ಬೇಸಿಗೆ ರಜೆಯಲ್ಲಿ ಪ್ರವಾಸಿಗರು ಕಡಲತೀರ, ಗಿರಿಧಾಮಗಳು ಮತ್ತು ದೇವಾಲಯಗಳ ಭೇಟಿಯನ್ನೇ ಆಯ್ಕೆ ಮಾಡಿಕೊಳ್ಳುವುದೇಕೆ ?
ಬೇಸಿಗೆ ಕಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಪ್ರವಾಸಗಳದ್ದೇ ಸುದ್ದಿ. ಅದರಲ್ಲೂ ಸದ್ಯ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತಂಪಾದ ಪ್ರದೇಶಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂಬುದಾಗಿ ಯೊಲೊಬಸ್ ವರದಿ ಮಾಡಿದೆ.
ಭಾರತದ ಪ್ರಸಿದ್ಧ ಇಂಟರ್ಸಿಟಿ ಬಸ್ ಸೇವೆಯಾದ ಯೊಲೊಬಸ್ ಪ್ರಕಟಿಸಿದ ಇತ್ತೀಚಿನ ವರದಿಯೊಂದರ ಪ್ರಕಾರ, ಜನರು ಬಿಸಿಲಿನಿಂದ ತಪ್ಪಿಸಿಕೊಂಡು ಬೇಸಿಗೆ ರಜೆಯನ್ನು ಉಲ್ಲಾಸದಾಯಕವಾಗಿ ಕಳೆಯಲು ಇಷ್ಟಪಡುತ್ತಿದ್ದಾರಂತೆ. ಅದಕ್ಕಾಗಿ ತಂಪಾದ ಪ್ರದೇಶಗಳಾದ ಮನಾಲಿ, ಶಿಮ್ಲಾ ಮತ್ತು ನೈನಿತಾಲ್ನಂತಹ ಗಿರಿಧಾಮಗಳನ್ನು ಭೇಟಿ ಮಾಡುತ್ತಿದ್ದಾರೆ. ಅಲ್ಲದೆ ಸಮುದ್ರದ ಕಿನಾರೆಯಲಿ ಕಾಳಕಳೆಯಬಯಸು ಅನೇಕರು ಗೋವಾ ಮತ್ತು ಕೊಚ್ಚಿನ್ನಂತಹ ಕರಾವಳಿ ತಾಣಗಳನ್ನು ಅರಸಿ ಹೋಗುತ್ತಿದ್ದಾರೆ. ಧಾರ್ಮಿಕ ಯಾತ್ರೆಯನ್ನು ಕೈಗೊಳ್ಳಲು ಬಯಸುವ ಪ್ರವಾಸಿಗರು ತಿರುಪತಿ, ಶಿರಡಿ ಮತ್ತು ವಾರಣಾಸಿ ಸೇರಿದಂತೆ ಯಾತ್ರಾ ಸ್ಥಳಗಳತ್ತ ಮುಖ ಮಾಡಿದ್ದಾರೆ.
ಮನಾಲಿಯತ್ತ ಪ್ರವಾಸಿಗರ ದಂಡು:
ಹಿಮಾಚಲ ಪ್ರದೇಶದ ಮನಾಲಿ ಅತ್ಯಂತ ಸೊಗಸಾದ ಗಿರಿಧಾಮಗಳಲ್ಲಿ ಒಂದಾಗಿದೆ. ಈ ಸುಂದರವಾದ ತಾಣವು ಪ್ರಕೃತಿ ಪ್ರಿಯರಿಗೆ, ಸಾಹಸ ಪ್ರಿಯರಿಗೆ ಮತ್ತು ಸಾಂಸ್ಕೃತಿಕ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಹಿಮದಿಂದ ಕೂಡಿದ ಪರ್ವತಗಳು, ಎತ್ತ ನೋಡಿದರೂ ಹಚ್ಚ ಹಸಿರಿನ ಕಣಿವೆಗಳು, ಶ್ರೀಮಂತ ಇತಿಹಾಸ, ತಂಪಾದ ವಾತಾವರಣ ಮನಸ್ಸಿಗೆ ಮುದವನ್ನು ಉಂಟು ಮಾಡುತ್ತದೆ. ಮನಾಲಿಯಷ್ಟೇ ಅಲ್ಲದೆ ಶಿಮ್ಲಾ, ನೈನಿತಾಲ್ ನಂತಹ ಇನ್ನೂ ಅನೇಕ ತಾಣಗಳನ್ನು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಈ ಸುಂದರವಾದ ಬೆಟ್ಟ, ಗಿರಿಧಾಮಗಳ ಹೊರತಾಗಿ ಪ್ರವಾಸಿಗರು ಕರಾವಳಿಯ ವಿಶ್ರಾಂತಿಯ ತಾಣಗಳತ್ತಲೂ ಒಲವು ತೋರುತ್ತಿದ್ದಾರೆ. ಈ ಬೇಸಿಗೆಯಲ್ಲಿ ಕಡಲ ತೀರಗಳನ್ನು ಹುಡುಕುತ್ತಿರುವವರಿಗೆ ಗೋವಾ, ಗೋಕರ್ಣ, ಕೊಚ್ಚಿನ್ ಮತ್ತು ಪುರಿ ಆದ್ಯತೆಯ ರಜಾ ತಾಣಗಳಾಗಿವೆ.
