ. ಆರಾಮವಾಗಿ ಸುತ್ತಾಡಬೇಕು, ವೈಲ್ಡ್ ಲೈಫ್ ಸಫಾರಿ ಮಾಡಬೇಕು, ಹುಲಿ-ಜಿಂಕೆ- ಆನೆ ಹೀಗೆ ಕಾಡು ಪ್ರಾಣಿಗಳ ಫೊಟೋ ತೆಗೆಯಬೇಕು. ಪ್ರಕೃತಿಯ ಜತೆಗೆ ಕನೆಕ್ಟ್ ಆಗಬೇಕು. ಇದಕ್ಕೆಲ್ಲ ತುಂಬಾದಿನ ರಜೆಗಳನ್ನೂ ಕೊಡೋದಿಲ್ಲ. ಒಂದೆರಡು ದಿನದಮಟ್ಟಿಗೆ ಮರೆಯೋಕಾಗದ ಟ್ರಿಪ್ ಮಾಡಬೇಕು. ಒಳ್ಳೆಯ ಊಟ, ಒಳ್ಳೆಯ ನೋಟ, ಒಳ್ಳೆಯ ಪರಿಸರ, ಚೆನ್ನಾಗಿ ಸುತ್ತಾಡಬೇಕು, ಚಿಲ್ ಮಾಡಬೇಕು! ಅಂತ ಅನಿಸಿದಾಗ ಇಲ್ಲೇ ಕಬಿನಿ ಇದೆ ಅನ್ನೋದನ್ನೇ ಮರೆತುಬಿಟ್ರಾ?

ಬೆಳಗ್ಗೆ ಆರಾಮವಾಗಿ ಎದ್ದು, ಬೆಂಗಳೂರಿಂದ ಬಿಟ್ರೆ 12-12.30 ಗಂಟೆಗೆಲ್ಲ ರೆಸಾರ್ಟ್ ಚೆಕ್ಕಿನ್, ಚೆಕ್ಕಿನ್ ಆದಮೇಲೆ ಗೋಲ್ ಘರ್ ಅಲ್ಲಿ ಒಳ್ಳೆಯ ಊಟ, ಆಮೇಲೆ ಟೀ ಅಥವಾ ಕಾಫಿ ಕುಡಿಯುತ್ತಾ ಪಾರ್ಕ್ ಅಲ್ಲಿ ಒಂದು ಸಣ್ಣ ವಾಕಿಂಗ್. ಮಧ್ಯಾಹ್ನ 3.30 ರಿಂದ ಸಂಜೆ 6 ಗಂಟೆಯವರೆಗೆ ಪರಿಸರ ತಜ್ಞರ ಜತೆಗೆ ಒಂದು ಸಫಾರಿ. ಅದು ಕಾಡಲ್ಲೂ ಮಾಡಬಹುದು ಅಥವಾ ನೀರಲ್ಲೂ ಮಾಡಬಹುದು. ಈ ಸಫಾರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ಒಂದು ಸುತ್ತು ಪೂರ್ತಿಯಾಗಿ ನೋಡಿಕೊಂಡು, ಅಲ್ಲಲ್ಲಿ ಕಾಣುವ ಜಿಂಕೆ, ಹುಲಿ, ಚಿರತೆ, ಹೇಗೆ ಹಲವಾರು ಕಾಡುಪ್ರಾಣಿ ಓಡಾಡುವ ದಾರಿಯಲ್ಲೇ ನಾವು ಹೋಗಬಹುದು. ಅದಾದ ಮೇಲೆ ಮತ್ತೆ ಟೀ, ಕಾಫಿ, ಸ್ನಾಕ್ಸ್ ಹಾಗೂ ನಿಮ್ಮ ಸ್ನೇಹಿತರೆಲ್ಲ ಮಾತಾಡುತ್ತಾ ಕಾಲಹರಣ ಮಾಡಬಹುದು. ಅದಾದಮೇಲೆ ಒಂದು ವೈಲ್ಡ್ ಲೈಫ್ ಮೂವಿ ನೋಡಿಕೊಂಡು. ಕ್ಯಾಂಪ್ ಫೈರ್ ನಲ್ಲಿ ಹರಟೆ, ಊಟ, ಮೋಜು ಮಸ್ತಿ. ಇಡೀ ರಾತ್ರಿಯೆಲ್ಲ ಕಾಡಿನ ವಿಸ್ಮಯದ ಬಗ್ಗೆ, ಕಾಡಿನ ಪಿಸುಮಾತನ್ನು ಕೇಳುತ್ತಾ ಮಲಗಿ. ಮತ್ತೆ ಬೆಳಗ್ಗೆ ಅದೇ ಕಾಡು ಮತ್ತೊಂದು ದಿನ, ಮತ್ತೆ ಹಲವು ವಿಸ್ಮಯಗಳು.

