ಕತ್ತಲೆಯಲ್ಲಿ ಅಲ್ಲಿಗೆ ಹೋದರೆ ಕಲ್ಲಾಗುತ್ತೀರಿ... ಹುಷಾರ್!
ರಾಜಸ್ಥಾನದ ಬಳಿಯಿರುವ ಕಿರಾಡು ದೇವಾಲಯಕ್ಕೆ ಕತ್ತಲಾಗುತ್ತಿದ್ದಂತೆ ಜನರು ಹೋಗುವುದಿಲ್ಲ. ಅಪ್ಪಿತಪ್ಪಿ ಹೋದರೂ ಹೋದವರು ಕಲ್ಲಾಗುತ್ತಾರೆ ಎಂದು ನಂಬಲಾಗಿದೆ.
ನಮ್ಮ ದೇಶದಲ್ಲಿ ನೂರಾರು ಐತಿಹಾಸಿಕ ದೇವಾಲಯಗಳಿವೆ. ಸ್ಮಾರಕಗಳೂ ಇವೆ. ಪ್ರತಿ ಜಾಗಕ್ಕೂ ಇತಿಹಾಸವಿದೆ. ಪುರಾಣವಿದೆ. ದಂತಕತೆಯೂ ಇದೆ. ರಾಜಸ್ಥಾನದ ಒಂದು ದೇವಾಲಯಕ್ಕೂ ಒಂದು ದಂತಕತೆಯಿದೆ. ಅಲ್ಲಿನ ಜನರು ಆ ಕತೆಯನ್ನು ನಂಬಿದ್ದಾರೆ. ಸತ್ಯವೆಂದು ಭಾವಿಸಿದ್ದಾರೆ. ಆ ದೇವಾಲಯದ ಹೆಸರು ಕಿರಾಡು ದೇವಾಲಯ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯ. ಕಿರಾಡು ಪಟ್ಟಣವು ಥಾರ್ ಮರುಭೂಮಿಯಲ್ಲಿದ್ದು, ಬಾರ್ಮರ್ನಿಂದ ಸುಮಾರು 35 ಕಿ.ಮೀ ಮತ್ತು ಜೈಸಲ್ಮೇರ್ನಿಂದ 157 ಕಿ.ಮೀ. ದೂರದಲ್ಲಿದೆ. ಅಷ್ಟಕ್ಕೂ ದೇವಾಲಯದ ಹಿಂದಿರುವ ಕತೆಯೇನು? ಇಲ್ಲಿದೆ ಆಸಕ್ತಿಕರ ಮಾಹಿತಿ.
ಕತ್ತಲಾದರೆ ಕಿರಾಡುವಿಗೆ ನೋ ಎಂಟ್ರಿ!
ರಾಜಸ್ಥಾನದ ಹಾಂಟೆಡ್ ಟೆಂಪಲ್ಸ್ - ಕಿರಾಡು ಕ್ರೂನ್ಗೆ ಹೋಲುತ್ತದೆ. ಈ ದೇವಾಲಯಕ್ಕೆ ಒಂದು ಶಾಪ ಅಂಟಿಕೊಂಡಿದೆ. ಈಗಲೂ ಆ ಶಾಪ ವಿಮೋಚನೆಯಾಗಿಲ್ಲ ಎಂದು ಹೇಳಲಾಗುತ್ತದೆ. ಶಾಪವೇನು ಗೊತ್ತಾ? ಈ ದೇವಾಲಯದ ಒಳಗೆ ಕತ್ತಲಾದ ನಂತರ ಯಾರು ಹೋದರೂ ಕಲ್ಲಾಗುತ್ತಾರೆ. ಅಲ್ಲಿನ ಸ್ಥಳೀಯರು ಕೂಡ ಈವರೆಗೆ ಅಲ್ಲಿಗೆ ಹೋಗುವ ಧೈರ್ಯ ಮಾಡಿಲ್ಲ. ಕಾವಲುಗಾರರು ಕೂಡ ಕತ್ತಲಾಗುವ ಮುಂಚೆಯೇ ಬಾಗಿಲಿಗೆ ಬೀಗ ಹಾಕಿ ಹೊರಡುತ್ತಾರೆ.
