Thursday, June 12, 2025
Thursday, June 12, 2025

ಕರ್ನಾಟಕವೇ ನನ್ನ ನೆಚ್ಚಿನ ತಾಣ: ಎಚ್.ಕೆ.ಪಾಟೀಲ್

ಅಂತಾರಾಷ್ಟ್ರೀಯ ಹಾಗೂ ದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಮ್ಮ ಸರಕಾರ ಸೀ ಪ್ಲೇನ್ಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅಂದರೆ ನೀರಿನ ಮೇಲೆ ವಿಮಾನಗಳನ್ನು ಇಳಿಸಲು ಚಿಂತನೆ ನಡೆಸಿದ್ದೇವೆ. ಆಲಮಟ್ಟಿ, ಕಮಲಾಪುರ ಕೆರೆ, ಡಂಬಳ ಹಾಗೂ ಲಕ್ಕುಂಡಿಯ ಕೆರೆಗಳಲ್ಲಿ ಸೀ ಪ್ಲೇನ್ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇವೆ. ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.

ಕರ್ನಾಟಕದಲ್ಲಿ ಹತ್ತಾರು ಜಗತ್ತುಗಳಿವೆ. ಈ ಜಗತ್ತನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯನ್ನಿಟ್ಟುಕೊಂಡು ಸರಕಾರ ಪ್ರವಾಸೋದ್ಯಮದ ಉತ್ತೇಜನ ನೀಡುತ್ತಿದೆ. ಈ ಮೂಲಕ ಕರ್ನಾಟಕ ಪ್ರವಾಸೋದ್ಯಮವನ್ನು ಮತ್ತೊಂದು ಸ್ತರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯ ಉದ್ಘಾಟನೆಯ ಸಮಯದಲ್ಲಿ ಪ್ರವಾಸಿ ಪ್ರಪಂಚಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕರ್ನಾಟಕ ಪ್ರವಾಸೋದ್ಯಮ, ಪ್ರವಾಸಿ ತಾಣ, ರಾಜ್ಯದಲ್ಲಿರುವ ಅವಕಾಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ಪೂರ್ಣಪಾಠ ಇಲ್ಲಿದೆ.

h k patel

* ಕರ್ನಾಟಕ ಇತರೆ ರಾಜ್ಯಗಳಿಗಿಂತ ವಿಶಿಷ್ಟ ಹೇಗೆ?

ಜಗತ್ತಿನ ಹಲವು ದೇಶಗಳಲ್ಲಿ ಇಲ್ಲದ ಪ್ರವಾಸಿ ಪ್ರಪಂಚ ನಮ್ಮ ರಾಜ್ಯದಲ್ಲಿದೆ. ಯುನೆಸ್ಕೋ ಮನ್ನಣೆ ಪಡೆದಿರುವ ಹಲವು ಸ್ಥಳಗಳಿವೆ. ಈ ಎಲ್ಲವೂ ಕರ್ನಾಟಕದಲ್ಲಿದೆ ಎನ್ನುವುದು ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ಯಾವುದೋ ಒಂದು ರೀತಿಯ ಪ್ರವಾಸೋದ್ಯಮವಿಲ್ಲ. ಒಂದೆಡೆ ರಾಜರು ಆಳ್ವಿಕೆ ನಡೆಸಿರುವ ಐತಿಹಾಸಿಕ ಪ್ರವಾಸೋದ್ಯಮವಿದ್ದರೆ, ಇನ್ನೊಂದೆಡೆ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ತಿಳಿಸುವ ಹಲವಾರು ಸ್ಮಾರಕಗಳಿವೆ. ಮತ್ತೊಂದೆಡೆ ಸಹ್ಯಾದ್ರಿ ಬೆಟ್ಟ, ಕಪ್ಪತ್ತಗುಡ್ಡ, 320 ಕಿ.ಮೀ.ನಲ್ಲಿ ಚಾಚಿರುವ ಸಮುದ್ರ, ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳು ನಮ್ಮ ರಾಜ್ಯದ ಸಂಪತ್ತು. ಯಲ್ಲಮ್ಮನ ಗುಡ್ಡ, ಹುಲಿಗೆಮ್ಮ, ದತ್ತಾತ್ರೇಯ, ಅಂಜನಾದ್ರಿ, ಬಸನಬಾಗೇವಾಡಿ ಸೇರಿದಂತೆ ರಾಜ್ಯಕ್ಕೆ ಹೆಮ್ಮೆ ಮೂಡಿಸಿದ ಕ್ಷೇತ್ರಗಳು ನಮ್ಮಲ್ಲಿವೆ. ಇವುಗಳೊಂದಿಗೆ ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವವರಿಗೆ, ಒಂದು ಶ್ರೇಷ್ಠ ಪ್ರವಾಸಿ ತಾಣ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ), ಮೈಸೂರು, ಕರಾವಳಿ ಹೀಗೆ ಒಂದು ಪ್ರದೇಶದಲ್ಲಿ ಒಂದೊಂದು ಸಂಸ್ಕೃತಿಯೇ ಭಿನ್ನ. ಕರ್ನಾಟಕದ ಆಹಾರ ಪದ್ಧತಿಯೂ ಒಂದು ಸ್ಥಳದಿಂದ ಇನ್ನೊಂದು ಕಡೆ ಭಿನ್ನವಾಗಿದೆ.