kelvin-1

ಬೆಳಗ್ಗೆ ಸೂರ್ಯ ಹುಟ್ಟುವ ಸಮಯಕ್ಕೆ ಎದ್ದು, ಮತ್ತೊಮ್ಮೆ ಟೀ ಕಾಫೀ ಮಾಡಿ, ಪ್ರಕೃತಿಯ ಮಡಿಲಲ್ಲಿ, ಹಕ್ಕಿಗಳ ಶಬ್ದದ ನಡುವೆ, ಆಗಿನ್ನೂ ದಿನ ಶುರುಮಾಡಿದ್ದ ಪರಿಸರದ ಜೊತೆ, ಇನ್ನೂ ನಿದ್ದೆಗಣ್ಣಲ್ಲಿರುವ ಮೊಸಳೆಗಳು, ಸ್ನಾನಕ್ಕೆ ಬರುವ ಆನೆಗಳನ್ನೆಲ್ಲ ನೋಡಿ ನೀವು ಮತ್ತೊಮ್ಮೆ ಜಂಗಲ್ ಸಫಾರಿ ಅಥವಾ ಬೋಟ್ ರೈಡ್ ಮಾಡಬಹುದು.

ಇಷ್ಟೊಂದೆಲ್ಲ ಮಾಡಿ ಮುಗಿಸಿದ ಮೇಲೆ ನೆನಪಿನ ಬುತ್ತಿಯನ್ನು ಹೊತ್ತು ಮನೆಗೆ ಬರೋದಂತು ಗ್ಯಾರಂಟಿ. ಹಾಂ. ಇದಕ್ಕೆಲ್ಲ ಎಲ್ಲಿ ಹೋಗ್ಬೇಕು ಅಂತ ಹೇಳಿರಲೇ ಇಲ್ಲ ಅಲ್ವಾ? ಇದು ಕಬಿನಿಯ ಜಂಗಲ್ ಲಾಡ್ಜ್ ರೆಸಾರ್ಟ್, ಅಥವಾ ಕಬಿನಿ ರಿವರ್ ಲಾಡ್ಜ್. ಬೆಂಗಳೂರು ಮತ್ತು ಮೈಸೂರು ಎರಡಕ್ಕೂ ಸಮೀಪವಿರುವ ಈ ರೆಸಾರ್ಟ್ ಬರೀ ಇಲ್ಲಿಯವರಷ್ಟೇ ಅಲ್ಲ, ದೇಶ ವಿದೇಶದಿಂದ ಎಷ್ಟೋ ಜನ ಬರುತ್ತಿರುತ್ತಾರೆ. ನಿಸರ್ಗದ ಮಧ್ಯೆ ಹಲವು ದಿನಗಳ ಕಾಲ ಕಳೆಯುವವರೂ ಇರುತ್ತಾರೆ. ಪ್ರಾಣಿ ಪಕ್ಷಿಗಳ ಅಧ್ಯಯನವನ್ನೂ ನಡೆಸುವವರು ಇರುತ್ತಾರೆ. ವೈಲ್ಡ್ ಲೈಫ್ ಫೊಟೋಗ್ರಫಿ ಮಾಡುವವರೂ ಇರುತ್ತಾರೆ. ಅಂದಹಾಗೆ ನಮ್ಮ ನಿಮ್ಮ ಥರ ಪ್ರವಾಸಕ್ಕಷ್ಟೇ ಹೋದ ಜನರ ಸಂಖ್ಯೆ ಕಮ್ಮಿ ಇರಲ್ಲ ಬಿಡಿ.

