ಆದಿಲ್ ಶಾಹಿ ಅರಸರ ʻಬೇಸಗೆ ಅರಮನೆʼ
ಕುಮಟಗಿ ಕೆರೆ ಆದಿಲ್ ಶಾಹಿ ಅರಸರು ಮೋಜಿಗಾಗಿ ನಿರ್ಮಿಸಿಕೊಂಡ ತಾಣವಷ್ಟೇ ಅಲ್ಲ , ಬೇಸಿಗೆಯ ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ನಿರ್ಮಿಸಿದ ತಾಣವೂ ಹೌದು.
ವಿಜಯಪುರ ಪುರಾತತ್ವ ಸ್ಮಾರಕಗಳ ಕಣಜ .ಜಗತ್ ಪ್ರಸಿದ್ಧ , ವಿಜಯಪುರದ ನಭೋ ಭಿತ್ತಿಯಲ್ಲಿ ಹೊನ್ನ ಮುಕುಟ ಗೋಲಗುಮ್ಮಟ, ಬಂದೇನವಾಜ ,ಸಂಗೀತ ಮಹಲ್, ಇಬ್ರಾಹಿಮ್ ರೋಜಾ, ಉಪಲಿ ಬುರ್ಜ, ಬಾರಾ ಕಮಾನ , ಬೇಸಿಗೆ ಅರಮನೆ (ಜಲ ಮಹಲ್)..ಇತ್ಯಾದಿ ಹೆಜ್ಜೆ ಹೆಜ್ಜೆಗೂ ಸ್ಮಾರಕಗಳಿರುವ ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ನಾವು ಬೇಸಿಗೆಯಲ್ಲಿ ತಣ್ಣಗಿರಲು ಎ.ಸಿ.ಯನ್ನು ಬಳಸುತ್ತೇವೆ. ಆದರೆ, ವಿಜಯಪುರದ ಆದಿಲ್ ಶಾಹಿ ಅರಸರು ಬೇಸಿಗೆಯಲ್ಲಿ ತಣ್ಣನೆಯ ಪರಿಸರ ನಿರ್ಮಿಸಿಕೊಂಡು ಬದುಕುವ ಕಲೆ ಕರಗತ ಮಾಡಿಕೊಂಡಿದ್ದರು .ಆದಿಲ್ ಶಾಹಿ ಅರಸರು ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ಕಟ್ಟಡ ನಿರ್ಮಾಣದಲ್ಲಿ ' ವಾತಾನುಕೂಲ ತಂತ್ರಜ್ಞಾನ 'ಅಳವಡಿಸಿಕೊಂಡಿದ್ದರು . ಅರಮನೆ ಆವರಣದಲ್ಲಿ ನೀರಿನ ಕೊಳ , ಕೊಳದಲ್ಲಿ ಪುಟ್ಟ ಕಾರಂಜಿ, ಅರಮನೆ ಸುತ್ತ ಮುತ್ತ ಕೈತೋಟ ನಿರ್ಮಿಸಿಕೊಂಡಿದ್ದರು.

'ಬೇಸಿಗೆ ಅರಮನೆ 'ಎಂದೇ ಖ್ಯಾತಿ ಪಡೆದಿರುವ ಕುಮಟಗಿ ಕೆರೆ ವಿಜಯಪುರದಿಂದ 10 ಕಿ.ಮೀ ದೂರದಲ್ಲಿ ಸಿಂದಗಿ ರಸ್ತೆಯಲ್ಲಿದೆ. ಇಲ್ಲಿಯ ವಾತಾವರಣ, ಕಟ್ಟಡ, ವ್ಯವಸ್ಥೆ ಆಧುನಿಕ ರೆಸಾರ್ಟನ್ನೂ ಮೀರಿಸುವಂತಿದೆ .ಕುಮಟಗಿ ಒಂದು ಪುಟ್ಟ ಗ್ರಾಮ. ಗ್ರಾಮದ ಹತ್ತಿರ ಒಂದು ವಿಶಾಲವಾದ ಕೆರೆಯನ್ನು ನಿರ್ಮಿಸಿ , ಅದರ ದಡದಲ್ಲಿ ಎರಡಂತಸ್ತಿನ ಕಟ್ಟಡ ಕಟ್ಟಲಾಗಿದೆ. ಕೆರೆಯಿಂದ ಹರಿದು ಬರುವ ನೀರು ಕಟ್ಟಡದ ಗೋಡೆಗಳಲ್ಲಿ ಹರಿದು ಇಡೀ ಕಟ್ಟಡವನ್ನು ತಂಪಾಗಿಸುತ್ತದೆ .ಯಾವುದೇ ಯಂತ್ರದ ಸಹಾಯವಿಲ್ಲದೇ ನೀರು ಸರಾಗವಾಗಿ ಹರಿದು ಬರುವಂತೆ ಕೆರೆ ಮತ್ತು ಕಟ್ಟಡ ನಿರ್ಮಿಸಲಾಗಿದೆ.
ಮಹಲಿನ ಸುತ್ತಲೂ ನೀರು ಹರಿಯುವಂತೆ ಮಾಡಲಾಗಿದೆ . ನಿಯಂತ್ರಣಕ್ಕೆ ತೂಬು , ಗೋಪುರ ನಿರ್ಮಿಸಲಾಗಿದೆ. ಕೆರೆಯ ಮಧ್ಯದಲ್ಲಿಯೂ ಒಂದು ಸಣ್ಣ ಮಹಲ್ ಇರುವುದು ಕಾಣುತ್ತದೆ. ನೀರಿನ ಸಂಗ್ರಹಕ್ಕಾಗಿ 'ಪಾತರಗಿತ್ತಿ ಮಹಲ್ ' ಕಟ್ಟಲಾಗಿದೆ. ಈ 'ಬೇಸಿಗೆ ಅರಮನೆ'ಯನ್ನು ಮೊಹಮ್ಮದ್ ಆದಿಲ್ ಶಾಹಿ (1627-1636) ಕಾಲದಲ್ಲಿ ನಿರ್ಮಿಸಲಾಗಿದೆ.

ಕುಮಟಗಿ ಕೆರೆ ಆದಿಲ್ ಶಾಹಿ ಅರಸರು ಮೋಜಿಗಾಗಿ ನಿರ್ಮಿಸಿಕೊಂಡ ತಾಣವಷ್ಟೇ ಅಲ್ಲ , ಬೇಸಿಗೆಯ ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ನಿರ್ಮಿಸಿದ ತಾಣವೂ ಹೌದು. ಅರಮನೆಯ ನೆಲಮಹಡಿಯಲ್ಲಿ ಗೋಡೆಗಳ ಮಧ್ಯೆ ಹಾಗೂ ಮಾಳಿಗೆಯ ಎರಡು ಪದರುಗಳ ನಡುವೆ ನೀರಿನ ಕೊಳವೆಗಳನ್ನು ಅಳವಡಿಸಿ, ಅಲ್ಲಿ ನೀರು ಹರಿಸುತ್ತಿದ್ದರು. ಹಾಗೆ ಗೋಡೆಗಳಲ್ಲಿ ಹರಿಯುವ ನೀರು ಆ ಕಟ್ಟಡವನ್ನು ತಂಪಾಗಿಸುತ್ತಿತ್ತು. ಹೀಗಾಗಿ ಅಂಥ ಕಟ್ಟಡಗಳು ವಾತಾನುಕೂಲವಾಗಿದ್ದವು. ಈಗ ನಾವು ಅನುಭವಿಸುತ್ತಿರುವ ಎ.ಸಿ. ಪರಿಣಾಮವನ್ನು ಅಂದಿನ ಅರಸರಿಗೆ ನೀಡುತ್ತಿದ್ದವು. ವಾತಾನುಕೂಲ, ಸ್ಮಾರಕದಲ್ಲಿರುವ ಸೌಲಭ್ಯಗಳು ಆ ಕಾಲದ ವಾಸ್ತುಶಿಲ್ಪಿಗಳ ಸೃಜನಶೀಲತೆ, ಕೌಶಲ್ಯಕ್ಕೆ ಸಾಕ್ಷಿ.
ಈ ಕಟ್ಟಡವನ್ನು ಮನಸ್ಸಿಗೆ ಮುದ ನೀಡುವಂತೆ ಅಲಂಕರಿಸಲಾಗಿದೆ. ಅಲಂಕಾರ ಮಂಟಪದ ಗೋಡೆಯ ಮೇಲೆ ವರ್ಣ ಚಿತ್ರಗಳಿವೆ .ಈ ಅರಮನೆಯ ಡ್ರೆಸ್ಸಿಂಗ್ ರೂಮಿನಲ್ಲಿ ಆಕರ್ಷಕ ಪೇಂಟಿಂಗ್ ಗಳಿವೆ .ಅರಮನೆಯ ಸ್ನಾನಗೃಹವೂ ವಿಶಿಷ್ಟವಾಗಿದೆ .ಅಲ್ಲಿ ಶವರ್ ಅಳವಡಿಸಲಾಗಿದೆ. ಋತುಮಾನಕ್ಕೆ ತಕ್ಕಂತೆ ಬಿಸಿನೀರು , ತಣ್ಣೀರು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಅರಮನೆಯ ಸುತ್ತಲೂ ಗೋಪುರಗಳಿವೆ .ಅರಸರು ಮತ್ತು ಅರಸು ಮನೆತನದ ಮಹಿಳೆಯರು ಅಲ್ಲಿ ಸ್ನಾನ ಮಾಡುತ್ತಿದ್ದರು .

ಹೊರಗಿನವರು ಯಾರೂ ಒಳ ಸುಳಿಯದಂತೆ ಸುತ್ತಲೂ ಇರುವ ಗೋಪುರಗಳಲ್ಲಿ ಕಾವಲುಗಾರರು ಇರುತ್ತಿದ್ದರಂತೆ .ಮಹಲಿನ ದಕ್ಷಿಣಕ್ಕೆ ಹಳೆಯ ಕಟ್ಟಡಗಳ ಅವಶೇಷಗಳಿವೆ .ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಈ ಕೆರೆಯನ್ನು ರಿಪೇರಿ ಮಾಡಿ, ಸುಂದರವಾದ ಪುಟ್ಟ ಉದ್ಯಾನ ನಿರ್ಮಿಸಿದೆ. ಕೆರೆಯ ಮಧ್ಯದಲ್ಲಿ ಮಹಲಿರುವ ಪ್ರದೇಶವನ್ನು ಬಳಸಿಕೊಂಡು ದೋಣಿ ವಿಹಾರ ಸೌಲಭ್ಯ ಕಲ್ಪಿಸಿದರೆ ಇದು ಸುಂದರ ಪ್ರವಾಸಿ ತಾಣವಾಗಬಹುದು. ಕೆರೆಯಿಂದ ಅರಮನೆಯ ಗೋಡೆಗಳಲ್ಲಿ ಈಗಲೂ ನೀರು ಹರಿಸುತ್ತಿದ್ದು , ಅದನ್ನು ಪುನರುಜ್ಜೀವನಗೊಳಿಸಿ , ಆದಿಲ್ ಶಾಹಿ ಅರಸರ ಕಾಲದ ತಂತ್ರಜ್ಞಾನವನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಆಗಬೇಕಿದೆ .