• ಪಾರ್ವತಿ ಶಂಭು

ನಮ್ಮ ದೇಶದಲ್ಲಿ ವೈವಿಧ್ಯಮಯ ಪ್ರವಾಸಿ ತಾಣಗಳಿವೆ. ಜಲಪಾತಗಳು, ಬೆಟ್ಟಗುಡ್ಡಗಳು, ನದಿಗಳು, ಪುರಾತನ ಕಲಾ ವೈಭವವನ್ನು ಸಾರುವ ದೇಗುಲಗಳು, ಸ್ವಚ್ಛಂದ ಕಾಡುಗಳು, ಪ್ರಕೃತಿ ಸೌಂದರ್ಯಗಳು ಹೀಗೆ ಹೇಳಿ ಮುಗಿಯದಷ್ಟು ಪ್ರವಾಸಿ ತಾಣಗಳು ನಮ್ಮಲ್ಲಿವೆ. ಪ್ರವಾಸಿಗರಿಗೆ ಏನೇನು ನೋಡಬೇಕೆಂಬ ಕನಸಿರುತ್ತದೋ ಅದೆಲ್ಲವೂ ನಮ್ಮ ಭಾರತದಲ್ಲಿದೆ.

ಅವುಗಳಲ್ಲಿ ವಿಸ್ಮಯದ ಒಂದು ಸ್ಥಳಕ್ಕೆ ಭೇಟಿ ನೀಡುವ ಸೌಭಾಗ್ಯ ನಮ್ಮದಾಯಿತು. ಆ ಸ್ಥಳದ ಹೆಸರೇ ʻನಿಷ್ಕಳಂಕ ಮಹಾದೇವʼ.

ಬೆಟ್ಟಗಳ ತುದಿಯಲ್ಲಿ, ನದಿಗಳ ಮಧ್ಯೆ, ಕಾಡಿನ ಒಳಗೆ ದೇಗುಲಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಹೀಗಿರುವಾಗ ಸಮುದ್ರದ ಮಧ್ಯೆ ದೇಗುಲ ಇದೆ. ಅದನ್ನು ನೋಡುವ ಸೌಭಾಗ್ಯ ನಮ್ಮದು ಎಂದಾದರೆ ಅದನ್ನು ಮಾತಿನಲ್ಲಿ ವರ್ಣಿಸುವುದು ಸಾಧ್ಯವಾಗದ ಮಾತು.

ಇದನ್ನೂ ಓದಿ: ಗುಜರಾತ್‌ ಪ್ರವಾಸ ಹೋಗುವವರಿಗೆ ಇದೆಲ್ಲಾ ಗೊತ್ತಿರಲಿ

ನಿಷ್ಕಳಂಕ ಮಹಾದೇವ

New Project (20)

ಗುಜರಾತ್‌ ರಾಜ್ಯದ ಭಾವನಗರ ಜಿಲ್ಲೆಯ ಅರಬ್ಬಿ ಸಮುದ್ರದ ಮಧ್ಯೆ ಇದೆ ನಿಷ್ಕಳಂಕ ಮಹಾದೇವ. ಸಮುದ್ರದ ಮಧ್ಯೆ ಐದು ಶಿವಲಿಂಗಗಳಿದ್ದು, ಇದನ್ನು ಪಂಚ ಪಾಂಡವರು ಸ್ಥಾಪನೆ ಮಾಡಿ ಪೂಜಿಸಿದ್ದರು ಎಂಬ ಪುರಾಣ ಕಥೆ ಇದೆ. ಒಂದೇ ಸ್ಥಳದಲ್ಲಿ ಈ ಐದು ಶಿವಲಿಂಗಗಳಿದ್ದು, ಯಾವಕ್ಕೂ ಮಂದಿರವಿಲ್ಲ. ಕುರುಕ್ಷೇತ್ರ ಯುದ್ಧದ ನಂತರ ಯುದ್ಧದಲ್ಲಾದ ಸಾವು ನೋವುಗಳಿಂದ ನೊಂದ ಪಾಂಡವರು ತಮ್ಮ ಮನಶಾಂತಿಗಾಗಿ ಈ ಶಿವಲಿಂಗಗಳನ್ನು ಸ್ಥಾಪಿಸಿ ಪೂಜಿಸಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಈ ಶಿವಲಿಂಗಗಳಿಗೆ ನಿಷ್ಕಳಂಕ ಮಹಾದೇವ ಎಂಬ ಹೆಸರು ಬಂದಿದೆ.

ಈ ಶಿವಲಿಂಗಗಳು ಸಮುದ್ರದ ಮಧ್ಯೆ ಇವೆ. ಹಾಗಾಗಿ ಅಲೆಗಳು ಮುಂದೆ ಬಂದಾಗ ಈ ಐದು ಶಿವಲಿಂಗಗಳು ಮುಳುಗಿ ಧ್ವಜಗಳು ಮಾತ್ರ ಗೋಚರವಾಗುತ್ತವೆ. ನಂತರ ಅಲೆಗಳು ಹಿಂದೆ ಸರಿದಾಗ ಲಿಂಗಗಳು ಗೋಚರವಾಗುತ್ತವೆ. ಜನರು ಈ ನಿಷ್ಕಳಂಕ ಮಹಾದೇವದ ಶಿವಲಿಂಗಗಳನ್ನು ದರ್ಶನ ಮಾಡಲು ಸಮುದ್ರ ತೀರದಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಈ ಸ್ಥಳಕ್ಕೆ ಧಾವಿಸುತ್ತಾರೆ. ನಾವು ಆ ಸ್ಥಳಕ್ಕೆ ಭೇಟಿ ಕೊಟ್ಟಾಗ ಬೆಳಗಿನ ಜಾವ ಐದು ಗಂಟೆ. ಸಮುದ್ರದ ನೀರು ಹೆಚ್ಚಾಗಿದ್ದು, ಶಿವಲಿಂಗಗಳು ಗೋಚರಿಸುತ್ತಿರಲಿಲ್ಲ. ನೀರು ಹಿಂದೆ ಹೋಗುವುದನ್ನು ಕಾಯುತ್ತಾ ಕುಳಿತೆವು. ನೀರು ಹಿಂದ ಸರೆಯುತ್ತಿದ್ದಂತೆ ನಾವೆಲ್ಲರೂ ಮುಂದಡಿ ಇಡಲಾರಂಭಿಸಿದೆವು. ಕೆಸರಿನಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ದಾರಿ ನಡೆದ ನಂತರ ಈ ಐದು ಶಿವಲಿಂಗಗಳ ದರ್ಶನವಾಯಿತು. ಈ ಸಮಯದಲ್ಲಿ ಅರ್ಚಕರು ಸಹ ಆ ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಬೆಳಗಿನಜಾವದ ಸಮಯದಲ್ಲಿ ಆ ಸ್ಥಳ ತಲುಪಿದಾಗ ನಮಗಾದ ರೋಮಾಂಚನವನ್ನು ಪದಗಳಲ್ಲಿ ಬಣ್ಣಿಸಲಾಗುವುದಿಲ್ಲ. ಇದು ಧಾರ್ಮಿಕ ನಂಬಿಕೆ, ಪ್ರಕೃತಿ, ವಿಸ್ಮಯ ಎಲ್ಲವನ್ನು ಒಟ್ಟುಮಾಡಿ ಪ್ರವಾಸಿಗರಿಗೆ ನೀಡುವ ತಾಣ. ನಾವು ಅಲ್ಲಿ ಕಳೆದ ಕಾಲ ಎಂದೂ ಮರೆಯಲಾಗದ ಸುಂದರ ನೆನಪಾಗಿ ಉಳಿದಿದೆ.