ಅತ್ತ ಚಿಕ್ಕಮಗಳೂರಿನ ಕುದುರೆಮುಖದಿಂದ ಹುಟ್ಟುವ ನೇತ್ರಾವತೀ ನದಿ ಪಶ್ಚಿಮಘಟ್ಟಗಳ ನಡುವೆ ಮುದುಡಿ ಹರಿಯುತ್ತಾ ಧರ್ಮಸ್ಥಳದ ನೆಲವನ್ನು ಪುನೀತಗೊಳಿಸಿ ಉಪ್ಪಿನಂಗಡಿಯತ್ತ ಬರುತ್ತದೆ. ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಳದ ಉತ್ತರ ದಿಕ್ಕಿನಿಂದ ಹರಿಯುವ ಈ ನದಿ, ಉಪ್ಪಿನಂಗಡಿಯ ಜನರಿಗೆ ಮಾತ್ರವಲ್ಲದೆ ಬಂಟ್ವಾಳದ ಜನರಿಗೂ ಜೀವ ನಾಡಿ. ಇತ್ತ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ಉದ್ಭವಿಸುವ ಕುಮಾರಧಾರಾ ನದಿ ಸುಬ್ರಹ್ಮಣ್ಯ ಕ್ಷೇತ್ರವನ್ನು ದಾಟಿ ಉಪ್ಪಿನಂಗಡಿಯತ್ತ ಬರುತ್ತದೆ. ಸಹಸ್ರಲಿಂಗೇಶ್ವರ ದೇವಳದ ಪಶ್ಚಿಮ ಬದಿಯಿಂದ ಮುಂದಕ್ಕೆ ಹರಿಯುತ್ತದೆ. ಉಪ್ಪಿನಂಗಡಿ ದಕ್ಷಿಣಕಾಶಿ ಎಂದೇ ಪ್ರಸಿದ್ಧ. ಈ ಎರಡೂ ನದಿಗಳು ಕ್ರಮವಾಗಿ ದೇವಳದ ಉತ್ತರ ಮತ್ತು ಪಶ್ಚಿಮ ದಿಕ್ಕಿನಿಂದ ಬಂದು ಶ್ರೀ ಕ್ಷೇತ್ರದ ವಾಯವ್ಯ ಬದಿಯಲ್ಲಿ ಸಂಗಮವಾಗುತ್ತದೆ. ಇಲ್ಲಿ ನೇತ್ರಾವತಿಯೊಂದಿಗೆ ಲೀನವಾಗುವ ಕುಮಾರಧಾರಾ, ಮುಂದಕ್ಕೆ ಮಂಗಳೂರಿನತ್ತ ಹರಿಯುತ್ತದೆ. ಇದಿಷ್ಟೆಯಾ? ಅಲ್ಲ!
ಈ ಎರಡೂ ನದಿಗಳೊಂದಿಗೆ ಗುಪ್ತಗಾಮಿನಿಯಾಗಿರುವ ಸರಸ್ವತೀ ನದಿಯೂ ಇಲ್ಲಿ ಹರಿಯುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ಉಪ್ಪಿನಂಗಡಿಯನ್ನು 'ತ್ರಿವೇಣಿ ಸಂಗಮ ತಾಣ' ಎಂದೂ ಕರೆಯುವುದುಂಟು. ಮಳೆಗಾಲದಲ್ಲಿ ವರುಣನ ಆರ್ಭಟ ದಕ್ಷಿಣ ಕನ್ನಡದಲ್ಲಿ ತುಸು ಹೆಚ್ಚೇ. ಆ ಸಮಯದಲ್ಲಿ ಎರಡೂ ನದಿಗಳು ಉಕ್ಕಿ ಹರಿಯುತ್ತವೆ. ಕಾರ್ಗಾಲದ ವೈಭವ ಅನಾವರಣಗೊಳ್ಳುತ್ತದೆ. ಭೋರ್ಗರೆದು ಹರಿಯುವ ನದಿಗಳು ಕೆಲವೊಮ್ಮೆ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತವೆ. ಆಗ ಎರಡೂ ನದಿಗಳು ಸಹಸ್ರಲಿಂಗೇಶ್ವರನ ಗರ್ಭಗುಡಿಯ ಎದುರಿಗೆ ಒಂದನ್ನೊಂದು ಪರಸ್ಪರ ಸಂಧಿಸುತ್ತವೆ. ನೇತ್ರಾವತೀ ದೇವಳದ ಮುಂಭಾಗದಕ್ಕೆ ಪ್ರವೇಶಿಸಿದರೆ, ಕುಮಾರಧಾರಾ ನೈಋತ್ಯ ಭಾಗದಿಂದ ನೇತ್ರಾವತೀಯನ್ನು ಸೇರುತ್ತದೆ. ಕೊಡಿಮರದ ಸಮೀಪ ಎರಡೂ ನದಿಗಳು ಸಂಗಮಿಸುವ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಆಗ ಇಡೀ ದೇವಾಲಯವನ್ನು ಎರಡೂ ನದಿಗಳು ಸುತ್ತುವರೆದಿರುತ್ತವೆ. ನಿಜಾರ್ಥದ ಸಂಗಮವಾಗುವುದು ದೇವರ ಎದುರು ಸಂಗಮಿಸಿದಾಗ.