ಶಾಪಗ್ರಸ್ಥ ದೇವಾಲಯ
ಸರಿ ಸುಮಾರು 12ನೇ ಶತಮಾನದಲ್ಲಿ ಕಿರಾಡುವನ್ನು ಆಳುತ್ತಿದ್ದನು. ಪರ್ಮಾರ್ ರಾಜವಂಶದ ಅರಸ ಸೋಮೇಶ್ವರ, ಪರ್ಮಾರ್ - ತುರುಷ್ಕಾಸ್ ಯುದ್ಧದ ನಂತರ ಈ ಪ್ರದೇಶದಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂಬ ಕಾರಣಕ್ಕೆ ಋಷಿಯೊಬ್ಬನನ್ನು ಆಹ್ವಾನಿಸುತ್ತಾನೆ. ಈ ತಪಸ್ವಿಗಳು ತನ್ನ ಶಿಷ್ಯರೊಂದಿಗೆ ಇಲ್ಲಿಗೆ ಬಂದಿದ್ದರು. ಸಾಧು ರಾಜ್ಯಕ್ಕೋಸ್ಕರ ತಮ್ಮ ಶಿಷ್ಯರನ್ನು ಇಲ್ಲೇ ಬಿಟ್ಟು ದೇಶಪರ್ಯಟನೆಗೆ ಹೋಗುತ್ತಾರೆ. ಇತ್ತ, ರಾಜ್ಯವೂ ಸಮೃದ್ಧಿಯಾಗುತ್ತಾ ಬಂದಿತ್ತು. ರಾಜ್ಯ ಸಮೃದ್ಧಿಯಾಗುತ್ತಿದ್ದಂತೆಯೇ ಋಷಿಗಳ ಶಿಷ್ಯಂದಿರು ಒಬ್ಬೊಬ್ಬರಾಗಿ ಅನಾರೋಗ್ಯಕ್ಕೀಡಾದರು. ಆದರೆ ಊರಿನ ಯಾರೊಬ್ಬರೂ ಅವರನ್ನು ಉಪಚರಿಸದೆ ನಿರ್ಲಕ್ಷಿಸಿದ್ದರು. ಒಬ್ಬರು ಮಹಿಳೆ ಮಾತ್ರ ಈ ಶಿಷ್ಯರ ಅನಾರೋಗ್ಯದ ಅವಧಿಯಲ್ಲಿ ಅವರಿಗೆ ಸಹಾಯ ಮಾಡಿದ್ದರು.
ದೇಶ ಪರ್ಯಟನೆ ಮುಗಿಸಿ ಬಂದ ಸಾಧುಗಳಿಗೆ ತಮ್ಮ ಶಿಷ್ಯರಿಗೆ ಬಂದೊದಗಿದ ಗತಿ ನೋಡಿ ತೀರಾ ಸಂಕಟವಾಯಿತು. ಸಂಕಷ್ಟದಲ್ಲಿದ್ದ ತಮ್ಮ ಶಿಷ್ಯರಿಗೆ ಸಹಾಯ ಮಾಡದ ಜನರ ಬಗ್ಗೆ ಅಸಮಾಧಾನ ತಾಳಿದರು. ಹೀಗಾಗಿ, ಜನರ ಕಷ್ಟಕ್ಕೆ ಸ್ಪಂದಿಸದೇ ಇರುವ ಕಲ್ಲು ಹೃದಯದ ಈ ಊರಿನ ಜನರು ಮನುಷ್ಯರಾಗಿ ಇರಲು ಯೋಗ್ಯರಲ್ಲ ಎಂದು ಎಲ್ಲರಿಗೂ ಕಲ್ಲಾಗುವಂತೆ ಶಾಪ ಕೊಡುತ್ತಾರೆ. ಜೊತೆಗೆ, ಶಿಷ್ಯರ ಸೇವೆ ಮಾಡಿದ್ದ ಮಹಿಳೆಗೆ ಮಾತ್ರ ಸಂಜೆಯೊಳಗೆ ಊರು ಬಿಡಬೇಕು ಎಂದು ಸೂಚಿಸಿದ್ದರು. ಋಷಿಗಳ ಮಾತಿಗೆ ಒಪ್ಪಿದ ಮಹಿಳೆ ಒಂದಷ್ಟು ದೂರ ಹೋದರೂ ಕುತೂಹಲ ತಡೆಯಲಾಗದೆ ಊರಿನತ್ತ ತಿರುಗಿ ನೋಡಿದ್ದಾಳೆ. ಹೀಗಾಗಿ, ಆ ಮಹಿಳೆಯೂ ಕಲ್ಲಾಗಿರಬಹುದು ಎಂದು ಹೇಳಲಾಗಿದೆ. ಸದ್ಯ ಊರಿನ ದೂರದಲ್ಲಿ ಒಂದು ಕಲ್ಲಿದ್ದು, ಅದು ಕಲ್ಲಾದ ಮಹಿಳೆಯೇ ಎಂದು ಜನರು ಭಾವಿಸಿದ್ದಾರೆ. ಈ ಕತೆಯನ್ನು ಅನಾದಿ ಕಾಲದಿಂದಲೂ ಕೇಳಿಕೊಂಡು ಬರುತ್ತಿರುವ ಜನ ಸಂಜೆಯಾದರೆ ಇತ್ತ ಸುಳಿಯುವುದೇ ಇಲ್ಲ. ಈಗಲೂ ಈ ಊರಿನಲ್ಲಿ ಇಂತಹದ್ದೊಂದು ನಂಬಿಕೆ ಬಲವಾಗಿಯೇ ಇದೆ. ಹಾಗಾಗಿ ಕತ್ತಲಾದರೆ ಈ ಜಾಗದಲ್ಲಿ ಪ್ರವೇಶ ನಿರ್ಬಂಧ!