ದೇಶದ ಪ್ರವಾಸೋದ್ಯಮ ಮತ್ತು ಹೊಟೇಲ್ ಉದ್ಯಮ ಎದುರಿಸುತ್ತಿದ್ದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸಮಸ್ಯೆಯನ್ನು ನೀಗಿಸಲು ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (SIHRA) ಅಧ್ಯಕ್ಷ ಕೆ. ಶ್ಯಾಮರಾಜು ಗುರುವಾರ (ಮಾರ್ಚ್ 12) ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ರನ್ನು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.

Untitled design (20)

ಸಂಸ್ಥೆಯ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವರು, ಪರಿಸ್ಥಿತಿಯನ್ನು ಸುಗಮಗೊಳಿಸಲು ಈ ಕೆಳಗಿನ ಕ್ರಮಗಳನ್ನು ಘೋಷಿಸಿದ್ದಾರೆ:

  • ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಸರಾಸರಿ ಮಾಸಿಕ ವಾಣಿಜ್ಯ ಎಲ್‌ಪಿಜಿ ಅಗತ್ಯತೆಯ ಪೈಕಿ ಶೇ. 20ರಷ್ಟನ್ನು ತಕ್ಷಣದಿಂದಲೇ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
  • ಹೊಟೇಲ್ ಉದ್ಯಮಕ್ಕೆ ಬೆಂಬಲ ನೀಡಲು ಅಗತ್ಯವಿರುವ ಹೆಚ್ಚಿನ ಪೂರೈಕೆ ವ್ಯವಸ್ಥೆಗಳ ಬಗ್ಗೆ ಸರಕಾರವು ಕಾರ್ಯಪ್ರವೃತ್ತವಾಗಿದೆ.
  • ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಉದ್ಯಮದ ಪಾಲುದಾರರೊಂದಿಗೆ ನಿಕಟ ಸಮನ್ವಯದಲ್ಲಿವೆ.

ಇದನ್ನೂ ಓದಿ: ಅಮೃತಸರದಿಂದ ಅಟ್ಟಾರಿ ಬಾರ್ಡರ್‌ವರೆಗೆ ದೇಶಪ್ರೇಮದ ಯಾತ್ರೆ..

ಪ್ರಸ್ತುತ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯಕ್ಕೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳೇ ಪ್ರಮುಖ ಕಾರಣ ಎಂದು ಸರಕಾರ ತಿಳಿಸಿದೆ. ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಇಂಧನ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಗ್ರಾಹಕರ ಹಿತರಕ್ಷಣೆ ಮತ್ತು ಹೊಟೇಲ್‌ ಉದ್ಯಮದ ವ್ಯವಸ್ಥೆಯನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಶ್ಯಾಮರಾಜು ತಿಳಿಸಿದ್ದಾರೆ. ಹಾಗೆಯೇ, ಸರಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದು, SIHRA ಸದಸ್ಯರೆಲ್ಲರಿಗೂ ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.