Saturday, June 14, 2025
Saturday, June 14, 2025

ಧರ್ಮಸ್ಥಳಕ್ಕೆ ಹೋದವರು ಈ ದೇವಸ್ಥಾನಗಳಿಗೆ ಹೋಗದಿದ್ದರೆ ಹೇಗೆ?

ಪೌರಾಣಿಕ ಹಿನ್ನೆಲೆ ಮತ್ತು ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿರುವ ಧರ್ಮಸ್ಥಳ ಅಕ್ಕಪಕ್ಕವಿರುವ ದೇವಸ್ಥಾನಗಳ ಕುರಿತಾದ ವಿವರ ಇಲ್ಲಿದೆ

ಪಶ್ಚಿಮ ಘಟ್ಟಗಳ ಮಧ್ಯ ಭಾಗದಲ್ಲಿರುವ ಧರ್ಮಸ್ಥಳವು ಪೌರಾಣಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅಸಂಖ್ಯಾತ ಭಕ್ತರು ಮಂಜುನಾಥನ ದರ್ಶನಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಆಸುಪಾಸಿನಲ್ಲಿರುವ ಹತ್ತಾರು ದೇವಸ್ಥಾನಗಳಿಗೂ ಭೇಟಿ ನೀಡಬಹುದು. ಪ್ರತಿ ದೇವಸ್ಥಾನವೂ ತನ್ನದೇ ಮಹತ್ವವನ್ನು ಹೊಂದಿದೆ. ಅಲ್ಲಿ ಸ್ಥಾಪಿತವಾಗಿರುವ ದೇವರ ಮೇಲೆ ಭಕ್ತರು ನೂರಾರು ವರ್ಷಗಳಿಂದ ನಂಬಿಕೆ ಇರಿಸಿಕೊಂಡಿದ್ದಾರೆ. ಪೌರಾಣಿಕ ಹಿನ್ನೆಲೆ ಮತ್ತು ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿರುವ ಧರ್ಮಸ್ಥಳ ಅಕ್ಕಪಕ್ಕವಿರುವ ದೇವಸ್ಥಾನಗಳ ಕುರಿತಾದ ವಿವರ ಇಲ್ಲಿದೆ:

ಶ್ರೀರಾಮ ಕ್ಷೇತ್ರ
ಧರ್ಮಸ್ಥಳ ಕ್ಷೇತ್ರದಿಂದ ಸರಿ ಸುಮಾರು 3 ಕಿಮೀ ದೂರದಲ್ಲಿ ಭವ್ಯವಾದ ಶ್ರೀರಾಮನ ದೇವಾಲಯವಿದೆ. ಅಧ್ಯಾತ್ಮಿಕ ಹಾಗೂ ಯೋಗ ಗುರುಗಳಾಗಿದ್ದ ನಿತ್ಯಾನಂದ ಸ್ವಾಮಿಗಳು ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದರು. ಇವರು ತಮ್ಮ ಯಾತ್ರೆಯ ಸಂದರ್ಭದಲ್ಲಿ ಒಂದು ರಾತ್ರಿ ಧರ್ಮಸ್ಥಳದಲ್ಲಿ ತಂಗಿದ್ದರು ಎಂದು ಹೇಳಲಾಗಿದೆ. ಆ ಸಮಯದಲ್ಲಿ ಅವರಿಗೆ ಪ್ರಭು ಶ್ರೀರಾಮನ ಪ್ರೇರಣೆಯಾಗಿ ಇಲ್ಲೊಂದು ರಾಮನ ದೇವಾಲಯ ನಿರ್ಮಿಸಬೇಕೆಂಬ ಸಂಕಲ್ಪ ಮಾಡುತ್ತಾರೆ. ಗುರುಗಳ ಬಯಕೆಗೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ನಾಂದಿ ಹಾಡುತ್ತಾರೆ. ಸೀತಾ ಮಾತೆಯ ಹುಡುಕಾಟದ ಸಂದರ್ಭದಲ್ಲಿ ಶ್ರೀರಾಮ ಇಲ್ಲಿಗೆ ಭೇಟಿ ಕೊಟ್ಟಿದ್ದನೆಂಬ ಪ್ರತೀತಿಯಿದ್ದು ಇಲ್ಲಿ ರಾಮ ಲಕ್ಷ್ಮಣ ಸೀತಾಮಾತೆಯ ಅಮೃತಶಿಲೆಗಳ ಜೊತೆಯಲ್ಲಿ ದೇವಾಲಯದ ಎರಡೂ ಮಹಡಿಗಳಲ್ಲಿ 36 ಇತರೆ ದೇವತೆಗಳ ಮೂರ್ತಿಗಳಿವೆ. ಶ್ರೀರಾಮ ನವಮಿ ಸಂದರ್ಭದಲ್ಲಿ 7 ದಿನಗಳ ಕಾಲ ರಾಮ ಭಜನಾ ಉತ್ಸವ ಮತ್ತು ವಿಶೇಷ ಕಾರ್ಯಕ್ರಮಗಳು ಇಲ್ಲಿ ಅದ್ಧೂರಿಯಾಗಿ ಜರುಗುತ್ತವೆ. ಮಂಗಳೂರಿನಿಂದ 65 ಕಿಮೀ ದೂರವಿದ್ದು ಪವಿತ್ರವಾದ ನೇತ್ರಾವತಿ ನದಿ ಸಮೀಪದಲ್ಲಿದೆ.

ಶ್ರೀರಾಮ ಕ್ಷೇತ್ರ

ಸೌತಡ್ಕ ಮಹಾ ಗಣಪತಿ
ನಮ್ಮ ದೇಶದಲ್ಲಿ ಸಾಕಷ್ಟು ಗಣೇಶ ದೇಗುಲಗಳಿವೆ. ಆದರೆ ಧರ್ಮಸ್ಥಳ ಸಮೀಪವಿರುವ ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕದ ಗಣೇಶ ದೇಗುಲ ಅತ್ಯಂತ ಪ್ರಮುಖ ಮತ್ತು ವಿಶಿಷ್ಟವಾದದ್ದು. ತುಂಬಾ ಹಿಂದೆ ಗೋಪಾಲಕರಿಗೆ ಕಾಡಿನಲ್ಲಿ ಕಲ್ಲಿನ ಗಣಪತಿ ವಿಗ್ರಹ ದೊರೆಯುತ್ತದೆ ಅದನ್ನು ಒಂದು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿ ಸೌತೆಕಾಯಿ ಸಮರ್ಪಿಸುತ್ತಾರೆ ಹಾಗಾಗಿ ಸೌತಡ್ಕ ಎಂಬ ಹೆಸರು ಬರುತ್ತದೆ. ಇದರ ವಿಶೇಷತೆಯೆಂದರೆ ಅಲ್ಲಿ ಯಾವುದೇ ಕಟ್ಟಡವಿಲ್ಲ ಮತ್ತು ಗರ್ಭಗುಡಿಯಿಲ್ಲ. ಇಲ್ಲಿ ಹರಕೆ ಹೊತ್ತವರು ನೆರವೇರಿದ ನಂತರ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಬೇಡಿಕೆ ಪರಿಶುದ್ದವಾಗಿದ್ದರೆ ಎರಡು ತಿಂಗಳಲ್ಲಿಯೇ ನೆರವೇರುತ್ತದೆಯೆಂಬ ಪ್ರತೀತಿಯಿದೆ. ಪ್ರತಿ ವರ್ಷದ ಜನವರಿಯಲ್ಲಿ ಮಹಾಪೂಜೆ ನಡೆಸಲಾಗುತ್ತದೆ. ಇಲ್ಲಿ ಭಕ್ತರಿಗೆ ಪ್ರತಿದಿನವೂ ಅನ್ನದಾನವಿರುತ್ತದೆ. ಇಲ್ಲಿಗೆ 7 ಕಿಮೀ ದೂರದಲ್ಲಿ ಕಪಿಲಾ ನದಿ ಹರಿಯುತ್ತಿದ್ದು, ಅಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ವಾತಾವರಣ ರೋಮಾಂಚನ ಹುಟ್ಟಿಸುತ್ತದೆ. ಧರ್ಮಸ್ಥಳದಿಂದ 16 ಕಿಮೀ ಕೊಕ್ಕಡದಿಂದ 2 ಕಿಮೀ ಮತ್ತು ಪಟ್ರಮೆಯಿಂದ 6 ಕಿಮೀ ದೂರದಲ್ಲಿದೆ.

