• ದಿನೇಶ ನಾಯ್ಕ, ಆಡಕಾರ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ಸಾಗುವ ಬೆಂಗಳೂರು ಹೆದ್ದಾರಿಯಲ್ಲಿ ಕುದ್ರಿಗಿ ತೂಗು ಸೇತುವೆಯಿದೆ. ಈ ಸೇತುವೆ ಇಂದು ಒಂದು ಸುಂದರ ಪ್ರವಾಸಿ ಆಕರ್ಷಣೀಯ ಸ್ಥಳವಾಗಿ ಬೆಳೆದು ನಿಂತಿದೆ. ನಿತ್ಯ ನೂರಾರು ಪ್ರವಾಸಿ ವಾಹನಗಳು ಸಾಲಾಗಿ ನಿಲ್ಲುತ್ತಿದ್ದು ಸ್ಥಳೀಯರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಿದೆ.

ತೂಗು ಸೇತುವೆಗಳ ಸರದಾರ (Bridge man of India) ಎಂದೇ ಖ್ಯಾತರಾಗಿರುವ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ನೂರಾರು ಸೇತುವೆಗಳನ್ನು ದೇಶ ವಿದೇಶಗಳಲ್ಲಿ ನಿರ್ಮಿಸಿದ್ದಾರೆ. ಆದರೆ ಅವುಗಳಲ್ಲಿ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿರುವ ಸೇತುವೆಗಳಲ್ಲಿ ಇದೂ ಒಂದು ಎನ್ನವುದು ವಿಶೇಷ.

ಪ್ರವಾಸಿತಾಣವಾಯ್ತು ಸಿಗಂದೂರು ಸೇತುವೆ !

ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾದ ಶರಾವತಿ, ಜೋಗ ಜಲಪಾತವಾಗಿ ಧುಮುಕಿ ವಿದ್ಯುತ್‌ಶಕ್ತಿ ಉತ್ಪಾದನೆಗೆ ಅವಕಾಶ ಕಲಲ್ಪಿಸುತ್ತದೆ. ತನ್ನ ಬಿಂಕದ ಹರಿವಿನಿಂದ ಹಲವು ದ್ವೀಪಗಳನ್ನು ಸೃಷ್ಟಿಸಿ, ಹೊಳೆ ಸಾಲಿನಲ್ಲಿರುವ ಸಾವಿರಾರು ಕೃಷಿ ಭೂಮಿಗಳಿಗೆ ನೀರನ್ನು ಉಣಿಸಿ ರೈತರ ಅನ್ನದಾತೆಯಾಗಿದೆ. ಅರಬ್ಬಿ ಸಮುದ್ರ ಸೇರುತ್ತದೆ ಎನ್ನುವ ಕೆಲವೇ ಕಿಮೀ ಅಂತರದಲ್ಲಿ ಈ ತೂಗು ಸೇತುವೆಯನ್ನು ಕಾಣಬಹುದು.

ಸೇತುವೆಯಿಂದ ಶಾಶ್ವತ ಪರಿಹಾರ

ಈ ಹಿಂದೆ ಸಂಶಿ,ಕುದ್ರಿಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಮತ್ತು ವಸ್ತುಗಳ ಸಾಗಾಟಕ್ಕೆ ದೋಣಿಯನ್ನೇ ಅವಲಂಬಿಸಬೇಕಿತ್ತು. ಮಳೆಗಾಲ ಮತ್ತು ಪ್ರವಾಹದ ಸಂದರ್ಭದಲ್ಲಿ ಸಂಚಾರ ಮತ್ತು ಸಾಗಾಟ ಎರಡಕ್ಕೂ ಸಂಕಷ್ಟವನ್ನು ತಂದೊಡ್ಡುತ್ತಿತ್ತು. ತೀವ್ರ ಗಾಳಿ ಹಾಗೂ ಮಳೆಗಾಲದಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಾಗಬೇಕಾದ ಸ್ಥಿತಿ ಇತ್ತು. ಈ ಸೇತುವೆ ನಿರ್ಮಾಣದಿಂದ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗಿದೆ.

ಈ ತೂಗು ಸೇತುವೆ 2016ರಲ್ಲಿ ನಿರ್ಮಾಣವಾಗಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇದರ ಉಸ್ತುವಾರಿ ವಹಿಸಿತ್ತು. ಈ ಸೇರುವೆ ಸುಮಾರು 300 ಮೀಟರ್ ಉದ್ದವಿದ್ದು, ಕಡಿಮೆ ವೆಚ್ಚದಲ್ಲಿ ಸುಸ್ಥಿರ ಮತ್ತು ಸುಸಜ್ಜಿತವಾಗಿದೆ.

