ಭಾರತದ ದೀರ್ಘ ಸುರಂಗ ಮಾರ್ಗ ಪೂರ್ಣ
ಭಾರತದಲ್ಲಿಯೇ ದೀರ್ಘ ಸಾರಿಗೆ ಸುರಂಗಮಾರ್ಗವಾದ 14.5 ಕಿಮೀ ಉದ್ದದ ಟನಲ್ ಕೆಲಸ ಪೂರೈಸಲಾಗಿದೆ.
ಋಷಿಕೇಶ-ಕರ್ಣಪ್ರಯಾಗ (Rishikesh-Karnaprayag) ಬ್ರಾಡ್ ಗೇಜ್ ರೈಲು ಯೋಜನೆಯ (Rishikesh-Karnaprayag broad gauge rail line project) ಬಹು ನಿರೀಕ್ಷಿತ ಹಂತವನ್ನು ಯಶಸ್ವಿಯಾಗಿ ತಲುಪಲಾಗಿದೆ. ಭಾರತದಲ್ಲಿಯೇ ದೀರ್ಘ ಸಾರಿಗೆ ಸುರಂಗಮಾರ್ಗವಾದ 14.5 ಕಿಮೀ ಉದ್ದದ ಟನಲ್ ಕೆಲಸ ಪೂರೈಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರು ಶನಿವಾರ ಘೋಷಣೆ ಮಾಡಿದ್ದಾರೆ.
"ಇದು ಈ ಯೋಜನೆಯ ಪ್ರಮುಖ ಭಾಗವಾಗಿದ್ದು, ಎರಡು ಸಮಾಂತರ ಸುರಂಗ ಮಾರ್ಗಗಳನ್ನು ನಿರ್ಮಿಸುತ್ತಿರುವುದರಿಂದ ಅತಿ ಸಂಕೀರ್ಣ ಹೆಜ್ಜೆಯಾಗಿದೆ" ಎಂದು ವೈಷ್ಣವ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮುಖ ಪ್ರಾಜೆಕ್ಟ್ಗಳಲ್ಲಿ ಒಂದಾದ ಈ ಯೋಜನೆ 2026ರ ಡಿಸೆಂಬರ್ ವೇಳೆಗೆ ಕಾರ್ಯಾಚರಣೆಗೊಳಿಸುವ ಗುರಿಯೊಂದಿಗೆ ಸಾಗುತ್ತಿದೆ.
ಈ ರೈಲು ಮಾರ್ಗವು ಉತ್ತರಾಖಂಡದ ಪವಿತ್ರ ತೀರ್ಥಕ್ಷೇತ್ರಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದರೊಂದಿಗೆ ಪ್ರವಾಸೋದ್ಯಮ ವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡಲಿದೆ.
125 ಕಿಲೋಮೀಟರ್ ಉದ್ದದ ಈ ಯೋಜನೆಯು ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ, ಗೌಚರ್ ಮತ್ತು ಕರ್ಣಪ್ರಯಾಗದಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಮಹತ್ವ ಹೊಂದಿದೆ.