Saturday, June 6, 2026
Saturday, June 6, 2026

ಜಗಮಗಿಸುತಿಹುದು ಕಾಪು ಶ್ರೀ ಮಾರಿ ಗುಡಿ

ಕಾಪು ಹೊಸ ಮಾರಿಗುಡಿಯ ಬೇರುಗಳು 17ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಕೇಳಾಡಿ ನಾಯಕ ಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ. 1743ರಲ್ಲಿ ಕಾಪು ಸಮುದ್ರ ತೀರದಲ್ಲಿ ಮನೋಹರಗಢ ಎಂಬ ಕೋಟೆ ಮತ್ತು ಮಳ್ಳೂರಿನಲ್ಲಿ ಸೇನಾ ಕೋಟೆ ನಿರ್ಮಿಸಿದ. ಈ ಸೇನೆಯ ಜತೆ ಮಾರಿ ದೇವಿ ಕಾಪುವಿಗೆ ಬಂದಳೆಂಬ ನಂಬಿಕೆ ಇರುವುದರಿಂದ ಆಕೆ ದಂಡಿನ ಮಾರಿ ಎಂದೇ ಪ್ರಸಿದ್ಧಿ.

ಕಾವಲಿನ ನಾಡಿನ ಕಾಪುದ ಅಪ್ಪೆ

ಮಂದಿರ ನಗರಿ ಉಡುಪಿಯಿಂದ ಸುಮಾರು 12 ಕಿಮೀ ದೂರದಲ್ಲಿದೆ ಕಾಪು. ದಕ್ಷಿಣದಲ್ಲಿ ಅರಬ್ಬಿ ಸಮುದ್ರದ ದಂಡೆಯ ಮೇಲೆ ನೆಲೆಗೊಂಡ ಕಾಪು ಗ್ರಾಮ ಕರ್ನಾಟಕದ ಧಾರ್ಮಿಕ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ತುಳು ಭಾಷೆಯಲ್ಲಿ ಕಾಪು ಎಂದರೆ ಕಾಯುವುದು ಅಥವಾ ಕಾವಲು ಎಂಬ ಅರ್ಥವಿದೆ. ಈ ಕಾಪುವಿನ ಅಮ್ಮ ಶ್ರೀ ಮಾರಿಯಮ್ಮ — ಕಾಪುದ ಅಪ್ಪೆ ಎಂದೇ ಖ್ಯಾತಿ ಪಡೆದ ಈ ದೈವ ಇಂದು ಕರ್ನಾಟಕ ಕರಾವಳಿ ಜನರ ಭಕ್ತಿಯ ಉಸಿರು.

ಶ್ರೀ ಹೊಸ ಮಾರಿಗುಡಿ ಇಂದು ಕೇವಲ ಒಂದು ದೇವಾಲಯ ಅಲ್ಲ. ಅದು ಒಂದು ಸಂಸ್ಕೃತಿಯ ಸಂಕೇತ, ಶ್ರದ್ಧೆಯ ಸ್ಮಾರಕ. ₹99 ಕೋಟಿ ವೆಚ್ಚದಲ್ಲಿ ಸಂಪೂರ್ಣ ಶಿಲಾ ನಿರ್ಮಿತವಾಗಿ, 118 ಸ್ತಂಭಗಳ ಭವ್ಯ ರಚನೆಯಲ್ಲಿ ನಿಂತಿರುವ ಈ ದೇಗುಲ ದ್ರಾವಿಡ ವಾಸ್ತುಶಿಲ್ಪದ ಅದ್ಭುತ ನಿದರ್ಶನ.

ಇದನ್ನೂ ಓದಿ: ಬ್ರಹ್ಮಕಲಶೋತ್ಸವದ ಹಿಂದಿನ ಶಕ್ತಿ ಡಾ.ಪ್ರಕಾಶ್‌ ಶೆಟ್ಟಿ

ದಂಡಿನ ಮಾರಿಗೆ ಶತಮಾನಗಳ ಇತಿಹಾಸ

ಕಾಪು ಹೊಸ ಮಾರಿಗುಡಿಯ ಬೇರುಗಳು 17ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಕೇಳಾಡಿ ನಾಯಕ ಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ. 1743ರಲ್ಲಿ ಕಾಪು ಸಮುದ್ರ ತೀರದಲ್ಲಿ ಮನೋಹರಗಢ ಎಂಬ ಕೋಟೆ ಮತ್ತು ಮಳ್ಳೂರಿನಲ್ಲಿ ಸೇನಾ ಕೋಟೆ ನಿರ್ಮಿಸಿದ. ಈ ಸೇನೆಯ ಜತೆ ಮಾರಿ ದೇವಿ ಕಾಪುವಿಗೆ ಬಂದಳೆಂಬ ನಂಬಿಕೆ ಇರುವುದರಿಂದ ಆಕೆ ದಂಡಿನ ಮಾರಿ ಎಂದೇ ಪ್ರಸಿದ್ಧಿ.

Untitled design - 2026-06-06T175210.024

ಕೋಟೆಯ ಉಗ್ರಾಣಿ ಒಂದು ರಾತ್ರಿ ಅದೃಶ್ಯ ಧ್ವನಿ ಕೇಳಿ ನಡುಗುತ್ತಾನೆ. ಮಲ್ಲಿಗೆ ಹೂ ಸುವಾಸನೆ ತುಂಬಿದ ವಾತಾವರಣದಲ್ಲಿ ತೊಟ್ಟಿಯ ಬಳಿ 'ನಾನು ಮಾರಿ, ನನಗೆ ನೆಲೆ ತೋರಿಸು' ಎಂಬ ಧ್ವನಿ ಕೇಳಿ ಬರುತ್ತದೆ. 'ನಾನು ಮುಸ್ಲಿಂ, ನಿನಗೆ ಗುಡಿ ಕಟ್ಟಿಸಲು ಹೇಗೆ?' ಎಂದಾಗ ದೇವಿ ಹೇಳುತ್ತಾಳೆ- 'ಈ ಊರಿನ ನಾಲ್ಕು ಜಾತಿ ಜನರನ್ನು ಒಟ್ಟುಗೂಡಿಸಿ ನನಗೊಂದು ಗುಡಿ ಕಟ್ಟಿರಿ.' ಆ ಜಾತ್ಯತೀತ ಆದೇಶದ ಫಲವೇ ಹೊಸ ಮಾರಿಗುಡಿ. ಟಿಪ್ಪು ಸುಲ್ತಾನ್ ಕಾಲದಿಂದ 'ಕಾಪುದ ಅಪ್ಪೆ' ಎಂದು ಕರೆಯಲ್ಪಟ್ಟ ಈ ದೇವಿ ಇಂದು ಸರ್ವ ಜನರ ಆರಾಧ್ಯ ದೈವ.

ಜವಾಬ್ದಾರಿ ಹೊತ್ತ ಡಾ. ಪ್ರಕಾಶ್ ಶೆಟ್ಟಿ

ಯಾವುದೇ ದೊಡ್ಡ ಕಾರ್ಯ ಸಾಧನೆಯ ಹಿಂದೆ ಒಂದು ದೊಡ್ಡ ಮನಸಿರುತ್ತದೆ. ಕಾಪು ಹೊಸ ಮಾರಿಗುಡಿಯ ಮಹಾ ಬ್ರಹ್ಮಕಲಶೋತ್ಸವದ ಹಿಂದಿರುವ ಆ ಮನಸು ಡಾ. ಪ್ರಕಾಶ್ ಶೆಟ್ಟಿ ಬಂಜಾರ.

ತಂದೆ ಮಾಧವ ಶೆಟ್ಟಿ, ತಾಯಿ ರತ್ನ ಶೆಟ್ಟಿ ಅವರ ಮಡಿಲಲ್ಲಿ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಡಾ. ಪ್ರಕಾಶ್ ಶೆಟ್ಟಿ ಶಾಲಾ ದಿನಗಳಲ್ಲಿ ಜಾತಿ-ಧರ್ಮ ನೋಡದೆ ಎಲ್ಲರ ಮನೆಗಳಲ್ಲಿ ಊಟ ಮಾಡಿ ಬೆಳೆದ ಸರಳ ಮನುಷ್ಯ. ಆದರೆ ಯಶಸ್ಸು ಅವರ ಸರಳತೆಯನ್ನು ಅಳಿಸಲಿಲ್ಲ. ಬದಲಾಗಿ, ಸಮಾಜಕ್ಕೆ ಮರಳಿ ಕೊಡಬೇಕೆಂಬ ತುಡಿತ ಮತ್ತಷ್ಟು ಬಲಗೊಂಡಿತು.

Untitled design - 2026-06-06T183919.060

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹುದ್ದೆ ಅವರಿಗೆ ಕೇವಲ ಒಂದು ಪ್ರತಿಷ್ಠೆಯ ಪಟ್ಟ ಆಗಲಿಲ್ಲ — ಅದು ಅವರ ಜೀವನದ ಮಹಾ ಯಜ್ಞ ಆಯಿತು. ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿಯವರ ಸಹಕಾರದಿಂದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದರು.

ಅಧ್ಯಕ್ಷ ಸ್ಥಾನ ಅವರಿಗೆ ಭಾರ ಅಲ್ಲ, ಭಾಗ್ಯ!

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಈ ಮಹಾಕಾರ್ಯದ ಸಾರಥ್ಯ ವಹಿಸಿಕೊಂಡ ನಂತರ ಇಲ್ಲಿನ ಕೆಲಸದ ವೇಗವೇ ಬದಲಾಗಿ ಹೋಯಿತು, ಅವರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಆರ್ಥಿಕ ಸಮಿತಿ ಮುಖ್ಯ ಖಜಾಂಚಿ ಉದಯ ಸುಂದರ್ ಶೆಟ್ಟಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಲಿಕೆ ಮತ್ತಿತರ ಪ್ರಮುಖರ ತಂಡ ಈ ಮಹಾಯಜ್ಞದಲ್ಲಿ ಕೈಜೋಡಿಸಿತು.

2025ರ ಫೆಬ್ರವರಿ 24ರಂದು ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರಕಾಶ್ ಶೆಟ್ಟಿ ಅವರು ಬ್ರಹ್ಮಕಲಶೋತ್ಸವದ ಸಂಪೂರ್ಣ ಸಿದ್ಧತೆ ತಿಳಿಸುತ್ತ, 'ಈ ಮಹಾಕಾರ್ಯ ಒಮ್ಮೆ ಕೈ ಹಿಡಿದ ಮೇಲೆ ಅಮ್ಮನ ಅನುಗ್ರಹದಿಂದ ಮಾತ್ರ ಇದು ಸಾಧ್ಯ' ಎಂದು ಭಕ್ತಿಪೂರ್ವಕವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Untitled design - 2026-06-06T175244.406

18 ದೇಶಗಳಲ್ಲಿ ಸಮಿತಿ

ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ನಾಯಕತ್ವದ ಮಹತ್ವ ಅರ್ಥವಾಗಬೇಕೆಂದರೆ ಈ ಅಂಕಿ ನೋಡಿ. 18 ದೇಶಗಳಲ್ಲಿ ಕಾಪು ಹೊಸ ಮಾರಿಗುಡಿ ಭಕ್ತ ಸಮಿತಿ ರಚನೆಯಾಯಿತು. ದೇಶದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಸಮಿತಿ ರಚಿಸಲಾಯಿತು. ಉಡುಪಿ ನಗರಸಭೆಯ 35 ವಾರ್ಡ್‌ಗಳ ಪ್ರತಿ ಮನೆ ಮನೆಗೂ ಮಾಹಿತಿ ತಲುಪಿಸಲಾಯಿತು. ಇಷ್ಟು ದೊಡ್ಡ ಸಂಘಟನೆ ಒಂದು ಉತ್ಸವಕ್ಕಾಗಿ ನಡೆದಿರುವುದು ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲೇ ಅಪರೂಪ.

ಮುಂಬೈ, ಪುಣೆ ಸಹಿತ ದೇಶದ ವಿವಿಧ ನಗರಗಳ ಅನಿವಾಸಿ ಕರಾವಳಿ ಕನ್ನಡಿಗರು ಈ ಕಾರ್ಯಕ್ಕೆ ಮನಸಾರೆ ನೆರವು ನೀಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಬೃಹತ್ ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಿ ಎಲ್ಲ ಭಕ್ತರನ್ನು ಒಂದೇ ಧ್ಯೇಯದಡಿ ತಂದು ನಿಲ್ಲಿಸಲಾಯಿತು.

ಧಾರ್ಮಿಕ ಮನಸಿನ ಡಾ. ಪ್ರಕಾಶ್ ಶೆಟ್ಟಿ

ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಸಾಮಾಜಿಕ ಕಾಳಜಿ ಕೇವಲ ಮಾರಿಗುಡಿ ಬ್ರಹ್ಮಕಲಶೋತ್ಸವಕ್ಕೆ ಸೀಮಿತವಲ್ಲ. ಎಂ.ಆರ್.ಜಿ. ಗ್ರೂಪ್‌ನ 'ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ'ಯ ಮೂಲಕ ಪ್ರತಿ ವರ್ಷ ₹9.5 ಕೋಟಿಗೂ ಅಧಿಕ ನೆರವು 4000 ಕುಟುಂಬಗಳಿಗೆ, 100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ತಲುಪಿಸಲಾಗುತ್ತಿದೆ. ಕಾಪು ಮಾರಿಗುಡಿ ದೇಣಿಗೆ ನಿಧಿಯ ಮೂಲಕ ಸಮಾಜದ ಅಶಕ್ತರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ.

ಯಾರೆಲ್ಲ ಬಂದಿದ್ದಾರೆ?

ದೇವಾಲಯದ ವೈಭವ ಮತ್ತು ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಸಂಘಟನಾ ಶಕ್ತಿ ದೇಶ-ವಿದೇಶ ಗಮನ ಸೆಳೆದಿದೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಡಿಸಿಎಂ ಆಗಿದ್ದ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿ, ಪತ್ನಿ ಹೆಸರಿನಲ್ಲಿ ₹9,99,999 ದೇಣಿಗೆ ಸಮರ್ಪಿಸಿದರು. ಕನ್ನಡ ಚಿತ್ರ ನಟ ರಕ್ಷಿತ್ ಶೆಟ್ಟಿ ತಾಯಿ ಜೊತೆ ಬಂದು ದರ್ಶನ ಪಡೆದು ದೇಗುಲದ ಕಲಾ ಕೆತ್ತನೆ ಮೆಚ್ಚಿ ನುಡಿದರು. ನಟಿ ಪೂಜಾ ಹೆಗ್ಡೆ ಬ್ರಹ್ಮಕಲಶೋತ್ಸವದ ದಿನ ಕುಟುಂಬ ಸಮೇತ ಭೇಟಿ ನೀಡಿದರು. ನಟಿ ಪ್ರೇಮಾ, ಪ್ರಸಿದ್ಧ ನಟ ಪ್ರಕಾಶ್ ರಾಜ್, ಭಾರತದ ಟಿಟ್ವೆಂಟಿ ವಿಶ್ವಕಪ್‌ ವಿಜೇತ ನಾಯಕ ಸೂರ್ಯಕುಮಾರ್‌ ಯಾದವ್‌ ಕೂಡ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ. ಬ್ರಹ್ಚಕಲಶೋತ್ಸವಕ್ಕೆ ಭೇಟಿ ನೀಡಿದ ಗಣ್ಯರಲ್ಲಿ ಬಿ.ಎಲ್.ಸಂತೋಷ್‌‌, ವಿಜಯೇಂದ್ರ, ಡಿ ಕೆ ಶಿವಕುಮಾರ್‌, ಕಂಗನಾ ರನೌತ್‌ ಮುಂತಾದ ಖ್ಯಾತನಾಮರಿರುವುದು ವಿಶೇಷ.

15 ಕೋಟಿ ರುಪಾಯಿಯ ಸ್ವರ್ಣ ಗದ್ದುಗೆ

ದೇವಾಲಯದ ಅತ್ಯಂತ ಕಣ್ಮನ ಸೆಳೆಯುವ ಅಂಶ — ಸ್ವರ್ಣ ಗದ್ದುಗೆ. ₹15 ಕೋಟಿ ವೆಚ್ಚದಲ್ಲಿ 15 ಕಿಲೋಗ್ರಾಂ ಚಿನ್ನ ಮತ್ತು 175 ಕಿಲೋಗ್ರಾಂ ಬೆಳ್ಳಿ ಬಳಸಿ ನಿರ್ಮಿಸಲಾದ ಈ ಗದ್ದುಗೆ ಉಡುಪಿ ಗುಜ್ಜಾಡಿ ಗೋಲ್ಡನ್ ಜ್ಯುವೆಲರ್ಸ್ ಕಲಾವಿದರ ಕೈಚಳಕ. 120 ದಿನಗಳ ಕಠಿಣ ಶ್ರಮದ ಫಲ ಈ ಮಹಾ ಕಲಾಕೃತಿ. ಸಿಂಹಾಕಾರದ ಈ ಗದ್ದುಗೆಯ ತುತ್ತ ತುದಿಯಲ್ಲಿ 50 ಕ್ಯಾರೆಟ್ ರೂಬಿ ಮತ್ತು 60 ಕ್ಯಾರೆಟ್ ದಕ್ಷಿಣ ಆಫ್ರಿಕದ ಹಸಿರು ಕಲ್ಲು ಅಳವಡಿಸಲ್ಪಟ್ಟಿದೆ. 2025ರ ಫೆಬ್ರವರಿ 9ರಂದು ನಡೆದ ಭವ್ಯ ಮೆರವಣಿಗೆಯಲ್ಲಿ ಈ ಸ್ವರ್ಣ ಗದ್ದುಗೆ ಸಮರ್ಪಣೆ ಕಾರ್ಯ ನಡೆಯಿತು. ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಈ ಸ್ವರ್ಣ ಗದ್ದುಗೆ ಉದ್ಘಾಟಿಸಿದರು. ಈ ಜೊತೆ ಬೆಳ್ಳಿ ರಥ (ಮುಂಬೈ ತೊನ್ಸೆ ಆನಂದ ಎಂ. ಶೆಟ್ಟಿ ದಂಪತಿ ದಾನ), ದೇವಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಬಂಗಾರ ಲೇಪಿತ ಮೊಗ, ಉಚ್ಚಂಗಿ ದೇವಿ ಪಾದ ಪೀಠ — ಇವೆಲ್ಲ ಭಕ್ತ ಕುಟುಂಬಗಳ ಪ್ರೀತಿಯ ಕಾಣಿಕೆ.

Untitled design - 2026-06-06T175236.987

118 ಸ್ತಂಭಗಳ ಶಿಲಾ ಮಂದಿರವಿದು

ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಶ್ರದ್ಧೆಯ ಫಲ — ಈ ದೇವಾಲಯ ಕಟ್ಟಡ ಸ್ವತಃ ಒಂದು ಅದ್ಭುತ. ₹30 ಕೋಟಿ ವೆಚ್ಚದ ಮೂಲ ಶಿಲಾ ರಚನೆ ಬಾಗಲಕೋಟೆ ಹಿಲ್ಕಾಲ್ ಕೆಂಪು ಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ದಕ್ಷಿಣ ಕನ್ನಡದಲ್ಲಿ ಈ ರೀತಿ ನಿರ್ಮಿಸಲ್ಪಟ್ಟ ಮೊಟ್ಟ ಮೊದಲ ದೇವಾಲಯ ಎನ್ನಲಾಗಿದೆ.

