ಫಿಲಂ ಶೂಟಿಂಗ್ಗೆ ಹೇಳಿ ಮಾಡಿಸಿದ ಜಾಗಗಳು!
ಭಾರತದಲ್ಲಿರುವ ನಿರ್ದೇಶಕ, ನಿರ್ಮಾಪಕರ ನೆಚ್ಚಿನ ಮತ್ತು ಶೂಟಿಂಗ್ ಗೆ ಹೇಳಿ ಮಾಡಿಸಿದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ? ಸಿನಿಮಾ ಶೂಟಿಂಗ್ಗಾಗಿ ಮೀಸಲಾಗಿದ್ದ ಈ ಜಾಗಗಳು ಇದೀಗ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿವೆ. ಶೂಟಿಂಗ್ನಿಂದಾಗಿಯೇ ಈ ಸ್ಥಳಗಳ ಮಹಿಮೆ ಹೆಚ್ಚಿದೆ.
- ದೀಕ್ಷಿತ್ ನಾಯರ್
ಇತ್ತೀಚೆಗೆ ಬಹುತೇಕ ಎಲ್ಲ ಭಾಷೆಯ ಚಿತ್ರಗಳೂ ವಿದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತವೆ. ಸಿನಿಮಾ ನಿರ್ಮಾಪಕ, ನಿರ್ದೇಶಕರಿಗಷ್ಟೇ ಅಲ್ಲ ನಟ ನಟಿಯರಿಗೂ ವಿದೇಶದ ಮೇಲೆ ಎಲ್ಲಿಲ್ಲದ ಮೋಹ. ಅವರು ತಾವು ನಟಿಸುವ ಸಿನಿಮಾ ಫಾರಿನ್ನಲ್ಲಿ ಶೂಟ್ ಆಗಬೇಕೆಂದು ಬಯಸುತ್ತಾರೆ. ಹಾಗೆ ನೋಡಿದರೆ ಭಾರತದಲ್ಲೂ ಅತ್ಯದ್ಭುತವಾದ ಶೂಟಿಂಗ್ ಸ್ಪಾಟ್ಗಳಿವೆ. ಇಲ್ಲಿನ ಸ್ಥಳಗಳು ಎಲ್ಲ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಹಿತಾನುಭವ ಮತ್ತು ಮಧುರಾನುಭೂತಿ ನೀಡುವ ಸುಂದರ ವಾತಾವರಣ, ಪರಿಸರವನ್ನು ಹೊಂದಿವೆ. ಅಲ್ಲದೆ ವಿದೇಶಗಳಿಗೆ ಹೋಲಿಸಿದಾಗ ಭಾರತದಲ್ಲೆ ಚಿತ್ರೀಕರಣ ಮಾಡಿದಾಗ ತಗಲುವ ಖರ್ಚು ವೆಚ್ಚಗಳೂ ಸಹ ಬಲು ಕಡಿಮೆ. ಹಾಗಾದರೆ ಭಾರತದಲ್ಲಿರುವ ನಿರ್ದೇಶಕ, ನಿರ್ಮಾಪಕರ ನೆಚ್ಚಿನ ಮತ್ತು ಶೂಟಿಂಗ್ ಗೆ ಹೇಳಿ ಮಾಡಿಸಿದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ? ಸಿನಿಮಾ ಶೂಟಿಂಗ್ಗಾಗಿ ಮೀಸಲಾಗಿದ್ದ ಈ ಜಾಗಗಳು ಇದೀಗ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿವೆ. ಶೂಟಿಂಗ್ನಿಂದಾಗಿಯೇ ಈ ಸ್ಥಳಗಳ ಮಹಿಮೆ ಹೆಚ್ಚಿದೆ.
ಉದೈಪುರ : ʼಸರೋವರಗಳ ನಗರʼ ಎಂದೇ ಖ್ಯಾತಿ ಪಡೆದಿರುವ ರಾಜಸ್ಥಾನ ರಾಜ್ಯದ ಉದೈಪುರ ಪಟ್ಟಣವು ಸಿನಿಮಾ ಶೂಟಿಂಗ್ಗೆ ಹೇಳಿ ಮಾಡಿಸಿದ ತಾಣ. ಬಾಲಿವುಡ್ ನ ಪ್ರಸಿದ್ಧ ನಟ ದೇವಾನಂದ್ 60 ರ ದಶಕದಲ್ಲಿ ಉದೈಪುರ್ನ ಸಿಟಿ ಪ್ಯಾಲೇಸ್ ಆವರಣದಲ್ಲಿ ಮೊದಲ ಬಾರಿಗೆ ಗೈಡ್ ಎಂಬ ಯಶಸ್ವಿ ಚಿತ್ರದ ಚಿತ್ರೀಕರಣ ನಡೆಸಿದ್ದರು. ಮುಂದೆ ಉದೈಪುರ ಚಲನಚಿತ್ರಗಳ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿತು. ಈವರೆಗೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣ ನಡೆದಿದೆ. ಕೇವಲ ಭಾರತೀಯ ಚಿತ್ರಗಳಲ್ಲದೆ ಹಾಲಿವುಡ್ ಚಿತ್ರರಂಗಕ್ಕೂ ಸಹ ಇದು ನೆಚ್ಚಿನ ತಾಣವಾಗಿದೆ. ಉದೈಪುರ ತಾಣವು ಪ್ರವಾಸಿಗರ ಮೈಮನ ತಣಿಸುವಲ್ಲಿಯೂ ಯಶ್ವಸಿಯಾಗಿದೆ. ಆದ್ದರಿಂದ ಅದು ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ.

