ಸ್ನೇಹಿತರ ಜೊತೆಗೆ ದಕ್ಷಿಣ ಭಾರತದ ಈ ಪ್ರವಾಸಿತಾಣಗಳನ್ನು ಒಮ್ಮೆ ಭೇಟಿ ಮಾಡಿ
ದಕ್ಷಿಣ ಭಾರತದಾದ್ಯಂತ ಪ್ರವಾಸಿಗರಿಗಾಗಿ ಅನೇಕ ತಾಣಗಳಿದ್ದು, ವಾರಾಂತ್ಯದಲ್ಲಿ ವಿಶ್ರಾಂತಿಗೆ ಹಾಗೂ ಸುತ್ತಾಡಬಯಸುವವರಿಗೆ ವಿಶೇಷ ಆಯ್ಕೆಗಳಿವೆ. ಗೋಕರ್ಣದಿಂದ ಪ್ರಾರಂಭವಾಗಿ ಕೊಡೈಕೆನಾಲ್, ವರ್ಕಲಾ, ಯೆರ್ಕಾಡ್, ಅರಕು ಕಣಿವೆ ಹೀಗೆ ಯಾವ ಪ್ರದೇಶಕ್ಕೆ ಹೋಗಬೇಕೆಂಬ ಆಯ್ಕೆ ನಿಮ್ಮದು.
ಕೆಲಸದ ಒತ್ತಡ, ಅದೇ ಜೀವನ ಶೈಲಿಯಿಂದ ಬೇಸರವಾಗಿಬಿಟ್ಟಿದ್ದೀರಾ? ಒಂದೆರಡು ದಿನ ಆರಾಮವಾಗಿ ಸುತ್ತಾಡಿ ಬರೆಬೇಕು, ಭಾರತದ ಹಿಡನ್ ತಾಣಗಳಿಗೆ ಭೇಟಿಕೊಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ದಕ್ಷಿಣ ಭಾರತದ ಈ ಪ್ರಮುಖ ಪ್ರವಾಸಿತಾಣಗಳಿಗೆ ತಪ್ಪದೇ ಹೋಗಿ ಬನ್ನಿ. ಕೈಗೆಟುಕುವ ದರದಲ್ಲಿ ವಿಶೇಷ ತಾಣಗಳ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ನೆಲೆಗಟ್ಟನ್ನು ತಿಳಿಯುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ದಕ್ಷಿಣ ಭಾರತದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳಿವು:
ಗೋಕರ್ಣ, ಕರ್ನಾಟಕ
ಗೋವಾ ತುಂಬಾ ದುಬಾರಿ ಎಂದು ನಿಮಗನ್ನಿಸಿದರೆ ಗೋಕರ್ಣ ಪ್ರವಾಸವನ್ನು ಕೈಗೊಳ್ಳಬಹುದು. ಗೋವಾದಮತೆ ಗೋಕರ್ಣವೂ ಬೀಚ್ ಪಟ್ಟಣವೆನ್ನಿಸಿಕೊಂಡಿದ್ದು,ಇಲ್ಲಿ ಅನೇಕ ಪ್ರಾಚೀನ ಕಡಲತೀರಗಳು, ಬಜೆಟ್ ಫ್ರೆಂಡ್ಲಿ ಹೋಂಸ್ಟೇಗಳಿವೆ. ಓಂ ಬೀಚ್ನಿಂದ ಹಾಫ್ ಮೂನ್ ಬೀಚ್ಗೆ ಬೀಚ್ ಟ್ರೆಕ್ ಅನ್ನು ಸೌಲಭ್ಯವಿದ್ದು, ಕುಡ್ಲೆ ಬೀಚ್ನಲ್ಲಿ ಸೂರ್ಯಾಸ್ತವನ್ನು ಆನಂದಿಸಬಹುದು.

ಹಂಪಿ, ಕರ್ನಾಟಕ
ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಹಂಪಿ ಬೆಂಗಳೂರಿನಿಂದ 6 ಗಂಟೆಗಳ ಪ್ರಯಾಣದ ಮೂಲಕ ತಲುಪಬಹುದಾದ ಪ್ರವಾಸಿ ತಾಣ. ಹಂಪಿ ಎಂದಾಕ್ಷಣ ಕೇವಲ ವಿಜಯನಗರದ ಅವಶೇಷಗಳು ಮಾತ್ರವಲ್ಲ, ಜೊತೆಗೆ ಸಾಹಸ ಚಟುವಟಿಕೆಗಳನ್ನು ಆನಂದಿಸಲು ಬಯಸುವವರಿಗೂ ಹಂಪಿ ಸ್ವರ್ಗವಾಗಿದೆ. ಶತಮಾನಗಳ ಹಳೆಯದಾದ ವಿರೂಪಾಕ್ಷ ದೇವಾಲಯ, ನರಸಿಂಹ ದೇವಾಲಯ, ಹಂಪಿಯ ಅಶ್ವಶಾಲೆ, ಹಂಪಿ ಬಜಾರ್, ಮಾತುಂಗ ಬೆಟ್ಟ ಹೀಗೆ ವಿಭಿನ್ನವಾದ ಅನುಭವವನ್ನು ನೀಡುವ ತಾಣಗಳು ಇಲ್ಲಿದ್ದು,ಬಾಡಿಗೆಗ ಸೈಕಲ್ ಪಡೆದು, ಸೈಕಲ್ ಸವಾರಿಯ ಮೂಲಕವೂ ಹಂಪಿಯನ್ನು ಸುತ್ತಾಡಿಬರಬಹುದು.

ಕೊಡೈಕೆನಾಲ್, ತಮಿಳುನಾಡು
ಕೊಡೈಕೆನಾಲ್ "ಗಿರಿಧಾಮಗಳ ರಾಜಕುಮಾರಿ" ಎಂದು ಕರೆಸಿಕೊಂಡಿದೆ. ಇಲ್ಲಿಗೆ ಬೇಸಿಗೆಯಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ , ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಮಂಜಿನ ವಾತಾವರಣವನ್ನು ಕಣ್ತುಂಬಿಕೊಳ್ಳುವದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ನೀವು ಸ್ನೇಹಿತರ ಜೊತೆಗೆ ಬಂದರೆ ಬೇರ್ ಶೋಲಾ ಜಲಪಾತ, ಗ್ರೀನ್ ವ್ಯಾಲಿ ವ್ಯೂ, ಬೆರಿಜಮ್ ಸರೋವರ, ಕುರಿಂಜಿ ದೇವಾಲಯಕ್ಕೆ ಭೇಟಿ ನೀಡಬಹುದು. ಅಲ್ಲದೆ ಕೊಡೈಕೆನಾಲ್ ಸರೋವರದಲ್ಲಿ ದೋಣಿ ವಿಹಾರ ಮಾಡಬಹುದು.

ವರ್ಕಲಾ, ಕೇರಳ
ತಿರುವನಂತಪುರಂ ಜಿಲ್ಲೆಯ ಹೊರ ವಲಯದಲ್ಲಿ ವರ್ಕಲಾ ಒಂದು ಸಣ್ಣ ಹಳ್ಳಿ.ಪಾಪನಾಶಮ್ ಬೀಚ್ ಅಥವಾ ವರ್ಕಲಾ ಬೀಚ್ ಇಲ್ಲಿನ ಪ್ರಮುಖ ಆಕರ್ಷಣೆ. ವರ್ಕಲಾದಿಂದ ಹತ್ತು ಕಿಲೋ ಮೀಟರ್ಗಳಷ್ಟು ದೂರದಲ್ಲಿರುವ ಈ ಬೀಚ್, ಔಷಧೀಯ ಗುಣವನ್ನು ಹೊಂದಿದ್ದು, ಇಲ್ಲಿ ಸ್ನಾನ ಮಾಡುವುದರಿಂದ ಪಾಫ ನಾಶವಾಗುತ್ತದೆ, ಅನಾರೋಗ್ಯವಿದ್ದಲ್ಲಿ ಸರಿಹೂತ್ತದೆಯೆಂಬ ನಂಬಿಕೆಯೂ ಇದೆ. ಇದಲ್ಲದೆ 2000 ವರ್ಷಗಳಷ್ಟು ಹಳೆಯ ವಿಷ್ಣು ದೇವಸ್ಥಾನ ಮತ್ತು ಬೀಚ್ನಿಂದ ಸ್ವಲ್ಪವೇ ದೂರದಲ್ಲಿ ಇರುವ ಶಿವಗಿರಿ ಮಠ – ಆಶ್ರಮಮ್ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ನೆಚ್ಚಿನ ತಾಣಗಳು.