ಈಗ ಈ ಸಂಗಮದ ಇತಿಹಾಸಕ್ಕೆ ಬರೋಣ. 1923ರ ಆಗಸ್ಟ್ 7ರಂದು ಎರಡೂ ನದಿಗಳು ಸಂಗಮಿಸಿ ದೇವಾಲಯದ ಗರ್ಭಗುಡಿ ಸಂಪೂರ್ಣ ಜಲಾವೃತವಾಗಿತ್ತು. ಇಷ್ಟು ಮಾತ್ರವಲ್ಲ, ದೇವಳದ ಬ್ರಹ್ಮರಥ ಪ್ರವಾಹದಲ್ಲಿ ಕೊಚ್ಚಿ ಹೋಗಿ ನಾಶವಾಗಿದೆ ಎಂಬ ಮಾಹಿತಿ ತಿಳಿದುಬರುತ್ತದೆ. ಈ ಪ್ರವಾಹವನ್ನು ಉಪ್ಪಿನಂಗಡಿಯ ಹಿರಿಯರು 'ಮಾರಿ ಬೊಳ್ಳ' ಎಂದು ಕರೆದರಂತೆ. ಸುಮಾರು 50 ವರ್ಷಗಳ ಬಳಿಕ; ಅಂದರೆ 1974ರ ಜುಲೈ 26ರಂದು ಈ ಬಗೆಯ ಇನ್ನೊಂದು ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉಪ್ಪಿನಂಗಡಿ ಬಸ್ ಸ್ಟಾಂಡ್ವರೆಗೂ ನೀರು ಹರಿದಿತ್ತು. ಆ ಬಳಿಕ 2008, 2013, 2018, 2019 ಮತ್ತು 2024ರಲ್ಲಿ ಸಂಗಮವಾಗಿರುತ್ತದೆ. ಕಳೆದ ವರ್ಷ ಸಂಗಮವಾಗಿದ್ದ ಸಮಯದಲ್ಲಿ ಈ ನೆರೆ ದೊಡ್ಡ ಮಟ್ಟದ ಅನಾಹುತವನ್ನು ತರಬಹುದೆಂಬ ಗಾಳಿಸುದ್ದಿ ಹರಡಿತ್ತು. ಯಾಕೆಂದರೆ ಇಲ್ಲಿನ ಹಿರಿಯರು 50 ವರ್ಷಕ್ಕೊಂದು ಮಾರಿ ಬೊಳ್ಳ ಬರುತ್ತದೆ ಎನ್ನುತ್ತಿದ್ದುದು ಇದಕ್ಕೆ ಇಂಬು ನೀಡಿದ್ದು. ಇತಿಹಾಸವೂ ಅದೇ ಹೇಳುತ್ತದೆ. ಆದರೆ ಕಳೆದ ವರ್ಷ ಅಷ್ಟೇನೂ ಹಾನಿಯಾಗದೆ ಎಷ್ಟು ವೇಗವಾಗಿ ಪ್ರವಾಹ ಏರಿತ್ತೋ ಅದರಿಂದ ವೇಗವಾಗಿ ಪ್ರವಾಹದ ಮಟ್ಟ ತಗ್ಗಿತ್ತು. ಮಳೆಗಾಲದಲ್ಲಿ ನದಿಗಳಸಂಗಮವಾಗುವುದು ಅಪರೂಪದ ವಿಷಯ. ಕಳೆದ 5 ವರ್ಷಗಳಿಂದ ಸಂಗಮದ ಪುಣ್ಯ ಕ್ಷಣವನ್ನು ಕಣ್ತುಂಬಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದ ಜನತೆಗೆ ಕಳೆದ ವರ್ಷ ಸಂಗಮವನ್ನು ನೋಡುವ ಭಾಗ್ಯ ಸಿಕ್ಕಿದೆ.
ಸಂಗಮವಾದಾಗ ಪುರೋಹಿತರು ವಿಧಿವತ್ತಾಗಿ ಗಂಗಾ ಪೂಜೆಯನ್ನು ನೆರವೇರಿಸಿ ಪ್ರವಾಹ ತಗ್ಗುವಂತೆ ಪ್ರಾರ್ಥಿಸುತ್ತಾರೆ. ನೇತ್ರಾವತೀ - ಕುಮಾರಧಾರಾ ನದಿಗಳ ಸಂಗಮವನ್ನು ಈ ಶ್ಲೋಕದಲ್ಲಿ ಬಹಳ ಸೊಗಸಾಗಿ ವರ್ಣಿಸಿದ್ದಾರೆ -
ಕುಮಾರಧಾರಾಸರಿತಾ ಸಮೇತಾ।
ನೇತ್ರಾವತೀ ಭಾತಿ ತರಂಗಿಣೀಯಮ್।।
ತ್ರಿಮಾರ್ಗಗಾತೀರಗತೋಪ್ಯವಾತ್ಸಿತ್।
ತ್ರಿಲೋಚನೋ ತ್ರಯ ಸಹಸ್ರ ಮೂರ್ತಿ।।
ನೇತ್ರಾವತೀ ನದಿಯ ದಡದಲ್ಲಿ ಉದ್ಭವ ಲಿಂಗವಿದೆ. ಕಳೆದ ಕೆಲವು ವರ್ಷಗಳವರೆಗೆ ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ಉದ್ಭವ ಲಿಂಗಕ್ಕೆ ಸ್ವಯಂ ಅಭಿಷೇಕ ಮಾಡುವ ವಿಶೇಷ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಇತ್ತೀಚೆಗೆ ಆಣೆಕಟ್ಟು ನಿರ್ಮಿಸಿ ನದಿಯ ನೀರನ್ನು ಅಗತ್ಯ ಕೆಲಸಗಳಿಗೆ ಉಪಯೋಗಿಸುವ ಉದ್ದೇಶವನ್ನು ಹೊಂದಿರುವುದರಿಂದ ಬೇಸಗೆಯಲ್ಲಿ ದಡವಿಡೀ ನೀರಿನಿಂದ ಆವೃತವಾಗಿರುತ್ತದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಉದ್ಭವಲಿಂಗಕ್ಕೆ ಜಾತ್ರೆಯ ಸಮಯದಲ್ಲಿ ಪೂಜೆ ಸಲ್ಲುತ್ತಿಲ್ಲ.
