ಆಪರೇಷನ್ ಸಿಂದೂರ: ಬಹುತೇಕ ವಿಮಾನಗಳು ಸ್ಥಗಿತ!
ಮೇ 7 ರಂದು ಭಾರತ ದೇಶವು "ಆಪರೇಷನ್ ಸಿಂದೂರ್" ಅನ್ನು ಪ್ರಾರಂಭಿಸಿದ ನಂತರ ಭಾರತದ ಕೆಲವು ನಗರಗಳಲ್ಲಿ ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿದ್ದು, ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ.
ಮೇ 7 ರ ಬೆಳಗಿನ ಜಾವ ಭಾರತೀಯ ಸೇನೆಯು ಪಾಕ್ ಮೂಲದ ಉಗ್ರರ ಪಹಾಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಿ ಭೂಪ್ರದೇಶದ ಕೆಲವು ಸ್ಥಳಗಳ ಮೇಲೆ "ಆಪರೇಷನ್ ಸಿಂದೂರ್" ಅನ್ನು ನಡೆಸಿತು. ಈ ಪರಿಣಾಮ ಲೇಹ್, ಥೋಯಿಸ್, ಪಠಾಣ್ಕೋಟ್, ಜೈಸಲ್ಮೇರ್, ಭಟಿಂಡಾ, ಭುಜ್, ಶಿಮ್ಲಾ, ಪೋರಬಂದರ್, ಜಮ್ಮು, ಶ್ರೀನಗರ, ಜೋಧ್ಪುರ, ಅಮೃತಸರ, ಜಾಮ್ನಗರ, ಚಂಡೀಗಢ, ಧರ್ಮಶಾಲಾ ಮತ್ತು ರಾಜ್ಕೋಟ್ ಸೇರಿದಂತೆ 20 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿವೆ.
ಪಾಕಿಸ್ತಾನದ ಗಡಿಯಲ್ಲಿರುವ ಭಾರತದ ಪಶ್ಚಿಮ ಪ್ರದೇಶದ ವಾಯುಪ್ರದೇಶವು ಇನ್ನು ಮುಂದೆ ವಾಣಿಜ್ಯ ವಿಮಾನಗಳಿಗೆ ಲಭ್ಯವಿಲ್ಲ ಎಂದು ಅಧಿಕೃತ ವರದಿಗಳು ತಿಳಿಸಿವೆ. "ಈ ವಿಮಾನ ನಿಲ್ದಾಣಗಳು ಎಷ್ಟು ದಿನಗಳು ಸ್ಥಗಿತಗೊಂಡಿರುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಸದ್ಯ ನಾವು ಪ್ರತಿ ದಿನದ ಎಲ್ಲಾ ವಿಮಾನಗಳನ್ನು ಮರು ನಿಗದಿಪಡಿಸಿದ್ದೇವೆ" ಎಂದು ವಿಮಾನಯಾನ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಭಾರತೀಯ ವಾಯುಪಡೆಯು ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (CHIAL) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಜಯ್ ಕುಮಾರ್ ಅವರು ವಿಮಾನಗಳ ಸ್ಥಗಿತತೆಯ ಬಗ್ಗೆ ದೃಢಪಡಿಸಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಕುರಿತು ದೆಹಲಿ ಅಂತಾರಾಷ್ಟ್ರೀಯ ನಿಲ್ದಾಣದ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.