Wednesday, February 4, 2026
Wednesday, February 4, 2026

ರುಚಿಯ ಪಥದಲ್ಲಿ ಒಂದು ಹೊಸ ಪಯಣ...!

ಸ್ಥಳೀಯ ಆಹಾರ ಪದ್ಧತಿಗಳು ಆ ಪ್ರದೇಶದ ಇತಿಹಾಸ, ಹವಾಮಾನ, ಕೃಷಿ ಪದ್ಧತಿ ಮತ್ತು ಜನರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ. ಇದರ ಹೊರತಾಗಿಯೂ ಭಾರತದ ಪ್ರತಿ ರಾಜ್ಯವೂ ತನ್ನದೇ ಆದ ವಿಶಿಷ್ಟ ಪಾಕ ಪರಂಪರೆಯನ್ನು ಹೊಂದಿದೆ. ಕೇರಳ, ಅಂಧ್ರ ರಾಜ್ಯಗಳು ಸೇರಿದಂತೆ ಗುಜರಾತ್, ಪಂಜಾಬಿ, ರಾಜಸ್ಥಾನಿ, ಹಿಮಾಚಲ ಪ್ರದೇಶ, ಪ.ಬಂಗಾಳಗಳು ಭಾರತವನ್ನು ಪಾಕಪದ್ಧತಿ ಪ್ರವಾಸೋದ್ಯಮದ ಶ್ರೇಷ್ಠ ಗಮ್ಯಸ್ಥಾನವನ್ನಾಗಿ ಮಾಡಿವೆ.

-ಹೊಸ್ಮನೆ ಮುತ್ತು

ರುಚಿ, ರುಚಿಯಾದ ಆಹಾರ ಯಾರಿಗೆ ಇಷ್ಟ ಇಲ್ಲ ಹೇಳಿ? ನಾಲಿಗೆಯ ಬಯಕೆ, ಮನಸಿನ ಸೆಳೆತಕ್ಕೆ ಸ್ಪಂದಿಸಿ, ಆ ರುಚಿಯ ಬೆನ್ನು ಹತ್ತಿ ಪ್ರಯಾಣ ಹೊರಡಬಹುದೇ? ಖಂಡಿತವಾಗಿಯೂ. ರುಚಿಯ ಜತೆ ಸಾಗುವ ಈ ಪಯಣದಲ್ಲಿ, ಹೊಸ ಊರು, ಹೊಸ ಸೀಮೆ, ಸಿಗುವ ಪ್ರತಿ ತುತ್ತೂ ಒಂದು ವಿಸ್ಮಯ. ಪ್ರತಿ ಊರಿಗೂ, ಪ್ರತಿ ಹಳ್ಳಿಗೂ ಅದರದೇ ಆದ ರುಚಿಯ ಕಥೆ ಇರುತ್ತದೆ. ಕೆಲವೊಮ್ಮೆ ಮಸಾಲೆಯ ತೀವ್ರತೆಯಲ್ಲಿ, ಕೆಲವೊಮ್ಮೆ ಸಿಹಿಯ ಸೌಮ್ಯತೆಯಲ್ಲಿ ಆ ರುಚಿಗಳು ಅಡಗಿರುತ್ತವೆ. ಈ ರುಚಿಗಳನ್ನು ಹುಡುಕುತ್ತಾ ಹೊರಟರೆ, ಅದು ಕೇವಲ ಆಹಾರ ಯಾತ್ರೆಯಾಗದೆ, ಸಂಸ್ಕೃತಿ, ಜನಜೀವನ, ಪ್ರಕೃತಿ ಎಲ್ಲವನ್ನೂ ಒಟ್ಟಿಗೆ ಪರಿಚಯಿಸುವ ಒಂದು ವಿಶಿಷ್ಟ ಅನುಭವವಾಗಿ ಮಾರ್ಪಡುತ್ತದೆ. ಹೀಗೆ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ಜನರ ಬದುಕಿನ ಸುಗಂಧವನ್ನು ರುಚಿಯ ಮೂಲಕ ಅನುಭವಿಸುವ ಹಂಬಲವೇ ʻಪಾಕ ಪ್ರವಾಸೋದ್ಯಮʼ (ಖಾದ್ಯ ಪ್ರವಾಸೋದ್ಯಮ/ಗ್ಯಾಸ್ಟ್ರೊನೊಮಿ(Culinary/Gastronomy Tourism).

ರುಚಿಯೇ ನಮ್ಮ ಗೈಡ್

New Project (28)

ಒಂದು ಊರಿನ ಹೃದಯವನ್ನು ಅರಿಯಲು ಅಲ್ಲಿನ ಆಹಾರವನ್ನು ಸವಿಯುವುದಕ್ಕಿಂತ ಉತ್ತಮ ದಾರಿ ಇನ್ನೊಂದಿಲ್ಲ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿ, ಮಸಾಲೆಗಳ ಪರಿಮಳ ಮತ್ತು ಅಡುಗೆ ಮಾಡುವ ವಿಧಾನ ಇರುತ್ತದೆ. ಹಾಗಾಗಿಯೇ, ಇಂದು ಪ್ರವಾಸೋದ್ಯಮವು ದೃಶ್ಯಗಳಿಗಿಂತ ಹೆಚ್ಚಾಗಿ ದಿವ್ಯ ಭೋಜನದತ್ತ ಮುಖಮಾಡಿದೆ. ಅಡುಗೆ ಮನೆಗಳಿಂದ ಹಿಡಿದು ಬೀದಿ ತಿನಿಸುಗಳವರೆಗೆ, ಹಬ್ಬ-ಹರಿದಿನಗಳ ತಿನಿಸುಗಳಿಂದ ಹಿಡಿದು ಸಸ್ಯಾಹಾರಿ-ಮಾಂಸಾಹಾರಿ ವೈವಿಧ್ಯಗಳವರೆಗೆ ಎಲ್ಲವೂ ಇದರ ಭಾಗ.

ನಾವು ಒಂದು ಹೊಸ ನಗರದ ಅಥವಾ ಗ್ರಾಮದ ಬೀದಿಗಳಲ್ಲಿ ಕಳೆದುಹೋದಾಗ, ನಕ್ಷೆಗಿಂತ ಹೆಚ್ಚು ನಂಬಲರ್ಹ ಗೈಡ್ ಆಗಿ ನಿಲ್ಲುವುದು ರುಚಿ. ದೂರದಿಂದ ಬರುವ ತಾಜಾ ಬ್ರೆಡ್ಡಿನ ಸುವಾಸನೆ, ಸ್ಟ್ರೀಟ್ ಫುಡ್ ಸ್ಟಾಲ್ನಿಂದ ಎದ್ದು ಬರುವ ಮಸಾಲೆಯ ಕಂಪು, ಅಥವಾ ಸ್ಥಳೀಯ ಕೆಫೆಯಿಂದ ಹೊರಸೂಸುವ ಕಾಫಿಯ ಘಮ, ಇವೆಲ್ಲವೂ ನಮ್ಮನ್ನು ಆಕರ್ಷಿಸಿ, ನಮಗೆ ಮಾರ್ಗದರ್ಶನ ನೀಡುತ್ತವೆ. ರುಚಿಯ ಈ ಸೂಚಕಗಳನ್ನು ಅನುಸರಿಸಿದಾಗ, ನಾವು ಇತರ ಪ್ರವಾಸಿ ಆಕರ್ಷಣೆಗಳಿಂದ ದೂರ ಉಳಿದು, ನಿಜವಾದ ಸ್ಥಳೀಯ ಅನುಭವಗಳಿಗೆ ತೆರೆದುಕೊಳ್ಳುತ್ತೇವೆ.

New Project (29)

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಅಸಂಖ್ಯಾತ ಪ್ರಾದೇಶಿಕ ಪಾಕಪದ್ಧತಿಗಳ ನಾಡು. ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ, ಪ್ರತಿ ರಾಜ್ಯ ಹಾಗು ಜಿಲ್ಲೆ ತನ್ನದೇ ಆದ ವಿಶಿಷ್ಟ ರುಚಿ, ಮಸಾಲೆ ಮತ್ತು ತಯಾರಿಕಾ ಶೈಲಿಯನ್ನು ಹೊಂದಿದೆ. ಹೀಗಾಗಿ ಖಾದ್ಯ ಪ್ರಿಯ ಪ್ರವಾಸಿಗರು ಬಗೆ ಬಗೆಯ ಹೊಸ ರುಚಿಗಳನ್ನು ಅನ್ವೇಷಿಸಲು ವಿಪುಲ ಅವಕಾಶವಿದೆ. ಇವು ಕೇವಲ ತಿನಿಸುಗಳಲ್ಲ, ಪ್ರತಿ ಪ್ರದೇಶದ ಸಂಸ್ಕೃತಿಯ ಪ್ರತಿಬಿಂಬಗಳು.

ಸ್ಥಳೀಯ ಆಹಾರ ಪದ್ಧತಿಗಳು ಆ ಪ್ರದೇಶದ ಇತಿಹಾಸ, ಹವಾಮಾನ, ಕೃಷಿ ಪದ್ಧತಿ ಮತ್ತು ಜನರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ. ಇದರ ಹೊರತಾಗಿಯೂ ಭಾರತದ ಪ್ರತಿ ರಾಜ್ಯವೂ ತನ್ನದೇ ಆದ ವಿಶಿಷ್ಟ ಪಾಕ ಪರಂಪರೆಯನ್ನು ಹೊಂದಿದೆ. ಕೇರಳ, ಅಂಧ್ರ ರಾಜ್ಯಗಳು ಸೇರಿದಂತೆ ಗುಜರಾತ್, ಪಂಜಾಬಿ, ರಾಜಸ್ಥಾನಿ, ಹಿಮಾಚಲ ಪ್ರದೇಶ, ಪ.ಬಂಗಾಳಗಳು ಭಾರತವನ್ನು ಪಾಕಪದ್ಧತಿ ಪ್ರವಾಸೋದ್ಯಮದ ಶ್ರೇಷ್ಠ ಗಮ್ಯಸ್ಥಾನವನ್ನಾಗಿ ಮಾಡಿವೆ. ಇನ್ನು ಅಂತಾರಾಷ್ಟ್ರೀಯವಾಗಿ ನೋಡಿದರೆ ವಿದೇಶಗಳಲ್ಲಿ ಪಾಕಪದ್ಧತಿ ಪ್ರವಾಸೋದ್ಯಮ ಒಂದು ದೊಡ್ಡ ಕೈಗಾರಿಕೆಯಾಗಿದೆ. ಥೈಲ್ಯಾಂಡ್, ಇಟಲಿ, ಫ್ರಾನ್ಸ್, ಜಪಾನ್‌ನಂಥ ದೇಶಗಳು ತಮ್ಮ ಪಾಕಪದ್ಧತಿಯನ್ನು ಪ್ರವಾಸೋದ್ಯಮದ ಕೇಂದ್ರಬಿಂದುವನ್ನಾಗಿಸಿಕೊಂಡು ಆರ್ಥಿಕತೆಗೆ ಹೊಸ ಚೈತನ್ಯ ನೀಡಿವೆ.

New Project (30)

ಗ್ಯಾಸ್ಟ್ರೊನಮಿ ಟೂರಿಸಂ, ಕೇವಲ ಹೊಟ್ಟೆ ತುಂಬಿಸುವ ಕ್ರಿಯೆಯಲ್ಲ; ಜ್ಞಾನ ವೃದ್ಧಿಯ ಪ್ರಯಾಣ. ನೆಲದ ಸೊಗಡಿನ ಅಡುಗೆಯನ್ನು ಸವಿಯುವ ಮೂಲಕ ಆ ಭೂಭಾಗದ ಸಂಸ್ಕೃತಿಯ ಸ್ಪರ್ಶವನ್ನು ಅನುಭವಿಸುವ ಆತ್ಮೀಯ ಆಹ್ವಾನವಾಗಿದೆ. ಸ್ಥಳೀಯ ಮಾರುಕಟ್ಟೆಗಳಿಗೆ ಭೇಟಿ, ಅಡುಗೆ ತರಗತಿಗಳಲ್ಲಿ ಪಾಲ್ಗೊಳ್ಳುವುದು, ವೈನ್ ಟೇಸ್ಟಿಂಗ್, ಫುಡ್ ಫೆಸ್ಟಿವಲ್‌ಗಳಂತಹ ಆಹಾರದ ಉತ್ಸವ, ಮೇಳಗಳಲ್ಲಿ ಭಾಗವಹಿಸುವುದು ಮತ್ತು. ಸಾಂಪ್ರದಾಯಿಕ ಪಾಕವಿಧಾನಗಳ ರಹಸ್ಯಗಳನ್ನು ಕಲಿಯುವುದು. ಇದರ ಪ್ರಮುಖ ಭಾಗಗಳು. ಕೃಷಿ ಕ್ಷೇತ್ರಗಳು ಕೂಡ ಇದರಲ್ಲಿ ಸೇರಿವೆ. ‘ಫಾರ್ಮ್-ಟು-ಟೇಬಲ್’ (Farm-to-Table) ಅನುಭವದಿಂದಾಗಿ, ತಮ್ಮ ಆಹಾರವು ಹೊಲದಿಂದ ತಟ್ಟೆಗೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ರೈತರೊಂದಿಗೆ ಸಹಕರಿಸಿ, ತಾಜಾ ಫಸಲು ಕೊಯ್ಲು ಮಾಡುವ ಅನುಭವ ಪಡೆಯುವುದಲ್ಲದೆ, ಸ್ಥಳೀಯ ಹಳ್ಳಿಗಳ ಸಾಂಪ್ರದಾಯಿಕ ಊಟದ ವ್ಯವಸ್ಥೆಯಲ್ಲಿ ಭಾಗವಹಿಸಿ, ಅಲ್ಲಿನ ಆತಿಥ್ಯ ಮತ್ತು ಜೀವನಶೈಲಿಯನ್ನು ಅರಿಯಬಹುದು.

