ಮಂಗಳವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರ ಥೇಟ್‌ ಕಾಶ್ಮೀರ ರೂಪ ಪಡೆದುಕೊಂಡಿತ್ತು. ಆಲಿಕಲ್ಲು ಮಳೆಯಿಂದಾಗಿ ಮಾಚಾಪುರದ ರಸ್ತೆ ಮತ್ತು ಮನೆಗಳ ಮೇಲೆಲ್ಲ ಆಲಿಕಲ್ಲುಗಳು ಆವರಿಸಿದ್ದ ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿದ್ದ ತೀವ್ರ ಗಾಳಿಚಲನೆ, ಉಷ್ಣತೆ ಹಾಗೂ ತೇವಾಂಶಗಳ ಸಂಯೋಜನೆಯ ವಾತಾವರಣ ಇದ್ದ ಕಾರಣದಿಂದಾಗಿ ಈ ಆಲಿಕಲ್ಲು ಮಳೆ ಸಂಭವಿಸಿದೆ. ಮಾನ್ಸೂನ್ ಪೂರ್ವ ಮಳೆಯ ಅವಧಿಯಲ್ಲಿ ಆಲಿಕಲ್ಲು ಮಳೆಯಿಂದ ಇಂಥ ಘಟನೆಗಳು ಸಂಭವಿಸುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಉತ್ತರ ಒಳನಾಡಿನಲ್ಲಿದ್ದ ಗಾಳಿಯ ವ್ಯತ್ಯಾಸವಾಗಿದೆ ಹಾಗೂ ಉತ್ತರ ದಕ್ಷಿಣ ದಿಕ್ಕಿನಲ್ಲಿನ ವಾಯುಭಾರ ಕುಸಿತ ಉಂಟಾಗಿದ್ದರಿಂದ ಈ ಆಲಿಕಲ್ಲು ಮಳೆ ಸಂಭವಿಸಿದೆ. ಇದರ ಜತೆಗೆ ಅತಿಯಾದ ಬಿಸಿಲೂ ಈ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಮಳೆ ನಿಂತ ಕೂಡಲೇ ಜನರು ಮನೆಗಳಿಂದ ಹೊರಬಂದು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಕೆಲವರು ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆ ಈ ಆಲಿಕಲ್ಲು ಮಳೆಯಿಂದ ಮಾಚಾಪುರ ಗ್ರಾಮ ಥೇಟ್‌ ಕಾಶ್ಮೀರದಂತೆ ಬಿಳಿಯಾಗಿ ನೋಡುಗರ ಕಣ್ಮನ ತಣಿಸಿದೆ.