ತೇನ್ಮಲ, ಕೇರಳ
ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರಿನ ಪರಿಸರದಲ್ಲಿ ನೆಲೆಸಿರುವ ತೇನ್ಮಲ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣ. ಇದು ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಸುಮಾರು 72 ಕಿ.ಮೀ ಗಳಷ್ಟು ದೂರದಲ್ಲಿದೆ. ಮಲಯಾಳಂ ಭಾಷೆಯಲ್ಲಿ ತೇನ್ ಅಂದರೆ ಜೇನು, ಮಲ ಅಂದರೆ ಕಾಡು ಎಂದರ್ಥ. ಇದು ಜೇನು ಕಾಡು ಎಂದೇ ಹೆಸರು ಮಾಡಿದ್ದು, ಭಾರತದ ಮೊದಲ ಪರಿಸರ ಪ್ರವಾಸೋದ್ಯಮ ತಾಣವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ನಿರ್ಮಿಸಲಾದ ತೂಗು ಸೇತುವೆಗಳು, ಜಲಾಶಯ, ಎತ್ತರದ ಬೆಟ್ಟ-ಗುಡ್ಡಗಳು, ಗಿಡ ಮರಗಳು, ಸುಶ್ರಾವ್ಯವಾಗಿ ಹರಿಯುವ ನೀರು ಮನಸ್ಸಿಗೆ ಮುದ ನೀಡುತ್ತವೆ.

ವಾಗಮನ್, ಕೇರಳ
ಇಡುಕ್ಕಿ ಜಿಲ್ಲೆಯಲ್ಲಿರುವ ಸುಂದರ ಗಿರಿಧಾಮಗಳಲ್ಲಿ ವಾಗಮನ್ ಕೂಡಾ ಒಂದು. ವಾಗಮನ್ನ ಒಂದಷ್ಟು ಭಾಗಗಳು ಇಡುಕ್ಕಿ ಜಿಲ್ಲೆಯ ಪೀರುಮೇಡು ತಾಲೂಕಿಗೆ ಸೇರುತ್ತದೆ. ಆದರೆ, ವಾಗಮನ್ ಪಟ್ಟಣ ಸೇರಿದಂತೆ ಬಹುಭಾಗ ಕೊಟ್ಟಾಯಂ ಜಿಲ್ಲೆಯ ಮೀನಚಿಲ್ ತಾಲ್ಲೂಕು ಮತ್ತು ಕಂಜಿರಪಲ್ಲಿ ತಾಲ್ಲೂಕಿಗೆ ಸೇರಿಕೊಳ್ಳುತ್ತದೆ. ಅದೇನೇ ಆದರೂ, ಸುಂದರ ಹಸಿರಿನ ಸಿರಿ, ಪ್ರಶಾಂತತೆ, ಅಪೂರ್ವ ಭೂದೃಶ್ಯಗಳಿಂದ ಕಣ್ಮನ ಸೆಳೆಯುವ ತಾಣವಿದು. ಆಕರ್ಷಕ ಚಹಾ ತೋಟಗಳಿಂದ ಆವೃತವಾದ ವಾಗಮನ್ನಲ್ಲಿ ಸುತ್ತಾಡುವ ಖುಷಿಯೇ ಬೇರೆ. ಸಾಹಸ ಪ್ರಿಯರಿಗೆ, ಟ್ರೆಕ್ಕಿಂಗ್, ಪ್ಯಾರಾ ಗ್ಲೈಡಿಂಗ್ ಮತ್ತು ರಾಕ್ ಕ್ಲೈಂಬಿಂಗ್ನಂತಹ ಸಾಕಷ್ಟು ಖುಷಿಯ ಚಟುವಟಿಕೆಗಳಿಗೆ ಇಲ್ಲಿ ಅವಕಾಶಗಳಿವೆ. ತಂಗಲ್ ಬೆಟ್ಟ, ಮುರುಗನ್ ಬೆಟ್ಟ ಮತ್ತು ಕುರಿಸ್ಮಲಾ ಬೆಟ್ಟಗಳಿಂದ ಆವೃತ್ತವಾದ ಈ ಗಿರಿಧಾಮದಲ್ಲಿ ಈ ಮೂರು ಅಪೂರ್ವ ಬೆಟ್ಟಗಳ ನೋಟ ಅದ್ಭುತವಾಗಿ ಕಾಣಸಿಗುತ್ತದೆ.

