ಪ್ರವಾಸಿಗರ ಸ್ವರ್ಗ ತೇನ್ಮಲ ಗಿರಿಧಾಮ !
ನಗರ ಜೀವನದ ಗಲಭೆ ಗಲ್ಲದಗಳಿಂದ ಬೇಸರಗೊಂಡು, ಹರಿಸಿನ ನಡುವೆ ಹೋಗಿ ಕಾಲಕಳೆಯಬೇಕೆಂದುಕೊಂಡಿದ್ದೀರಾ? ಹಾಗಾದರೆ ಕೇರಳದ ಕೊಲ್ಲಂ ಬಳಿಯ ತೇನ್ಮಲ ನಿಮಗೆ ಉತ್ತಮ ಆಯ್ಕೆ.
ʻತೇನ್ಮಲʼ. ಮಲಯಾಳಂ ಭಾಷೆಯಲ್ಲಿ ತೇನ್ ಎಂದರೆ ಜೇನು, ಮಲ ಅಂದರೆ ಬೆಟ್ಟ, ʻಜೇನಿನ ಬೆಟ್ಟʼ ಎಂದು ಕರೆಯಲಾಗುವ ಈ ಪ್ರವಾಸಿ ತಾಣ, ಕೇರಳದ ಪ್ರಶಾಂತವಾದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಅಲ್ಲದೆ ಭಾರತದ ಮೊದಲ ಪರಿಸರ ಪ್ರವಾಸೋದ್ಯಮ ತಾಣವಾಗಿ ಹೊರಹೊಮ್ಮಿದೆ. ದಕ್ಷಿಣ ಭಾರತದ ಇತರ ವಾಣಿಜ್ಯ ಗಿರಿಧಾಮಗಳಿಗಿಂತ ಭಿನ್ನವಾಗಿ, ತೇನ್ಮಲ ಕಾಡುಗಳು, ನದಿಗಳು, ವನ್ಯಜೀವಿ, ಪ್ರಶಾಂತವಾದ ಪರಿಸರದಿಂದ ಕೂಡಿದ್ದು, ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿದೆ.
ತೇನ್ಮಲವು, ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸುವ ಮಾದರಿ ಪರಿಸರ ಪ್ರವಾಸೋದ್ಯಮ ಯೋಜನೆಯ ಒಂದು ಭಾಗವಾಗಿದೆ. ಜೊತೆಗೆ ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಇದು ತೇನ್ಮಲ ಪರಿಸರ ಪ್ರವಾಸೋದ್ಯಮ ಪ್ರಚಾರ ಸೊಸೈಟಿಯ (Thenmala Eco-tourism Promotion Society) ಉಸ್ತುವಾರಿಕೆಯಲ್ಲಿರುತ್ತದೆ.. ಈ ಯೋಜನೆಯ ಸ್ಥಳೀಯ ಗೈಡ್ ಗಳಾಗಿ ಬುಡಕಟ್ಟು ಸಮುದಾಯಗಳ ಜನರನ್ನೇ ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಪರಿಸರ ಪ್ರವಾಸೋದ್ಯಮದಲ್ಲಿ ತರಬೇತಿ ನೀಡಲಾಗಿದೆ.

ಸ್ಥಳೀಯರಾಗಿರುವ ಅವರಿಗೆ ವೈವಿಧ್ಯಮಯ ಪ್ರದೇಶದ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಹೆಚ್ಚಿನ ಜ್ಞಾನವಿರುವುದು ಮಾತ್ರವಲ್ಲದೆ, ಕಾಡುಗಳು ಅವರ ಜೀವನವನ್ನು ಹೇಗೆ ರೂಪಿಸಿಕೊಂಡಿವೆ ಎಂಬುದರ ಬಗ್ಗೆಯೂ ತಿಳಿವಳಿಕೆಯಿದೆ.
ನೀವೇನಾದರೂ ಈ ಸ್ವರ್ಗಕ್ಕೆ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ, ತಪ್ಪದೇ ಭೇಟಿ ನೀಡಲೇಬೇಕಾದ ಸ್ಥಳಗಳ ಪರಿಚಯ ಇಲ್ಲಿವೆ.
ತೇನ್ಮಲ ಅಣೆಕಟ್ಟು
ತೇನ್ಮಲ ಅಣೆಕಟ್ಟನ್ನು ಪರಪ್ಪಾರ್ ಅಣೆಕಟ್ಟು ಎಂದೂ ಕರೆಯಲಾಗುತ್ತದೆ. ಇದು ಕೇರಳದ ಅತಿದೊಡ್ಡ ನೀರಾವರಿ ಯೋಜನೆಯ ಭಾಗವಾಗಿದ್ದು, ಇದನ್ನು ಕೇರಳದ ಕೊಲ್ಲಂ ಜಿಲ್ಲೆಯ ಕಲ್ಲಡಾ ನದಿಯ ಉದ್ದಕ್ಕೂ ನಿರ್ಮಿಸಲಾಗಿದೆ. ಜಲಾಶಯವನ್ನು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದ್ದು, ಅಣೆಕಟ್ಟು ಯೋಜನೆಯು 1960 ರ ದಶಕದಲ್ಲಿ ಕಲ್ಲಡ ಇರಿಗೇಶನ್ ಆಂಡ್ ಟ್ರೀ ಕ್ರಾಪ್ ಡೆವಲಪ್ಮೆಂಟ್ ಪ್ರಾಜೆಕ್ಟ್ (Kallada Irrigation and Tree Crop development project) ಅಡಿಯಲಿ ಪ್ರಾರಂಭಿಸಲಾಯಿತು.

