ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...
ಶ್ರೀಮಂತವಾದ ಗತಕಾಲದ ವೈಭವಗಳಿಗೆ ಹೆಸರಾಗಿರುವ ಕಾಸರಗೋಡಿನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಐತಿಹಾಸಿಕ ಕೋಟೆ, ಅರಮನೆ, ದೇವಾಲಯಗಳು, ಇವೆಲ್ಲದರ ಜೊತೆಗೆ ಸದಾ ಅಲೆಗಳ ಸದ್ದು ಮಾಡುತ್ತಾ ಸೂರ್ಯೋದಯ, ಸೂರ್ಯಾಸ್ತಗಳಲ್ಲಿ ಮನೋಹರವಾಗಿ ಕಾಣಿಸಿಕೊಳ್ಳುವ ಕಡಲ ತೀರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.
ನಮ್ಮ ಕಾಸರಗೋಡು.. ಕಾಸರಗೋಡು ನಮಗೇ ಸೇರಿದ್ದು ಅಂತ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಗ್ಗಜಗ್ಗಾಟ ಮಾಡಿ ವರ್ಷಗಳ ನಂತರ ಕೇರಳ ರಾಜ್ಯವು ಕಾಸರಗೋಡನ್ನು ತನ್ನ ಸುಪರ್ದಿಯನ್ನಾಗಿಸಿಕೊಂಡಿದೆ. ಆದರೆ ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳು, ಜಾನಪದ ಕಲೆ, ಆಹಾರ ಇವೆಲ್ಲದರಲ್ಲೂ ಇರುವುದು ಕನ್ನಡದ ಕಂಪು..
ಕೇರಳದ ಗಡಿ ಭಾಗವಾಗಿರುವುದರಿಂದ ಮಲಯಾಳಂ ಭಾಷೆಯನ್ನು ಅನಿವಾರ್ಯವಾಗಿ ರೂಢಿಸಿಕೊಂಡಿರುವ ಇಲ್ಲಿನ ಮಂದಿ, ಅದರ ಜೊತೆಗೆ ಕನ್ನಡ, ತುಳು, ಅರೆಭಾಷೆ, ಹವ್ಯಕ, ಕೊಂಕಣಿ, ಮರಾಠಿ, ಕೋಟ, ಶಿವಳ್ಳಿ, ಬ್ಯಾರಿ ಹೀಗೆ ಅನೇಕ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದವರು. ಬಹು ಭಾಷೆಗಳು, ಆ ಭಾಷೆಗಳ ಸಾಹಿತ್ಯವಂತೂ ಇಲ್ಲಿನ ನೆಲದಲ್ಲಿ ಬೆರೆತುಹೋಗಿದೆ. ಇಷ್ಟೊಂದು ಶ್ರೀಮಂತ ಹಾಗೂ ಗತಕಾಲದ ವೈಭವಗಳಿಗೆ ಹೆಸರು ಮಾಡಿರುವ ಕಾಸರಗೋಡಿನಲ್ಲಿರುವ ಪ್ರವಾಸಿ ತಾಣಗಳು ಹಲವಾರು. ಐತಿಹಾಸಿಕ ಕೋಟೆ, ಅರಮನೆ, ದೇವಾಲಯಗಳು, ಇವೆಲ್ಲದರ ಜೊತೆಗೆ ಸದಾ ಅಲೆಗಳ ಸದ್ದು ಮಾಡುತ್ತಾ ಸೂರ್ಯೋದಯ, ಸೂರ್ಯಾಸ್ತಗಳಲ್ಲಿ ಮನೋಹರವಾಗಿ ಕಾಣಿಸಿಕೊಳ್ಳುವ ಕಡಲ ತೀರಗಳಂತೂ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತವೆ.
ಬೇಕಲಕೋಟೆ:
ಕಾಸರಗೋಡಿಗೆ ಬರುವ ಪ್ರವಾಸಿಗರು ಬೇಕಲಕೋಟೆಗೆ ಭೇಟಿ ನೀಡದಿದ್ದರೆ ಆ ಪ್ರವಾಸವೇ ಪೂರ್ಣವೆನ್ನಿಸದು. ಸುಮಾರು 15ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಕೋಟೆಯಲ್ಲಿ ಅರಮನೆಯ ಕುರುಹುಗಳೇನೂ ಇಲ್ಲವಾದರೂ, ರಕ್ಷಣೆಗಾಗಿ ಈ ಕೋಟೆಯ ನಿರ್ಮಾಣವಾಗಿದೆ. ಕೋಟೆಯ ಮುಖ್ಯದ್ವಾರದಲ್ಲಿರುವ ಹನುಮಂತನ ಗುಡಿ, ಕೋಟೆಯೊಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗ, ವೀಕ್ಷಣಾ ಗೋಪುರ, ಫಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಐತಿಹ್ಯವನ್ನು ಹೊಂದಿರುವ ಈ ಕೋಟೆಗೆ ಭೇಟಿ ನೀಡಲು ಬೆಳಗ್ಗಿನ ಸಮಯವೇ ಸೂಕ್ತ.
ರಾಣೀಪುರಂ:
ಕಾಸರಗೋಡು ಆಸುಪಾಸಿನಲ್ಲಿ ಚಾರಣಪ್ರಿಯರು ತಪ್ಪದೇ ಭೇಟಿ ನೀಡಬಹುದಾದ ಸ್ಥಳವೆಂದರೆ ಅದು ರಾಣಿಪುರಂ. ಎರಡು ಕಿಲೋ ಮೀಟರ್ ಕಿರಿದಾದ ಹಾದಿಯನ್ನು ಏರುತ್ತಾ 750 ಮೀಟರ್ ಎತ್ತರದಲ್ಲಿರುವ ರಾಣಿಪುರಂ ತಲುಪುವ ಟ್ರಕ್ಕಿಂಗ್ ಅನುಭವ ನೀವೇ ಒಮ್ಮೆ ಭೇಟಿ ಕೊಟ್ಟು ತಿಳಿಯಬೇಕಿದೆ.
ಪರಪ್ಪ ವನ್ಯ ಜೀವಿ ಅಭಯಾರಣ್ಯ:
ಕಾಸರಗೋಡಿನಿಂದ ಸುಮಾರು 45 ಕಿಲೋ ಮಿಟರ್ ದೂರದ ಚೆರ್ವತ್ತೂರಿನಲ್ಲಿರುವ ಪರಪ್ಪ ವನ್ಯ ಜೀವಿ ಅಭಯಾರಣ್ಯವು ಆನೆ, ಸಿಂಗಳಿಕ, ಮಲಬಾರ್ ದೈತ್ಯ ಅಳಿಲು, ಭಾರತೀಯ ಪ್ಯಾಂಗೋಲಿನ್(ಚಿಪ್ಪುಹಂದಿ), ಹಾರ್ನ್ ಬೆಲ್ಗಳು, ನವಿಲು ಸೇರಿದಂತೆ ಹಲವು ಪಕ್ಷಿ ಪ್ರಾಣಿಗಳಿಗ ವಾಸಸ್ಥಾನವಾಗಿದೆ. ನಿತ್ಯ ಹರಿದ್ವರ್ಣದ ಈ ಬೀಡು ಅನೇಕ ಬಗೆಯ ಔಷಧೀಯ ಸಸ್ಯಗಳ ತಾಣವೂ ಹೌದು. ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಉತ್ತಮ ಸಮಯವಾಗಿದ್ದು, 20 ರೂಪಾಯಿ ಪ್ರವೇಶ ಶುಲ್ಕವನ್ನು ತೆರಬೇಕಾಗುತ್ತದೆ.
ಮಧೂರು:
ತುಳುನಾಡಿನ ಪ್ರಮುಖ ಗಣಪತಿ ದೇವಾಲಯಗಳ ಪೈಕಿ ಕಾಸರಗೋಡಿನಿಂದ 7 ಕಿಲೋ ಮೀಟರ್ ದೂರದಲ್ಲಿರುವ ಮಧೂರು ದೇವಸ್ಥಾನ ಪ್ರಮುಖವಾದುದು. ಇಲ್ಲಿ ಗಣಪತಿ ಹಾಗೂ ಶಿವ ಮೂಲ ಆರಾಧನಾ ಮೂರ್ತಿಯಾಗಿದ್ದು, ಕೇರಳ ಮಾತ್ರವಲ್ಲದೇ ಕರ್ನಾಟಕದಿಂದಲೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ.

ಮಲ್ಲ ದುರ್ಗಾಪರಮೇಶ್ವರಿ ದೇಗುಲ:
ಕರಾವಳಿಯ ಪ್ರಭಾವಶಾಲಿ ದೇವಿ ದೇಗುಲಗಳ ಪೈಕಿ ಕಾಸರಗೋಡು ಸಮೀಪದ ಮಲ್ಲದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯವೂ ಒಂದು. ಸರಿಸುಮಾರು 100 ವರ್ಷಗಳ ಹಳೆಯ ಈ ದೇವಾಲಯಕ್ಕೆ ಕಂಕಣ ಭಾಗ್ಯವನ್ನು ಕೋರಿ ಹರಕೆ ಹೊತ್ತುಕೊಳ್ಳುವ ಭಕ್ತರು, ಮಕ್ಕಳಾಗದ ಮಂದಿ, ಮಕ್ಕಳ ಅನ್ನಪ್ರಾಶನ ಮಾಡಿಸಿಕೊಳ್ಳುವ ಸಲುವಾಗಿ, ರೋಗ ರುಜಿನಗಳಿಂದ ಮುಕ್ತಿ ಹೊಂದುವ ಸಲುವಾಗಿಯೂ ಭಕ್ತರು ಬರುತ್ತಾರೆ. ಪ್ರವಾಸದ ನಡುವೆ ಮಲ್ಲ ದುರ್ಗಾದೇವಿಯ ಪ್ರಸಾದ ಸ್ವೀಕರಿಸಿ, ಮುಂದಕ್ಕೆ ಹೋಗಬಹುದು.
ನೀಲೇಶ್ವರಂ:
ಕಾಸರಗೋಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ನೀಲೇಶ್ವರಂ ಕಾಸರಗೋಡಿನ ಸಾಂಸ್ಕೃತಿಕ ರಾಜಧಾನಿಯೆಂದೂ ಕರೆಸಿಕೊಂಡಿದೆ. ಶಿವನ ನಾಡು ಎಂದು ಪ್ರಖ್ಯಾತವಾಗಿರುವ ನೀಲೇಶ್ವರದಲ್ಲಿ ಕೋಟೆ, ಶತಮಾನಗಳ ಹಿಂದಿನ ದೇವಾಲಯವೂ ಇದ್ದು ಪ್ರವಾಸದಲ್ಲಿ ಒಂದು ದಿನ ಸಲೀಸಾಗಿಯೇ ಕಳೆದುಹೋಗುತ್ತದೆ.
ಕೊಟ್ಟಂಚೇರಿ ಬೆಟ್ಟ :
ಸಾಹಸಿಗರು ನೀವಾದರೆ ಕಾಸರಗೋಡಿನಲ್ಲಿ ನೀವು ತಪ್ಪದೇ ಭೇಟಿ ನೀಡಬೇಕಿರುವ ಸ್ಥಳ ಕೊನ್ನನಾಡ್ ಬಳಿಯ ಸುಂದರ ಮಳೆಕಾಡು ಕೊಟ್ಟಂಚೇರಿ ಬೆಟ್ಟಗಳು. ಚಾರಣಿಗರ ನೆಚ್ಚಿನ ಈ ಬೆಟ್ಟ ರಾಣಿಪುರಂ ವನ್ಯಜೀವಿ ಅಭಯಾರಣ್ಯದ ವಿಸ್ತರಣೆಯಾಗಿದೆ. ಕೊಡೈಕೆನಾಲ್ ಸೌಂದರ್ಯವನ್ನು ಹೋಲುವ ಈ ಬೆಟ್ಟಕ್ಕೆ ಪ್ರವಾಸಿಗರ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಅನಂತಪುರ ದೇವಸ್ಥಾನ:
ಅನಂತಪುರದ ಅನಂತಪದ್ಮನಾಭ ದೇವಾಲಯ ಸರೋವರ ದೇವಾಲಯವೆಂದೇ ಖ್ಯಾತಿಗೊಂಡಿದೆ. ಒಂಭತ್ತನೇ ಶತಮಾನದ ಈ ಆಕರ್ಷಕ ಹಿಂದೂ ದೇವಾಲಯ, ವಿಷ್ಣುವಿಗೆ ಸಮರ್ಪಿತವಾಗಿದೆ. ಇಲ್ಲಿನ ಕೊಳದಲ್ಲಿ ದೇವಾಲಯದ ರಕ್ಷಕನೆಂದು ಕರೆಸಿಕೊಳ್ಳುವ ಮೊಸಳೆಯೊಂದು ವಾಸವಾಗಿದ್ದು ಪೂಜೆಯ ನಂತರ ಪ್ರಸಾದ ಸೇವನೆಗಾಗಿ ಸರೋವರದಿಂದ ಹೊರಬರುತ್ತವೆಯಾದರೂ ಭಕ್ತರಿಗೆ ಯಾವುದೇ ತೊಂದರೆಯನ್ನು ಮಾಡಿಲ್ಲ. ಈ ದೇವಾಲಯದ ಬಲ ಮೂಲೆಯಲ್ಲಿರುವ ಗುಹೆಯನ್ನು ಹಿಂದೆ ತಿರುವನಂತಪುರ ಅನಂತ ಪದ್ಮನಾಭ ದೇಗುಲಕ್ಕೆ ಹೋಗುವ ದಾರಿಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಒಟ್ಟಿನಲ್ಲಿ ಕಾಸರಗೋಡಿನ ಹಿಡನ್ ಜೆಮ್ ಗಳಲ್ಲಿ ಇದೂ ಕೂಡ ಪ್ರಮುಖವಾದುದು.

ಚಂದ್ರಗಿರಿ ಕೋಟೆ:
ಕಾಸರಗೋಡಿನಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿ ಚಂದ್ರಗಿರಿ ನದಿಯ ದಡದಲ್ಲಿರುವ ಕೋಟೆಯಿದು. ಕೇರಳ ಮತ್ತು ತುಳುವ ಸಾಮ್ರಾಜ್ಯದ ನಡುವಿನ ಸಾಂಪ್ರದಾಯಿಕ ಗಡಿಯನ್ನು ಗುರುತಿಸುವಂತಿರುವ ಈ ಕೋಟೆಯ ಎರಡೂ ಬದಿಗಳು ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿವೆ. 17 ಶತಮಾನದಲ್ಲಿ ನಿರ್ಮಾಣಗೊಂಡಿರುವ ಚಂದ್ರಗಿರಿ ಕೋಟೆ, ಸಮುದ್ರಮಟ್ಟದಿಂದ 150 ಅಡಿ ಎತ್ತರದಲ್ಲಿದೆ.
ಪೊಸಡಿಗುಂಪೆ:
ಪ್ರವಾಸಿ ಕೇಂದ್ರವಾಗಿ ಅಷ್ಟಾಗಿ ಅಭಿವೃದ್ಧಿಹೊಂದದಿದ್ದರೂ ಪೊಸಡಿಗುಂಪೆ ಎಂಬ ಈ ಕಿರು ಗಿರಿಧಾಮವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಸಮುದ್ರಮಟ್ಟದಿಂದ ಸುಮಾರು 1059 ಅಡಿ ಎತ್ತರದಲ್ಲಿ ಮೂರು ಗುಡ್ಡಗಳು ಸೇರಿದಂತಿರುವ ಈ ಗಿರಿಧಾಮ, ಚಾರಣಪ್ರಿಯರಿಗೆ ಮುದ ನೀಡುವಂತಿದೆ. ಸೂರ್ಯೋದಯ, ಸೂರ್ಯಾಸ್ತವನ್ನು ನೋಡಲು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಇಲ್ಲಿ ಅನೇಕ ಮಲಯಾಳಂನಲ್ಲಿ ಚಿತ್ರಗಳ ಚಿತ್ರೀಕರಣವನ್ನೂ ಮಾಡಲಾಗಿದೆ.
ಕಾಸರಗೋಡಿನ ಆಸುಪಾಸಿನಲ್ಲಿ ಇವಿಷ್ಟೇ ಅಲ್ಲದೆ ಆರಿಕ್ಕಾಡಿ ಕೋಟೆ, ಮಾಯಿಪ್ಪಾಡಿ ಅರಮನೆ ಹೀಗೆ ಎಲೆಮರೆ ಕಾಯಿಯಂತಿರುವ ಇನ್ನೂ ಅನೇಕ ಪ್ರವಾಸಿ ತಾಣಗಳಿದ್ದು, ಗಡಿನಾಡಿಗೆ ಭೇಟಿ ಕೊಟ್ಟಾಗ ತಪ್ಪದೇ ಇಲ್ಲಿಗೊಮ್ಮೆ ಹೋಗಿಬನ್ನಿ.