ಕಡಿಮೆ ದರದಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡುವ ವಿಶಿಷ್ಟ ಬಸ್ಸುಗಳು
ಮಧ್ಯಮವರ್ಗದವರು ಕಡಿಮೆ ಖರ್ಚಿನಲ್ಲಿ ಕುಟುಂಬದ ಜೊತೆಗೆ ಪ್ರವಾಸಕ್ಕೆ ತೆರಳಲು ಮತ್ತು ಉದ್ಯೋಗ ನಿಮಿತ್ತ ಒಂದೆರಡು ದಿನ ಬೇರೆಡೆಗಳಲ್ಲಿ ಉಳಿದುಕೊಳ್ಳಲು ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಕೇರಳದ ಮುನ್ನಾರ್ನಲ್ಲಿ ಬಸ್ ಲಾಡ್ಜ್ ಯೋಜನೆಯನ್ನ ವರ್ಷಗಳ ಹಿಂದೆಯೇ ಜಾರಿಗೆ ತಂದಿದೆ. -ಸಂತೋಷ್ ರಾವ್ ಪೆರ್ಮುಡ
ನಮ್ಮ ಸ್ವಂತ ಊರನ್ನು ಬಿಟ್ಟು ಕೆಲಸ ನಿಮಿತ್ತ ಅಥವಾ ಪ್ರವಾಸ ನಿಮಿತ್ತ ಬೇರೆಡೆಗೆ ತೆರಳಿ ಅಲ್ಲಿ ಉಳಿದುಕೊಳ್ಳಬೇಕಾಗಿ ಬಂದಾಗ ಎಲ್ಲರನ್ನೂ ಬಹುವಾಗಿ ಕಾಡುವ ಸಮಸ್ಯೆಯೆಂದರೆ ಎಲ್ಲಿ ಉಳಿದುಕೊಳ್ಳುವುದು? ಯಾವ ರೀತಿಯ ಹೊಟೇಲ್ ಉತ್ತಮ? ಆ ಸ್ಥಳದಲ್ಲಿ ಮಿತದರದ ಹೊಟೇಲ್ಗಳು ಇವೆಯೇ ಎನ್ನುವುದು. ಸಾಮಾನ್ಯವಾಗಿ ಮಹಾನಗರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಇರುವ ಲಾಡ್ಜ್ ಗಳು ಇತರ ಸಾಮಾನ್ಯ ಸ್ಥಳಗಳ ಲಾಡ್ಜ್ ಗಳ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಗ್ರಾಹಕರಿಗೆ ವಿಧಿಸುತ್ತವೆ. ಈ ಕಾರಣದಿಂದಾಗಿ ಕಡಿಮೆ ಖರ್ಚಿನಲ್ಲಿ ಕುಟುಂಬದ ಜೊತೆಗೆ ಪ್ರವಾಸಕ್ಕೆ ತೆರಳಲು ಮತ್ತು ಉದ್ಯೋಗ ನಿಮಿತ್ತ ಒಂದೆರಡು ದಿನ ಬೇರೆಡೆಗಳಲ್ಲಿ ಉಳಿದುಕೊಳ್ಳಲು ಇಚ್ಛಿಸುವವರು ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.
ಇಂತಹ ಜನರಿಗಾಗಿ ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಮುನ್ನಾರ್ನಲ್ಲಿ ವಿನೂತನವಾದ ಯೋಜನೆಯನ್ನು ಜಾರಿಗೆ ತಂದಿದೆ. ಮುನ್ನಾರ್ಗೆ ಭಾರತದ ವಿವದ ರಾಜ್ಯಗಳಿಂದ ಅಷ್ಟೇ ಅಲ್ಲದೆ ವಿದೇಶದಿಂದಲೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಮುನ್ನಾರ್ಗೆ ಬರುವ ಪ್ರವಾಸಿಗರು ಅಲ್ಲಿ ಒಂದೆರಡು ದಿನ ಉಳಿದುಕೊಂಡು ಅಲ್ಲಿನ ವಿವಿಧ ಪ್ರವಾಸಿ ತಾಣಗಳನ್ನು ಭೇಟಿ ನೀಡಿ ಹೋಗುತ್ತಾರೆ. ಹೀಗೆ ಅಲ್ಲಿಗೆ ಬರುವ ಪ್ರವಾಸಿಗರಿಂದ ಅಲ್ಲಿನ ಲಾಡ್ಜ್ ಗಳು ದೊಡ್ಡ ಮೊತ್ತದ ಬಾಡಿಗೆಯನ್ನು ವಿಧಿಸುತ್ತಿರುವುದರಿಂದ ಅಲ್ಲಿ ಮಧ್ಯಮ ವರ್ಗದ ಜನರಿಗೆ ಉಳಿದುಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಗಮನಿಸಿದ ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಅದಕ್ಕಾಗಿ ಮುನ್ನಾರ್ ನಲ್ಲಿ ಬಸ್ ಲಾಡ್ಜ್ ಸೌಲಭ್ಯವನ್ನು ಜಾರಿಗೆ ತಂದಿದೆ. ಅಲ್ಲಿ ಹೆಸರಿಗೆ ಸರಿಯಾಗಿ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ಗಳನ್ನು ಇಲ್ಲಿ ಲಾಡ್ಗಿಜ್ ಗಳಾಗಿ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೇರಳದ ರಸ್ತೆ ಸಾರಿಗೆ ನಿಗಮವು ಮಾಡಿದೆ.

