ಪಶ್ಚಿಮ ಬಂಗಾಳದಲ್ಲಿ ಜಗನ್ನಾಥ ದೇವಾಲಯದ ಉದ್ಘಾಟನೆ!
ಪಶ್ಚಿಮ ಬಂಗಾಳದ ದಿಘಾ ಪಟ್ಟಣದಲ್ಲಿ ಹೊಸ ಜಗನ್ನಾಥ ದೇವಾಲಯವನ್ನು ಉದ್ಘಾಟಿಸಲಾಗಿದೆ.
ಕೊಲ್ಕತ್ತಾ: ಧಾರ್ಮಿಕ ಪ್ರವಾಸವನ್ನು ಇಷ್ಟಪಡುವ ಪ್ರವಾಸಿಗರಿಗೆ ಶುಭ ಸುದ್ದಿಯೊಂದಿದೆ. ಪಶ್ಚಿಮ ಬಂಗಾಳದ(West Bengal) ದಿಘಾ ನಗರದಲ್ಲಿ ಪುರಿ ಮಾದರಿಯ ಜಗನ್ನಾಥ ದೇವಾಲಯವು(Jagannath Temple) ನಿರ್ಮಾಣವಾಗಿದ್ದು, ಮಮತಾ ಬ್ಯಾನರ್ಜಿ ಬುಧವಾರ(ಏ.30) ಉದ್ಘಾಟಿಸಿದ್ದಾರೆ. ಪ್ರತಿಷ್ಠಾಪನೆಯ ಸಮಾರಂಭವು ಬಹಳ ಅದ್ಧೂರಿಯಾಗಿ ನಡೆದಿದ್ದು, ವಿವಿಧ ಯಾತ್ರಾ ಸ್ಥಳಗಳಿಂದ ತರಲಾದ ಪವಿತ್ರ ಜಲವನ್ನು ಪೂಜಾ ಕೈಂಕರ್ಯಕ್ಕೆ ಬಳಸಿಕೊಳ್ಳಲಾಗಿದೆ. 20 ಎಕರೆ ವಿಸ್ತೀರ್ಣದ ಭೂಮಿಯಲ್ಲಿ 250 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸರಿ ಸುಮಾರು 800 ಕುಶಲಕರ್ಮಿಗಳು ರಾಜಸ್ಥಾನದಿಂದ ತರಿಸಲಾದ ಗುಲಾಬಿ ಮರಳು ಗಲ್ಲಿನಲ್ಲಿ ನಿರ್ಮಿಸಿದ್ದಾರೆ. ಮುಂಬರುವ ದಿನಗಳಲ್ಲಿ ವೈಭವಯುತವಾದ ವಾರ್ಷಿಕ ರಥಾ ಯಾತ್ರೆಯನ್ನು ನಡೆಸಲು ಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಪುರಿ ಜಗನ್ನಾಥ ದೇವಾಲಯದ ಸೇವಕರು, ಇಸ್ಕಾನ್ ಮತ್ತು ಇತರ ಧಾರ್ಮಿಕ ಸಂಸ್ಥೆಗಳ ಪುರೋಹಿತರು ಬಹಳ ಅಚ್ಚುಕಟ್ಟಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಕಲಶ ಯಾತ್ರೆ ಮತ್ತು ಮಹಾಯಜ್ಞವನ್ನೂ ನಡೆಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇವಾಲಯದ ಉದ್ಘಾಟನೆಯ ಸಕಲ ಸಿದ್ಧತೆಗಳನ್ನು ನೋಡಿಕೊಂಡರು. ವಿವಿಧ ಯಾತ್ರಾ ಸ್ಥಳಗಳಿಂದ ತಂದ ಪವಿತ್ರ ನೀರಿನಿಂದ ಪೂಜೆ ಮಾಡಲಾಯಿತು. ಸಾಕಷ್ಟು ಪವಿತ್ರ ಆಚರಣೆಗಳಲ್ಲಿ ಬ್ಯಾನರ್ಜಿ ಭಾಗವಹಿಸಿದರು. ಪ್ರಾಣ ಪ್ರತಿಷ್ಠಾಪನೆಯನ್ನು ಮಧ್ಯಾಹ್ನ 3:00 ರಿಂದ ಮಧ್ಯಾಹ್ನ 3:10 ರವರೆಗೆ ನಡೆಸಲಾಯಿತು.
ಹೊಸ ದೇವಾಲಯವು ರಾಜ್ಯದ ಪ್ರವಾಸದೋಮ್ಮವನ್ನು ಉತ್ತೇಜಿಸುತ್ತದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. ಪುರಿ ಮಾದರಿಯ ಈ ದೇವಾಲಯಕ್ಕೆ ಮುಂದಿನ ತಿಂಗಳಿನಿಂದ ಸಾವಿರಾರು ಭಕ್ತಾದಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ.