ಒಂದೇ ದಿನದಲ್ಲಿ ರಾಮೇಶ್ವರಂನ ಈ ಸ್ಥಳಗಳನ್ನು ಭೇಟಿ ಮಾಡಬಹುದು..
ಧಾರ್ಮಿಕ ಪ್ರವಾಸವನ್ನು ಕೈಗೊಳ್ಳುವ ಅನೇಕ ಮಂದಿಯ ಮೊದಲ ಆಯ್ಕೆ ರಾಮೇಶ್ವರಂ ಆಗಿರುತ್ತದೆ. ಆದರೆ ರಾಮೇಶ್ವರಂನಲ್ಲಿ ದೇವಾಲಯಗಳು, ಪುಣ್ಯಭೂಮಿಯಷ್ಟೇ ಅಲ್ಲದೆ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಒಂದೇ ದಿನದಲ್ಲಿ ರಾಮೇಶ್ವರಂಗೆ ಭೇಟಿ ಕೊಡುವವರು ನೀವಾದರೆ ಇಲ್ಲಿದೆ ಪ್ರವಾಸಿ ಗೈಡ್.
ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿರುವ ರಾಮೇಶ್ವರಂ ʼದಕ್ಷಿಣದ ವಾರಣಾಸಿ’ ಎಂದೇ ಜನಪ್ರಿಯವಾಗಿರುವ ಪ್ರಮುಖ ಧಾರ್ಮಿಕ ಸ್ಥಳ. ಧಾರ್ಮಿಕ ಪ್ರವಾಸವನ್ನು ಬಯಸುವವರಿಗೆ ಐತಿಹಾಸಿಕ ಹಾಗೂ ಸುಪ್ರಸಿದ್ಧ ದೇವಾಲಯಗಳು, ಸಮುದ್ರ ತೀರಗಳನ್ನು ಮೆಚ್ಚುವವರು, ಅಲೆಗಳ ಜೊತೆ ಆಟವಾಡಲು ಬಯಸುವವರಿಗಾಗಿ ಪ್ರಶಾಂತವಾದ ಕಡಲ ತೀರಗಳು, ಮಾತ್ರವಲ್ಲದೆ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸುವ ಮಂದಿಗೆ ಇನ್ನೂ ಅನೇಕ ಪ್ರವಾಸಿತಾಣಗಳು ರಾಮೇಶ್ವರಂನಲ್ಲಿವೆ. ಆದರೆ ನೀವು ರಾಮೇಶ್ವರಂನಲ್ಲಿ ಒನ್ ಡೇ ಟ್ರಿಪ್ ಮಾಡಬಯಸುವವರಾಗಿದ್ದರೆ ಪ್ರಮುಖವಾದ ಈ ತಾಣಗಳನ್ನು ತಪ್ಪದೇ ಭೇಟಿ ಮಾಡಿ.
ರಾಮನಾಥಸ್ವಾಮಿ ದೇವಸ್ಥಾನ:
ರಾಮೇಶ್ವರಂಗೆ ಭೇಟಿ ನೀಡಿದ ಮೇಲೆ ರಾಮನಾಥ ಸ್ವಾಮಿ ದೇವಾಲಯಕ್ಕೆ ಹೋಗದಿದ್ದರೆ ಒನ್ ಡೇ ಟ್ರಿಪ್ ಪೂರ್ಣವೆನ್ನಿಸದು. ಯಾಕೆಂದರೆ ಇದು ನಗರದ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡುತ್ತಾರೆ. ಅಲ್ಲದೆ ದೇವಸ್ಥಾನದಲ್ಲಿರುವ 12 ಜ್ಯೋತಿರ್ಲಿಂಗಗಳಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನದಲ್ಲಿ ವಿಶೇಷವಾದ ಕಲ್ಲಿನ ಕೆತ್ತನೆಗಳಿದ್ದು, ಅತ್ಯಾಕರ್ಷಕ ವಾಸ್ತುಶಿಲ್ಪಗಳು ಎಲ್ಲರ ಕಣ್ಮನಸೆಳೆಯುತ್ತವೆ.

ಜಡ ತೀರ್ಥಂ:
ರಾಮೇಶ್ವರಂನಿಂದ ಧನುಷ್ಕೋಟಿಗೆ ಹೋಗುವ ಹಾದಿಯಲ್ಲಿ 3.5ಕಿಮೀ ದೂರದಲ್ಲಿರುವ ಅತ್ಯಂತ ಪವಿತ್ರವಾದ ಕೊಳ ಜಡ ತೀರ್ಥಂ. ರಾಮೇಶ್ವರಂಗೆ ಬರುವ ಭಕ್ತರು ತಮ್ಮ ಹಿಂದಿನ ಪಾಪಗಳನ್ನು ಕಳೆಯಲು, ಪ್ರಾಯಶ್ಚಿತ್ತ ಮಾಡಿಕೊಳ್ಳಲು ರಾಮೇಶ್ವರಂನ ಈ ಪ್ರಮುಖ ತಾಣ ಜಡ ತೀರ್ಥಂಗೆ ಭೇಟಿ ನೀಡುತ್ತಾರೆ. ಜಡ ತೀರ್ಥಂಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿದ್ದು, ಸೀತಾಪಹರಣದ ವೇಳೆ ಸೀತೆಯ ರಕ್ಷಣೆಗೆ ಬಂದ ಜಟಾಯುವನ್ನು ರಾವಣ ಕೊಲ್ಲುತ್ತಾನೆ. ಆ ಜಟಾಯು ಪ್ರಾಣತ್ಯಾಗ ಮಾಡಿದ ಜಾಗವೇ ಜಡ ತೀರ್ಥಂ ಎಂಬುದಾಗಿಯೂ ದಂತಕಥೆಯಿದೆ.

ಪಂಬನ್ ಸೇತುವೆ ಹಾಗೂ ಅಣ್ಣೈ ಇಂದಿರಾ ಗಾಂಧಿ ರಸ್ತೆ ಸೇತುವೆ:
ರಾಮೇಶ್ವರಂನ ಮತ್ತೊಂದು ಆಕರ್ಷಣೆಗಳ ಪೈಕಿ ಪಂಬನ್ ರೈಲು ಸೇತುವೆ ಕೂಡ ಒಂದು. ಇದು ರಾಮೇಶ್ವರಂನಿಂದ 7 ಕಿಮೀ ದೂರದಲ್ಲಿದ್ದು, ಭಾರತದಲ್ಲಿ ನಿರ್ಮಿಸಲಾದ ಮೊದಲ ಸಮುದ್ರ ಸೇತುವೆಯಾಗಿದೆ. 1887ರಲ್ಲಿ ಪ್ರಾರಂಭಿಸಲಾಗಿದ್ದ ಇದರ ನಿರ್ಮಾಣ ಕಾರ್ಯವನ್ನು 1912ರಲ್ಲಿ ಪೂರ್ಣಗೊಳಿಸಲಾಯಿತು. 1988ರಲ್ಲಿ, ರೈಲು ಸೇತುವೆಗೆ ಸಮಾನಾಂತರವಾಗಿ ರಸ್ತೆ ಸೇತುವೆಯನ್ನು ಸಹ ನಿರ್ಮಿಸಲಾಯಿತು. ಈ ರಸ್ತೆ ಸೇತುವೆಯನ್ನು ಅಣ್ಣೈ ಇಂದಿರಾ ಗಾಂಧಿ ರಸ್ತೆ ಸೇತುವೆ ಎಂದೂ ಕರೆಯುತ್ತಾರೆ. ಇತ್ತೀಚೆಗೆ ನಿರ್ಮಿಸಲಾದ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕದ ನಂತರ ಪಂಬನ್ ಸೇತುವೆ ಭಾರತದ ಎರಡನೇ ಅತಿದೊಡ್ಡ ಸೇತುವೆಯಾಗಿದೆ. ಪಂಬನ್ ರೈಲು ಸೇತುವೆಯನ್ನು ಅತ್ಯಂತ ಉದ್ದವಾದ ರೈಲು ಸೇತುವೆ ಎಂದು ಪರಿಗಣಿಸಲಾಗಿದೆ.

ಅರಿಯಮನ್ ಬೀಚ್:
ರಾಮೇಶ್ವರಂನಿಂದ 21 ಕಿಮೀ ದೂರದಲ್ಲಿರುವ ಈ ಶಾಂತವಾದ ನೀಲಿ ಸಾಗರವು ಆಳವಿಲ್ಲದ ಸಮುದ್ರ ಎಂದು ಕರೆಸಿಕೊಂಡಿದೆ. ಇದು ಕುಟುಂಬ ಮತ್ತು ಸ್ನೇಹಿತರೊಂದಿಗೆ ದಿನದ ಪ್ರವಾಸಗಳಿಗೆ ಸೂಕ್ತವಾದ ಸ್ಥಳವಾಗಿದೆ. ಬೋಟಿಂಗ್, ವಿಂಡ್ಸರ್ಫಿಂಗ್ ಮತ್ತು ಪ್ಯಾರಾಸೈಲಿಂಗ್ನಂತಹ ಅನೇಕ ರೀತಿಯ ಜಲ ಕ್ರೀಡೆಗಳನ್ನು ಆಡಲು ಪ್ರವಾಸಿಗರು ಇಲ್ಲಿಗೆ ಭೇಟಿನೀಡುತ್ತಾರೆ.

ಸೀ ವರ್ಲ್ಡ್ ಅಕ್ವೇರಿಯಂ:
ರಾಮೇಶ್ವರಂ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಸೀ ವರ್ಲ್ಡ್ ಅಕ್ವೇರಿಯಂ ಮಕ್ಕಳ ನೆಚ್ಚಿನ ತಾಣವಾಗಿದೆ. ಮಕ್ಕಳಿಗಷ್ಟೇ ಅಲ್ಲದೆ ಎಲ್ಲ ವಯಸ್ಸಿನವರೂ ಸಹ ನೋಡಬಹುದಾದ ವಿಶೇಷವಾದ ಸಮುದ್ರ ಜೀವಿಗಳು, ವಿಶೇಷವಾದ ಮೀನುಗಳನ್ನು ಇಲ್ಲಿ ಕಾಣಲು ಸಾಧ್ಯವಿದೆ.

ರಾಮೇಶ್ವರಂ ತಲುಪುವುದು ಹೇಗೆ ?
ವಿಮಾನದ ಮೂಲಕ: ಮಧುರೈ ವಿಮಾನ ನಿಲ್ದಾಣವು ರಾಮೇಶ್ವರಂಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇದು ಮುಖ್ಯ ನಗರದಿಂದ ಸುಮಾರು 149 ಕಿಮೀ ದೂರದಲ್ಲಿದೆ. ಮಧುರೈನಿಂದ ನೀವು ಬಸ್, ಕ್ಯಾಬ್ ಅಥವಾ ಬಾಡಿಗೆ ಟ್ಯಾಕ್ಸಿಗಳ ಮೂಲಕ ರಾಮೇಶ್ವರಂಗೆ ತಲುಪಬಹುದು.
ರೈಲುಮಾರ್ಗದ ಮೂಲಕ : ರಾಮೇಶ್ವರಂ ದೇಶದ ನಾನಾ ಭಾಗಗಳಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಚೆನ್ನೈ, ಮಧುರೈ ಮತ್ತು ತಿರುವನಂತಪುರಂನಂತಹ ದಕ್ಷಿಣ-ಭಾರತದ ನಗರಗಳಿಗೂ ಉತ್ತಮ ಸಂಪರ್ಕವನ್ನು ಹೊಂದಿದೆ.
ರಸ್ತೆಯ ಮೂಲಕ: ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ರಾಮೇಶ್ವರಂನಿಂದ ರಸ್ತೆಯ ಸಂಪರ್ಕವಿದೆ. ಬಸ್ ಅಥವಾ ಕ್ಯಾಬ್ ಮೂಲಕವೂ ರಾಮೇಶ್ವರಂ ತಲುಪಬಹುದು.