ಉಡುಪಿಯಲ್ಲಿದೆ ಪುರಾತನ ಶಿವ ದೇವಾಲಯಗಳು: ಅಲ್ಲಿನ ವಿಶೇಷತೆ ಏನು?
ಉಡುಪಿಯಲ್ಲಿ ಪುರಾಣ ಪ್ರಸಿದ್ಧ ಎರಡು ಶಿವ ದೇವಾಲಯಗಳಿವೆ. ಅಲ್ಲಿರುವ ಅನಂತೇಶ್ವರ ದೇವಾಲಯ ಮತ್ತು ಚಂದ್ರಮೌಳೀಶ್ವರ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಶ್ರೀಕೃಷ್ಣನ ದರ್ಶನ ಮಾಡಿದವರು ಶಿವನ ದರ್ಶನ ಮಾಡಲೇಬೇಕೆಂಬ ಪ್ರತೀತಿಯಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನೆಲೆಗೊಂಡಿರುವ ಉಡುಪಿ ಜಿಲ್ಲೆಯಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಅದರಲ್ಲೂ ಉಡುಪಿಯ ಹೃದಯ ಭಾಗದಲ್ಲಿರುವ ಶ್ರೀ ಕೃಷ್ಣ ಮಠವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಮಠವನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದಾರೆ. ಈ ದೇವಾಲಯದ ಸುತ್ತಲೂ ಅಷ್ಟ ಮಠಗಳನ್ನು ಸ್ಥಾಪಿಸಲಾಗಿದೆ. ವರ್ಷವಿಡೀ ಲಕ್ಷಾಂತರ ಭಕ್ತರು ಶ್ರೀಕೃಷ್ಣನ ದರ್ಶನಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಅಂದಹಾಗೆ ಉಡುಪಿಯಲ್ಲಿ ಶಿವನ ಎರಡು ಪುರಾತನ ದೇವಾಲಯಗಳಿವೆ. ಅನಂತೇಶ್ವರ ದೇವಾಲಯ ಮತ್ತು ಚಂದ್ರಮೌಳೀಶ್ವರ ದೇವಾಲಯವೇ ಶೈವರಿಗೆ ಸಮರ್ಪಿತವಾದ ದೇವಾಲಯವಾಗಿದೆ. ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡುವ ಮೊದಲು ಈ ಎರಡು ದೇವಾಲಯಗಳಿಗೆ ಭೇಟಿ ನೀಡಬೇಕು ಎಂಬ ಪ್ರತೀತಿಯೂ ಇದೆ.
ದಂತಕತೆ ಹೇಳುವುದೇನು?
ಈ ದೇವಾಲಯಗಳ ನಿರ್ಮಾಣದ ಹಿಂದೆ ಪ್ರಸಿದ್ಧ ದಂತಕತೆಯೊಂದಿದೆ. ಚಂದ್ರನು ದಕ್ಷ ಪ್ರಜಾಪತಿಯ 27 ಪುತ್ರಿಯರನ್ನು ಮದುವೆಯಾಗುತ್ತಾನೆ. ದಕ್ಷ ಪ್ರಜಾಪತಿಯ 27 ಹೆಣ್ಣುಮಕ್ಕಳು 27 ನಕ್ಷತ್ರಪುಂಜಗಳನ್ನು ಸಂಕೇತಿಸುತ್ತಾರೆ. ಆ 27 ಪತ್ನಿಯರಲ್ಲಿ ಚಂದ್ರನು ರೋಹಿಣಿಯ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿದ್ದನು, ಇದರಿಂದಾಗಿ ಅವನು ತನ್ನ ಉಳಿದ 26 ಹೆಂಡತಿಯರನ್ನು ನಿರ್ಲಕ್ಷಿಸುತ್ತಾನೆ. ಚಂದ್ರನ 26 ಹೆಂಡತಿಯರು ತಮ್ಮ ತಂದೆ ದಕ್ಷನ ಬಳಿ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ. ದಕ್ಷನು ಚಂದ್ರನ ಈ ವರ್ತನೆಯಿಂದ ಕೋಪಗೊಂಡು ಶಾಪ ನೀಡುತ್ತಾನೆ.
ಈ ಶಾಪದಿಂದ ವಿಮೋಚನೆಗೊಳ್ಳಲು ಚಂದ್ರನು ಶಿವನನ್ನು ಪೂಜಿಸಿ ಕಠಿಣ ತಪಸ್ಸು ಮಾಡುತ್ತಾನೆ. ಚಂದ್ರನ ತಪಸ್ಸನ್ನು ಮೆಚ್ಚಿದ ಶಿವನ ಅವನನ್ನು ಶಾಪದಿಂದ ವಿಮುಕ್ತನಾಗಿಸುತ್ತಾನೆ. ಚಂದ್ರನು ಕಠೋರ ತಪಸ್ಸು ಮಾಡಿದ ಸ್ಥಳವನ್ನು ಅಬ್ಜಾರಣ್ಯ ಎಂದು ಕರೆಯಲಾಗುತ್ತಿತ್ತು, ಅದು ಈಗ ಉಡುಪಿಯಾಗಿದೆ. ಹತ್ತಿರದ ಸರೋವರವನ್ನು ಚಂದ್ರಪುಷ್ಕರ್ಣಿ ಎಂದು ಕರೆಯಲಾಯಿತು. ಈ ಘಟನೆಯ ನಂತರ ಭಕ್ತರು ಶಿವನನ್ನು ಚಂದ್ರಮೌಳೀಶ್ವರ ಎಂಬ ಹೆಸರಿನೊಂದಿಗೆ ಪೂಜಿಸಲು ಶುರು ಮಾಡಿದರು ಎಂದು ನಂಬಲಾಗಿದೆ.