ಅರಕು ಕಣಿವೆ, ಆಂಧ್ರಪ್ರದೇಶ
ಜಲಪಾತಗಳ ಬೀಡು ಅರಕು ಕಣಿವೆ. ಇಲ್ಲಿ ಜಲಪಾತಗಷ್ಟೇ ಅಲ್ಲದೆ ಕಾಫಿ ತೋಟಗಳು, ಬುಡಕಟ್ಟು ಸಂಸ್ಕೃತಿಯ ಪರಿಚಯವೂ ನಿಮಗಾಗಲಿದೆ. ವಿಶಾಖಪಟ್ಟಣಂನಿಂದ ನಿಮ್ಮ ಸ್ನೇಹಿತರೊಂದಿಗೆ ಈ ಶಾಂತ ಗಿರಿಧಾಮಕ್ಕೆ ಸುಂದರವಾದ ರೈಲಿನಲ್ಲಿ ಪ್ರಯಾಣ ಮಾಡಬಹುದು. ಸ್ವಲ್ಪ ವಿಶ್ರಾಂತಿಯ ನಂತರ, ಕಾಲ್ನಡಿಗೆಯ ಮೂಲಕವೇ ಕಟಿಕಿ ಜಲಪಾತಗಳಿಗೆ ಹೋಗಬಹುದು. ಅಲ್ಲದೆ ಬೊರ್ರಾ ಗುಹೆಗಳನ್ನು ನೋಡಿಬರಬಹುದು. ಬಜೆಟ್ ಫ್ರೆಂಡ್ಲಿಯಾಗಿರುವ ಈ ತಾಣದಲ್ಲಿ ವಸತಿ ಮತ್ತು ಆಹಾರವೂ ಅಗ್ಗದ ಬೆಲೆಗೆ ಲಭ್ಯವಾಗಲಿದೆ.

ಯೆರ್ಕಾಡ್, ತಮಿಳುನಾಡು
ಸಾಮಾನ್ಯವಾಗಿ "ಬಡವರ ಊಟಿ" ಎಂದು ಕರೆಯಲ್ಪಡುವ ಯೆರ್ಕಾಡ್, ತಮಿಳುನಾಡಿನ ಗಿರಿಧಾಮಗಳಲ್ಲಿ ಒಂದು. ತಮಿಳುನಾಡಿನ ಶಿವರಾಯ್ ಬೆಟ್ಟಗಳ ತಪ್ಪಲಿನಲ್ಲಿ ನೆಲೆ ನಿಂತಿರುವ ಈ ಗಿರಿಧಾಮ ತನ್ನ ಪ್ರಕತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಬಂದು ಸೇರುತ್ತಾರೆ. ಪೆಡಲ್ಬೋಟ್ನಲ್ಲಿ ಯೆರ್ಕಾಡ್ ಸರೋವರವನ್ನು ಸುತ್ತಿ, ಪಗೋಡಾ ಪಾಯಿಂಟ್ಗೆ ಭೇಟಿ ಮಾಡಿ, ಪರಿಮಳಯುಕ್ತ ಕಾಫಿ ತೋಟಗಳಲ್ಲಿ ಸುತ್ತಾಡುವ ಖುಷಿಯೇ ಬೇರೆ.

ಯಲಗಿರಿ, ತಮಿಳುನಾಡು
ಚೆನ್ನೈ ಮತ್ತು ಬೆಂಗಳೂರಿನ ನಡುವಿನಲ್ಲಿರುವ ಯಲಗಿರಿ ಗಿರಿಧಾಮ ಅಷ್ಟೇನೂ ಪ್ರಸಿದ್ಧ ತಾಣವಲ್ಲ. ಎಲೆಮರೆಯ ಕಾಯಿಯಂತಿರುವ ಈ ಪ್ರದೇಶ ವಾರಾಂತ್ಯವನ್ನು ಕಳೆಯಲು ವಿಶ್ರಾಂತಿ ಪಡೆಯಲು ಸೂಕ್ತ ತಾಣ. ದೋಣಿ ವಿಹಾರ, ಜಿಪ್ಲೈನಿಂಗ್, ಸ್ವಾಮಿಮಲೈ ಬೆಟ್ಟಗಳ ಹಾದಿಯ ಸಣ್ಣ ಚಾರಣಗಳು ಇಲ್ಲಿನ ಪ್ರಮುಖ ಆಕರ್ಷಣೆ.