ಧಾರ್ಮಿಕ ಪ್ರವಾಸಕ್ಕಿದು ಸೂಕ್ತ ಸಮಯ:
ಇದರ ಜೊತೆಗೆ, ಬೇಸಿಗೆ ಕಾಲದಲ್ಲಿ ಧಾರ್ಮಿಕ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿಯೇ ಇದ್ದು, ಆಂಧ್ರಪ್ರದೇಶದ ಪ್ರಮುಖ ಯಾತ್ರಾ ಸ್ಥಳ ತಿರುಪತಿಗೆ ಲಕ್ಷಂತರ ಭಕ್ತರು ತೆರಳುತ್ತಾರೆ. ಇನ್ನು ಮಹಾರಾಷ್ಟ್ರದಲ್ಲಿರುವ ಶಿರಡಿಯು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಆಧ್ಯಾತ್ಮಿಕ ತಾಣಗಳಲ್ಲಿ ಒಂದಾಗಿದೆ. ಶಿರಡಿಯು ಪೂಜ್ಯ ಸಂತ ಸಾಯಿಬಾಬಾ ಅವರ ನೆಲೆಯಾಗಿದ್ದು, ದೇಶಾದ್ಯಂತದ ಭಕ್ತರು ಆಶೀರ್ವಾದ ಪಡೆಯಲು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಳಲ್ಲಿ ದ್ವಾರಕಾಮಾಯಿ, ಸಮಾಧಿ ಮಂದಿರ ಮತ್ತು ಗುರುಸ್ಥಾನ ಸೇರಿಕೊಂಡಿವೆ.

ಗಂಗಾ ನದಿಯ ದಡದಲ್ಲಿರುವ ವಾರಣಾಸಿ, ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಈ ನಗರವು ಹಿಂದೂ ಆಧ್ಯಾತ್ಮಿಕತೆ ಮತ್ತು ಆಚರಣೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಅದರ ಹಳೆಯ ಘಾಟ್ಗಳು, ಪ್ರಾಚೀನ ದೇವಾಲಯಗಳು ಮತ್ತು ಗಂಗಾ ಆರತಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾ ವೈಷ್ಣೋದೇವಿ ಯಾತ್ರೆಯ ಮೂಲ ಶಿಬಿರವಾಗಿದೆ. ತ್ರಿಕೂಟ ಪರ್ವತಗಳಲ್ಲಿರುವ ಪವಿತ್ರ ವೈಷ್ಣೋದೇವಿ ದೇಗುಲವನ್ನು ತಲುಪಲು ಯಾತ್ರಿಕರು ಸುಮಾರು 13 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಾರೆ. ಪಟ್ಟಣವು ಭಕ್ತರಿಗೆ ಸುಸಂಘಟಿತವಾಗಿದ್ದು, ಕುದುರೆಗಳು, ಹೆಲಿಕಾಪ್ಟರ್ ಸವಾರಿಗಳು ಮತ್ತು ವಸತಿ ಸೌಕರ್ಯಗಳನ್ನು ಒದಗಿಸುತ್ತದೆ.

ಇದಷ್ಟೇ ಅಲ್ಲದೆ ಅಮೃತಸರ, ತೆಂಕಸಿ ಮತ್ತು ಕೊಚ್ಚಿನ್ನಂತಹ ಇತರ ನಗರಗಳು ಸಹ ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ದೆಹಲಿ-ಮನಾಲಿ, ಡೆಹ್ರಾಡೂನ್ ಮತ್ತು ಲಕ್ನೋ-ಮನಾಲಿಯಂತಹ ಪ್ರಸಿದ್ಧ ಯಾತ್ರಾ ತಾಣಗಳ ಪ್ಲಾನ್ ಸೇರಿಕೊಂಡಿವೆಯಂತೆ. ಹಾಗಾದರೆ ಈ ಬೇಸಿಗೆಯಲ್ಲಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ?