ನಾಗರಹೊಳೆಯನ್ನು ಮರೆಯೋದುಂಟೆ? ಪ್ರಕೃತಿ ಪ್ರಿಯರ ಫೇವರಿಟ್ ತಾಣ!
ಕರ್ನಾಟಕ ರಾಜ್ಯದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರಾಣಿ,ಪಕ್ಷಿ ಮತ್ತು ಹಚ್ಚ ಹಸುರಿನ ವಾತಾವರಣವನ್ನು ಇಷ್ಟಪಡುವವರು ಇಲ್ಲಿಗೆ ಒಮ್ಮೆಯಾದರೂ ಭೇಟಿ ಕೊಡಬೇಕು. ಜುಳುಜುಳು ಹರಿಯುವ ತೊರೆ, ಕುಲುಕುಲು ಸದ್ದು ಮಾಡುವ ನವಿಲು, ಘೀಳಿಡುವ ಆನೆ, ಚಿಂವ್ಗುಡುವ ಪಕ್ಷಿಗಳು ಹೀಗೆ ಅಲ್ಲಿ ಎಲ್ಲವೂ ವಿಸ್ಮಯ.
ಕರ್ನಾಟಕ(Karnataka) ರಾಜ್ಯದಲ್ಲಿರುವ ನಾಗರಹೊಳೆ(Nagarahole) ರಾಷ್ಟ್ರೀಯ ಉದ್ಯಾನವನವು(National Park) ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರಾಣಿ,ಪಕ್ಷಿ ಮತ್ತು ಹಚ್ಚ ಹಸುರಿನ ವಾತಾವರಣವನ್ನು ಇಷ್ಟಪಡುವವರು ಇಲ್ಲಿಗೆ ಒಮ್ಮೆಯಾದರೂ ಭೇಟಿ ಕೊಡಬೇಕು. ಜುಳುಜುಳು ಹರಿಯುವ ತೊರೆ, ಕುಲುಕುಲು ಸದ್ದು ಮಾಡುವ ನವಿಲು, ಘೀಳಿಡುವ ಆನೆ, ನೆಗೆಯುವ ಜಿಂಕೆ, ಚಿಂವ್ಗುಡುವ ಪಕ್ಷಿಗಳು ಹೀಗೆ ಅಲ್ಲಿ ಎಲ್ಲವೂ ವಿಸ್ಮಯ. ಬದುಕಿನ ಹತ್ತಾರು ಜಂಜಡಗಳ ನಡುವೆ ಬಿಡುವು ಮಾಡಿಕೊಂಡು ನಾಗರಹೊಳೆಗೆ ಭೇಟಿಕೊಟ್ಟರೆ ಮನಸ್ಸು ನಿರಾಳವಾಗುತ್ತದೆ. ರಾಜ್ಯದ ಹಲವು ಪ್ರವಾಸಿ ತಾಣಗಳ ಪೈಕಿ ನಾಗರಹೊಳೆ ದಿ ಬೆಸ್ಟ್ ತಾಣ. ಅಲ್ಲಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಹೋಗುತ್ತಾರೆ. ನಾಗರಹೊಳೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಆನೆಗಳಿಗೆ ಹೆಚ್ಚು ಪ್ರಖ್ಯಾತವಾಗಿದೆ. ಇಲ್ಲಿ ಏಷ್ಯಾದ ಆನೆಗಳು ಕಂಡುಬರುತ್ತವೆ. ಮರಿ ಆನೆಗಳಿಂದ ಹಿಡಿದು ದೊಡ್ಡ ಆನೆಗಳ ಹಿಂಡನ್ನು ಒಟ್ಟಿಗೆ ನೋಡಬಹುದು. ಈ ಉದ್ಯಾನವನವು ಸರಿ ಸುಮಾರು 643.392 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಈ ಉದ್ಯಾನವನವು ಒಂದು ಕಾಲದಲ್ಲಿ ಮೈಸೂರು ಮಹಾರಾಜರು ಬೇಟೆಯಾಡುವ ಸ್ಥಳವಾಗಿತ್ತು. ನಂತರ ಇದನ್ನು 1970 ರ ದಶಕದಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದೆ. ಜೀಪ್ ಸಫಾರಿ, ಆನೆ ಸಫಾರಿ ಮತ್ತು ಕಬಿನಿ ನದಿಯಲ್ಲಿನ ದೋಣಿ ವಿಹಾರಕ್ಕೆ ಇದು ಪ್ರಸಿದ್ಧವಾಗಿದೆ.
ನಾಗರಹೊಳೆಯ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?
