ಕರ್ನಾಟಕದ ಮೊದಲ ಕಡಲ ವನ್ಯ ಜೀವಿಧಾಮ: ಏನಿದರ ವಿಶೇಷತೆ?
ಕರ್ನಾಟಕ ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವು ಕಾರವಾರದಲ್ಲಿ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಅಪ್ಸರಕೊಂಡ-ಮುಗಲಿ ಕಡಲನ್ನು ಸರ್ಕಾರವು ವನ್ಯ ಜೀವಿಧಾಮವಾಗಿ ಘೋಷಿಸಿದೆ.
ಕಾರವಾರ: ಕರ್ನಾಟಕ(Karnataka) ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವು(Marine Life Sanctuary) ಕಾರವಾರದಲ್ಲಿ(Karwar) ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಅಪ್ಸರಕೊಂಡ-ಮುಗಲಿ( Mugli-Apsarakonda ) ಕಡಲನ್ನು ಸರ್ಕಾರವು ವನ್ಯ ಜೀವಿಧಾಮವಾಗಿ ಘೋಷಿಸಿದೆ. ಈ ಮೂಲಕ ಕರ್ನಾಟಕ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಅಪ್ಸರಕೊಂಡ-ಮುಗಲಿ ಬೀಚ್ ಅನ್ನು ರಾಜ್ಯದ ಮೊದಲ ಕಡಲ ವನ್ಯ ಜೀವಿಧಾಮವನ್ನಾಗಿ ಸರ್ಕಾರ ಘೋಷಿಸಿದೆ. ಸರ್ಕಾರದ ನಿರ್ಧಾರವು ಈ ಪ್ರದೇಶದಲ್ಲಿನ ಸಮುದ್ರ ಜೀವವೈವಿಧ್ಯತೆಯನ್ನು ಸಂರಕ್ಷಿಸಲಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ (SBWL) ಪ್ರಮುಖ ಸಮಿತಿಯು ಅಭಯಾರಣ್ಯದ ಪ್ರಸ್ತಾವನೆಯನ್ನು ಅಧಿಕೃತವಾಗಿ ಅನುಮೋದಿಸಿದೆ. ರಾಜ್ಯ ಸಚಿವ ಸಂಪುಟದಿಂದ ಔಪಚಾರಿಕವಾಗಿ ಅನುಮೋದನೆ ಸಿಗುವುದು ಬಾಕಿಯಿದೆ.
ಅಪ್ಸರಕೊಂಡ-ಮುಗಲಿ ಕಡಲ ವನ್ಯ ಜೀವಿಧಾಮವು ಭಾರತದ ಏಳನೇ ಅಭಯಾರಣ್ಯವಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈ ಜೀವಿಧಾಮವಿದ್ದು, ಗುಜರಾತ್, ಒಡಿಶಾ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿಯೂ ಬಹಳ ವಿಶೇಷವಾದ ಕಡಲ ವನ್ಯ ಜೀವಿಧಾಮವಿದೆ.
ಈ ಅಭಯಾರಣ್ಯವು ಅರೇಬಿಯನ್ ಸಮುದ್ರದ 835 ಹೆಕ್ಟೇರ್ ಪ್ರಾದೇಶಿಕ ನೀರನ್ನು ಒಳಗೊಂಡಂತೆ ಒಟ್ಟು 5,960 ಹೆಕ್ಟೇರ್ ಪ್ರದೇಶವನ್ನು ಒಳಗೊಳ್ಳಲು ಸಿದ್ಧವಾಗಿದೆ. ಈ ಸಮುದ್ರಮಟ್ಟವು ಕರಾವಳಿಯಿಂದ ಸುಮಾರು ಆರು ಕಿ.ಮೀ. ವಿಸ್ತರಿಸಲಿದ್ದು, ವಿವಿಧ ಸಮುದ್ರ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳಿಗೆ ಬಹಳ ಸುರಕ್ಷಿತವಾದ ಆವಾಸಸ್ಥಾನವನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ, ಅಭಯಾರಣ್ಯವು ಮತ್ತೊಂದು 835 ಹೆಕ್ಟೇರ್ ಲ್ಯಾಟರೈಟ್ ಪ್ರಸ್ಥಭೂಮಿಯನ್ನು ಸಂಯೋಜಿಸಲಿದೆ.ಇದು ಕೂಡ ಪರಿಸರ ವೈವಿಧ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.