ಬೆಟ್ಟ-ಸಮುದ್ರಗಳ ನಡುವೆ ನಿಂತ ಸಮಯ
ನವೆಂಬರ್ನ ಶಾಂತ ವಾತಾವರಣದಲ್ಲಿ ಬೆಟ್ಟಗಳ ಮೇಲೆ ನಿಂತು ಪ್ರಕೃತಿಯನ್ನು ಕಣ್ತುಂಬಿಕೊಳ್ಳುವುದು ವಿಶೇಷ ಅನುಭವವಾಗಿತ್ತು. ಪ್ರಕೃತಿಯ ಮಡಿಲಿನಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ನನ್ನ ಮನಸ್ಸಿಗೆ ಸಂತೋಷ ನೀಡಿತು. ನಮ್ಮನ್ನೇ ಆವರಿಸಿಕೊಂಡಂತಿದ್ದ ಕೈಗೆ ಸಿಗುವ ಮೋಡಗಳು ಸದಾ ನೆನಪಿನಲ್ಲಿರುತ್ತವೆ.
- ಸುನೀತ
ಚಿಕ್ಕಮಗಳೂರು ರಾಜ್ಯದ ಪಶ್ಚಿಮ ಘಟ್ಟಗಳ ಮಧ್ಯೆ ಇರುವ ಸುಂದರ ಬೆಟ್ಟ ಪ್ರದೇಶ. ಇದು ತನ್ನ ಪ್ರಕೃತಿ ಸೌಂದರ್ಯ, ತಂಪಾದ ಹವಾಮಾನ ಮತ್ತು ಹಸಿರು ಪರಿಸರದಿಂದ ಪ್ರಸಿದ್ಧವಾಗಿದೆ. ಬೆಟ್ಟಗಳು, ಕಾಡುಗಳು, ಜಲಪಾತಗಳು ಮತ್ತು ಕಾಫಿ ತೋಟಗಳಿಂದ ಆವರಿಸಲ್ಪಟ್ಟಿರುವ ಈ ಪ್ರದೇಶ ಪ್ರವಾಸಿಗರಿಗೆ ಸ್ವರ್ಗದಂತಿದೆ. ಶಾಂತ ವಾತಾವರಣ ಮತ್ತು ಮನಮೋಹಕ ದೃಶ್ಯಗಳಿಂದ ಚಿಕ್ಕಮಗಳೂರು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು.
ಚಿಕ್ಕಮಗಳೂರು ಎಂಬ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ʼಚಿಕ್ಕಮಗಳು + ಊರುʼ ಎಂಬ ಪದಗಳಿಂದ ಈ ಹೆಸರು ಬಂದಿದ್ದು. ಅಂದರೆ ʼಕಿರಿಯ ಮಗಳ ಊರುʼ. ಪುರಾತನ ಕಾಲದಲ್ಲಿ ಈ ಪ್ರದೇಶವನ್ನು ಒಬ್ಬ ರಾಜನು ತನ್ನ ಕಿರಿಯ ಮಗಳಿಗೆ ದಾನವಾಗಿ ನೀಡಿದನೆಂದು ಕಥೆಗಳು ಹೇಳುತ್ತವೆ.
ಇದನ್ನೂ ಓದಿ: ಸೀತೆ ಏಕಾಂಗಿಯಾದ ಜಾಗ ಪೊಂಕುಳಿ
ಮುಳ್ಳಯ್ಯನಗಿರಿ
ಮುಳ್ಳಯ್ಯನಗಿರಿ ಸಮುದ್ರ ಮಟ್ಟದಿಂದ ಸುಮಾರು 1,930 ಮೀಟರ್ ಎತ್ತರದಲ್ಲಿರುವ ಶಿಖರ. ಇದೆ. ಮುಳ್ಳಯ್ಯನಗಿರಿ ತನ್ನ ಸುಂದರ ಪ್ರಕೃತಿ ಸೌಂದರ್ಯ ಮತ್ತು ತಂಪಾದ ಹವಾಮಾನದಿಂದ ಪ್ರಸಿದ್ಧವಾಗಿದೆ. ಈ ಸ್ಥಳವು ಟ್ರೆಕ್ಕಿಂಗ್ ಪ್ರಿಯರಿಗೆ ಅತ್ಯಂತ ಜನಪ್ರಿಯ. ಮುಳ್ಳಯ್ಯನಗಿರಿ ಶಿಖರದ ಬಳಿ ಮುಳ್ಳಪ್ಪ ಸ್ವಾಮಿ ದೇವಸ್ಥಾನವೂ ಇದೆ. ಈ ದೇವರಿಂದಲೇ ಮುಳ್ಳಯ್ಯನಗಿರಿ ಎಂಬ ಹೆಸರು ಬಂದಿದೆಯಂತೆ. ಒಂದಿಷ್ಟು ದೂರ ಗಾಡಿಯಲ್ಲಿ ಹೋಗಿ ಬಳಿಕ ಸ್ವಲ್ಪ ಮೆಟ್ಟಿಲುಗಳನ್ನು ಹತ್ತಬೇಕು. ಶಿಖರದಿಂದ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟದ ಸುಂದರ ದೃಶ್ಯಗಳನ್ನು ನೋಡಬಹುದು.

ಬಾಬಾ ಬುಡನಗಿರಿ
ಚಿಕ್ಕಮಗಳೂರು ನಗರದಿಂದ ಸುಮಾರು 30–35 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ತನ್ನ ಸುಂದರ ಬೆಟ್ಟಗಳು ಮತ್ತು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಕೃತಿಯನ್ನು ಪ್ರೀತಿಸುವವರು ಮತ್ತು ಟ್ರೆಕ್ಕಿಂಗ್ ಮಾಡಲು ಇಚ್ಛಿಸುವವರಿಗೆ ಇದು ಅತ್ಯುತ್ತಮ ಆಯ್ಕೆ. ಇಲ್ಲಿ ಹರಿಯುವ ತಣ್ಣನೆಯ ನೀರು ಮತ್ತು ಸುತ್ತಲಿನ ಪ್ರಕೃತಿ ದೃಶ್ಯಗಳು ಪ್ರವಾಸಿಗರಿಗೆ ತುಂಬಾ ಇಷ್ಟವಾಗುತ್ತದೆ. ಬೆಟ್ಟಗಳ ಮಧ್ಯೆ ಇರುವ ಗಾಳಿಕೆರೆ ಎಂಬ ಸುಂದರ ಕೆರೆ ಗಮನ ಸೆಳೆಯುತ್ತದೆ.
ಹಳ್ಳಿ ಮನೆ ಜಲಪಾತ
ಚಿಕ್ಕಮಗಳೂರಿಗೆ ಹೋದರೆ ಭೇಟಿ ನೀಡಬೇಕಾದ ಇನ್ನೊಂದು ಜಾಗವೆಂದರೆ ಹಳ್ಳಿ ಮನೆ ಜಲಪಾತ. ಹಸಿರು ಮರಗಳು, ಬೆಟ್ಟಗಳು ನಡುವೆ ಏಕಾಂಗಿಯಾಗಿ ಧುಮ್ಮಿಕ್ಕುವ ಈ ಜಲಪಾತ ಇಡೀ ವಾತವಾರಣವನ್ನು ಇನ್ನಷ್ಟು ತಂಪಾಗಿಸುತ್ತದೆ. ನೀರಿನಲ್ಲಿ ಆಡುತ್ತಾ, ಫೊಟೋಗಳನ್ನು ತೆಗೆದುಕೊಂಡು, ಗೆಳೆಯರ ಜತೆಗೆ ಎಂಜಾಯ್ ಮಾಡಬಹುದಾದ ತಾಣ.
ಕಾಫಿಯ ಘಮ:
ಚಿಕ್ಕಮಗಳೂರಿನಲ್ಲಿ ಸಿರಿ ನೆಚರ್ ರೂಟ್ಸ್ ಎಂಬ ಜಾಗವಿದೆ. ಅಲ್ಲಿಯ ಕಾಫಿಯ ರುಚಿಯನ್ನು ಸವಿಯಬೇಕು! ಚಿಕ್ಕಮಗಳೂರಿನ ಕಾಫಿಯ ವಿಶೇಷತೆ ಗೊತ್ತಾಗುತ್ತದೆ. ಪ್ರವಾಸಿಗರು, ವ್ಲಾಗರ್ಗಳ ಜತೆಗೆ ಹಿತವಾದ ತಂಪಿಗೆ ಬೆಚ್ಚಗಿನ ಕಾಫಿ ಕುಡಿಯುತ್ತಾ ಪ್ರಕೃತಿಯನ್ನು ಆನಂದಿಸಿದೆವು.

ಪಣಂಬೂರು ಕಡಲತೀರ
ಪಣಂಬೂರ್ ಕಡಲತೀರಕ್ಕೆ ಹೋದಾಗ ಅಲ್ಲಿನ ಸಮುದ್ರದ ಅಲೆಗಳು ತನ್ನೊಟ್ಟಿಗೆ ಕಡಲಿಂದ ಸಂತೋಷದ ಅಲೆಗಳನ್ನು ತರುತ್ತಿದ್ದವು. ಪ್ಯಾರಾಶೂಟ್ ರೈಡ್, ಬೀಚ್ ರೈಡ್ ಸೇರಿ ಹಲವು ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ಸಮುದ್ರದ ಅಲೆಗಳನ್ನು ನೋಡುತ್ತಾ, ಸ್ಥಳೀಯ ಆಹಾರ ಸೇವಿಸುತ್ತ, ಸೂರ್ಯಾಸ್ತವನ್ನು ನೋಡುವಾಗ ಸಮಯ ಅಲ್ಲೇ ನಿಂತುಬಿಡಲಿ ಅನಿಸುತ್ತದೆ.
ಲೇಖಕರು: ಪತ್ರಕರ್ತರು