ಒಟ್ಟಕ್ಕಲ್ ವಿಯರ್
ಒಟ್ಟಕ್ಕಲ್ ವಿಯರ್ ಭಾರತದ ಕೇರಳದ ತೇನ್ಮಲದಲ್ಲಿರುವ ಒಂದು ಅಣೆಕಟ್ಟು ಮತ್ತು ವೀಕ್ಷಣಾ ತಾಣವಾಗಿದ್ದು, ಕಲ್ಲಡ ನೀರಾವರಿ ಯೋಜನೆಯ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ಆರಂಭಿಕ ಹಂತವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಥಳದಲ್ಲಿರುವ ಕಾವಲು ಗೋಪುರವು ಸುತ್ತಮುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಲು ಅನುವುಮಾಡಿಕೊಡುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವಾಗ ಪ್ರವಾಸಿಗರು ವಿಶ್ರಾಂತಿ ಪಡೆಯಲು ಮತ್ತು ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಆರ್ಯಂಕಾವು ರೈಲ್ವೆ ಸೇತುವೆ
ಆರ್ಯಂಕಾವು ಸೇತುವೆ 1904 ರಲ್ಲಿ ಉದ್ಘಾಟನೆಗೊಂಡಿತು. ಒಂದು ಬದಿಯಲ್ಲಿ ಕೊಲ್ಲಂ - ಸೆಂಕೊಟ್ಟೈ ರಾಷ್ಟ್ರೀಯ ಹೆದ್ದಾರಿ ಮತ್ತು ಇನ್ನೊಂದು ಬದಿಯಲ್ಲಿ ಕಝುತುರುಟ್ಟಿ ನದಿಯಿಂದ ಆವೃತವಾದ ಈ ಸೇತುವೆಯು 102.72 ಮೀಟರ್ ಉದ್ದ ಮತ್ತು 5.18 ಮೀಟರ್ ಎತ್ತರದಲ್ಲಿದೆ.

ಪಾಂಡವನ್ ಪಾರಾ
ಪಾಂಡವನ್ ಪಾರಾ ಅಥವಾ "ಪಾಂಡವರ ಬಂಡೆ" ಪೌರಾಣಿಕ ಮಹತ್ವವುಳ್ಳ ಸ್ಥಳ. ಇದು ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಆಶ್ರಯ ಪಡೆದ ಸ್ಥಳ ಎಂದು ನಂಬಲಾಗಿದ್ದು, ಕೊಲ್ಲಂ ಜಿಲ್ಲೆಯ ತೇನ್ಮಲ ಸಮೀಪದಲ್ಲೇ ಇದೆ. ಈ ಪ್ರದೇಶವು ಬೆಟ್ಟಗಳು, ಕಾಡುಗಳು ಮತ್ತು ಕಲ್ಲಡ ಅಣೆಕಟ್ಟು ಸೇರಿದಂತೆ ಸುತ್ತಮುತ್ತಲಿನ ಪರಿಸರದ ಅದ್ಭುತ ನೋಟಗಳನ್ನು ನೀಡುತ್ತದೆ.
ಒಟ್ಟಿನಲ್ಲಿ ಪ್ರಕೃತಿಯ ನಡುವೆ ಕಾಲ ಕಳೆಯಬೇಕೆ ಎಂದುಕೊಳ್ಳುವ ಪ್ರಕೃತಿ ಪ್ರೇಮಿಗಳಿಗೆ ಕೇರಳದ ಕೊಲ್ಲಂನಿಂದ 66ಕಿಮೀ ದೂರದಲ್ಲಿರುವ ತೇನ್ಮಲ ಉತ್ತಮ ಆಯ್ಕೆಯೂ ಹೌದು.