New Project (59)

ಪ್ರವಾಸಿ ತಾಣವಾದ ಸೇತುವೆ

ಈ ಸೇತುವೆ ಶರಾವತಿ ನದಿಯ ಮೇಲೆ ನಿರ್ಮಾಣವಾಗಿದ್ದು, ಶರಾವತಿ ನದಿಯ ಸುಂದರ ಮತ್ತು ಪ್ರಶಾಂತವಾದ ನೀರಿನ ಮೇಲೆ ನಡೆಯುವ ರೋಮಾಂಚಕ ಅನುಭವ ನೀಡುತ್ತದೆ. ತೂಗಾಟದ ಅನುಭವವನ್ನೂ ಪಡೆಯಬಹುದಾಗಿದೆ. ನದಿಯ ಸುತ್ತಮುತ್ತ ಇರುವ ಹಸಿರು ಗಿಡ-ಮರಗಳು ಮನಸಿಗೆ ಆಹ್ಲಾದವನ್ನು ನೀಡುತ್ತವೆ. ಹಾಗಾಗಿಯೇ ನಿತ್ಯ ನೂರಾರು ಪ್ರವಾಸಿಗರು ಈ ಸೇತುವೆಯನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ. ಇದರಿಂದ ಸ್ಥಳೀಯರಿಗೂ ಅನುಕೂಲವಾಗುತ್ತಿದೆ. ಈ ಸೇತುವೆ ಮೇಲೆ ದ್ವಿಚಕ್ರ ವಾಹನ ಸಾಗಟಕ್ಕೆ ಅನುಮತಿ ನೀಡಲಾಗಿದೆ. ಛಾಯಾಗ್ರಹಣಕ್ಕೆ ಹಾಗೂ ಪ್ರೀ ವೆಡ್ಡಿಂಗ್ ಶೂಟ್‌ಗೆ ಇದೊಂದು ನೆಚ್ಚಿನ ತಾಣವಾಗಿ ಹೊರ ಹೊಮ್ಮಿದೆ.

ಗ್ರಾಮಗಳನ್ನು ಬೆಸೆದ ಸೇತುವೆ ಪ್ರವಾಸಿಗರನ್ನೂ ಸೆಳೆಯುತ್ತಿದೆ. ಇದರಿಂದ ನೂಕು ನುಗ್ಗಾಟವನ್ನು ತಪ್ಪಿಸಲು ಸ್ಥಳೀಯ ಗ್ರಾಮ ಪಂಚಾಯತ್ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡಿದೆ.

ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು.

ಪ್ರವಾಸಿಗರ ಸೌಲಭ್ಯಕ್ಕಾಗಿ ಅಂಗಡಿ ಮುಗ್ಗಟ್ಟುಗಳು ನಿರ್ಮಾಣವಾಗಿವೆ.

ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆತಿವೆ.

New Project (60)

ಸ್ಪೀಡ್ ಬೋಟಿಂಗ್

ಶರಾವತಿ ನದಿಯ ಹಿನ್ನೀರಿನಲ್ಲಿ ಸ್ಪೀಡ್ ಬೋಟಿಂಗ್‌ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರವಾಸಿಗರು ಜಲ ಕ್ರೀಡೆ ಮಜಾ ಪಡೆಯಬಹುದು. ಸುತ್ತಲಿನ ಪರಿಸರ ಸೌಂದರ್ಯದ ವೀಕ್ಷಣೆಯೊಂದಿಗೆ ಸ್ಪೀಡ್‌ ಬೋಟಿಂಗ್‌ ಅದ್ಭುತ ಅನುಭವ ನೀಡುತ್ತದೆ.

ಎರಡು ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಾಣವಾದ ಈ ಸೇತುವೆ ಇಂದು ರಾಜ್ಯ ಹೊರರಾಜ್ಯಗಳ ಪ್ರವಾಸಿಗರನ್ನೂ ಸೆಳೆಯುತ್ತಿದೆ. ಅತ್ತ ಹೋದಾಗ ನೀವೂ ಈ ಸೇತುವೆಯನ್ನು ಕಣ್ತುಂಬಿಕೊಂಡುಬನ್ನಿ.

ದಾರಿ ಹೇಗೆ?

ಈ ಸೇತುವೆ ಹೊನ್ನಾವರದಿಂದ ಸುಮಾರು 30 ಕಿಲೋ ಮೀಟರ್ ದೂರದ ಕುದ್ರಿಗೆ ಗ್ರಾಮದಲ್ಲಿದೆ. ಹೊನ್ನಾವರ-ಬೆಂಗಳೂರು ಹೆದ್ದಾರಿಗೆ ಸಮೀಪದಲ್ಲಿದ್ದು, ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.