ಡಾರ್ಜಿಲಿಂಗ್ : ಭಾರತ ಚಿತ್ರರಂಗದ ಬಹುತೇಕ ಚಿತ್ರಗಳಲ್ಲಿ ಡಾರ್ಜಿಲಿಂಗ್ ಬೆಟ್ಟ ಹಾಗೂ ಕಣಿವೆಗಳ ಪ್ರಾಕೃತಿಕ ಸೌಂದರ್ಯವನ್ನು ತೋರಿಸಲಾಗಿದೆ. ವಿಶ್ವಪ್ರಸಿದ್ಧ ಡಾರ್ಜಿಲಿಂಗ್ ಹಿಮಾಲಯನ್ ರೈಲು ಹಾಲಿವುಡ್ನ ಸಿನಿ ಪ್ರಿಯರನ್ನೂ ಆಕರ್ಷಸಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿರುವ ಡಾರ್ಜೆಲಿಂಗ್ ಗಿರಿಧಾಮವು ಹಿಮದಿಂದ ಆವೃತವಾಗಿದ್ದು, ಎತ್ತರದ ಶಿಖರಗಳಿಂದ ಥೇಟ್ ಸ್ವರ್ಗದಂತೆ ಕಂಗೊಳಿಸುತ್ತದೆ. ಅಲ್ಲಿನ ಕಾಡುಗಳಲ್ಲಿರುವ ಸಾಲ್ ಮತ್ತು ಓಕ್ ಮರಗಳನ್ನು ಹೊಂದಿರುವ ಉನ್ನತ ಪರ್ವತ ಪ್ರದೇಶವು ನಿಸರ್ಗ ಪ್ರೇಮಿಗಳಿಗೆ ಒಂದು ಅದ್ಭುತ ತಾಣ. ಹವಾಮಾನ ಬದಲಾದರೂ ಅಲ್ಲಿನ ಅರಣ್ಯವು ಸದಾ ಅಚ್ಚ ಹಸುರಿನಿಂದ ಶೋಭಿಸುವುದರಿಂದ ಪ್ರವಾಸೋದ್ಯಮಕ್ಕೆ ಮೆರಗು ನೀಡಿದೆ.
ಮುನ್ನಾರ್ : ಚಿತ್ರೀಕರಣದ ಸ್ಥಳವೆಂದರೆ ಮುನ್ನಾರ್ ನೆನಪಾಗದೆ ಇರಲಿಕ್ಕಿಲ್ಲ. ಎಲ್ಲಾ ಭಾಷೆಯ ಸಿನಿಮಾಗಳನ್ನೂ ಇಲ್ಲಿ ಚಿತ್ರೀಕರಿಸಲಾಗಿದೆ. ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ ಕೂಡ. ಪಶ್ಚಿಮ ಘಟ್ಟಗಳ ಮಾಯಾ ಲೋಕದಲ್ಲಿ ಸುಂದರ ಸುಮನೋಹರ ಕನ್ಯೆಯಂತೆ ಅವಿತು ಕುಳಿತಿದೆ ಮುನ್ನಾರ್. ನಿಸರ್ಗದ ಅಷ್ಟೂ ಸೌಂದರ್ಯವನ್ನು ತನ್ನ ಅಂಗೈಯಲ್ಲಿ ಹಿಡಿದಿಟ್ಟುಕೊಂಡಿದೆ. ಚಿತ್ರ ಕಲಾವಿದನೊಬ್ಬ ಪ್ರಕೃತಿಯ ಸುಂದರವಾದ ಚಿತ್ರವನ್ನು ರಚಿಸಿದಂತೆ ಈ ಪ್ರದೇಶದ ಭೂದೃಶ್ಯಾವಳಿಗಳು ನೋಡುಗರ ಮನಸೂರೆಗೊಳಿಸುತ್ತದೆ. ಈ ಪ್ರದೇಶದ ವಾತಾವರಣವು ಹಿತಕರವಾಗಿದ್ದು ವರ್ಷದ 365 ದಿನವೂ ಪ್ರವಾಸಿ ಪ್ರಿಯರಿಗೆ ದಿವ್ಯ ಅನುಭವವನ್ನು ನೀಡುತ್ತದೆ. ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1600 ಮೀ. ಗಳಷ್ಟು ಎತ್ತರದಲ್ಲಿದೆ. ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳ ಹಳ್ಳಿಯ ಮಧ್ಯೆಯಿರುವ ಮುನ್ನಾರ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಊಟಿ: ಊಟಿ ಎಂದರೆ ಹತ್ತಾರು ಸಿನಿಮಾಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಸಿನಿಮಾ ಚಿತ್ರೀಕರಣದಿಂದಲೇ ಊಟಿ ಪ್ರಸಿದ್ಧಿ ಪಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಊಟಿಯ ಬಹುತೇಕ ಸ್ಥಳಗಳನ್ನು ಸಿನಿಮಾ ಮತ್ತು ಸಿನಿ ನಟ ನಟಿಯರ ಹೆಸರುಗಳಿಂದಲೇ ಕರೆಯಲಾಗುತ್ತದೆ. ಊಟಿ ದಕ್ಷಿಣ ಭಾರತದ ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ. ಉದಕಮಂಡಲಂ ಎಂದು ಕರೆಯಲ್ಪಡುವ ಮತ್ತು ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಪ್ರಶಾಂತವಾದ ಪರಿಸರ, ಹಿತವಾದ ವಾತಾವರಣ, ಪರಿಶುದ್ಧ ಗಾಳಿ, ತಾಜಾತನದ ಅನುಭವ ನೀಡುವ ಈ ಗಿರಿಧಾಮ ತಾಣವು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಚೈಲ್ ಅರಮನೆ : ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾ ನಗರದಿಂದ ಸರಿ ಸುಮಾರು 44 ಕಿ.ಮೀ ದೂರದಲ್ಲಿರುವ ಚೈಲ್ ಗಿರಿಧಾಮವು ಒಂದು ಅದ್ಭುತ ವಾತಾವರಣ ಮತ್ತು ಮನೋಹರ ಪ್ರಕೃತಿ ಸೌಂದರ್ಯವಿರುವ ಸ್ಥಳವಾಗಿದೆ. ಇದು ಚಿತ್ರೀಕರಣಕ್ಕೆ ಹೇಳಿಮಾಡಿಸಿದಂತಹ ಸ್ಥಳವಾಗಿದ್ದು ಸಾಕಷ್ಟು ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಅದರಲ್ಲೂ ವಿಶೇಷವಾಗಿ ಇಲ್ಲಿ ಹಿಂದಿನ ಪಟಿಯಾಲಾ ಮಹಾರಾಜರಿಂದ ನಿರ್ಮಿಸಲ್ಪಟ್ಟ ಚೈಲ್ ಅರಮನೆ ಎಲ್ಲರ ಮೆಚ್ಚಿನ ಚಿತ್ರೀಕರಣದ ತಾಣವಾಗಿದೆ.
ಹೌರಾ ಸೇತುವೆ : ಕೊಲ್ಕತ್ತಾದ ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾದ, ಕೊಲ್ಕತ್ತಾ ನಗರದ ಆಕರ್ಷಣೆಯ ಸ್ಥಳವಾದ ಹೌರಾ ಸೇತುವೆಯ ಮೇಲೆ ಸಾಕಷ್ಟು ಹಿಂದಿ ಚಿತ್ರಗಳು ಚಿತ್ರೀಕರಣಗೊಂಡಿದ್ದು ಈಗಲೂ ಚಿತ್ರೀಕರಣಕ್ಕೆ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಹೌರಾ ಪ್ರೇಮಿಗಳು ಮತ್ತು ವಿವಾಹವಾದ ನವ ಜೋಡಿಗಳ ಫೋಟೊ ಶೂಟಿಂಗ್ ಜಾಗವಾಗಿಯೂ ಖ್ಯಾತಿಗಳಿಸಿದೆ. ಕೊಲ್ಕತ್ತಾ ನಗರಕ್ಕೆ ಭೇಟಿ ಕೊಡುವ ಪ್ರವಾಸಿಗರು ಸಾಮಾನ್ಯವಾಗಿ ಹೌರಾ ಸೇತುವೆಗೆ ಭೇಟಿ ಕೊಡುತ್ತಾರೆ.