ಇದಲ್ಲದೇ ಆಹಾರ ತ್ಯಾಜ್ಯ ನಿರ್ವಹಣೆ ಕುರಿತು ಕಲಿಕೆ, ಸ್ಥಳೀಯ ರೈತರು ಅಥವಾ ಮೀನುಗಾರರೊಂದಿಗೆ ಸಮಯ ಕಳೆಯುವುದು, ಸಾವಯವ ಫಾರ್ಮ್ ಟೂರ್‌ಗಳು, ಟೀ/ಕಾಫಿ ತೋಟಗಳಿಗೆ ಭೇಟಿ, ವೈನರಿಗಳು ಅಥವಾ ಬ್ರೂವರಿಗಳಿಗೆ ಭೇಟಿ ನೀಡುವುದು, ವೈನ್, ಕಾಫಿ, ಚಹಾ, ಬಿಯರ್, ಹಾಗೂ ವಿಸ್ಕಿ ಈ ಪಾನೀಯಗಳಿಗೆ ಹೆಸರುವಾಸಿಯಾದ ಪ್ರದೇಶಗಳಿಗೆ ಪ್ರಯಾಣಿಸಿ, ಅವುಗಳ ಉತ್ಪಾದನಾ ಪ್ರಕ್ರಿಯೆ ಹಾಗೂ ರುಚಿ ನೋಡುವುದು, ಉದಾಹರಣೆಗೆ, ಇಟಲಿಯ ಟಸ್ಕನಿ ಪ್ರದೇಶದಲ್ಲಿ ಪ್ರವಾಸಿಗರು ಆಲಿವ್ ಆಯಿಲ್ ತಯಾರಿಕೆಯನ್ನು ಕಲಿಯಬಹುದು ಅಥವಾ ಪಾಸ್ತಾ ಮೇಕಿಂಗ್ ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸಬಹುದು. ಇವೆಲ್ಲವೂ ಈ ಖಾದ್ಯ ಪ್ರವಾಸೋದ್ಯಮದಲ್ಲಿ ಸೇರಿದೆ. ಇದರ ಮೂಲ ಉದ್ದೇಶವು ಪ್ರವಾಸಿಗರನ್ನು ಒಂದು ಪ್ರದೇಶದ ಸಾಂಸ್ಕೃತಿಕ ಆತ್ಮಕ್ಕೆ ಸಂಪರ್ಕಿಸುವುದು.

ಆರ್ಥಿಕ ಹಾಗೂ ಸಾಮಾಜಿಕ ಪ್ರಯೋಜನಗಳು

New Project (31)

ಪಾಕಪದ್ಧತಿ ಪ್ರವಾಸೋದ್ಯಮವು ಗ್ರಾಮೀಣ ಅಡುಗೆಕಲೆಯ ಪುನರುಜ್ಜೀವನಕ್ಕೂ, ಸ್ಥಳೀಯ ರೈತರ ಉತ್ಪನ್ನಗಳ ಮೌಲ್ಯವರ್ಧನೆಗೂ ಕಾರಣವಾಗುತ್ತದೆ. ಸ್ಥಳೀಯ ಹೋಟೆಲ್‌ಗಳು, ಮಹಿಳಾ ಸ್ವಸಹಾಯ ಸಂಘಗಳು, ಸಣ್ಣ ಆಹಾರ ಉದ್ಯಮಗಳು ಇವುಗಳೆಲ್ಲಕ್ಕೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಸಮುದಾಯದ ಆರ್ಥಿಕತೆಗೆ ಚಾಲನೆ ನೀಡುವುದಲ್ಲದೆ, ಆಹಾರ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪ್ರವಾಸಿಗರು ಸ್ಥಳೀಯವಾಗಿ ಉತ್ಪನ್ನಗಳನ್ನು ಖರೀದಿಸುವುದರಿಂದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ಪ್ರವಾಸಿಗರು ಸ್ಥಳೀಯ ಆಹಾರ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳುವುದರಿಂದ, ಆ ಪದ್ಧತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಕಾಯುವ ಪ್ರೇರಣೆ ಸಿಗುತ್ತದೆ.

ಸವಾಲುಗಳು ಮತ್ತು ಭವಿಷ್ಯ

ಪ್ರಮುಖವಾಗಿ, ಸ್ಥಳೀಯ ಪಾಕಪದ್ಧತಿಯ ಸ್ವಾಭಾವಿಕತೆ ಮತ್ತು ಗುಣಮಟ್ಟವನ್ನು ಕಾಪಾಡುವುದು ಒಂದು ದೊಡ್ಡ ಸವಾಲು. ಪ್ರವಾಸೋದ್ಯಮ ಹೆಚ್ಚಾದಂತೆ, ಸ್ಥಳೀಯ ವಿಶೇಷತೆಗಳು 'ಟೂರಿಸ್ಟ್ ಫ್ರೆಂಡ್ಲಿ' ಆಗಿ ಮಾರ್ಪಟ್ಟು, ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಅಪಾಯವಿದೆ. ಇದರ ಜೊತೆಗೆ, ಆಹಾರದ ಗುಣಮಟ್ಟ, ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಅಲ್ಲದೆ, ಸ್ಥಳೀಯ ಪಾಕಪದ್ಧತಿಯನ್ನು ವಾಣಿಜ್ಯೀಕರಣಗೊಳಿಸುವಾಗ ಅದರ ‘ದೃಢೀಕರಣ (Authenticity) ಮತ್ತು ಸಾಂಪ್ರದಾಯಿಕ ಮೌಲ್ಯ’ಗಳು ನಷ್ಟವಾಗದಂತೆ ನೋಡಿಕೊಳ್ಳುವುದು ಅಗತ್ಯ.

ರುಚಿಯಿಲ್ಲದ ಪ್ರಯಾಣ ಕೇವಲ ಚಲನೆ ಮಾತ್ರ; ರುಚಿಯ ಬೆನ್ನು ಹತ್ತಿದ ಪ್ರಯಾಣವು ಒಂದು ಕಥೆ, ಒಂದು ಸಂಬಂಧ, ಮತ್ತು ಜೀವನಪೂರ್ತಿ ನೆನಪುಗಳ ಸಂಗ್ರಹ. ಅದಕ್ಕಾಗಿಯೇ, ಮುಂದಿನ ಬಾರಿ ನೀವು ಪ್ರಯಾಣಕ್ಕೆ ಹೊರಡುವಾಗ, ನಿಮ್ಮ ಹೊಟ್ಟೆ ಖಾಲಿ ಇರಲಿ ಮತ್ತು ಕುತೂಹಲ ತುಂಬಿ ಇರಲಿ. ರುಚಿಯೇ ನಿಮ್ಮ ಮಾರ್ಗದರ್ಶಿ. ಪ್ರಪಂಚವನ್ನು ಊಟದ ಮೂಲಕವೇ ಅನ್ವೇಷಿಸಿ. ಒಂದು ಪ್ರದೇಶದ ಆಹಾರವನ್ನು ಸವಿಯುವುದರಿಂದ, ಆ ಪ್ರದೇಶದ ಇತಿಹಾಸ, ಭೌಗೋಳಿಕತೆ ಮತ್ತು ಜನಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಮುಂದಿನ ಬಾರಿ ನೀವು ಪ್ರವಾಸಕ್ಕೆ ಹೊರಟಾಗ, ಕೇವಲ ಸ್ಥಳ ವೀಕ್ಷಣೆಯಷ್ಟೇ ಅಲ್ಲ; ಆ ಸ್ಥಳದ ಆಹಾರದ ರುಚಿಯನ್ನೂ ಅನುಭವಿಸಿ. ಏಕೆಂದರೆ ಅದು ನಿಮ್ಮ ಪ್ರವಾಸದ ಸವಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