* ಖಾಸಗಿ ಪಾಲುದಾರಿಕೆಯ ಕಾರ್ಯ ಹೇಗಿದೆ?

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿಯವರು ಆಸಕ್ತಿ ವಹಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದಿಂದ ನಮ್ಮ ಇತಿಹಾಸ, ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸುವುದಕ್ಕೆ ಕೇಳಿದ್ದು, ಅನೇಕರು ಸಹಾಯ ಮಾಡಲು ಒಪ್ಪಿದ್ದಾರೆ. ಕರ್ನಾಟಕದಲ್ಲಿ ಸುಮಾರು 25 ಸಾವಿರ ಸ್ಮಾರಕಗಳಿವೆ. ಈ ಪೈಕಿ ಸುಮಾರು ಐದು ಸಾವಿರ ದೊಡ್ಡ ದೇವಾಲಯಗಳಿವೆ. ಆ ಸ್ಮಾರಕಗಳನ್ನು ಉಳಿಸಿ, ಬೆಳೆಸಲು ಖಾಸಗಿ ಸಹಭಾಗಿತ್ವ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಖಾಸಗಿಯವರಿಗೆ ಸ್ಮಾರಕ ಗಳನ್ನು ದತ್ತು ಪಡೆಯಲು ಅವಕಾಶ ನೀಡುತ್ತಿದ್ದೇವೆ. ಇದು ದೊಡ್ಡ ಚಳವಳಿಯಾಗಿ ಬೆಳೆಯಬೇಕು. ಇದರಿಂದ ನಮ್ಮ ಸ್ಮಾರಕಗಳು ಮೂಲಸ್ವರೂಪಕ್ಕೆ ಬಂದರೆ ರಾಷ್ಟ್ರ ದಲ್ಲಿಯೇ ಕರ್ನಾಟಕ ಅದ್ಭುತವಾಗಿರುವ ಪ್ರವಾಸಿ ಕೇಂದ್ರವಾಗಲಿದೆ. ಆದ್ದರಿಂದ ಒಂದು ರಾಜ್ಯ ಹಲವು ಜಗತ್ತು ಎಂದು ಕರೆಯುತ್ತೇನೆ. ಇದನ್ನು ಬೆಳೆಸಲು ಇನ್ನಷ್ಟು ಖಾಸಗಿ ಪಾಲುದಾರಿಕೆ ಅಗತ್ಯ.

* ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಲ್ಲಿ ರಾಜ್ಯ ಹಿಂದೆ ಉಳಿದಿದೆಯೇ?

ನೀವು ಹೇಳಿದಂತೆ ದೇಶಿ ಪ್ರವಾಸಿಗರ ಭೇಟಿಯಲ್ಲಿ ಟಾಪ್ 5ನೇ ಸ್ಥಾನದಲ್ಲಿ ಕರ್ನಾಟಕವಿದೆ. ಆದರೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ಪ್ರಮುಖವಾಗಿ, ಕರ್ನಾಟಕದ ಪ್ರವಾಸಿತಾಣಗಳ ಸುತ್ತ ಮುತ್ತ ವಿಮಾನ ನಿಲ್ದಾಣಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹಂಪಿ, ಗೋಕರ್ಣಕ್ಕೆ ಹೋಗಬೇಕು ಎಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರಬೇಕು. ಬಾದಾಮಿ, ಐಹೊಳೆ ಸೇರಿದಂತೆ ಹಲವು ಪ್ರವಾಸಿ ಕ್ಷೇತ್ರಕ್ಕೆ ಹೋಗಲು ವಿಮಾನ ನಿಲ್ದಾಣಗಳಿಂದ 150ರಿಂದ 200 ಕಿಮೀ ವರೆಗೆ ರಸ್ತೆ ಪ್ರಯಾಣ ಮಾಡಬೇಕು. ಈ ಕಾರಣಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಿರಬಹುದು.

ಆದ್ದರಿಂದ ಅಂತಾರಾಷ್ಟ್ರೀಯ ಹಾಗೂ ದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಮ್ಮ ಸರಕಾರ ಸೀ ಪ್ಲೇನ್‌ಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅಂದರೆ ನೀರಿನ ಮೇಲೆ ವಿಮಾನಗಳನ್ನು ಇಳಿಸಲು ಚಿಂತನೆ ನಡೆಸಿದ್ದೇವೆ. ಆಲಮಟ್ಟಿ, ಕಮಲಾಪುರ ಕೆರೆ, ಡಂಬಳ ಹಾಗೂ ಲಕ್ಕುಂಡಿಯ ಕೆರೆಗಳಲ್ಲಿ ಸೀ ಪ್ಲೇನ್ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇವೆ. ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆಂದು 'ಗೋಲ್ಡನ್ ಚಾರಿಯಟ್’ ಎನ್ನುವ ರೈಲು ಪ್ರವಾಸ ಆರಂಭಿಸಿದ್ದೇವೆ. ಇದು ಆರ್ಥಿಕವಾಗಿ ಹೊರೆಯಾದರೂ, ಕರ್ನಾಟಕದ ಅದ್ಭುತ ದರ್ಶನ ಮಾಡಲು ಸಹಾಯವಾಗುತ್ತದೆ. ಇದರಿಂದ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

* ಗ್ಯಾರಂಟಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆಯೇ?

