ಸೀತೆ ಏಕಾಂಗಿಯಾದ ಜಾಗ ಪೊಂಕುಳಿ
ಪೊಂಕುಳಿ ಸ್ಥಳದ ಸಮೀಪ ರಸ್ತೆಯು ಕವಲೊಡೆಯುತ್ತದೆ. ಒಂದು ದಾರಿ ಸೀತಾದೇವಿ ಮತ್ತು ಹನುಮಂತನ ದೇವಾಲಯಕ್ಕೆ ಕರೆದೊಯ್ಯುತ್ತದೆ. ಅದರ ಹಿಂದೆ ಕಾಡು ಜನಗಳ ಪೋಡುಗಳು ಕಾಣಸಿಗುತ್ತವೆ. ಇನ್ನೊಂದು ಕಡೆ ಶ್ರೀರಾಮನ ದೇವಾಲಯವಿದೆ. ಹೊಳೆಯ ದಂಡೆಗ ಅಂಟಿಕೊಂಡು ನಿಂತಿರುವ ಶ್ರೀರಾಮನ ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕುವಾಗ ಸುತ್ತಲೂ ಗಣೇಶ ಸುಬ್ರಹ್ಮಣ್ಯ, ಅಯ್ಯಪ್ಪ, ಕೃಷ್ಣ, ದುರ್ಗಾದೇವಿ ದೇವಸ್ಥಾನಗಳನ್ನು ಕಾಣಬಹುದು.
- ಅನುಪಮಾ ಗುಂಡ್ಲುಪೇಟೆ
ಶ್ರೀರಾಮನು ರಾವಣನ ವಧೆ ಮಾಡಿದ ಬಳಿಕ ಲಕ್ಷ್ಮಣನಿಗೆ ಸೀತೆಯನ್ನು ಕಾಡಿಗೆ ಬಿಡಲು ಹೇಳುತ್ತಾನೆ. ಆಗ ಲಕ್ಷ್ಮಣನು ಅಣ್ಣನ ಅಜ್ಞೆಯಂತೆ ಸೀತೆಯನ್ನು ತಂದು ಈ ಪೊಂಕುಳಿಯಲ್ಲಿಯೇ ಬಿಟ್ಟಿದ್ದಂತೆ, ಅದಕ್ಕೆ ಇದನ್ನು “ರಾಮನು ಸೀತೆಯನ್ನು ತೊರೆದ ಜಾಗ” ಎಂದು ಹೇಳುತ್ತಾರೆ.
ಸೀತೆಯು ರಾಮನನ್ನು ತೊರೆದಾಗ ಅತೀವ ನೋವು ಸಂಕಟದಿಂದ ಇಲ್ಲಿರುವ ದೊಡ್ಡ ಆಲದ ಮರದ ಕೆಳಗೆ ಕಣ್ಣೀರಿಡುತ್ತಾಳೆ. ಸೀತೆಯ ಕಣ್ಣೀರು ಬಿದ್ದ ಜಾಗ ಒಂದು ಕೊಳವಾಗುತ್ತದೆ. ಇದು ಯಾವಕಾಲದಲ್ಲೂ ಬತ್ತದೆ ತುಂಬಿರುತ್ತದೆ ಎಂದು ನಂಬಲಾಗಿದೆ. ಪಾಚಿ ತುಂಬಿಕೊಂಡಿದ್ದು ಸುತ್ತಲೂ ಬಿದಿರಿನ ಮತ್ತು ಇತರ ಮರಗಳು ಸುತ್ತುವರೆದಿವೆ. ಇದನ್ನು ಸೀತಾತೀರ್ಥ ಅಥವಾ ಸೀತಾ ಕೊಳವೆಂದು ಕರೆಯುತ್ತಾರೆ. ಈ ಸಮಯದಲ್ಲಿ ಸೀತಾಮಾತೆಯೂ ಗರ್ಭವತಿಯಾಗಿದ್ದು, ಈ ಅರಣ್ಯದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಗಳಿಗೆ ಸೀತೆ ಸಿಗುತ್ತಾಳೆ. ಆಗ ಮಹರ್ಷಿಗಳು ಸೀತಾದೇವಿಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಯೇ ಲವಕುಶನಿಗೆ ಜನ್ಮ ನೀಡುತ್ತಾಳೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಲವಕುಶ ದೇವಾಲಯವೂ ಇದೆ.