ಅಲ್ಲಿನ ಲಾಡ್ಜ್ ಗಳು ದುಬಾರಿ ಶುಲ್ಕವನ್ನು ಪಾವತಿಸಿ ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೇ ಇರುವವರು ಈ ಬಸ್ ಲಾಡ್ಜ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಲು ಅತ್ಯಂತ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಲಾಡ್ಜ್ ಗಳಾಗಿ ಮಾರ್ಪಡಿಸಲಾದ ಬಸ್ಗಳು ಸಾಮಾನ್ಯ ಬಸ್ಸುಗಳಾಗಿರದೆ ಬದಲಿಗೆ ಸ್ಲೀಪರ್ ಬಸ್ಗಳು. ಈ ಕಾರಣದಿಂದಾಗಿ ಪ್ರವಾಸಿಗರು ಈ ಬಸ್ಗಳಲ್ಲಿ ಆರಾಮವಾಗಿ ಮಲಗಲು ಸಾಧ್ಯವಾಗಲಿದ್ದು, ಈ ಬಸ್ಗಳಲ್ಲಿ ಮೊಬೈಲ್ ಚಾರ್ಜಿಂಗ್ ಸೌಲಭ್ಯವನ್ನೂ ಒದಗಿಸಲಾಗಿದೆ. ಇಲ್ಲಿಗೆ ಹೊರಗಿನ ಹೊಟೇಲ್ಗಳಿಂದ ಊಟ ಮತ್ತು ತಿಂಡಿಯನ್ನು ತಂದು ಬಸ್ ಲಾಡ್ಜ್ ಒಳಗೆ ಕುಳಿತು ತಿನ್ನಬಹುದು.
ಬಸ್ ಲಾಡ್ಜ್ ಒಳಗೆ ಇರುವ ಸೌಲಭ್ಯಗಳು:
ಈ ಬಸ್ ಲಾಡ್ಜ್ ಒಳಗಡೆ ಉಳಿದುಕೊಳ್ಳುವ ಗ್ರಾಹಕರು ಕುಳಿತುಕೊಳ್ಳಲು ಕುರ್ಚಿಗಳು, ಊಟ ಮಾಡಲು ಟೇಬಲ್, ಕುಡಿಯುವ ನೀರು ಹಾಗೂ ಕೈ ತೊಳೆಯುವ ಬೇಸಿನ್ ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಈ ಬಸ್ ಲಾಡ್ಜ್ ನಲ್ಲಿ ಹವಾನಿಯಂತ್ರಣ (ಎ.ಸಿ) ಸೌಲಭ್ಯವನ್ನೂ ಒದಗಿಸಲಾಗಿದೆ. ಮುನ್ನಾರ್ನಲ್ಲಿ ವಿಪರೀತ ಚಳಿ ಇರುವುದರಿಂದ ಅಲ್ಲಿನ ಹವಾಮಾನಕ್ಕೆ ಎ.ಸಿ ಅವಶ್ಯವಿಲ್ಲದೇ ಇದ್ದರೂ ಈ ವಿಭಿನ್ನ ಸೌಲಭ್ಯವನ್ನು ಗ್ರಾಹಕರಿಗಾಗಿ ನೀಡಲಾಗಿದೆ.

ಇಂತಹ ಒಂದು ಬಸ್ ಲಾಡ್ಜ್ ನಲ್ಲಿ ಒಮ್ಮೆಗೆ ಗರಿಷ್ಠ 16 ಮಂದಿ ಉಳಿದುಕೊಳ್ಳಲು ಅವಕಾಶವಿದೆ. ಪ್ರಾಯೋಗಿಕವಾಗಿ ಸದ್ಯಕ್ಕೆ ಇಂತಹ ಒಟ್ಟು ಎರಡು ಹವಾನಿಯಂತ್ರಿತ ಬಸ್ಸುಗಳು ಈ ಸೇವೆಯನ್ನು ನೀಡುತ್ತಿದ್ದು, ಈ ಎರಡೂ ಬಸ್ಸುಗಳಲ್ಲಿ ತಲಾ 16 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪ್ರಾಯೋಗಿಕ ಸೇವೆಗೆ ಪ್ರವಾಸಿಗರಿಂದ ಧನಾತ್ಮಕವಾದ ಪ್ರತಿಕ್ರಿಯೆಯು ದೊರೆತಿದೆ. ವಾರದ ರಜಾ ದಿನಗಳಲ್ಲಿ ಮತ್ತು ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ ಈ ಬಸ್ ಲಾಡ್ಜ್ ನ ಎಲ್ಲಾ ಹಾಸಿಗೆಗಳು ಭರ್ತಿಯಾಗಿರುತ್ತವೆ. ಈ ಬೆಳವಣಿಗೆಯನ್ನು ಗಮನಿಸಿದ ಕೇರಳ ರಸ್ತೆ ಸಾರಿಗೆ ನಿಗಮವು ಮತ್ತಷ್ಟು ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ಈ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ಸೇವೆಗೆ ಲಭ್ಯವಿರುವ ಎರಡು ಲಾಡ್ಜ್ ಬಸ್ಗಳನ್ನು ಮುನ್ನಾರ್ನ ಡಿಪೋದಲ್ಲಿ ನಿಲ್ಲಿಸಲಾಗಿದ್ದು, ಪ್ರವಾಸಿಗರು ಅಲ್ಲಿಗೆ ತೆರಳಿ ಈ ಸೇವೆಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಈ ಬಸ್ಗಳಲ್ಲಿ ಶೌಚಾಲಯದ ಸೌಲಭ್ಯ ಲಭ್ಯವಿಲ್ಲವಾದರೂ ಅಲ್ಲಿನ ಡಿಪೋದಲ್ಲಿ ಇರುವ ಶೌಚಾಲಯಗಳನ್ನು ಗ್ರಾಹಕರು ಬಳಸಿಕೊಳ್ಳಲು ಅವಕಾಶವಿದೆ. ಪ್ರವಾಸಿಗರು ತಮ್ಮ ಲಗೇಜ್ ಬ್ಯಾಗ್ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಈ ಬಸ್ ಲಾಡ್ಜ್ ನಲ್ಲಿ ಪ್ರತ್ಯೇಕ ಸೌಲಭ್ಯವಿದೆ. ಈ ಬಸ್ ನಲ್ಲಿ ಉಳಿದುಕೊಳ್ಳಲು ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ರೂ.100/- ಶುಲ್ಕವನ್ನು ನಿಗದಿಗೊಳಿಸಲಾಗಿದ್ದು, ಐದು ಜನರ ಕುಟುಂಬಕ್ಕೆ ರೂ.500/- ಶುಲ್ಕವನ್ನು ವಿಧಿಸಲಾಗುತ್ತದೆ.
ಬಾಡಿಗೆಗೆ ಪಡೆದುಕೊಳ್ಳುವುದು ಹೇಗೆ?
- ಪ್ರತಿ ಹಾಸಿಗೆಯನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಮರುದಿನ ಮಧ್ಯಾಹ್ನದವರೆಗೆ ಕಾಯ್ದಿರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಾಗಿ 100 ರೂಪಾಯಿ ಬಾಡಿಗೆ ಮತ್ತು ಬಾಡಿಗೆಗೆ ಸಮನಾದ ಮೊತ್ತವಾದ 100 ರೂಪಾಯಿಯನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕು. ಪ್ರವಾಸಿಗರ ದೊಡ್ಡ ತಂಡವು ಸಂಪೂರ್ಣ ಸ್ಲೀಪರ್ ಬಸ್ನ್ನು ಕಾಯ್ದಿರಿಸಿಕೊಳ್ಳಲೂ ಅವಕಾಶವಿದ್ದು, ಮುನಾರ್ನಲ್ಲಿರುವ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿರುವ ನವೀಕೃತ ಶೌಚಾಲಯ ಸಂಕೀರ್ಣವನ್ನು ಗ್ರಾಹಕರು ಬಳಸಿಕೊಳ್ಳಬಹುದು. ಈ ಬಸ್ನಲ್ಲಿ ಉಳಿದುಕೊಳ್ಳುವವರಿಗೆ ಆಹಾರವನ್ನು ಒದಗಿಸಲು ಅಲ್ಲೇ ಸಮೀಪದಲ್ಲಿ ಇರುವ ಕೆಲವು ರೆಸ್ಟೋರೆಂಟ್ಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
- ಪ್ರತೀ ದಿನ ಮತ್ತು ಬಸ್ ಲಾಡ್ಜನ್ನು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸಾರಿಗೆ ನಿಗಮವು ಇಬ್ಬರು ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿದೆ. ಮತ್ತು ಈ ಇಬ್ಬರು, ಗ್ರಾಹಕರ ಲಗ್ಗೇಜುಗಳನ್ನು ನಿರ್ವಹಿಸುವುದರೊಂದಿಗೆ ಗ್ರಾಹಕರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಮೀಪ್ ರೆಷ್ಟೋರೆಂಟ್ಗಳಿಂದ ತಂದು ಒದಗಿಸುತ್ತಾರೆ.

- ಗ್ರಾಹಕರು ತಮ್ಮ ಕೊಠಡಿಗಳನ್ನು ತೆರವು ಮಾಡಿದ ನಂತರ ಪೂರ್ತಿ ಬಸ್ ಲಾಡ್ಜನ್ನು ಸ್ವಚ್ಛಗೊಳಿಸಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ. ಈ ಬಸ್ ಲಾಡ್ಜ್ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲು ದೂರವಾಣಿ ಮೂಲಕ: 9447813851, 04865230201 ಅವಕಾಶವನ್ನು ನೀಡಲಾಗಿದೆ. ಈ ಬಸ್ ಲಾಡ್ಜ್ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನವನ್ನು ನೀಡಲು ಕೆರಳ ರಾಜ್ಯ ರಸ್ತೆ ಸಾರಿಗೆ ನಿಗಮವು ಗ್ರಾಹಕರನ್ನು ಕಳುಹಿಸಿಕೊಡುವ ಯಾ ಮುಂಗಡ ಕಾಯ್ದಿರಿಸುವ ಏಜೆಂಟರಿಗೆ 10% ಕಮಿಷನ್ ಸಹಿತ ನೀಡುತ್ತದೆ. ಲಾಕ್ಡೌನ್ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಇಲ್ಲದೇ ಕಾಯುತ್ತಿದ್ದ ಪ್ರಯಾಣಿಕರು ಅಲ್ಲಿನ ಅಸಮರ್ಪಕ ಸೌಲಭ್ಯಗಳ ಕುರಿತ ಪ್ರಯಾಣಿಕರ ದೂರುಗಳನ್ನು ಗಮನಿಸಿದ ಕೆರಳ ರಾಜ್ಯ ಸಾರಿಗೆ ನಿಗಮವು ತನ್ನ ಹವಾನಿಯಂತ್ರಿತ ಸ್ಲೀಪರ್ ಬಸ್ಗಳನ್ನು ಲಾಡ್ಜ್ ಗಳಾಗಿ ಪರಿವರ್ತಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿತು.
ಹೋಟೆಲ್ಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾದ ಹಾಗೂ ಲಾಡ್ಜ್ ಗಳು ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಸನ್ನಿವೇಶದಲ್ಲಿ ಮುನ್ನಾರ್ನಂತಹ ಜಗತ್ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕಡಿಮೆ ವೆಚ್ಚದಲ್ಲಿ ಉಳಿದುಕೊಳ್ಳಲು ಬಯಸುವವರಿಗೆ ಈ ಯೋಜನೆಯು ವರದಾನವಾಗಿದೆ. ಇದು ಇತರ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳೂ ಇಂತಹ ಸೇವೆಯನ್ನು ನೀಡಲು ಮುಂದೆ ಬರುವಂತೆ ಮಾಡಬಹುದು.