ಪ್ರವಾಸ ಮಾಡುವುದು ಚಿಂತೆ ಮಾಡುವ ಸಮಯದಲ್ಲಿ ಅಲ್ಲ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಚಿಂತನೆ ಕಡಿಮೆಯಾಗಿದೆ. ಇದರಿಂದಾಗಿ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಬದುಕಲ್ಲಿ ಬದಲಾವಣೆ ಬಂದಿದೆ. ಶಕ್ತಿ ಯೋಜನೆಯಿಂದ ಉಚಿತವಾಗಿ ಪ್ರವಾಸ ಮಾಡಲು ಸಾಧ್ಯ ಎನ್ನುವ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಮೂಲಕ ದೇಶಿಯ ಪ್ರವಾಸೋದ್ಯಮ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ.

WhatsApp Image 2025-06-06 at 19.57.28

* ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳೇನು?

ಪ್ರವಾಸೋದ್ಯಮ ಇಲಾಖೆಗೆ ಎಷ್ಟೇ ಅನುದಾನ ನೀಡಿದರೂ ಕಡಿಮೆಯಾಗುತ್ತದೆ. ಆದರೆ ಅನುದಾನ ನೀಡದಿದ್ದರೂ ನಡೆಯುವ ಇಲಾಖೆ ಇದಾಗಿದೆ. ಆದರೆ ಪ್ರವಾಸಿತಾಣಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಹೆಚ್ಚಿಸಲು ಅನುದಾನ ಕೇಳುತ್ತಿದ್ದೇವೆ. ಮುಂದಿನ ದಿನದಲ್ಲಿ ಅನುದಾನ ದೊರಕುತ್ತದೆ ಎನ್ನುವ ವಿಶ್ವಾಸ ನನಗಿದೆ.

* ಕೇಂದ್ರದ ಪ್ರಸಾದಂ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನ ಹೇಗಿದೆ?

ಕಳೆದ ಕೆಲ ತಿಂಗಳಲ್ಲಿ ಕೇಂದ್ರ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಒಟ್ಟಾರೆ, ಮೂಲ ಸೌಕರ್ಯ ಸೃಷ್ಟಿಸಲು ಅನುದಾನ ನೀಡಿದ್ದಾರೆ. ಕೇಂದ್ರ ಸರಕಾರವೂ ಪ್ರವಾಸೋದ್ಯಮದ ಬೆಳವಣಿಗೆಗೆ ಅನುದಾನ ನೀಡುತ್ತಿದೆ.

* ನಿಮ್ಮ ನೆಚ್ಚಿನ ಪ್ರವಾಸಿ ಸ್ಥಳ ಯಾವುದು?

ಕರ್ನಾಟಕವೇ ನನ್ನ ನೆಚ್ಚಿನ ತಾಣ. ಅದಕ್ಕಿಂತ ದೊಡ್ಡ ಪ್ರವಾಸಿ ತಾಣವಿದೆ ಎಂದು ಅನಿಸಿಲ್ಲ. ಅನೇಕರಿಗೆ ಗೋವಾ ಪ್ರವಾಸೋದ್ಯಮದ ಬಗ್ಗೆ ಹೇಳುತ್ತಾರೆ. ಆದರೆ ಅಲ್ಲಿ ಕ್ಯಾಸಿನೋ ಆಡಲು ಹೋಗುತ್ತಾರೆ. ಆದರೆ ಕರ್ನಾಟಕದಲ್ಲಿ ನಮ್ಮ ಸಂಸ್ಕೃತಿಗೆ ಸೀಮಿತಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡುತ್ತೇವೆ. ಕರ್ನಾಟಕದಲ್ಲಿ ಕೇವಲ ಐಷಾರಾಮಿ ಅಥವಾ ಮನೋರಂಜನೆಗೆ ಸೀಮಿತಗೊಂಡಿರುವ ಪ್ರವಾಸವಲ್ಲ. ಕರ್ನಾಟಕದ ಪ್ರವಾಸ ಚಿಂತನೆ, ಜ್ಞಾನವನ್ನು ತಂದುಕೊಡುವ ಪ್ರವಾಸವಾಗಿರಬೇಕು. ನಮ್ಮ ಇತಿಹಾಸ, ಸಂಸ್ಕೃತಿ ಅರಿಯುವಂತೆ ಮಾಡಬೇಕು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!