ಹಿಮಾಲಯದಲ್ಲಿ ಪೌರ ಕಾರ್ಮಿಕರು ಮತ್ತು ಮಾವುತರ ಮಕ್ಕಳ ಚಾರಣ!
ಮೈಸೂರಿನ ಪೌರಕಾರ್ಮಿಕರ ಮಕ್ಕಳು, ಮಾವುತರು, ಅರಣ್ಯ ರಕ್ಷಕರು ಮತ್ತು ನಾಗರಿಕರ ತಂಡವು ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಹತ್ತುವುದರ ಮೂಲಕ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ.
ಮೈಸೂರು: ಸಿರಿವಂತರು ಅಥವಾ ಸ್ಥಿತಿವಂತರು ಮಾತ್ರ ಹಿಮಾಲಯ ಚಾರಣ ಹೋಗುತ್ತಾರೆ ಎಂಬ ಭಾವನೆ ಹಲವರಲ್ಲಿದೆ. ಆದರೆ ವಿಶೇಷತೆ ಎಂಬಂತೆ ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್ ಪೌರಕಾರ್ಮಿಕರು ಮತ್ತು ಮಾವುತರ ಮಕ್ಕಳನ್ನು ಹಿಮಾಲಯದ ಚಾರಣಕ್ಕೆ ಕರೆದೊಯ್ಯುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದೆ.
ಮೈಸೂರಿನ ಎಂಟು ಪೌರಕಾರ್ಮಿಕರ ಮಕ್ಕಳು, ಮಾವುತರು, ಅರಣ್ಯ ರಕ್ಷಕರು ಮತ್ತು ಇತರ ನಾಗರಿಕರ ತಂಡವು ಉತ್ತರಾಖಂಡದ 13,990 ಅಡಿ ಎತ್ತರದ ಮೌಂಟ್ ಕುವಾರಿ ಪಾಸ್ ಹತ್ತುವುದರ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
‘ಜುನೂನ್-2025’ ಎಂದು ಹೆಸರಿಸಲಾದ ಈ ಯಾತ್ರೆಯನ್ನು ಟೈಗರ್ ಅಡ್ವೆಂಚರ್ ಫೌಂಡೇಶನ್, ದಿ ಮೌಂಟೇನ್ ಗೋಟ್ ಮತ್ತು ಇತರರು ಮತ್ತು ಗುಂಪಿನ ಸಹಯೋಗದೊಂದಿಗೆ ಯಶಸ್ವಿಯಾಗಿ ಮುನ್ನಡೆಸಿತು. ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಯಾತ್ರೆಯನ್ನು ತಂಡ ಪೂರ್ಣಗೊಳಿಸಿದೆ.
ಮರಿಮಲ್ಲಪ್ಪ ಪಿಯು ಕಾಲೇಜಿನ ಉಪನ್ಯಾಸಕ ಅನಿಲ್ ಕುಮಾರ್ ಎ ಅವರ ನೇತೃತ್ವದಲ್ಲಿ, 24 ಜನರ ತಂಡದಲ್ಲಿ ಪೌರಕಾರ್ಮಿಕರ ಮಕ್ಕಳು, ಹುಣಸೂರು ಅರಣ್ಯ ವಿಭಾಗದ ಮಾವುತರು, ಅರಣ್ಯ ಬೀಟ್ ಗಾರ್ಡ್ಗಳು, ಗೃಹಿಣಿಯರು ಮತ್ತು ಶಾಶ್ವತ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿಗಳು ಪರ್ವತಾರೋಹಣಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ.
ನನ್ನ ತಂದೆ-ತಾಯಿ ಬದುಕುನ್ನು ಸಾಗಿಸಲು ತರಕಾರಿಗಳನ್ನು ಮಾರುತ್ತಾರೆ. ಈ ಚಾರಣವು ನನ್ನ ಕನಸನ್ನು ನನಸಾಗಿದೆ. ನನಗೆ ಇಂತಹ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಅಂಜನಾ ಹೇಳಿದರು.
ಪಿಪಲ್ಕೋಟಿಯಲ್ಲಿ ವೈದ್ಯಕೀಯ ತಪಾಸಣೆಯ ನಂತರ, ತಂಡವು ಏಪ್ರಿಲ್ 27 ರಂದು ತುಗಾಸಿ ಬೇಸ್ ಕ್ಯಾಂಪ್ ತಲುಪಿ ನಂತರ ಗುಲಿಂಗ್ ಮತ್ತು ಖುಲ್ಲರ್ಗೆ ಏರಿತು. ಮೊದಲ ದಿನ ಕೆಲವರು ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದರು. ನಂತರ ತಂಡವು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸಿತು. ತಂಡದ ಎಲ್ಲರೂ ಉತ್ಸಾಹದಿಂದ ಹಿಮಾಲಯ ಏರಿದ್ದಾರೆ.
ಬಿರುಕುಗಳು, ಹಿಮನದಿಗಳು ಮತ್ತು ಬಿರುಗಾಳಿಯ ನಡುವೆಯೂ ತಂಡ ಚಾರಣ ಪೂರೈಸಿದೆ. ಮೇ 1 ರಂದು, ಭಾರತೀಯ ತ್ರಿವರ್ಣ ಧ್ವಜವನ್ನು ಕುವಾರಿಯ ಮೇಲೆ ಹಾರಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೌರಕಾರ್ಮಿಕರ ಮಕ್ಕಳು, ಅರಣ್ಯ ಕಾವಲುಗಾರರು ಮತ್ತು ಮಾವುತರು ಪರ್ವತಾರೋಹಣ ಮಾಡಿದ್ದಾರ ಎಂದು ಸಂಘಟಕರು ತಿಳಿಸಿದ್ದಾರೆ.