ಕಬಿನಿ ನದಿಯ ತೀರದಲ್ಲಿ – ಪ್ರಕೃತಿ ಪ್ರೀತಿಯ ಪಯಣ

ಬೆಳಗಿನ ಜಾವ ಕಣ್ಣು ತೆರೆಯುವಾಗಲೇ ತೀರಾ ಹೊಸದಾದ ಅನುಭವಕ್ಕೆ ಸಿದ್ಧರಾಗಿ. ಕಾಡು ತನ್ನ ನಿದ್ರೆಯಿಂದ ಎದ್ದು ಜಗತ್ತಿಗೆ ಬಾಗಿಲು ತೆರೆದಾಗ, ನೀವೂ ಅದರದ್ದೇ ಒಂದು ಭಾಗ ಅನ್ನಿಸುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ) ದ ಈ ಕಾಡು ಆನೆ, ಸಂಬಾರ್ ಜಿಂಕೆ, ಚಿರತೆ, ಹಂದಿ, ಕರಡಿ, ಗೌರ್, ಹುಲಿಗಳಂತಹ ಹಲವಾರು ಆಕರ್ಷಕ ವನ್ಯಜೀವಿಗಳ ವಾಸ ಸ್ಥಳವಾಗಿದೆ. ಈ ರೆಸಾರ್ಟ್ ಒಂದು ಕಾಲದಲ್ಲಿ ಮಹಾರಾಜರ ಬೇಟೆಯ ನೆಲೆಯೂ ಆಗಿತ್ತೆಂದರೆ, ಯೋಚಿಸಿ ಒಮ್ಮೆ, ನಿಮ್ಮನ್ನು ನೀವು ರಾಜ ಮಹಾರಾಜ ಅಂತ ಅಂದುಕೊಂಡು ಬಿಲ್ಡಪ್ ತಗೊಬಹುದು, ಬೇಟೆಯಾಡೋಕೆ ಬಿಡಲ್ಲ ಅಷ್ಟೇ!

54 ಎಕರೆಯ ರೆಸಾರ್ಟ್

ಕಬಿನಿ ನದಿಯ ತೀರದಲ್ಲಿ ಹರಡಿರುವ 54 ಎಕರೆಗಳ ಪ್ರಕೃತಿಯ ಘಮವನ್ನು ಈ ರೆಸಾರ್ಟ್ ಇಟ್ಟುಕೊಂಡಿದೆ. ಮೊದಲಿದ್ದ ಬೇಟೆ ಮನೆ ಈಗ ಲಕ್ಷುರಿಯಸ್ ರೆಸಾರ್ಟ್ ಆಗಿ ಪರಿವರ್ತನೆಗೊಂಡಿದ್ದು, – ಮನಮೋಹಕ ವಾಸಸ್ಥಳ, ಬಾರ್, ಜೊತೆಗೆ ಬಿಸಿನೆಸ್ ಮೀಟಿಂಗ್‌ಗಳಿಗೆ ಸ್ಪೆಷಲ್ ಕನ್ಫರೆನ್ಸ್ ರೂಮ್. ಇಲ್ಲಿ ದೇಹ ಮನಸ್ಸಿಗೆ ಚೈತನ್ಯ ಸಿಗುತ್ತೆ.

ಇಲ್ಲಿ ನೀವು ಟೂರಿಸ್ಟ್ ಅಲ್ಲ, ಬದಲಿಗೆ ಎಕ್ಸ್ ಪ್ಲೋರರ್

ಕಬಿನಿಯ ವನ್ಯಜೀವಿ ಸಂಸ್ಕೃತಿಯಲ್ಲಿ ಪ್ರವಾಸಿಗ ಎಂಬ ಪದ ಇಲ್ಲವೇ ಇಲ್ಲ. ಇಲ್ಲಿ ನೀವು ಸಾಹಸಿ. ಇಲ್ಲಿನ ತಿಂಡಿಯು ಸಹ 'ಅನುಭವ'ದ ಭಾಗ. ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ – ಗೋಲ್ ಘರ್ ಎಂಬ ನದಿತೀರದಲ್ಲಿರುವ ಸ್ಥಳದಲ್ಲಿ ಬಫೆ ಊಟ– ಅದರಲ್ಲೂ ಭಾರತೀಯ, ಕಾಂಟಿನೆಂಟಲ್, ಚೈನೀಸ್ ಎಲ್ಲವೂ ಸಿಗುತ್ತದೆ.

ಜೀಪ್ ಸಫಾರಿ, ನದಿ ಬೋಟಿಂಗ್, ಹಾಗೂ ಕ್ಯಾಂಪ್ಫೈರ್

ಬೆಳಗ್ಗೆ ಮತ್ತು ಸಂಜೆ ಸಫಾರಿ, ಅಥವಾ ನದಿಯಲ್ಲಿ ಬೋಟಿಂಗ್ – ಎರಡು ವಿಶೇಷ ಅನುಭವ. ಆನೆಗಳ ಗುಂಪುಗಳು, ಮೊಸಳೆಗಳು, ನೂರಾರು ಬಣ್ಣದ ಹಕ್ಕಿಗಳು – ಈ ನಿಸರ್ಗದ ಈ ವಿಸ್ಮಯದಿಂದಾಗಿ ಮನಸೂರೆಗೊಳ್ಳುತ್ತದೆ. ಇನ್ನೂ ಒಂದು ಹೊಸ ಅನುಭವಕ್ಕೆ – ಬಂಬೂ ಹಾಗೂ ಎಮ್ಮೆ ಚರ್ಮದಿಂದ ಮಾಡಿದ ಕೋರಕಲ್ ಬೋಟಿನಲ್ಲಿ ಸವಾರಿ ಮಾಡಿ. ಅಥವಾ ಮೋಟರ್ ಬೋಟಿನಲ್ಲಿ ಹೋದರೂ ಪರವಾಗಿಲ್ಲ. ಸಂಜೆಯಾದ ಮೇಲೆ ಒಮ್ಮೆಯಾದರೂ ವನ್ಯಜೀವಿ ಛಾಯಚಿತ್ರ ಪ್ರದರ್ಶನ ನೋಡಿ, ನಂತರ ಕ್ಯಾಂಪ್ಫೈರ್ ಹತ್ತಿಸಿ ಹರಟೆ ಹೊಡೆಯುತ್ತಾ ಊಟ ಮಾಡಿ ಸಾಕು. ಇಡೀ ದಿನವೇ ನಿಮಗೊಂದು ಹಬ್ಬ.

ಕಬಿನಿ ಲಾಡ್ಜ್ ಯಾವ ಸಮಯದಲ್ಲಾದರೂ ಆಹ್ಲಾದಕರ. ಆದರೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕಾಡಿನ ನೀರು ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ನದಿತೀರದಲ್ಲಿ ಪ್ರಾಣಿಗಳ ಮೆರವಣಿಗೆ ಕಾಣಬಹುದಾದ ಅತಿದೊಡ್ಡ ಮೇಳ . ಏಷ್ಯಾದ ಆನೆಗಳ ಭಾರೀ ಗುಂಪು! ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಸಗಳಲ್ಲಿ ಮಳೆಗಾಲದಿಂದ ಕಾಡು ಹಸಿರಿನಿಂದ ತುಂಬಿಬಿಡುತ್ತೆ. ಪ್ರಾಣಿಗಳ ದರ್ಶನ ಕಡಿಮೆ ಆದರೆ ಪ್ರಕೃತಿಯ ನೋಟ ಪ್ರೀತಿ ಮಾಡೋವರಿಗೆ ಪರ್ಫೆಕ್ಟ್. ಉಳಿದ ತಿಂಗಳುಗಳಲ್ಲಿ ಸಮಾನ ಶ್ರೇಣಿಯ ಪ್ರಾಣಿ-ಪಕ್ಷಿಗಳ ವೀಕ್ಷಣೆ ಸಾಧ್ಯ.

ಪ್ರತಿಯೊಬ್ಬನೂ ಜೀವನದಲ್ಲಿ ಒಮ್ಮೆ ಈ ಕಬಿನಿಯ ಸಫಾರಿಗೆ ಹೋಗಲೇಬೇಕು. ಇದು ಕೇವಲ ಪ್ರವಾಸವಲ್ಲ, ಇದು ನಿಮ್ಮೊಳಗಿನ ಶಾಂತಿಯನ್ನು ಹುಡುಕುವ ಪಯಣ. ಬನ್ನಿ, ಪ್ರಕೃತಿಯ ತಂಗಾಳಿಗೆ ಮುಡುಪಾಗಿರಿ. ನಿನಗೆ ಬೇಕಾಗಿರೋ ಆ ಅಂತಃಕರಣದ ಆರಾಮ ಇಲ್ಲಿ ಸಿಗುತ್ತೆ.

Kabini-River-Lodge-1

ಹೋಗುವುದು ಹೇಗೆ?