ಉಪ್ಪಿನಂಗಡಿಯ ಈ ಕ್ಷೇತ್ರದಲ್ಲಿ ಸಹಸ್ರಲಿಂಗೇಶ್ವರ, ಮಹಾಕಾಳಿ, ಕಲ್ಕುಡ-ಕಲ್ಲುರ್ಟಿ ದೈವಸ್ಥಾನ, ಕದಿಕ್ಕಾರು ದೈವಗಳ ಭಂಡಾರ ಮನೆ, 42 ಮುಡಿ ಅಕ್ಕಿ ಕಟ್ಟಲು ಉಪಯೋಗಿಸುವ ಹಗ್ಗವನ್ನು ಇಳಿಸಿದರೂ ಆಳ ಸಿಗದ ಮಹಾಕಾಳಿ 'ಕಯ'ವಿದೆ. ಶ್ರೀ ಕ್ಷೇತ್ರದಲ್ಲಿ ಪಿಂಡ ಪ್ರದಾನ ಮಾಡುವ ಅವಕಾಶವೂ ಇದೆ. ಹಾಗಾಗಿಯೇ ಇದು ದಕ್ಷಿಣ ಕಾಶಿ. ಸಹಸ್ರಲಿಂಗೇಶ್ವರ ದೇವಳದ ಪೌರಾಣಿಕ ಹಿನ್ನೆಲೆಯನ್ನು ನೋಡುವುದಿದ್ದರೆ... ದ್ವಾಪರಾ ಯುಗದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ಪಾಂಡವರಿಗೆ ಅನೇಕ ಮಂದಿಯ ಪ್ರಾಣಾರ್ಪಣೆಯ ಬಗ್ಗೆ ಪಾಪಪ್ರಜ್ಞೆ ಕಾಡುತ್ತದೆ. ತಮ್ಮ ಅಳಲನ್ನು ಭಗವಾನ್ ಶ್ರೀಕೃಷ್ಣನಲ್ಲಿ ನಿವೇದಿಸಿಕೊಳ್ಳುತ್ತಾರೆ. ಆಗ ಭಗವಂತನು ಪಾಪ ಪರಿಹಾರಕ್ಕಾಗಿ ರಾಜಸೂಯಾ ಯಾಗವನ್ನು ಮಾಡುವಂತೆ ಸಲಹೆ ನೀಡುತ್ತಾನೆ. ಶ್ರೀಕೃಷ್ಣನ ಸೂಚನೆಯಂತೆ ಯಾಗವನ್ನು ಮಾಡಲು ಸಂಕಲ್ಪಿಸಿದ ಪಾಂಡವರಿಗೆ ಒಂದು ಸಂಶಯ ಕಾಡುತ್ತದೆ. ಯಾಗದ ಪ್ರಯುಕ್ತ ನಡೆಯುವ ಅನ್ನ ಸಂತರ್ಪಣೆಯ ಬಳಿಕ ಯಾಗ ಮಂಟಪದ ಪರಿಶುದ್ಧತೆಯ ವಿಷಯದಲ್ಲಿ ಸಂಶಯ ಬಂದಿರುತ್ತದೆ. ಇದಕ್ಕಾಗಿ ಮಹೇಂದ್ರಗಿರಿಯಲ್ಲಿರುವ ಪುರಷಾಮೃಗವನ್ನು ಕರೆತರುವಂತೆ ಶ್ರೀಕೃಷ್ಣನು ಸೂಚಿಸುತ್ತಾನೆ. ಆ ಪ್ರಯುಕ್ತ ಭೀಮಸೇನನು ಮಹೇಂದ್ರಗಿರಿಯೊಳಗೆ ಪ್ರವೇಶಿಸಿ ವಾಯು ಮಾರ್ಗದಲ್ಲಿ ಸಂಚರಿಸುತ್ತಾನೆ. ಈ ಸಮಯದಲ್ಲಿ ತ್ರೇತಾಯುಗದಲ್ಲಿದ್ದ ವಾಯುಪುತ್ರ ಹನೂಮಂತನು ವೃದ್ಧಾಪ್ಯದಲ್ಲಿ ಪವಡಿಸುತ್ತಿರುತ್ತಾನೆ. ಭೀಮನಿಗೆ ಎದುರಾಗುವ ಹನೂಮಂತನು ತನ್ನ ಬಾಲವನ್ನು ಮಾರ್ಗಕ್ಕೆ ಅಡ್ಡಲಾಗಿ ಚಾಚಿರುತ್ತಾನೆ. ಈ ಬಗ್ಗೆ ವಾಗ್ವಾದಗಳು ನಡೆದು "ನೀನೇ ಬಾಲವನ್ನು ಸರಿಸಿಬಿಡು" ಎಂದು ಆಂಜನೇಯನು ಭೀಮನಲ್ಲಿ ಹೇಳುತ್ತಾನೆ. ಆಗ ಭೀಮನು ತನ್ನ ಸಂಪೂರ್ಣ ಬಲವನ್ನು ಪ್ರಯೋಗಿಸಿದರೂ ಬಾಲವನ್ನು ಸ್ವಲ್ಪವೂ ಕದಲಿಸಲಾಗುವುದಿಲ್ಲ. ಮಾತುಕತೆ ಮುಂದುವರಿದಾಗ ಇಬ್ಬರೂ ವಾಯುಪುತ್ರರೆಂದು ತಿಳಿಯುತ್ತದೆ. ಭೀಮನು ಬಂದುದರ ಉದ್ದೇಶವೂ ಹನೂಮಂತನಿಗೆ ತಿಳಿಯುತ್ತದೆ. ಆಗ ಹನುಮನು ತನ್ನ ಬಾಲದ ರೋಮಗಳನ್ನು ರಕ್ಷೆಯಾಗಿ ಕೊಟ್ಟು ಭೀಮನನ್ನು ಹರಸುತ್ತಾನೆ. ಭೀಮನು ದೇವಮೃಗವನ್ನು ಭೇಟಿಯಾಗಿ ತಾನು ಬಂದ ಉದ್ದೇಶವನ್ನು ತಿಳಿಸಿದಾಗ ದೇವಮೃಗ ಷರತ್ತೊಂದನ್ನು ಒಡ್ಡುತ್ತದೆ. ಮನೋವೇಗದಿಂದ ಸಂಚರಿಸುವ ಪುರುಷಾಮೃಗದ ಷರತ್ತನ್ನು ರೋಮದ ನಕ್ಷೆಯ ಆಧಾರದಲ್ಲಿ ಸ್ವೀಕರಿಸಿ ಭೀಮಸೇನ ನಿಶ್ಚಿತ ಗುರಿಯತ್ತ ಸಾಗುತ್ತಾನೆ. ದೇವಮೃಗ ಹಿಂಬಾಲಿಸುತ್ತದೆ. ಆಗ ಹನುಮನ ಒಂದೊಂದು ರೋಮದಲ್ಲಿ ಒಂದೊಂದು ಶಿವಲಿಂಗ ಉದ್ಭವವಾಗುತ್ತದೆ. ಈಗ ಒಂದು ಸಮಸ್ಯೆ ಎದುರಾಗಿತ್ತು. ಪರಮಶಿವಭಕ್ತ ದೇವಮೃಗ ಶಿವಾರ್ಚನೆಯನ್ನು ಮಾಡದೆ ಮುಂದೆ ಸಾಗದು. ಹೀಗೆ ಉಪ್ಪಿನಂಗಡಿಗೆ ಬಂದಾಗ ದೇವಮೃಗದ ಕಬಂಧ ಬಾಹುವಿಗೆ ಸಿಲುಕುವ ಪ್ರಮೇಯ ಭೀಮಸೇನನಿಗೆ ಬಂತು. ಆಗ ಭೀಮನು ತನ್ನ ಕೈಗಳಲ್ಲಿದ್ದ ಸಹಸ್ರ ರೋಮಗಳನ್ನು ಭೂಮಿಗೆ ಚೆಲ್ಲುತ್ತಾನೆ. ಸಹಸ್ರ ರೋಮಗಳಿಂದ ಸಹಸ್ರ ಶಿವ ಲಿಂಗಗಳು ಉದ್ಭವಿಸುತ್ತವೆ. ಪುರುಷಾಮೃಗವು ಸಹಸ್ರಲಿಂಗಗಳಿಗೆ ಶಿವಾರ್ಚನೆಯನ್ನು ಮಾಡುವ ಸಮಯದಲ್ಲಿ ಭೀಮನು ಯಾಗ ಮಂಟಪವನ್ನು ತಲುಪುತ್ತಾನೆ. ಹೀಗೆ ನಿರ್ಮಾಣಗೊಂಡ ಸಹಸ್ರಲಿಂಗಗಳು ಭೂತಳದಲ್ಲಿ ಇವೆಯೆಂಬ ನಂಬಿಕೆಯಿದೆ. ಅದಲ್ಲಿ ಒಂದು ಲಿಂಗವೇ ನೇತ್ರಾವತೀ ದಡದಲ್ಲಿರುವ ಉದ್ಭವ ಲಿಂಗ.
ಹೀಗೆ ಪೌರಾಣಿಕವಾಗಿ, ಐತಿಹಾಸಿಕವಾಗಿ ಮತ್ತು ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಉಪ್ಪಿನಂಗಡಿ ಹಲವು ವಿಸ್ಮಯಗಳ ಆಗರವೇ ಸರಿ.