ಸೌತಡ್ಕ

ಸದಾಶಿವ ರುದ್ರ ದೇವಾಲಯ
ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಹೊಂದಿರುವ ಸೂರ್ಯ ಶ್ರೀ ಸದಾಶಿವ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸುರ್ಯ ಎಂಬ ಹಳ್ಳಿಯಲ್ಲಿದೆ. ಭೃಗು ಮಹರ್ಷಿಯ ಶಿಷ್ಯರೊಬ್ಬರು ಇಲ್ಲಿ ತಪಸ್ಸನ್ನು ಆಚರಿಸುತ್ತಿದ್ದರು ಎಂಬ ನಂಬಿಕೆಯಿದೆ. ಅವರ ತಪಸ್ಸಿಗೆ ಮೆಚ್ಚಿ ಶಿವಪಾರ್ವತಿ ಇಲ್ಲಿ ಲಿಂಗರೂಪದಲ್ಲಿ ನೆಲೆಯಾದರು ಎನ್ನುತ್ತದೆ ಸ್ಥಳ ಪುರಾಣ. ಇದನ್ನು ಸೂರ್ಯ ದೇವಾಲಯ ಎಂದೂ ಸಹ ಕರೆಯಲಾಗುತ್ತದೆ. ಇಲ್ಲಿ ಶಿವನನ್ನು ರುದ್ರ ಎಂದು ಪೂಜಿಸಲಾಗುತ್ತದೆ. ದೇವಸ್ಥಾನದ ಸಮೀಪ ಹರಕೆ ಬನವಿದೆ. ಇಲ್ಲಿ ಭಕ್ತರು ತಮ್ಮ ಸಂಕಲ್ಪ ಸಿದ್ದಿಸಿದ ನಂತರ ಮಣ್ಣಿನ ಗೊಂಬೆಗಳನ್ನು ಇಲ್ಲಿ ಅರ್ಪಿಸುತ್ತಾರೆ. ಮನುಷ್ಯ-ದೇವರು-ಹಾಗೂ ಮಣ್ಣಿನ ಶಾಶ್ವತ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಶ್ರೀ ಸದಾಶಿವ ದೇವರು, ಮಹಾಗಣಪತಿ, ನಾಗಬನ, ಪಿಲಿಚಾಮುಂಡಿ, ಕೊಡಮಣಿತ್ತಾಯಿ ಇಲ್ಲಿನ ಇತರೆ ಸನ್ನಿಧಿಗಳು. ಈ ಸ್ಥಳವು ಉಜಿರೆಯಿಂದ 4 ಕಿಮೀ ಬೆಳ್ತಂಗಡಿಯಿಂದ 8 ಕಿಮೀ ಮತ್ತು ಧರ್ಮಸ್ಥಳದಿಂದ 14 ಕಿಮೀ ದೂರದಲ್ಲಿದೆ.

ಸದಾಶಿವ

ಕುಕ್ಕೆ ಸುಬ್ರಹ್ಮಣ್ಯ
ಪರಶುರಾಮನ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಮಣ್ಯ ಕ್ಷೇತ್ರವು ಪುರಾಣ ಕಾಲದಿಂದಲೂ ನಾಗಾರಾಧನೆಗೆ ಪ್ರಸಿದ್ದಿಯಾಗಿದೆ. ಸರ್ಪಗಳ ರಾಜನಾದ ವಾಸುಕಿಯು ಗರುಡನ ಕೋಪದಿಂದ ಸರ್ಪ ಸಂಕುಲವನ್ನು ಕಾಪಾಡುವಂತೆ ಕೋರಿ ಪರಶಿವನನ್ನು ಕುರಿತು ತಪಸ್ಸು ಕೈಗೊಳ್ಳುತ್ತಾನೆ ಎನ್ನತ್ತದೆ ಪುರಾಣ. ತಪಸ್ಸಿಗೆ ಮೆಚ್ಚಿದ ಶಿವ ಸುಬ್ರಮಣ್ಯನನ್ನು ಸರ್ಪ ಸಂಕುಲವನ್ನು ರಕ್ಷಿಸಲಿಕ್ಕಾಗಿ ಕಳುಹಿಸುತ್ತಾನೆ. ಹಾಗಾಗಿ ಈ ದೇವಾಲಯ ಸರ್ಪಗಳ ದೇವತೆಯಾದ ಸುಬ್ರಮಣ್ಯನ ಪೂಜೆಗೆ ಮೀಸಲಾಗಿದೆ. ಸರ್ಪ ದೋಷದಿಂದ ಬರುವಂತಹ ಸಂತಾನಹೀನತೆ ದೃಷ್ಟಿಮಾಂದ್ಯ ಚರ್ಮವ್ಯಾಧಿ ಭೂಮಿದೋಷ ಇತ್ಯಾದಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ ಆಶ್ಲೇಷಬಲಿ ನಾಗಪ್ರತಿಷ್ಟೆ ಸೇವೆಗಳನ್ನು ಇಲ್ಲಿ ಭಕ್ತರು ನಡೆಸಿ ಪಾಪ ಪರಿಹಾರ ಮಾಡಿಕೊಳ್ಳುತ್ತಾರೆ. ಜನ್ಮಜನ್ಮಾಂತರಗಳ ದುರಿತಗಳ ನಾಶನಾದ ಸುಬ್ರಹ್ಮಣ್ಯ ದೇವ ಇಷ್ಟಾರ್ಥಗಳನ್ನು ಪೂರೈಸಿ ಪೊರೆಯುವ ಕಲಿಯುಗ ಪ್ರತ್ಯಕ್ಷ ದೇವರೆನಿಸಿಕೊಂಡಿದ್ದಾನೆ. ನಿತ್ಯವೂ ಆಗಮಿಸುವ ಸಹಸ್ರಾರು ಭಕ್ತರಿಗೆ ಕ್ಷೇತ್ರದಲ್ಲಿ ಅನ್ನದಾನವಿದೆ. ಧರ್ಮಸ್ಥಳದಿಂದ 50 ಕಿಮೀ ದೂರದಲ್ಲಿದ್ದು ರಾಜ್ಯದ ಎಲ್ಲಾ ಭಾಗಗಳಿಂದಲೂ ಸಾರಿಗೆ ಸಂಪರ್ಕವಿದೆ.

ಕುಕ್ಕೆ

ಚಂದ್ರನಾಥ ಸ್ವಾಮಿ ಬಸದಿ
ಚಂದ್ರನಾಥ ಸ್ವಾಮಿ ಬಸದಿಯು ಜೈನ ದೇವಾಲಯವಾಗಿದ್ದು, ಇದು ಧರ್ಮಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಚಂದ್ರನಾಥ ಸ್ವಾಮಿಗೆ ಸಮರ್ಪಿತವಾಗಿರುವ ಈ ದೇವಾಲಯದ ಪ್ರಶಾಂತತೆ ಯಾತ್ರಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಬಸದಿಯು ಧ್ಯಾನಕ್ಕೆ ಸೂಕ್ತ ಸ್ಥಳವಾಗಿದೆ.

ಚಂದ್ರಬಸದಿ

ಬಾಹುಬಲಿ ಬೆಟ್ಟ
ರತ್ನಗಿರಿ ಬೆಟ್ಟದ ಮೇಲಿರುವ ತ್ಯಾಗ ಮತ್ತು ನಿಸ್ವಾರ್ಥತೆಯ ಸಂಕೇತವಾದ ಬಾಹುಬಲಿ ಪ್ರತಿಮೆ ಧರ್ಮಸ್ಥಳ ಕ್ಷೇತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಮೆಟ್ಟಿಲುಗಳನ್ನು ಹತ್ತಿ ಅಥವಾ ರಸ್ತೆ ಮಾರ್ಗದ ಮೂಲಕವೂ ಪ್ರತಿಮೆ ಬಳಿ ತೆರಳಬಹುದು. ಮೆಟ್ಟಿಲುಗಳ ಮಾರ್ಗ ತೀರಾ ಪ್ರಶಾಂತೆಯಿಂದ ಕೂಡಿದ್ದು ಬೆಟ್ಟದ ಮೇಲಿನ ಪ್ರತಿಮೆಯ ವಾಸ್ತುಶಿಲ್ಪ ಮತ್ತು ದೃಶ್ಯಾವಳಿ ಎಂತಹವರನ್ನೂ ಸೆಳೆಯುತ್ತದೆ.

ಬಾಹುಬಲಿ

ಅಣ್ಣಪ್ಪ ಬೆಟ್ಟ
ಅಣ್ಣಪ್ಪ ಬೆಟ್ಟ ಪ್ರದೇಶವು ಧರ್ಮಸ್ಥಳದ ಒಂದು ಗುಡ್ಡವಾಗಿದ್ದು ಧರ್ಮ ದೇವತೆಗಳ ನಾಲ್ಕು ದೇವಾಲಯಗಳಿಂದ ಇದು ಸುತ್ತುವರಿಯಲ್ಪಟ್ಟಿದೆ. ಆದರೆ ಈ ಪವಿತ್ರ ಸ್ಥಳದಲ್ಲಿ ಯಾವುದೇ ವಿಗ್ರಹಗಳಿಲ್ಲ. ಬಹುಮುಖ್ಯವಾಗಿ ಇಲ್ಲಿಗೆ ಮಕ್ಕಳು ಮತ್ತು ಮಹಿಳೆಯರಿಗೆ ಪ್ರವೇಶವಿಲ್ಲ. ಜೈನ ಕುಟುಂಬದ ಆದರಾತಿಥ್ಯವನ್ನು ಕಂಡು ಆಕರ್ಷಿತರಾಗಿ ನಾಲ್ಕು ಧರ್ಮದೇವತೆಗಳೂ ಈ ಅಣ್ಣಪ್ಪ ಬೆಟ್ಟಕ್ಕೆ ಭೇಟಿ ನೀಡಿದ್ದರು ಎಂಬುದು ಹಲವರ ನಂಬಿಕೆ.

ಅಣ್ಣಪ್ಪ

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!