ಕೆನಡದ ಪ್ರಕಾರ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿ..
ಭಯೋತ್ಪಾದನೆ, ಅಪರಾಧ ಮತ್ತು ನಾಗರಿಕ ಅಶಾಂತಿಯಂತಹ ಕಾರಣಗಳಿಂದಾಗಿ ಆ ದೇಶಗಳು ಪ್ರವಾಸಿಗರಿಗೆ ಸ್ವಲ್ಪ ಕಷ್ಟವೇ. ಅದೇ ಕಾರಣಕ್ಕಾಗಿ ಪ್ರವಾಸಿಗರ ಸುರಕ್ಷತೆಗಾಗಿ ಕೆನಡಾ ಸರ್ಕಾರ ಈ ಬಾರಿ ಹೆಚ್ಚು ಸ್ಥಳಗಳಿಗೆ ಟ್ರಾವೆಲ್ ಅಡ್ವೈಸರಿ ಹೊರಡಿಸಿದೆ.
ವರ್ಷದಿಂದ ವರ್ಷಕ್ಕೆ ಅಂತಾರಾಷ್ಟ್ರೀಯ ಪ್ರವಾಸಗಳು (International Trips) ಹೆಚ್ಚಾಗುತ್ತಿದೆ. ಗೊತ್ತಿರದ ಸ್ಥಳಗಳಿಗೆ ಹೋಗಬೇಕೆಂದು ಹಲವಾರು ಜನ ಗೂಗಲ್, ಇನ್ಸ್ಟಾಗ್ರಾಂ ಮತ್ತಿತರ ಜಾಲತಾಣಗಳಲ್ಲಿ ಹೊಸ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಆದರೆ ಇನ್ನೊಂದು ಕಡೆ ವಿಶ್ವದ ಹಲವಾರು ದೇಶಗಳು ಈಗ ಅಪಾಯದಂಚಿನಲ್ಲಿದ್ದಾವೆ. ಭಯೋತ್ಪಾದನೆ (Terrorsim), ಅಪರಾಧ (Crime) ಮತ್ತು ನಾಗರಿಕ ಅಶಾಂತಿಯಂತಹ (Unrest) ಕಾರಣಗಳಿಂದಾಗಿ ಆ ದೇಶಗಳು ಪ್ರವಾಸಿಗರಿಗೆ ಸ್ವಲ್ಪ ಕಷ್ಟವೇ. ಅದೇ ಕಾರಣಕ್ಕಾಗಿ ಪ್ರವಾಸಿಗರ ಸುರಕ್ಷತೆಗಾಗಿ ಕೆನಡಾ ಸರ್ಕಾರ ಈ ಬಾರಿ ಹೆಚ್ಚು ಸ್ಥಳಗಳಿಗೆ ಟ್ರಾವೆಲ್ ಅಡ್ವೈಸರಿ (Travel Advisory) ಹೊರಡಿಸಿದೆ.
ಸ್ಪೇನ್
ಸ್ಪೇನ್ಗೆ ತೆರಳುವವರು ಈಗ “ಜಾಗರೂಕತೆಯಿಂದ ಪ್ರವಾಸ ಮಾಡಬೇಕು” ಎಂಬ ಸೂಚನೆಯೊಂದಿಗೆ ಮುಂದೆ ಸಾಗಬೇಕಾಗಿದೆ. ಸ್ಪೇನ್ ನಲ್ಲಿ ಇತ್ತೀಚೆಗೆ ಕಾಡುತ್ತಿರುವ ಭಯೋತ್ಪಾದಕತೆಯಿಂದಾಗಿ ಪ್ರವಾಸಿಗರು ಸ್ಪೇನ್ ನಲ್ಲಿ ಸ್ವಲ್ಪ ಜೋಪಾನವಾಗಿ, ಹಲವು ಬಾರಿ ಯೋಚಿಸಿ ಪ್ರವಾಸಕ್ಕೆ ಹೋಗಬೇಕಾದ ಸಂಭವ ಬಂದಿದೆ. “ಸ್ಪೇನ್ನಲ್ಲಿ ಮರಣ ಸಂಭವಿಸಿದ ದಾಳಿಗಳು ನಡೆದಿವೆ. ಭವಿಷ್ಯದಲ್ಲೂ ಮತ್ತೊಂದು ದಾಳಿ ಸಂಭವಿಸುವ ಸಾಧ್ಯತೆ ನಿರಾಕರಿಸಲಾಗದು,” ಎಂದು ಕೆನಡಾ ಸರಕಾರ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.