--

ಕಾಪುವಿನಲ್ಲಿ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ಎಂದು ಮೂರು ಮಾರಿಗುಡಿಗಳಿವೆ. ಅದರಲ್ಲಿ ಹೊಸ ಮಾರಿಗುಡಿ ದೇವಾಲಯವು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದ್ದು, ಮೊದಲಿನಿಂದಲೂ ಇಲ್ಲಿಗೆ ಬಹಳಷ್ಟು ಭಕ್ತರಿದ್ದಾರೆ. ಊರೇ ಬಡತನದಲ್ಲಿರುವ ಸಮಯದಲ್ಲಿ ಕೂಡ ಅಮ್ಮನ ಗದ್ದುಗೆ ಪ್ರಸಾದ ಪಡೆದುಕೊಂಡು ಹೋಗಿ ಅಭಿವೃದ್ಧಿ ಹೊಂದಿದವರಿದ್ದಾರೆ. ನಾನೂ ಅಂಥ ಭಕ್ತರಲ್ಲಿ ಒಬ್ಬ. ಈ ದೇವಾಲಯದ ಜೀರ್ಣೋದ್ಧರಕ್ಕಾಗಿ ಅನೇಕ ಬಾರಿ ಚಿಂತಿಸಿದರೂ ಸಮಯ ಕೂಡಿ ಬಂದಿರಲಿಲ್ಲ.

Untitled design - 2026-06-06T182326.036

2009ರಲ್ಲಿ ಆಗಿನ ಶಾಸಕರು, ಊರಿನ ಭಕ್ತರು ಸೇರಿ ಸಮಿತಿ ರಚಿಸಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದರು. 2023ನೇ ಇಸವಿಯಿಂದ ಎಲ್ಲರನ್ನೂ ಜತೆಗೂಡಿಸಿಕೊಂಡು ಹಳೆಯ ದೇಗುಲವನ್ನು ತಾತ್ಕಾಲಿಕ ಸ್ಥಳಾಂತರಗೊಳಿಸಿ ನೂತನವಾಗಿ ಖರೀದಿಸಿದ ಸ್ಥಳದಲ್ಲಿ ಶಿಲಾಮಯ ದೇವಾಲಯ ನಿರ್ಮಿಸಲಾಗಿದೆ. ಅಮ್ಮನ ಗರ್ಭಗುಡಿ ಹಾಗೂ ತಂಗಿ ಉಚ್ಛಂಗಿ ದೇವಿಯ ಗುಡಿಗಳು ಕೆಂಪು ಶಿಲೆಯಿಂದಲೇ ನಿರ್ಮಿತವಾಗಿದೆ. ಪ್ರಪಂಚದ 18 ದೇಶಗಳಲ್ಲಿ ಅಮ್ಮನ ಸೇವಾಸಮಿತಿಯಿದ್ದು, ಪ್ರತಿ ಸಮಿತಿಯಲ್ಲೂ ಒಂಬತ್ತು ಜನರಿದ್ದಾರೆ. ಹೀಗೆ ಅಮ್ಮನ ಭಕ್ತರೆಲ್ಲರೂ ಜತೆಸೇರಿ ಈ ದೇವಾಲಯವನ್ನು ನಡೆಸುತ್ತಿದ್ದೇವಾದರೂ ʻದತ್ತಿ ಇಲಾಖೆಯ ದೇವಾಲಯʼ ಎನಿಸಿಕೊಂಡಿರುವ ಈ ಮಾರಿಗುಡಿಗೆ ಸರಕಾರದಿಂದ ಯಾವುದೇ ಸಹಕಾರ ಸಿಗದಿರುವುದು ಬೇಸರದ ಸಂಗತಿ.