ಚಂದ್ರಮೌಳೀಶ್ವರ ದೇವಾಲಯ
ಪುರಾತನ ಚಂದ್ರಮೌಳೀಶ್ವರ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಡೀ ದೇವಾಲಯವನ್ನು ಉಡುಪಿಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಮೇಲ್ಛಾವಣಿಯು ಇಳಿಜಾರಾಗಿದ್ದು ನೆಲದ ಮೇಲೆ ಗ್ರಾನೈಟ್ ಬಂಡೆಗಳ ಪದರವಿದೆ. ಈ ದೇವಾಲಯವು ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿಯೇ ಇದೆ. ದೇವಸ್ಥಾನದಲ್ಲಿರುವ ನಂದಿಯ ವಿಗ್ರಹವು ಒಂದು ಕಡೆಗೆ ವಾಲಿರುವುದರಿಂದ ಭಕ್ತರು ಕೂಡ ಶಿವಲಿಂಗದ ದರ್ಶನ ಪಡೆಯಲು ಅದೇ ರೀತಿ ತಲೆಬಾಗಬೇಕು. ಈ ದೇವಾಲಯವು ನೆಲಮಟ್ಟದಿಂದ ಸುಮಾರು 6 ಅಡಿ ಕೆಳಗೆ ಇದೆ. ದೇವಾಲಯವನ್ನು ಪ್ರವೇಶಿಸಲು ಕೆಲವು ಮೆಟ್ಟಿಲುಗಳ ಕೆಳಗೆ ಹೋಗಬೇಕು. ನೆಲಮಟ್ಟದಿಂದ ಕೆಳಗಿದ್ದರೂ, ಈ ದೇವಸ್ಥಾನಕ್ಕೆ ಪ್ರವಾಹದ ನೀರು ಬಂದಿಲ್ಲ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ಸ್ಫಟಿಕ ಶಿವಲಿಂಗದ ಬಣ್ಣವು ದಿನಕ್ಕೆ ಮೂರು ಬಾರಿ ಬದಲಾಗುತ್ತದೆ ಎಂದು ನಂಬಲಾಗಿದೆ. ಶಿವಲಿಂಗವು ಬೆಳಗ್ಗೆ ಕಪ್ಪು ಬಣ್ಣದಲ್ಲಿ ಮದ್ಯಾಹ್ನ ನೀಲಿ ಮತ್ತು ರಾತ್ರಿಯಲ್ಲಿ ಬಿಳಿಯಾಗಿ ಕಾಣುತ್ತದೆ. ಶಿವಲಿಂಗದ ಮೇಲೆ ಬೆಳ್ಳಿಯ ಮುಖವಾಡವನ್ನು ಇರಿಸಲಾಗಿದೆ.

ಅನಂತೇಶ್ವರ ದೇವಾಲಯ ಮತ್ತು ದಂತಕತೆ
ಅನಂತೇಶ್ವರ ದೇವಾಲಯದ ಒಳಗೆ ಅನಂತೇಶ್ವರ ಲಿಂಗವನ್ನು ಶುದ್ಧ ಬೆಳ್ಳಿಯಿಂದ ಮಾಡಿದ ಪುರಾತನ ಪೀಠದ ಮೇಲೆ ಸ್ಥಾಪಿಸಲಾಗಿದೆ. ಈ ಪರಶುರಾಮ ಪ್ರದೇಶವು ಈ ಹಿಂದೆ ರಾಜ ರಾಮಭೋಜನ ನಿಯಂತ್ರಣದಲ್ಲಿತ್ತು. ಹೀಗೊಮ್ಮೆ ರಾಜ ರಾಮಭೋಜನು ತನ್ನನ್ನು ಚಕ್ರವರ್ತಿ ಸಾಮ್ರಾಟ್ ಎಂದು ಘೋಷಿಸಿಕೊಳ್ಳಲು ಅಶ್ವಮೇಧ ಯಾಗವನ್ನು ಮಾಡಲು ನಿರ್ಧರಿಸುತ್ತಾನೆ. ಅಶ್ವಮೇಧ ಯಾಗದ ಯಜ್ಞ ಸ್ಥಳವು ಚಂದ್ರಮೌಳೀಶ್ವರ ದೇವಸ್ಥಾನದ ಪಶ್ಚಿಮ ಭಾಗದಲ್ಲಿದೆ. ಯಾಗದ ನೈವೇದ್ಯ ನಿರ್ಮಾಣಕ್ಕೆ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ನಾಗರಹಾವು ನೇಗಿಲಿಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪುತ್ತದೆ. ಹಾವನ್ನು ಕೊಂದ ಪಾಪದಿಂದ ಮುಕ್ತಿ ಪಡೆಯಲು ರಾಜನು ಶಿವನನ್ನು ಅಪಾರ ಭಕ್ತಿಯಿಂದ ಪೂಜಿಸುತ್ತಾನೆ. ರಾಜನ ಕಠೋರ ತಪಸ್ಸಿಗೆ ಶಿವನು ತೃಪ್ತನಾಗುತ್ತಾನೆ. ರಾಜನ ಪಾಪ ವಿಮೋಚನೆಗಾಗಿ ಶಿವನು ಯಜ್ಞದ ಮೈದಾನದಲ್ಲಿ ಬೆಳ್ಳಿಯ ಪೀಠವನ್ನು ನಿರ್ಮಿಸಲು ಮತ್ತು ಅದರ ಮೇಲೆ ಲಿಂಗವನ್ನು ಸ್ಥಾಪಿಸಲು ಆದೇಶಿಸಿಸುತ್ತಾನೆ. ನಂತರ ಅದೇ ಲಿಂಗವನ್ನು ಅನಂತೇಶ್ವರ ಲಿಂಗ ಎಂದು ಕರೆಯಲಾಯಿತು. ಅದರ ಮೇಲೆ ನಿರ್ಮಿಸಲಾದ ದೇವಾಲಯವನ್ನು ಭಕ್ತರು ಅನಂತೇಶ್ವರ ದೇವಾಲಯ ಎಂದು ಕರೆದರು. ಈ ದೇವಾಲಯವನ್ನು ತುಳುನಾಡಿನ ಅತ್ಯಂತ ಪ್ರಾಚೀನ ದೇವಾಲಯ ಎನ್ನಲಾಗುತ್ತದೆ. ಮಧ್ವಾಚಾರ್ಯರ ತಂದೆ ತಾಯಿಗಳು 12 ವರ್ಷಗಳ ಕಾಲ ಅನಂತೇಶ್ವರ ದೇವಸ್ಥಾನದಲ್ಲಿ ಅನಂತೇಶ್ವರ ಸ್ವಾಮಿಯನ್ನು ಪೂಜಿಸಿದ್ದರು ಎಂಬ ನಂಬಿಕೆಯಿದೆ.

ಇನ್ನು ಅನಂತೇಶ್ವರ ದೇವಸ್ಥಾನವನ್ನು 20 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದೊಂದು ವಿಶಿಷ್ಟವಾದ ದೇವಾಲಯವಾಗಿದ್ದು, ಇಲ್ಲಿ ದೇವಾಲಯದಲ್ಲಿ ಶೇಷನಾಗ ಶಿವನೊಂದಿಗೆ ಇರುತ್ತಾನೆ. ಈ ದೇವಾಲಯದಲ್ಲಿ ಎರಡು ಗರ್ಭಗುಡುಗಳಿವೆ. ಪ್ರವೇಶದ್ವಾರದಲ್ಲಿ ಶಂಖ ಮತ್ತು ಚಕ್ರದ ಆಕಾರಗಳನ್ನು ಕಾಣಬಹುದು. ದೇವಾಲಯದ ವಿಶೇಷ ಆಕರ್ಷಣೆಗಳಲ್ಲಿ ದೇವಾಲಯದ ಆವರಣದಲ್ಲಿ ನೆಲೆಗೊಂಡಿರುವ 40 ಅಡಿ ಎತ್ತರದ ದೀಪಸ್ತಂಭವೂ ಒಂದು. ಅಲ್ಲಿ ಸಹಸ್ರಾರು ಭಕ್ತರು ಎಣ್ಣೆಯನ್ನು ಅರ್ಪಿಸಿ ದೀಪಗಳನ್ನು ಬೆಳಗಿಸುತ್ತಾರೆ. ದೇವಾಲಯದ ಗೋಡೆಗಳ ಮೇಲೆ ಗಣಪತಿ ಮತ್ತು ಪಾರ್ವತಿಯ ಚಿತ್ರಗಳಿವೆ. ದೇವಾಲಯದ ಒಂದು ಮೂಲೆಯಲ್ಲಿ ಶಕ್ತಿಶಾಲಿ ದೇವತೆಗಳನ್ನು ಪ್ರತಿನಿಧಿಸುವ ಶೇಷನಾಗ ಮತ್ತು ಅಯ್ಯಪ್ಪ ಸ್ವಾಮಿಯ ಚಿಕಣಿ ಚಿತ್ರಗಳಿವೆ. ಶೇಷನಾಗನ ಪ್ರತಿಮೆಯನ್ನು ಚಿನ್ನದ ಲೋಹದಲ್ಲಿ ಮಾಡಲಾಗಿದೆ.
ಉಡುಪಿಯಿಂದ ಸರಿ ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯಕ್ಕೆ ಧಾರ್ಮಿಕ ಪ್ರವಾಸದಲ್ಲಿ ಆಸಕ್ತಿ ಇರುವವರು ಭೇಟಿ ನೀಡಬಹುದು.