ಕಾಶ್ಮೀರದಲ್ಲಿರುವ ಈ ಅಪಾಯಕಾರಿ ತಾಣಗಳಿಗೆ ಹೋಗುವ ಮುನ್ನ ಎಚ್ಚರ..!
ಕಾಶ್ಮೀರದ ಅತ್ಯಂತ ಸುಂದರವಾದ ಕಣಿವೆಗಳಲ್ಲಿ ಒಂದೆಂದು ಪರಿಗಣಿಸಲಾದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಡೀ ದೇಶವನ್ನೇ ಆತಂಕಕ್ಕೆ ದೂಡಿದೆ. ಆದರೆ ಸುಂದರವಾಗಿ ಕಂಡರೂ ಕಾಶ್ಮೀರದಲ್ಲಿ ಅಪಾಯಕ್ಕೆ ದೂಡುವ ಇನ್ನೂಅನೇಕ ಪ್ರವಾಸಿ ತಾಣಗಳ ಬಗ್ಗೆ ನೀವು ತಿಳೀಯಲೇ ಬೇಕು.
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬೇಕೆಂಬುದು ಅದೆಷ್ಟು ಮಂದಿಯ ಕನಸೋ ಏನೋ. ಆದರೆ ಏ.22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಾಕಷ್ಟು ಮಂದಿಯ ಪ್ರೇಮ ಕಾಶ್ಮೀರದ ಕನಸನ್ನು ನುಚ್ಚು ನೂರು ಮಾಡಿತ್ತು. ಆದರೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬಂತೆ, ಮುಂದೊಂದು ದಿನ ಎಲ್ಲವೂ ತಾತ್ಕಾಲಿಕವಾಗಿ ಸರಿಹೋಗಿ ಮತ್ತೆ ಕಾಶ್ಮೀರ, ಪ್ರವಾಸಿಗರಿಗೆ ಮುಕ್ತವಾಗಬಹುದು. ಎಲ್ಲವೂ ಸರಿಹೋಯಿತೆಂಬ ಸಂಭ್ರಮದಲ್ಲಿ ಕಳೆದುಹೋಗುವ ಮುನ್ನ ಈ ತಾಣಗಳಲ್ಲಿರುವ ಅಪಾಯವನ್ನು ತಿಳಿದುಕೊಳ್ಳಿ..
ಕಾಶ್ಮೀರದಲ್ಲಿವೆ ಇನ್ನೂ ಅನೇಕ ಅಪಾಯಕಾರಿ ತಾಣಗಳು:
ಅನಂತನಾಗ್(Anantnag)
ಶ್ರೀನಗರದಿಂದ ಸುಮಾರು 55ಕಿಮೀ ದೂರದಲ್ಲಿರುವ ಅನಂತನಾಗ್ ಜಮ್ಮು ಮತ್ತು ಕಾಶ್ಮೀರದ ಒಂದು ಸಣ್ಣ ನಗರ. ಇದನ್ನು ಕಾಶ್ಮೀರ ಕಣಿವೆಯ ರಾಜಧಾನಿಯೆಂದೂ ಕರೆಯಲಾಗುತ್ತದೆ. ಈ ಪ್ರದೇಶವು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಗೋಸ್ವಾಮಿ ಗುಂಡ್ ಆಶ್ರಮ, ಹಜರತ್ ಬಾಬಾ ರಾಶಿ, ಶಿಲಾಗ್ರಾಮ್ ದೇವಾಲಯ, ನೀಲಾ ನಾಗ್ ಹೀಗೆ ಸುಪ್ರಸಿದ್ಧ ದೇವಾಲಯಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಹೆಚ್ಚಾಗಿದೆ.

ಕುಪ್ವಾರಾ (Kupwara)
ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಮನಸ್ಸಿರುವವರಿಗೆ ಕುಪ್ವಾರಾ ಒಂದೊಳ್ಳೆ ಆಯ್ಕೆ. ಸುಂದರವಾದ ಸರೋವರಗಳು, ಹಚ್ಚ ಹಸಿರಿನ ಕಾಡು, ಹುಲ್ಲುಗಾವಲು, ಕಣಿವೆಯ ಮೂಲಕ ಶಾಂತವಾಗಿ ಹರಿಯುವ ನೀರು..ಹೀಗೆ ಭೂಲೋಕದ ಸ್ವರ್ಗವೆನ್ನುವುದು ಇಂತಹ ತಾಣಗಳನ್ನು ನೋಡಿಯೇ ಇರಬಹುದು. ಕುಪ್ವಾರಾದಲ್ಲಿ ಬ್ಯಾಮಗಸ್ ಕಣಿವೆ, ಲೋಲಾಬ್ ಕಣಿವೆ, ಸೀಮಾಬ್ ಕಣಿವೆ, ಸತ್ ಬರನ್ ಕಲಾರೂಸ್, ಚಂಡಿಘಾಮ್ ಹೀಗೆ ಜನಪ್ರಿಯ ಪ್ರವಾಸಿ ಸ್ಥಳಗಳಿವೆ. ಆದರೆ LOC ಗೆ ಹತ್ತಿರದಲ್ಲಿರುವುದರಿಂದ, ಈ ಪ್ರದೇಶವು ಆಗಾಗ್ಗೆ ಉಗ್ರರ ಒಳನುಸುಳುವಿಕೆ ಮತ್ತು ಗುಂಡಿನ ದಾಳಿಯ ಘಟನೆಗಳು ಸಂಭವಿಸುತ್ತಿರುತ್ತವೆ.

ಶೋಪಿಯಾನ್ (Shopian)
ಭಾರತದ ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರ ಕಣಿವೆಯ ದಕ್ಷಿಣ ಭಾಗದಲ್ಲಿರುವ ಶೋಪಿಯಾನ್ ಅನ್ನು "ಕಾಶ್ಮೀರದ ಸೇಬು ಪಟ್ಟಣ" ಎಂದು ಕರೆಯಲಾಗುತ್ತದೆ ಶ್ರೀನಗರದ ನಂತರ ಕಾಶ್ಮೀರ ಪ್ರದೇಶದಲ್ಲಿ ಇದು 2 ನೇ ಶ್ರೀಮಂತ ಜಿಲ್ಲೆಯಾಗಿದೆ. ಶೋಪಿಯಾನ್ ಜಿಲ್ಲೆಯು ಪ್ರಾಕೃತಿಕ ತಾಣಗಳು, ಐತಿಹಾಸಿಕ ತಾಣಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳು ಸೇರಿದಂತೆ ವಿವಿಧ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಈ ಜಿಲ್ಲೆಯು ಹಚ್ಚ ಹಸಿರಿನ ಹುಲ್ಲುಗಾವಲುಗಳು, ಸೇಬು ತೋಟಗಳು ಮತ್ತು ಶ್ರೀನಗರವನ್ನು ಜಮ್ಮು ಪ್ರದೇಶಕ್ಕೆ ಸಂಪರ್ಕಿಸುವ ಐಕಾನಿಕ್ ಮೊಘಲ್ ರಸ್ತೆಗೆ ಹೆಸರುವಾಸಿಯಾಗಿದೆ. ಆದರೆ ಈ ಪ್ರದೇಶವು ಪ್ರತಿದಿನ ಭಯೋತ್ಪಾದಕ ಚಟುವಟಿಕೆಗಳು ಮತ್ತು ಎನ್ಕೌಂಟರ್ಗಳಿಗೆ ಸಾಕ್ಷಿಯಾಗಿದೆ. ಪ್ರವಾಸಿಗರು ಇಲ್ಲಿಗೆ ಹೋಗುವುದು ಅತ್ಯಂತ ಅಸುರಕ್ಷಿತವೆಂದು ಪರಿಗಣಿಸಲಾಗಿದೆ.

ಹಂದ್ವಾರ (Handwara)
ಭಾರತದ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಒಂದು ಪಟ್ಟಣ ಹಂದ್ವಾರ. ಹಂದ್ವಾರದಲ್ಲಿ ವಾಲ್ನಟ್ ಕೃಷಿ ಹೆಚ್ಚಾಗಿದ್ದು, ಉತ್ತಮ ಗುಣಮಟ್ಟದ ವಾಲ್ನಟ್ಗಳು ಇಲ್ಲಿ ಲಭ್ಯವಿದೆ. ಬಂಗಸ್ ಕಣಿವೆ, ರೇಶ್ವರಿ, ನಾಗರ್ವಾರಿ, ಚೋರ್ನಾರ್ ಸೇರಿದಮತೆ ಅನೇಕ ಪ್ರವಾಸಿ ತಾಣಗಳು ಇಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಈ ಪ್ರದೇಶವು ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವುದರಿಂದ ಸೂಕ್ಷ್ಮ ಪ್ರದೇಶವೆನ್ನಿಸಿಕೊಂಡಿದೆ. ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಘಟನೆಗಳು ಹಲವು ಬಾರಿ ಇಲ್ಲಿ ಬೆಳಕಿಗೆ ಬಂದಿವೆ. ಸರ್ಕಾರ ಮತ್ತು ಸೇನೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಆದರೆ ಪರಿಸ್ಥಿತಿ ಬದಲಾಗುವವರೆಗೆ ಈ ಪ್ರದೇಶಗಳಿಗೆ ಭೇಟಿ ನೀಡುವುದು ಪ್ರವಾಸಿಗರಿಗೆ ಅಪಾಯವೆಂದೇ ಹೇಳಬಹುದು.

ಟ್ರಾಲ್ (Tral)
ಪುಲ್ವಾಮಾ ಜಿಲ್ಲೆಯಲ್ಲಿರುವ ಟ್ರಾಲ್ ನಲ್ಲಿ ನಾಗಬೆರನ್ (ಅಪ್ಪರ್ ದಚಿಗಮ್ ), ವಸ್ತೂರ್ವಾನ್ (ಸೈದಾಬಾದ್), ಗುಫ್ಕ್ರಾಲ್, ಶಿಕರ್ಗಾಹ್, ಪನ್ನರ್ ಅಣೆಕಟ್ಟು, ಅರಿಪಾಲ್ ಸ್ಪ್ರಿಂಗ್, ನರಸ್ತಾನ್, ಹಜನ್ ಮತ್ತು ದಿಲ್ನಾಗ್ ಸೇರಿದಂತೆ ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಆದರೆ ಈ ಪ್ರದೇಶವು ಭಯೋತ್ಪಾದಕರ ಭದ್ರಕೋಟೆಯಾಗಿದ್ದು, ಸೇನೆ ಮತ್ತು ಭಯೋತ್ಪಾದಕರ ನಡುವೆ ಇಲ್ಲಿ ಘರ್ಷಣೆಗಳು ಸಾಮಾನ್ಯವಾಗಿದೆ.. ಆದ್ದರಿಂದ ಪ್ರವಾಸಿ ತಾಣಗಳನ್ನು ನೋಡುವ ಬಯಕೆಯೊಂದಿಗೆ ಟ್ರಾಲ್ಗೆ ತೆರಳುವ ಮುನ್ನ ಮತ್ತೊಮ್ಮೆ ಯೋಚನೆ ಮಾಡಿ..