ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯು ಸಾಮಾನ್ಯ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ, ಬಹುಭಾಷಾ ನಟ ಆರ್. ಮಾಧವನ್ ಅವರು ಯುಎಇ ನಿವಾಸಿಗಳು ಮತ್ತು ಪ್ರವಾಸಿಗರಲ್ಲಿ ವಿಶೇಷವಾಗಿ ಹಾಗೂ ತುರ್ತು ಮನವಿ ಮಾಡಿದ್ದು, ದುಬೈನಲ್ಲಿ ಹಗಲಿರುಳು ಶ್ರಮಿಸುವ ಟ್ಯಾಕ್ಸಿ ಚಾಲಕರಿಗೆ ಬೆಂಬಲವಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಬುಧಾಬಿಯಲ್ಲಿ ಉದಯಿಸಿದ ಭಾರತೀಯ ಆತ್ಮ — ಅಕ್ಷರಧಾಮ ದೇವಸ್ಥಾನ

ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿರುವ ಮಾಧವನ್‌, “ಯುದ್ಧದಂಥ ಸನ್ನಿವೇಶಗಳಿಂದಾಗಿ ದುಬೈನ ಟ್ಯಾಕ್ಸಿ ಚಾಲಕರ ಆದಾಯ ಕುಸಿದಿದೆ. ಅವರಲ್ಲಿ ಹೆಚ್ಚಿನವರು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದವರಾಗಿದ್ದು, ಅವರ ಕುಟುಂಬವನ್ನು ಸಲಹಲು ಇಲ್ಲಿ ಕಷ್ಟಪಡುತ್ತಿದ್ದಾರೆ," ಎಂದು ಮಾಧವನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳು ಟ್ಯಾಕ್ಸಿ ಬಳಸುವಾಗ ಚಾಲಕರಿಗೆ ಸಾಧ್ಯವಾದಷ್ಟು ಹೆಚ್ಚಿನ 'ಟಿಪ್ಸ್' ನೀಡುವ ಮೂಲಕ ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಸಹಾಯ ಮಾಡಬೇಕು. ಈ ತಿಂಗಳು ಅವರು 500-700 ಎಇಡಿ ಮಾತ್ರ ಸಂಪಾದನೆ ಮಾಡಿದ್ದಾರೆ. ರಾಜಕೀಯ ಸಂಘರ್ಷಗಳು ಏನೇ ಇರಲಿ, ದಿನಗೂಲಿ ನಂಬಿ ಬದುಕುವ ಕಾರ್ಮಿಕರ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.