ಈ ಉದ್ಯಾನವನಕ್ಕೆ ನಾಗರಹೊಳೆ ನದಿಯ ಹೆಸರನ್ನೇ ಇಡಲಾಗಿದೆ. ಇದು ದಟ್ಟವಾದ ಕಾಡಿನ ನಡುವೆ ಗುಪ್ತಗಾಮಿನಿಯಂತೆ ಹರಿಯುತ್ತದೆ. ಇಲ್ಲಿ ಮರಗಳು ಮತ್ತು ವಿವಿಧ ರೀತಿಯ ಪ್ರಾಣಿಗಳನ್ನು ನೋಡುವುದರ ಜೊತೆಗೆ ಕಣಿವೆಗಳು, ಸಣ್ಣ ನದಿಗಳು, ಬೆಟ್ಟಗಳು ಮತ್ತು ಜಲಪಾತಗಳನ್ನು ಸಹ ನೋಡಬಹುದು. ಉದ್ಯಾನವನವು ಹುಲಿ, ಚಿರತೆ, ಕಾಡು ನಾಯಿಗಳು, ಆನೆ, ಪ್ಯಾಂಥರ್, ಗೌರ್ ಮತ್ತು ಜಿಂಕೆಗಳು, ವಿವಿಧ ಪಕ್ಷಿಗಳು ಸೇರಿದಂತೆ ಅನೇಕ ವನ್ಯಜೀವಿ ಪ್ರಭೇದಗಳಿಗೆ ಆವಾಸಸ್ಥಾನವಾಗಿದೆ. · ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲಾಗುತ್ತದೆ. ಇದು ಕರ್ನಾಟಕದ ವನ್ಯಜೀವಿ ಅಭಯಾರಣ್ಯವಾಗಿದೆ. ನಾಗರಹೊಳೆಯು ಕೊಡಗು ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ನಡುವೆ ಇದೆ.

280ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಪಕ್ಷಿ ಪ್ರೇಮಿಗಳ ಪಾಲಿನ ಸ್ವರ್ಗಸೀಮೆ. ಉದ್ಯಾನವನದ ದಟ್ಟವಾದ ಕಾಡುಗಳು ಮತ್ತು ಜಲಮೂಲಗಳು ಮಲಬಾರ್ ಟ್ರೋಗನ್, ಇಂಡಿಯನ್ ಸ್ಕಿಮಿಟರ್ ಬಾಬ್ಲರ್ ಮತ್ತು ಕ್ರೆಸ್ಟೆಡ್ ಸರ್ಪೆಂಟ್ ಈಗಲ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ಆಕರ್ಷಿಸುತ್ತವೆ. ಕಬಿನಿ ನದಿ ಪ್ರದೇಶವು ಪಕ್ಷಿ ವೀಕ್ಷಣೆಗೆಂದೇ ಜನಪ್ರಿಯವಾಗಿದೆ. ಇಲ್ಲಿ ಆನೆಗಳೂ ಇರುವುದರಿಂದ ಅವುಗಳ ಓಡಾಟ ಮತ್ತು ದಿನಚರಿಯನ್ನು ನೋಡಬಹುದು. ಮಾವುತರು ಆನೆಗೆ ಸ್ನಾನ ಮಾಡಿಸುವ ದೃಶ್ಯವು ಖುಷಿಕೊಡುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಚಾರಣಕ್ಕೂ ಅವಕಾಶವಿದೆ. ಚಾರಣ ಪ್ರಿಯರು ಅರಣ್ಯ ಪರಿಸರ ವ್ಯವಸ್ಥೆಯನ್ನು ಹತ್ತಿರದಿಂದ ನೋಡಬಹುದು.
ಭೇಟಿಯ ಸಮಯ
ನಾಗರಹೊಳೆಗೆ ಅಕ್ಟೋಬರ್ ನಿಂದ ಮೇ ತಿಂಗಳ ನಡುವೆ ಭೇಟಿ ನೀಡುವುದು ಸೂಕ್ತ. ಜೂನ್ನಿಂದ ಸೆಪ್ಟೆಂಬರ್ವರೆಗೆ ಮಾನ್ಸೂನ್ ಅವಧಿಯಲ್ಲಿ ಮಳೆಯಿಂದಾಗಿ ಉದ್ಯಾನವನ್ನು ಮುಚ್ಚಲಾಗುತ್ತದೆ.
ಸಫಾರಿ ಸಮಯ
ಬೆಳಗ್ಗೆ - 5:30 ರಿಂದ 10:00 ರವರೆಗೆ
ಸಂಜೆ - 3:00 ರಿಂದ 7:00 ರವರೆಗೆ
ಜೀಪ್ ಸಫಾರಿಯಲ್ಲಿ 6 ಪ್ರಯಾಣಿಕರುಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಆದರೆ ಬಸ್ ಸಫಾರಿಯಲ್ಲಿ ಸರಿ ಸುಮಾರು 25 ರಿಂದ 30 ಪ್ರಯಾಣಿಕರು ಕುಳಿತುಕೊಳ್ಳಬಹುದು.
ದೋಣಿ ಸಫಾರಿ
ಬೆಳಗ್ಗೆ - 6:30 ರಿಂದ 9:15 ರವರೆಗೆ
ಸಂಜೆ - 3:30 ರಿಂದ 6:15 ರವರೆಗೆ
ಬಸ್ ಸಫಾರಿ
ಬೆಳಗ್ಗೆ - 6:00 ರಿಂದ 9:00 ರವರೆಗೆ
ಸಂಜೆ: 3:00 ರಿಂದ 5:00 ರವರೆಗೆ
ನಾಗರಹೊಳೆಗೆ ಕಾರು, ಬಸ್ಸು, ರೈಲು ಮತ್ತು ಬೈಕಿನ ಮೂಲಕ ಹೋಗಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಿಂದ ನಾಗರಹೊಳೆಯು 80 ಕಿ.ಮೀ ದೂರವಿದೆ