Saturday, June 14, 2025
Saturday, June 14, 2025

ಉತ್ತರ ಕನ್ನಡ ಜಿಲ್ಲೆಯ ಈ ತಾಣಗಳಿಗೆ ನೀವು ಭೇಟಿ ನೀಡಲೇಬೇಕು..

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೊಂದಾದ, ಕರಾವಳಿ ತೀರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೆ ಅವುಗಳಲ್ಲಿ ಪ್ರಮುಖವಾದುವು ಗೋಕರ್ಣ, ದಾಂಡೇಲಿ ಹಾಗೂ ಯಾಣ.. - ಸುಪ್ರೀತಾ ವೆಂಕಟ್

ಯಾವುದೇ ಒಂದು ಸ್ಥಳ ಪ್ರವಾಸಿ ತಾಣವೆಂದು ಗುರುತಿಸಿಕೊಳ್ಳಬೇಕಾದರೆ, ಅದು ಬಹಳಷ್ಟು ಮಂದಿಯನ್ನು ತಲುಪಬೇಕು. ಅಲ್ಲೇನಿದೆ? ಎಂದು ಅಸಡ್ಡೆ ತೋರಿಸಿದರೆ ನೋಡಬೇಕಾದ ಕೆಲವೊಂದು ಜಾಗಗಳ ಮಹತ್ವವನ್ನು ತಿಳಿಯದಂತಾಗುವುದು. ಜನರ ಬಾಯಲ್ಲಿ ಕೇಳಿದ್ದೇ ಕೇಳುವ ಪ್ರೇಕ್ಷಣೀಯ ಸ್ಥಳಗಳನ್ನು ಹೊರತುಪಡಿಸಿ ಉಳಿದ ಸ್ಥಳಗಳನ್ನು ನೋಡಲು ಹೊರಟರೆ, ಅವುಗಳು ಹೇಗಿವೆಯೆಂದು ನಾವು ಇತರರಿಗೆ ಹೇಳಿ, ಅವುಗಳೂ ಬೆಳಕಿಗೆ ಬರುತ್ತವೆ. ಉತ್ತರ ಕರ್ನಾಟಕವೆಂದರೆ ಬಿರು ಬಿಸಿಲು, ಒಣಗಿದ ಪ್ರದೇಶಗಳು ಹೀಗೆ ಕಲ್ಪನೆಗಳಿದ್ದ ನನ್ನ ಮನದಲ್ಲಿ, ಅಲ್ಲಿ ಭೇಟಿ ನೀಡಿದ ಕೆಲವು ಪ್ರದೇಶಗಳ ನಂತರ ನನ್ನ ಅನಿಸಿಕೆ ಬದಲಾಯಿತು. ಗೆಳೆಯರ ಜೊತೆಗೂಡಿ ಹೋದಂತಹ ಪ್ರವಾಸೀ ತಾಣಗಳಲ್ಲಿ ಮೂರರ ಬಗ್ಗೆ ಇಲ್ಲಿ ಬರೆಯುತ್ತಿರುವೆ.. ಗೋಕರ್ಣ, ದಾಂಡೇಲಿ ಹಾಗೂ ಯಾಣ..

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೊಂದಾದ, ಕರಾವಳಿ ತೀರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಗೋಕರ್ಣ, ದಾಂಡೇಲಿ ಹಾಗೂ ಯಾಣ. ದಕ್ಷಿಣ ಕನ್ನಡದವಳಾದ ನನಗೆ, ಇಲ್ಲಿಯ ಹವೆ ಕೂಡ ನಮ್ಮೂರಂತೆಯೇ ಅನಿಸಿತು. ನೋಡಲು ಊರು ಕೂಡ ಹೋಲಿಕೆಯಿದೆ. ಗೋಕರ್ಣ ಕಡಲ ತೀರದ ಪ್ರೇಕ್ಷಣೀಯ ಸ್ಥಳ. ದಾಂಡೇಲಿ ರಿವರ್ ರಾಫ್ಟಿಂಗ್ ಮಾಡಲು ಹೆಸರುವಾಸಿಯಾಗಿದೆ. ಯಾಣ ರಾಕ್ಸ್ ಹೆಸರೇ ಸೂಚಿಸುವಂತೆ ಕಲ್ಲುಗಳ ವಿಭಿನ್ನವಾದ ವಿನ್ಯಾಸ ಹೊಂದಿದ ತಾಣ.

ಗೋಕರ್ಣ

ಗೋಕರ್ಣ ಅಂದಾಕ್ಷಣ ನೆನಪಾಗುವುದು ಗೋಕರ್ಣ ದೇವಸ್ಥಾನ, ಬೀಚ್'ಗಳು. ಗೋಕರ್ಣದಲ್ಲಿ ಮಹಾಗಣಪತಿ ಹಾಗೂ ಮಹಾಬಲೇಶ್ವರ ದೇವಾಲಯಗಳು ಇವೆ. ಓಂ ಬೀಚ್, ಕುಡ್ಲೆ ಬೀಚ್ ಕಡಲತೀರಗಳ ಹೆಸರು ಕೇಳದವರಿಲ್ಲ. ಗೋಕರ್ಣದಲ್ಲಿ ಬೀಚ್ ಟ್ರೆಕ್ ಮಾಡುವುದು, ಚಾರಣಿಗರ ನೆಚ್ಚಿನ ಆಸಕ್ತಿಗಳಲ್ಲೊಂದು. ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಹಾಗೂ ಪ್ಯಾರಡೈಸ್ ಬೀಚ್'ಗಳನ್ನು ಸೇರುವಂತೆ ಚಾರಣಿಗರು ಚಾರಣ ಕೈಗೊಳ್ಳುತ್ತಾರೆ. ಸಮಯದ ಅಭಾವದಿಂದ ನಾವುಗಳು ಟ್ರೆಕ್ ಮಾಡಲಾಗಲಿಲ್ಲ. ಓಂ ಕಡಲತೀರವನ್ನು ಮೇಲಿನಿಂದ ನೋಡಿದರೆ ಅದು ಓಂ ಚಿಹ್ನೆಯಂತೆ ಕಾಣುತ್ತದೆ. ಇಲ್ಲಿ ಸೂರ್ಯಾಸ್ತದ ವೀಕ್ಷಣೆ ಮಾಡಲೇಬೇಕು. ಜಲಕ್ರೀಡೆಗಳನ್ನು ಆಡಬಹುದು. ಹೀಗೆ ದೇವಸ್ಥಾನಗಳ ಭೇಟಿಯ ಜೊತೆಗೆ ಸಮುದ್ರವನ್ನೂ ನೋಡಿ, ಅಲ್ಲಿ ಆಡಿ ಮನತಣಿಸಬಹುದು.

1-om-beach-gokarna-karnataka-city-hero

ಯಾಣ

"ನಮ್ಮೂರ ಮಂದಾರ ಹೂವೇ" ಸಿನಿಮಾ ಬಹುತೇಕ ಕನ್ನಡಿಗರು ನೋಡಿರುತ್ತಾರೆ, ಇಷ್ಟಪಟ್ಟಿರುತ್ತಾರೆ ಕೂಡ. ಯಾಣದಲ್ಲೂ ಆ ಸಿನಿಮಾದ ಕೆಲವೊಂದು ಭಾಗಗಳು ಚಿತ್ರೀಕರಣಗೊಂಡಿವೆ. ಯಾಣದವರೆಗೆ ವಾಹನಗಳು ಹೋಗುವುದಿಲ್ಲವೆಂದು ಯಾರೋ ಅಂದರೆಂದು, ದೂರದಲ್ಲಿಯೇ ಕಾರ್'ಗಳನ್ನು ನಿಲ್ಲಿಸಿದೆವು. ಅಲ್ಲೊಂದು ಸಣ್ಣ ಮಟ್ಟಿನ ಟ್ರೆಕ್ಕಿಂಗ್ ಆಗಿಬಿಡ್ತು! ನಾವು ನಮ್ಮ ವಾಹನಗಳನ್ನು ನಿಲ್ಲಿಸಿದ್ದು ತುಸು ಅಲ್ಲ ಬಹಳ ದೂರವೇ ಆಗಿತ್ತು. ಮಟ ಮಟ ಮಧ್ಯಾಹ್ನದ ಬಿಸಿಲಿಗೆ ನಡೆದುಕೊಂಡು ಯಾಣ ತಲುಪಿದೆವು. ದೂರದಿಂದಲೇ ಎತ್ತರೆತ್ತರದ ಕಲ್ಲುಗಳು ನಮ್ಮನ್ನು ಆಕರ್ಷಿಸುತ್ತಿದ್ದವು. ಹತ್ತಿರದಿಂದ ನೋಡಿದಾಗ ಆದ ಸಂತಸವೇ ಬೇರೆ. ಆ ವಿಶಿಷ್ಟ ಕಲ್ಲುಗಳ ಮಧ್ಯೆ ನಡೆದುಕೊಂಡು ಹೋದಾಗ, ನಮಗೆ ವಿಶಿಷ್ಟ ಅನುಭವವೇ ಆಯಿತೆಂದರೂ ಸರಿಯೇ. ಉತ್ತರ ಕರ್ನಾಟಕದ ಕಡೆ ಪ್ರಯಾಣ ಬೆಳೆಸುವವರು ಯಾಣಕ್ಕೊಮ್ಮೆ ಭೇಟಿ ನೀಡಲೇಬೇಕು.

istockphoto-1352234683-612x612

ದಾಂಡೇಲಿ

ನಾವು ಮನಾಲಿ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ರಿವರ್ ರಾಫ್ಟಿಂಗ್ ಮಾಡಲಾಗಿರಲಿಲ್ಲ. ದಾಂಡೇಲಿಯಲ್ಲಿಯಾದರೂ ಆ ಆಸೆ ನೆರವೇರಿಸಬೇಕೆಂಬ ಬಹುದೊಡ್ಡ ಆಶಯವಿತ್ತು. ದಾಂಡೇಲಿ ರಿವರ್ ರಾಫ್ಟಿಂಗ್'ಗೆ ಹೆಸರಿದೆ. ಆದರೆ ಉತ್ತರ ಭಾರತದಲ್ಲಿ ಮಾಡಿದಂತೆ ಕಿಲೋಮೀಟರ್'ಗಟ್ಟಲೆ ಇಲ್ಲ. ರಿವರ್ ರಾಫ್ಟಿಂಗ್'ನ ರುಚಿ ತೋರಿಸುವಂತೆ ಒಂದಷ್ಟು ದೂರ ಕರೆದುಕೊಂಡು ಹೋಗುತ್ತಾರೆ. ಆದರೇನಾಯಿತು, ಅನುಭವವಂತೂ ಸೂಪರ್. ಸಣ್ಣ ಮಟ್ಟಿನದ್ದಾದರೂ ದೊರಕುವ ಖುಷಿ ಅಪಾರ. ರಿವರ್ ರಾಫ್ಟಿಂಗ್ ನಂತರ ಅಲ್ಲೇ ನೀರಲ್ಲಿ ಆಡಿದೆವು. ತಂಡೋಪತಂಡವಾಗಿ ಪ್ರವಾಸಿಗರನ್ನು ವಿಂಗಡಿಸಿ ರಿವರ್ ರಾಫ್ಟಿಂಗ್ ಕರೆದುಕೊಂಡು ಹೋಗುತ್ತಾರೆ. ಅವರದ್ದೇ ಆದ ಫೋಟೋಗ್ರಾಫರ್ಸ್ ಇದ್ದು, ನಾವು ಮಾಡಿದ ರಿವರ್ ರಾಫ್ಟಿಂಗ್ ಫೋಟೋಸ್ ತೆಗೆದುಕೊಳ್ಳಬಹುದು.

Dandeli_Adventure_Tour_with_Trikon_-_1

ಹೀಗೆ ಈ ಮೂರೂ ತಾಣಗಳು ನಾವು ಕೈಗೊಂಡ ಉತ್ತರ ಕರ್ನಾಟಕದ ಪ್ರವಾಸದ ಸಂತಸವನ್ನು ನೀಡಿದವು. ಹಸಿರ ಮಧ್ಯೆ ಬೆಳೆದವಳಿಗೆ ಅಲ್ಲಿಯ ಜಾಗಗಳು ತೀರಾ ವಿಭಿನ್ನವೇನೂ ಅನಿಸದಿದ್ದರೂ, ಮುದ ನೀಡಿದವು. ಪಟ್ಟಣದ ಜಂಜಾಟದಿಂದ ಬೇಸೆತ್ತವರು ಕೆಲವು ದಿನಗಳ ಮಟ್ಟಿಗೆ ಹೋಗಿ ಬಂದರೆ ಮನಸ್ಸು - ದೇಹವೆಂಬ ಸಿಸ್ಟಮ್ಸ್ ರಿಫ್ರೆಶ್ ಆಗುವುದು ಪಕ್ಕಾ..

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!