ಮೆಕ್ಸಿಕೋ
ಮೆಕ್ಸಿಕೋ ಕೂಡ ಅಪಾಯದ ಪಟ್ಟಿಗೆ ಸೇರ್ಪಡೆಯಾಗಿದೆ. ಅಲ್ಲಿನ ಚಿಯಾಪಾಸ್ ಹಾಗೂ ಚಿಹುವಾಹುಯಾ ರಾಜ್ಯಗಳಲ್ಲಿ ಅಪರಾಧ, ಅಪಹರಣ ಪ್ರಕರಣಗಳು ಹೆಚ್ಚಿದ್ದು, ಪ್ರವಾಸಿಗರಿಗೆ ಎಚ್ಚರಿಸಿದೆ.

ಫ್ರಾನ್ಸ್
ಭಯೋತ್ಪಾದಕತೆಯ ಭೀತಿಯಲ್ಲಿರುವ ಫ್ರಾನ್ಸ್ಗೆ ಅಲ್ಲಿನ ದೇಶದ ಉನ್ನತ ‘ವಿಜಿಪಿರೇಟ್’ ಎಚ್ಚರಿಕೆಯ ಪಟ್ಟಿಯಲ್ಲಿ ಈಗ ಭಯೋತ್ಪಾದನಾ ತುರ್ತು ಮಟ್ಟ ಮೂರರಲ್ಲಿ ಇದೆ. ಕಳೆದ ಕೆಲವು ವರ್ಷಗಳಲ್ಲಿ ಅಲ್ಲಿನ ಯೋಜಿತ ಹಾಗೂ ಆಕಸ್ಮಿಕ ದಾಳಿಗಳಿಂದ ಹಲವಾರು ಪ್ರಾಣಹಾನಿ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿಗಳ ಸಾಧ್ಯತೆ ಇರುವುದಾಗಿ ಕೆನಡಾ ಸರ್ಕಾರ ಎಚ್ಚರಿಸಿದೆ.
ಚೀನಾ
ಚೀನಾದಲ್ಲಿಯೂ “ಅತ್ಯಧಿಕ ಜಾಗರೂಕತೆ” ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆ ಕೊರತೆಯಿಂದ ಪ್ರವಾಸಿಗರಿಗೆ ಕಾನೂನು ಸಹಾಯವೂ ಸರಿಯಾಗಿ ದೊರೆಯದ ಸಮಸ್ಯೆಯಿದೆ. ವಿಶೇಷವಾಗಿ, ಹಣಕಾಸು ಅಪರಾಧಗಳು ಅಥವಾ ಮಾದಕದ್ರವ್ಯ ಸಂಬಂಧಿ ಪ್ರಕರಣಗಳಲ್ಲಿ ಅತ್ಯಂತ ಕಟ್ಟುನಿಟ್ಟಾದ ಶಿಕ್ಷೆಗಳು — ಇಲ್ಲಿ ಸಾವು ಶಿಕ್ಷೆಯವರೆಗೂ — ಎದುರಾಗಬಹುದು ಎಂದೂ ಎಚ್ಚರಿಸಿದ್ದಾರೆ.
ಕ್ಯೂಬಾ
ಆಹಾರ, ಔಷಧಿ ಮತ್ತು ಇಂಧನ ಕೊರತೆಯಲ್ಲಿರುವ ಕ್ಯೂಬಾಗೆ ಹೋಗುವವರಿಗೂ ಕೆನಡ ಸರಕಾರ ಎಚ್ಚರಿಸಿದೆ. ಕೆಲವೊಂದು ಪ್ರವಾಸಿ ಪ್ರದೇಶಗಳಲ್ಲಿ ಸ್ಥಿತಿಗತಿಗಳು ಸಹಜವಾಗಿದ್ದರೂ, ಸರಾಸರಿ ಮಟ್ಟದಲ್ಲಿ “ಜಾಗರೂಕತೆಯಿಂದ ಪ್ರವಾಸ ಮಾಡುವಂತೆ” ಸೂಚಿಸಲಾಗಿದೆ.