ಕೊಡೈಕೆನಾಲ್: ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಾಲ್ ಕೂಡ ಒಂದು ವಿಶಿಷ್ಟ ಮತ್ತು ಸುಪ್ರಸಿದ್ಧವಾದ ಗಿರಿಧಾಮವಾಗಿದೆ. ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಜಾಗಕ್ಕೆ ಭೇಟಿ ಕೊಡುತ್ತಾರೆ. ಮಳೆಗಾಲದಲ್ಲಿಯೂ ಈ ಜಾಗ ಆಕರ್ಷಣೆಯಿಂದ ಕೂಡಿರುತ್ತದೆ. ಕಣ್ಮನ ಸೆಳೆಯುವ ಈ ಜಾಗವು ಚಾರಣಕ್ಕೂ ಹೆಸರುವಾಸಿಯಾಗಿದೆ. ಚುಮು ಚುಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣದಲ್ಲಿ ಚಾರಣಕ್ಕೆ ಹೊರಟರಂತೂ ಮಧುರಾನುಭೂತಿ. ಇನ್ನು ಸಾಕಷ್ಟು ಚಿತ್ರೀಕರಣಗಳು ಕೂಡ ಇಲ್ಲಿ ನಡೆಯುತ್ತಿರುತ್ತವೆ.
ಕೂರ್ಗ್: ಕರ್ನಾಟಕ ಅದ್ಭುತವಾದ ಪ್ರವಾಸಿ ತಾಣಗಳಲ್ಲಿ ಕೂರ್ಗ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಕೊಡಗಿನ ಅಷ್ಟೂ ಸೌಂದರ್ಯವನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 240 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಸ್ಥಳವನ್ನು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುಲಭವಾಗಿ ತಲುಪಬಹುದು. ಪಶ್ಚಿಮ ಘಟ್ಟಗಳ ಸುಂದರ ಹಸುರಿನ ಮಡಿಲಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯು 4,102 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಹರಡಿದ್ದು ಹಲವು ಪ್ರಾಕೃತಿಕವಾಗಿ ಸಂಪದ್ಭರಿತ ಪ್ರವಾಸಿ ಆಕರ್ಷಣೆಗಳಿಂದ ಕೂಡಿದೆ . ನವದಂಪತಿಗಳ ಮಧುಚಂದ್ರದ ತಾಣವಾಗಿಯೂ ಹೆಸರುವಾಸಿಯಾಗಿದ್ದರೂ ಅದಕ್ಕೆ ಮಾತ್ರ ಸೀಮಿತವಾಗದೆ ಸಿನಿಮಾ ಚಿತ್ರೀಕರಣಕ್ಕೂ ಹೆಸರುವಾಸಿಯಾಗಿದೆ. ಕಡಿಮೆ ಬಜೆಟ್ನ ಸಾಕಷ್ಟು ಕನ್ನಡ ಸಿನಿಮಾಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ.

ವಯನಾಡು: ವಯನಾಡು ಕೇರಳ ರಾಜ್ಯದಲ್ಲಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಯಾತ್ರಾ ಸ್ಥಳವಾಗಿದೆ. ಈ ಸ್ಥಳವು ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಗೊಂಡಿದೆ. ನಿರಂತರ ಪ್ರವಾಹ ಮತ್ತು ಭೂ ಕುಸಿತದ ನಡುವೆಯೂ ವಯನಾಡು ತನ್ನ ನಿಸರ್ಗ ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದೆ. ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಸಾಮಾನ್ಯವಾಗಿ ರೊಮ್ಯಾಂಟಿಕ್ ದೃಶ್ಯಗಳು ಮತ್ತು ಹಾಡುಗಳ ಶೂಟಿಂಗ್ಗಾಗಿ ಈ ಜಾಗವನ್ನು ಬಳಸಿಕೊಳ್ಳಲಾಗುತ್ತದೆ.
ಇಂಡಿಯಾ ಗೇಟ್: ಇಂಡಿಯಾ ಗೇಟ್ ದೆಹಲಿಯ ಪ್ರಸಿದ್ಧ ಸ್ಥಳವಾಗಿದೆ. ಇಂಡಿಯಾ ಗೇಟ್ಗೆ ಸುದೀರ್ಘವಾದ ಇತಿಹಾಸವಿದೆ. ಇಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಯುದ್ಧದಲ್ಲಿ ಮಡಿದ ಯೋಧರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕವಾಗಿದೆ. ಮೊದಲಿನಿಂದಲೂ ಈ ಸ್ಥಳದಲ್ಲಿ ಹಲವು ಕ್ರಾಂತಿಕಾರಿ ಮತ್ತು ದೇಶಭಕ್ತಿಗೆ ಸಂಬಂಧಪಟ್ಟ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ ಬಾರತದ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಈ ಸ್ಥಳವನ್ನು ಪ್ರಮುಖವಾಗಿ ಶೂಟಿಂಗ್ಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಖೂನ್ ಚಲಾ ಹಾಡಿನ ರಂಗ್ ದೇ ಬಸಂತಿ ದೃಶ್ಯ ಸೇರಿದಂತೆ ಇನ್ನು ಹಲವು ಹಾಡುಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.