ಇದನ್ನೂ ಓದಿ: ಜಗದೊಡೆಯ ಜಗನ್ನಾಥನ ದರ್ಶನದಲ್ಲಿ ಸಿಕ್ಕ ನೆಮ್ಮದಿ
ಈ ದೇವಾಲಯದಲ್ಲಿ ರಾಮನವಮಿ ಮತ್ತು ಇತರ ಹಬ್ಬಗಳಂದು ವಿಶೇಷ ಪೂಜೆಗಳಿರುತ್ತವೆ. ಕಾಡುವಾಸಿಗಳು ವಿಶೇಷ ಸೇವೆ ಸಲ್ಲಿಸಿ ಹಬ್ಬ-ಜಾತ್ರೆಗಳನ್ನು ಮಾಡುತ್ತಾರೆ. ಇಲ್ಲಿನ ಆದಿವಾಸಿ ಮಕ್ಕಳ ಗುಂಪು ಈಜುತ್ತಾ ಕುಣಿಯುತ್ತಾ ಆಟವಾಡುವ ಚಿತ್ರಣ ಮನಸಿಗೆ ಖುಷಿ ನೀಡುತ್ತದೆ.

ಕಾಡು ಮಾರ್ಗ:
ದಟ್ಟ ಅರಣ್ಯ ಪ್ರದೇಶ, ಸುತ್ತಲೂ ಹಸಿರು, ಆಗಾಗ ರಸ್ತೆಯ ಇಕ್ಕೆಲೆಗಳಲ್ಲೇ ನೋಡಲು ಸಿಗುವ ಆನೆಗಳು, ಒಮ್ಮೊಮ್ಮೆ ರಸ್ತೆ ದಾಟುವ ಜಿಂಕೆ, ನವಿಲು, ಸಾರಂಗ, ಕಾಡು ಪ್ರಾಣಿಗಳ ಗುಂಪು, ಒಂದಷ್ಟು ಹೊಸದಾಗಿ ಕಾಣಸಿಗುವ ಪಕ್ಷಿಗಳು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಕಣ್ಣಳತೆ ದೂರದವರೆಗೂ ರಸ್ತೆಯ ಇಕ್ಕೆಲೆಗಳಲ್ಲಿ ದೊಡ್ಡ ದೊಡ್ಡ ಮರಗಳಿವೆ. ಆಕಾಶವನ್ನು ಮರೆ ಮಾಚಿರುವಂತೆ ದಟ್ಟ ಕಾಡು ಕಾಣಬಹುದು. ಕಾಡಿನ ಅಂದ ಹೆಚ್ಚಿಸುವ ಮೂಲೆ ಹೊಳೆ ನದಿ ಕೇರಳದಿಂದ ಹರಿದು ಕಬಿನಿಯನ್ನು ಸೇರುತ್ತದೆ. ಇದು ವರ್ಷಪೂರ್ತಿ ಹರಿಯುವ ಸಣ್ಣ ನದಿ. ಇದು ಮಳೆಗಾಲದಲ್ಲಿ ರಸ್ತೆ ಸೇತುವೆಗಳು ಮುಚ್ಚುವವರೆಗೂ ತುಂಬಿ ಹರಿಯುತ್ತದೆ.
ಪೊಂಕುಳಿ ಸ್ಥಳದ ಸಮೀಪ ರಸ್ತೆಯು ಕವಲೊಡೆಯುತ್ತದೆ. ಒಂದು ದಾರಿ ಸೀತಾದೇವಿ ಮತ್ತು ಹನುಮಂತನ ದೇವಾಲಯಕ್ಕೆ ಕರೆದೊಯ್ಯುತ್ತದೆ. ಅದರ ಹಿಂದೆ ಕಾಡು ಜನಗಳ ಪೋಡುಗಳು ಕಾಣಸಿಗುತ್ತವೆ. ಇನ್ನೊಂದು ಕಡೆ ಶ್ರೀರಾಮನ ದೇವಾಲಯವಿದೆ. ಹೊಳೆಯ ದಂಡೆಗ ಅಂಟಿಕೊಂಡು ನಿಂತಿರುವ ಶ್ರೀರಾಮನ ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕುವಾಗ ಸುತ್ತಲೂ ಗಣೇಶ ಸುಬ್ರಹ್ಮಣ್ಯ, ಅಯ್ಯಪ್ಪ, ಕೃಷ್ಣ, ದುರ್ಗಾದೇವಿ ದೇವಸ್ಥಾನಗಳನ್ನು ಕಾಣಬಹುದು.

ದಾರಿ ಹೇಗೆ?
ವಯನಾಡು ಜಿಲ್ಲೆಯ ಪೊಂಕುಳಿ ಜಾಗವು ಬೆಂಗಳೂರಿನಿಂದ 245ಕಿ.ಮೀ ಇದೆ.
ಗುಂಡ್ಲುಪೇಟೆಯಿಂದ (ಸುಲ್ತಾನ್ ಬತ್ತೇರಿ ಸುಮಾರು 57ಕಿ.ಮೀ) ಮೂಲೆಹೊಳೆ ಚೆಕ್ ಪೋಸ್ಟ್ ಬಿಟ್ಟು ಹತ್ತರಿಂದ ಹದಿನೈದು ಕಿಲೋಮೀಟರ್ ಮುತ್ತಂಗ ಅಭಯಾರಣ್ಯದೊಳಗೆ ಹೋಗಬೇಕು.
ಲೇಖಕರು: ಹವ್ಯಾಸಿ ಬರಹಗಾರರು