ಮೈಸೂರಿನಿಂದ ಕಬಿನಿಗೆ:

ನೀವು ರೈಲಿನಲ್ಲಿ ಆಗಮಿಸುತ್ತಿದ್ದರೆ, ಮೈಸೂರು ರೈಲ್ವೇ ನಿಲ್ದಾಣದಿಂದ ಕಬಿನಿಯ ಪ್ರಯಾಣಕ್ಕಾಗಿ ಟ್ಯಾಕ್ಸಿ ಬುಕ್ ಮಾಡಿಕೊಳ್ಳಿ.

ಊಟಿಯಿಂದ ಹೊರಡುವವರು ಬಂಡೀಪುರ, ಗುಂಡ್ಲುಪೇಟೆ, ಬೇಗುರು, ನೂಗು ಅಣೆಕಟ್ಟು ಮತ್ತು ಹ್ಯಾಂಡ್ ಪೋಸ್ಟ್ ಸರ್ಕಲ್ ಮೂಲಕ ಬರಬಹುದು. ಅಥವಾ ಉತ್ತಮ ರಸ್ತೆಯಾಗಿರುವ ಮೈಸೂರು ಮಾರ್ಗದಿಂದ ಸಹ ಬರಬಹುದು.

ಮುಂಬೈ, ದೆಹಲಿ, ಕೊಲ್ಕತ್ತಾ, ಹೈದ್ರಾಬಾದ್, ಚೆನ್ನೈ (ಮದ್ರಾಸ್) ಮುಂತಾದ ನಗರಗಳಿಂದ ಬರುತ್ತಿರುವ ಅತಿಥಿಗಳು ಬೆಂಗಳೂರಿನ ಮೂಲಕ ಬರಬಹುದು.

ತಿರುವನಂತಪುರ, ಕೊಚ್ಚಿ ಹಾಗೂ ಕಾಲಿಕಟ್‌ನಿಂದ ಬರುವವರು ಮೈಸೂರಿಗೆ ಮಣಂತವಾಡಿ ಮಾರ್ಗವಾಗಿ ಬಂದು ಸೇರಬಹುದು.

ಮಂಗಳೂರು ಹಾಗೂ ಮಡಿಕೇರಿ ಭಾಗದಿಂದ ಬರುವವರು ಹುಣುಸೂರು, ಎಚ್.ಡಿ. ಕೋಟೆ ಮತ್ತು ಹ್ಯಾಂಡ್ ಪೋಸ್ಟ್ ಸರ್ಕಲ್ ಮಾರ್ಗವಾಗಿ ಬರಬಹುದು.

ರಸ್ತೆಮಾರ್ಗದಿಂದ (By Road)

ಬೆಂಗಳೂರಿನಿಂದ ರಿಸಾರ್ಟ್ ಸುಮಾರು 223 ಕಿಮೀ ದೂರದಲ್ಲಿದೆ ಮತ್ತು ಮೈಸೂರಿನಿಂದ 73 ಕಿಮೀ ದೂರದಲ್ಲಿದೆ. ಈ ಎರಡೂ ನಗರಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿವೆ.

ರೈಲು ಮಾರ್ಗದಿಂದ (By Rail)

ರಿಸಾರ್ಟ್ ಮೈಸೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ಸುಮಾರು 80 ಕಿಮೀ ದೂರದಲ್ಲಿದೆ. ಮೈಸೂರಿನಿಂದ ಭಾರತದ ಪ್ರಮುಖ ನಗರಗಳಿಗೆ ರೈಲು ಸೇವೆಗಳು ಲಭ್ಯವಿವೆ.

ವಿಮಾನಮಾರ್ಗದಿಂದ (By Air)

ಹತ್ತಿರದ ವಿಮಾನ ನಿಲ್ದಾಣ ಮೈಸೂರು ವಿಮಾನ ನಿಲ್ದಾಣವಾಗಿದೆ, ಇದು ಬೆಂಗಳೂರು ಮತ್ತು ಮಂಗಳೂರು ನಗರಗಳಿಗೆ ಹಾರಾಟ ಸೇವೆ ಹೊಂದಿದೆ. ಬೆಂಗಳೂರಿನಿಂದ ಕಬಿನಿಗೆ ಸುಮಾರು 265 ಕಿಮೀ ದೂರವಿದೆ.

ಪ್ಯಾಕೇಜ್ ಗಳು

ಮಹಾರಾಜ ಪ್ಯಾಕೇಜ್

ಈ ಪ್ಯಾಕೇಜ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ನಿಮ್ಮ ವಾಸ್ತವ್ಯವನ್ನು ಅತ್ಯಂತ ಆರಾಮದಾಯಕವಾಗಿ ಕಾಟೇಜ್‌ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ (ಒಟ್ಟು 14 ಕಾಟೇಜ್‌ಗಳು).

ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಬೆಳಗಿನ ಉಪಾಹಾರ
  • ಎರಡು ಜಂಗಲ್ ಸಫಾರಿ (ರೋಡ್ ಮೂಲಕ ಜೀಪ್ ಸಫಾರಿ)
  • ಕೋರಕಲ್ ರೈಡ್ (ಪ್ರಾಚೀನ ದೋಣಿ ಸವಾರಿ)
Boat-Safari

ವೈಸ್ರಾಯ್ ಪ್ಯಾಕೇಜ್

ಈ ಪ್ಯಾಕೇಜ್ ಉತ್ತರ ಅಥವಾ ಪೂರ್ವ ಬಂಗ್ಲೆಗಳಲ್ಲಿ ವಾಸ್ತವ್ಯ ನೀಡುತ್ತದೆ (ಒಟ್ಟು 15 ಕೊಠಡಿಗಳು).

ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ
    • ಮೊದಲ ಸಫಾರಿ: ಬೋಟು ಅಥವಾ ಬಸ್ ಮೂಲಕ (ಲಭ್ಯತೆಗೆ ಅನುಗುಣವಾಗಿ)
    • ಎರಡನೇ ಸಫಾರಿ: ಜೀಪ್ ಮೂಲಕ ನಗರಹೊಳೆ ಅರಣ್ಯ ಪ್ರವೇಶ
  • ಕೋರಕಲ್ ರೈಡ್

ಕಬಿನಿ ಟೆಂಟ್ ಪ್ಯಾಕೇಜ್

ಟೆಂಟೆಡ್ ಕಾಟೇಜ್‌ಗಳಲ್ಲಿ ವಾಸ್ತವ್ಯ (ಒಟ್ಟು 6 ಟೆಂಟ್‌ಗಳು)

ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ

ಒಂದು ಬೋಟು ಅಥವಾ ಬಸ್ ಮೂಲಕ (ಲಭ್ಯತೆಗೆ ಅನುಗುಣವಾಗಿ)

ಇನ್ನೊಂದು ಜೀಪ್ ಮೂಲಕ ನಗರಹೊಳೆ ಪ್ರವೇಶ

ಡಾರ್ಮಿಟರಿ ಪ್ಯಾಕೇಜ್

ಈ ಪ್ಯಾಕೇಜ್ ಸಾಮೂಹಿಕ ವಾಸ್ತವ್ಯಕ್ಕಾಗಿ. ಒಟ್ಟು 10 ಹಂಚಿಕೊಳ್ಳುವ ಹಾಸಿಗೆ ವ್ಯವಸ್ಥೆ ಇದೆ.

ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ

ಒಂದು ಬೋಟು ಮೂಲಕ

ಇನ್ನೊಂದು ವ್ಯಾನ್ ಮೂಲಕ

ಸಂಪರ್ಕ

ರೆಸಾರ್ಟ್ ಸಂಪರ್ಕ ಮಾಹಿತಿ

ಕಬಿನಿ ರಿವರ್ ಲಾಡ್ಜ್

ನಿಸ್ಸಣ ಬೆಲ್ಟೂರು ಪೋಸ್ಟ್,

ಎಚ್.ಡಿ. ಕೋಟೆ ತಾಲ್ಲೂಕು,

ಕರಾಪುರ, ಮೈಸೂರು ಸಮೀಪ,

ಕರ್ನಾಟಕ – 571 114, ಭಾರತ

ವ್ಯವಸ್ಥಾಪಕರು: ಕಾರ್ತಿಕ್ ಎಂ. ವಿ.

📞 ಬುಕಿಂಗ್‌ಗಾಗಿ ಕರೆಮಾಡಿ: 080-40554055

📱 ಸಂಪರ್ಕ ಸಂಖ್ಯೆ: 9449597895, 9449597896

📧 ಇಮೇಲ್ ಐಡಿ: info@junglelodges.com

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...

Read Next

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...