- ಕೆ.ವಾಸುದೇವ ಶೆಟ್ಟಿ, ಅಧ್ಯಕ್ಷರು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ

--

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಇರುವ ಇತಿಹಾಸ ಪ್ರಸಿದ್ಧ ದೇವಾಲಯವಿದು. ಈ ಹೊಸ ಮಾರಿಗುಡಿ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿರುವುದು ನಮ್ಮ ಸೌಭಾಗ್ಯ. ಈ ದೇವಾಲಯದ ಪ್ರಚಾರ ಸಮಿತಿಯ ಮುಖ್ಯಸ್ಥನಾಗಿ ತಾಯಿಯ ಸೇವೆ ಸಲ್ಲಿಸಿರುವುದು ಅತ್ಯಂತ ತೃಪ್ತಿ ತಂದಿದೆ. ಈ ಹೊಸ ಮಾರಿ ಗುಡಿ ಜೀರ್ಣೋದ್ಧಾರ ಕಾರ್ಯ ಪೂರ್ತಿಯಾದ ನಂತರ, ಬ್ರಹ್ಮಕಲಶೋತ್ಸವ ಆದಿಯಾಗಿ ಎಲ್ಲಾ ವಿಧಿವಿಧಾನ ತುಂಬಾ ಅಚ್ಚುಕಟ್ಟಾಗಿ, ಶಾಸ್ತ್ರೋಕ್ತವಾಗಿ ನಡೆದಿದೆ. ಭಕ್ತವರ್ಗ ನೀಡಿದ ದೇಣಿಗೆಯಲ್ಲೇ ಈ ದೇವಾಲಯ ಇಂದು ವಿಜೃಂಭಣೆಯಿಂದ ತಲೆಯೆತ್ತಿ ನಿಂತಿದೆ. ಕ್ರಿಕೆಟರ್‌ ಸೂರ್ಯಕುಮಾರ್‌ ಯಾದವ್‌ ಕೂಡ ಪತ್ನಿ ಸಮೇತರಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಕೈಗೊಂಡು ಈ ಜಾಗವನ್ನು ವಿಶೇಷ ಪ್ರವಾಸಿತಾಣವನ್ನಾಗಿ ಮಾಡುವ ಆಲೋಚನೆಯಿದೆ.

- ಯೋಗೀಶ್ ಶೆಟ್ಟಿ

ಪ್ರಧಾನ ಕಾರ್ಯದರ್ಶಿ, ಮಾತೃ ವೈಭವ ಸೇವಾ ಸಮಿತಿ

--

ಹೊಸ ಮಾರಿಯಮ್ಮನನ್ನು ಕಳೆದ ಒಂದು ವರ್ಷದಿಂದ ಜೀರ್ಣೋದ್ಧಾರದ ಬಳಿಕ ಸ್ವರ್ಣ ಗದ್ದುಗೆಯಲ್ಲಿ ಕೂರಿಸಿ ಪೂಜೆ ಮಾಡುತ್ತಿದ್ದೇವೆ. ಇಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಹೀಗೆ ಮೂರು ಹೊತ್ತು ಪೂಜೆ ಮಾಡಲಾಗುತ್ತಿದೆ. ಗದ್ದುಗೆ ಪೂಜೆಯೇ ಇಲ್ಲಿಯ ವಿಶೇಷತೆ. ಪ್ರತಿ ಮಂಗಳವಾರದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತಾದಿಗಳು ಸೇವೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ. ನಿತ್ಯವೂ ಕುಂಕುಮಾರ್ಚನೆ, ಲಲಿತಾಸಹಸ್ರನಾಮ ಅರ್ಚನೆ, ಪುಷ್ಪಾರ್ಚನೆ ಹೀಗೆ ಎಲ್ಲವೂ ನಡೆಯುತ್ತಿದೆ. ಇಲ್ಲಿಗೆ ಗೋವಾ, ಕಾಸರಗೋಡಿನಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕೂಡ ಇರುತ್ತದೆ. ಮಾರಿಯಮ್ಮಿನೆ ಹಾಗೂ ತಂಗಿ ಉಚ್ಚಂಗಿಯಮ್ಮನಿಗೆ ಪೂಜೆ ಸಲ್ಲಿಸುವುದು ಇಲ್ಲಿನ ಪದ್ಧತಿ.

- ಶ್ರೀನಿವಾಸ ತಂತ್ರಿ, ಪ್ರಧಾನ ಅರ್ಚಕರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