ವೆಸ್ಟ್ ಬ್ಯಾಂಕ್, ಗಾಜಾ ಮತ್ತು ಇಸ್ರೇಲ್
ವೆಸ್ಟ ಬ್ಯಾಂಕ್, ಗಾಜಾ ಪ್ರದೇಶ ಮತ್ತು ಇಸ್ರೇಲ್ನ ಪರಿಸ್ಥಿತಿ ಇನ್ನಷ್ಟು ನಾಜೂಕಾಗಿದೆ. ಗಾಜಾದಲ್ಲಿ ಯುದ್ಧ ಮತ್ತು ಇಸ್ರೇಲ್ನಲ್ಲಿ ಹಠಾತ್ ಎಂದು ಸಂಭವಿಸುವ ದಾಳಿಗಳಿಂದಾಗಿ “ಅಗತ್ಯವಿಲ್ಲದ ಪ್ರವಾಸವನ್ನು ತಪ್ಪಿಸಿ” ಎಂದು ಸರಕಾರದ ಸೂಚನೆ ಇದೆ.

ಇಕ್ಯೂಡಾರ್
ಇಕ್ಯೂಡಾರ್ಗೂ ಇದೇ ಪರಿಸ್ಥಿತಿ. ಕೆಲವೊಂದು ಪ್ರದೇಶಗಳಲ್ಲಿ ಕೆಲವು ಸಂಘಟನೆಗಳ ಹಿಂಸಾಚಾರದಿಂದ ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಕೊಲಂಬಿಯಾ ಹಾಗೂ ಪೆರು ಗಡಿಭಾಗದಲ್ಲಿ ಲ್ಯಾಂಡ್ಮೈನ್ಗಳಿರುವ ಸಾಧ್ಯತೆಯಿಂದ ಆ ಭಾಗಗಳಲ್ಲಿ ಪ್ರವಾಸವನ್ನು ಸಂಪೂರ್ಣ ತಪ್ಪಿಸಿ” ಎಂದು ಎಚ್ಚರಿಸಲಾಗಿದೆ.
ಯುಎಇ
ಮಧ್ಯಪ್ರಾಚ್ಯದ ಯುಎಇ ಕೂಡ ಭಯೋತ್ಪಾದನೆಯ ಭೀತಿಯಿಂದ ದೂರವಿಲ್ಲ. ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿಂದ ಅಲ್ಲಿನ ಸರಕಾರಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಎಮಿರೇಟ್ಗಳು ಕ್ಷಿಪಣಿ ಅಥವಾ ದ್ರೋಣ್ ದಾಳಿ ಸಾಧ್ಯತೆ ಇರುವುದಾಗಿ ಕೂಡಾ ತಿಳಿಸಲಾಗಿದೆ.
ಥೈಲಾಂಡ್
ಥೈಲ್ಯಾಂಡ್ ನ ರಾಜಕೀಯ ಅಸ್ಥಿರತೆ, ಬಾಂಗ್ಕಾಕ್ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ದಕ್ಷಿಣ ಪ್ರಾಂತ್ಯಗಳಾದ ನಾರಾಥಿವಾಟ್, ಪಟ್ಟಾನಿ, ಸೋಂಗ್ಖ್ಲಾ ಮತ್ತು ಯಾಲಾ ಪ್ರದೇಶಗಳಲ್ಲಿ ಪ್ರತ್ಯೇಕತಾವಾದಿಗಳ ಹಿಂಸೆಯಿಂದ ಅಲ್ಲಿನ ಪ್ರವಾಸ ಅಪಾಯಕಾರಿಯಾಗಿದೆ.
ಪೆರು
ಪೆರುವಂತೂ ಅಪರಾಧ ಸಂಖ್ಯೆ, ಸಾಮಾಜಿಕ ಅಶಾಂತಿ, ಹೋರಾಟ, ಹೊಡೆದಾಟಗಳು — ಎಲ್ಲವನ್ನೂ ಎದುರಿಸುತ್ತಿದೆ. ಕೆಲವು ಪ್ರದೇಶಗಳಲ್ಲಿ ಗ್ಯಾಂಗ್ ಗಳು, ಡ್ರಗ್ ಟ್ರಾಫಿಕಿಂಗ್, ಅಪಹರಣ, ಹಲ್ಲೆ, ಹಾಗೂ ಸ್ಥಳೀಯ ಉಗ್ರಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.